ಹೊರಗಿನ ಯಾವ ಅಭ್ಯರ್ಥಿಯೂ ಗೆದ್ದ ಇತಿಹಾಸ ನಮ್ಮ ಜಿಲ್ಲೆಯಲ್ಲಿಲ್ಲ. ಬೆಂಗಳೂರಿನಲ್ಲಿ ಹುಡುಕಬೇಕಾದ ಹೊರಗಿನ ಅಭ್ಯರ್ಥಿ, ಅರ್ಧ ಗಂಟೆಯಲ್ಲಿ ಸಿಗುವ ಒಳಗಿನ ಅಭ್ಯರ್ಥಿಗಳಲ್ಲಿ ಯಾರು ಸೂಕ್ತ ಎನ್ನುವುದು ಯೋಚಿಸಿ ಮತ್ತೊಮ್ಮೆ ಇಲ್ಲಿನ ಇತಿಹಾಸ ಮರುಕಳಿಸಿ ಕಾಂಗ್ರೆಸ್ ಗೆಲ್ಲಿಸಿ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ ಜಿ ಪರಮೇಶ್ವರ್ ಕರೆ ನೀಡಿದರು.
ಗುಬ್ಬಿ ಹೊರ ವಲಯದ ಬಾಲಾಜಿ ಕನ್ವೆನ್ಷನ್ ಹಾಲ್ನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
“ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಅತ್ಯಧಿಕ ಲೀಡ್ ಕೊಡುವ ಮುನ್ಸೂಚನೆ ಗುಬ್ಬಿ ಕ್ಷೇತ್ರದ ಜನ ನೀಡಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತಾರೆ. ಈ ನಿಟ್ಟಿನಲ್ಲಿ ಗ್ಯಾರಂಟಿ ನಿಲ್ಲಿಸುತ್ತಾರೆಂಬ ಅಪಪ್ರಚಾರಕ್ಕೆ ಬ್ರೇಕ್ ನೀಡುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು” ಎಂದು ಸಲಹೆ ನೀಡಿದರು.
“ಬಿಜೆಪಿ ಇಡಿ, ಐಟಿ ರೇಡ್ ಮಾಡುವ ಮೂಲಕ ಪಕ್ಷಕ್ಕೆ ಫಂಡ್ ಮಾಡುವ ಹೊಸ ಭ್ರಷ್ಟಾಚಾರ ಮಾಡುತ್ತಿರುವ ಬಿಜೆಪಿಯ ಮನಸ್ಥಿತಿ ಅದು ಮನುಸ್ಮೃತಿ ಎನಿಸಿದೆ. ಒಂದೊಂದು ಕಡೆ ಒಂದೊಂದು ಮಾತು ಆಡುತ್ತಾ ಮೋದಿಯವರು ಒಕ್ಕೂಟ ವ್ಯವಸ್ಥೆಯನ್ನು ಒಡೆದು ಆಳುವ ಕೆಲಸ ಮಾಡುತ್ತಿದ್ದಾರೆ. ಜತೆಗೆ ಯಾವ ಪ್ರಧಾನಿ ಮಾಡದ ಸಂವಿಧಾನ ಬದಲಿಸುವ ಕೆಲಸಕ್ಕೆ ಬಿಜೆಪಿ ಹಾಕಿದೆ. ಅವರ ಪಕ್ಷದ ವಾಜಪೇಯಿಯವರು ಆಡಳಿತ ಮಾಡಿದ್ದರೂ ಕೂಡಾ ಅವರಿಗೆ ಸಂವಿಧಾನ ಬದ್ಧ ನಡತೆ ಇತ್ತು. ಇವರದ್ದು ಸರ್ವಾಧಿಕಾರವಾಗಿದೆ” ಎಂದು ವ್ಯಂಗ್ಯವಾಡಿದ ಅವರು ಈ ಬಾರಿ 250 ರೊಳಗೆ ಬಿಜೆಪಿ ಸೀಟ್ ಕುಸಿಯಲಿದೆ ಎಂದರು.
ಸಚಿವ ಕೆ ಎನ್ ರಾಜಣ್ಣ ಮಾತನಾಡಿ, “ತುಮಕೂರು ಕ್ಷೇತ್ರದಲ್ಲಿ ಈ ಹಿಂದೆ ಆರ್ ಮಂಜುನಾಥ್, ಕೋದಂಡರಾಮಯ್ಯ, ಎ ಕೃಷ್ಣಪ್ಪ, ದೇವೇಗೌಡರು ಇವರೆಲ್ಲಾ ಸೋತ ಇತಿಹಾಸವಿದೆ. ಹೊರಗಿನ ಅಭ್ಯರ್ಥಿ ಎಂಬ ಅಂಶವೇ ಈ ಸೋಲಿಗೆ ಕಾರಣ. ಸ್ವಾಭಿಮಾನಿ ಮತದಾರರು ಈ ಬಾರಿಯೂ ಅದೇ ನಿರ್ಧಾರ ಕೈಗೊಳ್ಳಲಿದ್ದಾರೆ. ಬಿಜೆಪಿ ಕಾರ್ಪರೇಟ್ ಕಂಪೆನಿಯಿಂದ ಫಂಡ್ ವಸೂಲಿ, ಶ್ರೀರಾಮ, ಹಿಂದುತ್ವ ಈ ಅಂಶವನ್ನೇ ಮುಂದಿಟ್ಟು ಚುನಾವಣೆ ಮಾಡಿದೆ. ಆದರೆ ಗಾಂಧೀಜಿ ಹಿಂದುತ್ವ ನಮ್ಮದು, ಗೋಡ್ಸೆ ಹಿಂದುತ್ವ ಬಿಜೆಪಿಯದು. ದಶರಥ ರಾಮನ ಬದಲು ಅಯೋಧ್ಯೆಯಲ್ಲಿ ಮೋದಿ ರಾಮ ಸೃಷ್ಟಿಯಾಗಿದ್ದು ವಿಪರ್ಯಾಸ” ಎಂದರು.
ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ, “ಅಕ್ಕ ಅಣ್ಣಾ ಎಂದು ಮಾತನಾಡುವ ಸೋಮಣ್ಣ ಅವರ ನಾಟಕಕ್ಕೆ ಜನ ಮರುಳಾಗುವುದಿಲ್ಲ. ಹರಿಯುವ ನೀರು ಎನ್ನುತ್ತಲೇ ಇಡೀ ರಾಜ್ಯ ಸುತ್ತುವ ಹರಿಯುವ ಸೋಮಣ್ಣ ಎಂಬ ನೀರು ಕೃಷಿಗೂ ಬಾರದು, ಕುಡಿಯಲು ಬಾರದು” ಎಂದು ವ್ಯಂಗ್ಯವಾಡಿದರು.
“ಕಳೆದ ನಾಲ್ಕು ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಲೀಡ್ ನೀಡದ ಆಪಾದನೆ ನನ್ನ ಮೇಲಿದೆ. ದೇವೇಗೌಡರೂ ಕೂಡಾ ಕೋಪ ಮಾಡಿಕೊಂಡಿದ್ದು ಈ ವಿಚಾರದಲ್ಲಿ. ಕುಮಾರಸ್ವಾಮಿ ಆಡುವ ನವರಂಗಿ ಆಟ ನನ್ನದಲ್ಲ. ನೇರ ಮಾತನಾಡುವ ಜಾಯಮಾನ ನನ್ನದು. ಇದ್ದ ವಿಚಾರ ನೇರ ಹೇಳಿದ್ದೆ. ಈ ನಿಟ್ಟಿನಲ್ಲಿ ಅಪಕೀರ್ತಿಗೆ ಈ ಬಾರಿ ಉತ್ತರ ನೀಡಲು ಸಂಕಲ್ಪ ತೊಡಬೇಕು” ಎಂದು ಕರೆ ನೀಡಿದರು.
ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡ ಮಾತನಾಡಿ, “ಜವಾಬ್ದಾರಿಯುತ ಸಂಸದ ಸ್ಥಾನಕ್ಕೆ ಐದು ವರ್ಷ ನ್ಯಾಯ ಕೊಟ್ಟಿದ್ದೇನೆ. 700ಕ್ಕೂ ಅಧಿಕ ಪ್ರಶ್ನೆ ಕೇಳಿದ್ದೇನೆ. 120 ಗಂಭೀರ ವಿಚಾರ ಪ್ರಸ್ತಾಪ ಮಾಡಿ ರೈತರ ಆತ್ಮಹತ್ಯೆ, ಕೊಬ್ಬರಿ, ಅಡಕೆ ಬಗ್ಗೆ ಚರ್ಚಿಸಿದ್ದೇನೆ. ಚತುಷ್ಪಥ ಹೆದ್ದಾರಿ, ಎಚ್ಎಎಲ್, ಇಸ್ರೋ, ಸ್ಮಾರ್ಟ್ ಸಿಟಿ ಹೀಗೆ ಅನೇಕ ಅಭಿವೃದ್ದಿ ಕೆಲಸಕ್ಕೆ ಅಡಿಗಲ್ಲು ಹಾಕಿದ್ದೇನೆ. ವರ್ಷ ಪೂರ್ತಿ ಜನರಿಗೆ ಸಿಗುವ ನನಗೆ, ಮತದಾರರು ಬೆಂಬಲಿಸುವ ವಿಶ್ವಾಸವಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅರವಿಂದ ಕೇಜ್ರಿವಾಲ್ ಬಂಧನ ಖಂಡಿಸಿ ‘ಇಂಡಿಯಾ’ ಒಕ್ಕೂಟದ ಪ್ರತಿಭಟನೆ
ಇದೇ ಸಂದರ್ಭದಲ್ಲಿ ಜೆಡಿಎಸ್ ತೊರೆದು ಹಲವು ಮುಖಂಡರು ಕಾಂಗ್ರೆಸ್ ಸೇರ್ಪಡೆಯಾದರು.
ವೇದಿಕೆಯಲ್ಲಿ ಶಾಸಕರುಗಳಾದ ಷಡಕ್ಷರಿ, ವೆಂಕಟೇಶ್, ಮಾಜಿ ಶಾಸಕರಾದ ಗೌರಿಶಂಕರ್, ಕಿರಣ್ ಕುಮಾರ್, ಡಾ.ರಫೀಕ್ ಅಹಮದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ ಗೌಡ, ಯುವ ಅಧ್ಯಕ್ಷ ಶಶಿ ಹುಲಿಕುಂಟೆ, ಮುರಳೀಧರ ಹಾಲಪ್ಪ, ನಿಕೇತ್ ರಾಜ್ ಮೌರ್ಯ, ಮಹಿಳಾ ಘಟಕದ ಗೀತಾ ರಾಜಣ್ಣ, ಜಿಲ್ಲಾ ಕಾರ್ಯದರ್ಶಿ ಶಂಕರಾನಂದ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸೌಭಾಗ್ಯಮ್ಮ, ತಾತಯ್ಯ ಸೇರಿದಂತೆ ಇತರರು ಇದ್ದರು.

ಹೊರಗ್ಲೋನು ಕಳ್ಳ, ಒಳಗಿನೋನು ಕದಿಮಾ ಸುಳ್ಳ.. ಇಬ್ಬರು ಹೊರಗಿನವರೇ.. ಇಬ್ರೂ ಈ ಕ್ಷೇತ್ರಕ್ಕೆ ಒಳಿತಲ್ಲ & ನಮ್ಮ ಲೋಕಸಭಾ ಕ್ಷೇತ್ರದವರಲ್ಲ