ಸಮಾಜವಾದಿ ಭಾರತ ನಿರ್ಮಾಣ ಮಾಡುವುದು ಶಹೀದ್ ಭಗತ್ ಸಿಂಗ್ ಅವರ ಕನಸಾಗಿತ್ತು ಎಂದು ಎಐಡಿವೈಒ ಕಲಬುರಗಿ ಜಿಲ್ಲಾಧ್ಯಕ್ಷ ಜಗನ್ನಾಥ್ ಎಸ್ ಎಚ್ ಹೇಳಿದರು
ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂಥ್ ಆರ್ಗನೈಸೇಷನ್ ಕಲಬುರಗಿ ಜಿಲ್ಲಾ ಸಮಿತಿಯಿಂದ ಮಾರ್ಚ್ 23ರ ಸಾಯಂಕಾಲ ನಗರದಲ್ಲಿ ಹಮ್ಮಿಕೊಂಡಿದ್ದ ಶಹೀದ್ ಭಗತ್ ಸಿಂಗ್ ಅವರ 94ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರಾಗಿ ಮಾತನಾಡಿದರು.
“ಬ್ರಿಟಿಷರ ಒಡೆದಾಳುವ ನೀತಿಯನ್ನು ಗುರುತಿಸಿ, ʼನಾವು ಜಾತಿ ಧರ್ಮವೆಂದು ಬಡಿದಾಡದೆ ಬ್ರಿಟಿಷರ ವಿರುದ್ಧ ಒಂದಾಗಿ ಹೋರಾಡಬೇಕೆಂದಿದ್ದರು. ಹಾಗೂ ಸ್ವಾತಂತ್ರ್ಯ ಪಡೆಯುವುದು ಮಾತ್ರವೇ ನಮ್ಮ ಉದ್ದೇಶವಲ್ಲ, ಅದು ಮೊದಲ ಹೆಜ್ಜೆ ಮಾತ್ರ. ನಮ್ಮ ಗುರಿಯಿರುವುದು ಒಂದು ಉನ್ನತವಾದ ರಾಷ್ಟ್ರವನ್ನು ನಿರ್ಮಾಣ ಮಾಡುವುದುʼ ಎಂದಿದ್ದರು. ಯಾವ ರಾಷ್ಟ್ರ ತನ್ನೆಲ್ಲ ಜನರಿಗೆ ಸಮಾನವಾಗಿ ಬದುಕುವ ಹಕ್ಕನ್ನು ನೀಡುತ್ತದೆಯೋ, ಯಾವ ರಾಷ್ಟ್ರ ಧರ್ಮದ ಹೆಸರಲ್ಲಿ ಜನರನ್ನು ಒಡೆಯುವುದಿಲ್ಲವೋ, ಯಾವ ರಾಷ್ಟ್ರ ಮನುಷ್ಯನಿಂದ ಮನುಷ್ಯನ ಶೋಷಣೆಯನ್ನು ಕೊನೆಗಾಣಿಸುವುದೋ, ಅಂತಹ ಸಮಾಜವಾದಿ ಭಾರತ ನಿರ್ಮಾಣದ ಕನಸಾಗಿತ್ತು” ಎಂದರು.
“ಭಗತ್ ಬಹಳ ಸಣ್ಣ ವಯಸ್ಸಿನಲ್ಲಿ ಅಪಾರವಾದ ಜ್ಞಾನವನ್ನು ಗಳಿಸಿದ್ದರು. ಅವರ ಇಡೀ ಜೀವನ ಯುವಜನರಿಗೆ ಮಾದರಿಯಾಗಿದೆ. ಇಂದಿನ ಬೆಲೆ ಏರಿಕೆ, ನಿರುದ್ಯೋಗ, ಬಡತನ ಎಲ್ಲ ಸಮಸ್ಯೆಗಳಿಗೆ ಭಗತ್ ಸಿಂಗ್ ಅವರ ವಿಚಾರ ಬಹಳ ಅವಶ್ಯವಾಗಿದ್ದು, ಈ ವಿಚಾರವನ್ನು ಯುವ ಜನರು ತಿಳಿದುಕೊಂಡು ಸಂಘಟಿತ ಆಂದೋಲನ ಕಟ್ಟಿ ಸಮಾಜವಾದಿ ಭಾರತ ನಿರ್ಮಿಸಲು ಮುಂದೆ ಬರಬೇಕು” ಎಂದು ಕರೆ ನೀಡಿದರು.
ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರಮೇಶ್ ದೇವಕರ್ ಪ್ರಸ್ತಾವಿಕವಾಗಿ ಮಾತನಾಡಿ, “ಸರ್ಕಾರವು ಭಗತ್ ಸಿಂಗ್ ಅವರ ಇತಿಹಾಸವನ್ನು ಕಡೆಗಣಿಸುತ್ತಿದ್ದು, ಸರ್ಕಾರವು ಕೂಡಲೇ ಭಗತ್ ಸಿಂಗ್ ಅವರ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸ್ವಾತಂತ್ರ್ಯವೀರ ಭಗತ್ ಸಿಂಗ್ ಹುತಾತ್ಮ ದಿನಾಚರಣೆ
ಕಾರ್ಯಕ್ರಮಕ್ಕೂ ಮುನ್ನ ಪಂಜಿನ ಮೆರವಣಿಗೆಯು ರೈಲು ನಿಲ್ದಾಣ ಎದುರುಗಡೆ ಪ್ರಾರಂಭವಾಗಿ ತಿಮ್ಮಾಪೂರಗೆ ಚೌಕ್ ವರೆಗೆ ಘೋಷಗಳು ಕೂಗುತ್ತಾ ಆಗಮಿಸಿ ಸಮಾರೋಪಗೊಂಡಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸಿದ್ದು ಚೌದರಿ, ಕಾರ್ಯದರ್ಶಿ ಈಶ್ವರ್ ಕೆ, ಎಐಡಿವೈಒ ಜಿಲ್ಲಾ ಸಮಿತಿ ಸದಸ್ಯರು ಸೇರಿದಂತೆ ಇತರ ಯುವಕರು ಇದ್ದರು.