ಕುವೆಂಪು ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಎಲ್ಲರನ್ನೂ ಪ್ರಭಾವಿಸಿದ ಕವಿ ಹಾಗೂ ಚಿಂತಕ. ಸೃಜನಶೀಲತೆಯ ಜೊತೆಗೆ ವೈಚಾರಿಕ ಚಿಂತನೆಯನ್ನು ಕಟ್ಟಿಕೊಟ್ಟ ಲೇಖಕ ಎಂದು ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ರವೀಂದ್ರನಾಥ ನಾರಾಯಣಪುರ ಅಭಿಪ್ರಾಯಪಟ್ಟರು.
ಬಸವಕಲ್ಯಾಣ ನಗರದ ಎಸ್.ಎಸ್.ಕೆ. ಬಸವೇಶ್ವರ ಪದವಿ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ‘ಕುವೆಂಪು ಅವರ ವಿಚಾರ ಕ್ರಾಂತಿಗೆ ಆಹ್ವಾನ’ ಲೇಖನದ ಕುರಿತ ಉಪನ್ಯಾಸ ಹಾಗೂ ಸಂವಾದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
“ಎದೆಯ ದನಿಗೂ ಮಿಗಿಲಾದ ಆಲೋಚನೆ ಮತ್ತೊಂದ ಇಲ್ಲವೇ ಇಲ್ಲ ಎಂಬ ಕುವೆಂಪು ಚಿಂತನೆ ಮಾನವೀಯತೆಗೆ ಆದ್ಯತೆ ನೀಡಿದೆ. ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಅವರು ಸೃಷ್ಠಿಸಿದ ಪಾತ್ರಗಳು ಅನನ್ಯವಾಗಿವೆ. ಹಲವು ಹೊಸ ಪದಗಳನ್ನು ಸೃಷ್ಠಿಸಿದ ಕುವೆಂಪು ಅವರು ನಮ್ಮ ಕಾಲದ ಯುಗದ ಕವಿ. ಅವರು ಎರಡು ಬೃಹತ್ ಕಾದಂಬರಿಗಳು ಮಲೆನಾಡಿನ ಹಾಗೂ ಜನಜೀವನದ ದರ್ಶನ ಮಾಡಿಸುತ್ತವೆ” ಎಂದರು.
ಪತ್ರಕರ್ತ ಬಾಲಾಜಿ ಕುಂಬಾರ ಮಾತನಾಡಿ, “50 ವರುಷಗಳ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ಕುವೆಂಪು ಅವರು ಮಾಡಿದ ಭಾಷಣ ‘ವಿಚಾರ ಕ್ರಾಂತಿಗೆ ಆಹ್ವಾನ’ ಲೇಖನ ಇಂದಿಗೂ ಪ್ರಸ್ತುತವಾಗಿದೆ. ಕುವೆಂಪು ಅವರು ಬಸವ ಸಿದ್ಧಾಂತದ ಮುಂದುವರಿಕೆಯ ಚಿಂತಕ. ಮೌಢ್ಯ, ಕಂದಾಚಾರ ವಿರೋಧಿಸಿದ ಕುವೆಂಪು ಸಮಾಜವಾದದ ನಿಲುವು ಪ್ರತಿಪಾದಿಸಿದರು” ಎಂದರು.
ಹಳ್ಳಿಯ ಸಂಗತಿ, ಬಡತನ, ಶ್ರಮಿಕರ ಕಾಳಜಿ, ಚುನಾವಣೆ, ರಾಜಕಾರಣಿಗಳ ಹುಸಿ ಭರವಸೆ, ಸಾಮಾಜಿಕ ವಾಸ್ತವದ ಬಗೆಗೆ ಆಳವಾಗಿ ಈ ಲೇಖನದಲ್ಲಿ ಕುವೆಂಪು ಚರ್ಚಿಸಿದ್ದಾರೆ. ಅಂದು ಅವರು ಮಂಡಿಸಿದ ಆಲೋಚನೆ ವರ್ತಮಾನದ ಬಿಂಬವಾಗಿದೆ. ಕನ್ನಡಕ್ಕೆ ವೈಚಾರಿಕ ಸಾಹಿತ್ಯ ನೀಡಿದವರಲ್ಲಿ ಕುವೆಂಪು ಅಗ್ರಗಣ್ಯರು” ಎಂದರು.
ಉಪನ್ಯಾಸಕ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, “ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ವಚನಕಾರರ ನಂತರ ಕುವೆಂಪು ಬಹುದೊಡ್ಡ ವೈಚಾರಿಕ ಚಿಂತಕರು. ಅವರ ಸೃಜನಶೀಲ ಮತ್ತು ಸೃಜನೇತರ ಬರಹಗಳಲ್ಲಿ ಸಮಕಾಲೀನ ಸ್ಪಂದನೆಯ ಗುಣವಿದೆ. ವಿಚಾರ ಕ್ರಾಂತಿಗೆ ಆಹ್ವಾನದಲ್ಲಿ ಹೊಸ ಆಲೋಚನೆಗಳಿಂದಲೇ ಬದುಕು ಹೊಸ ಹೊಳಪು ಪಡೆದು ಹೊಸ ಜೀವನಕ್ಕೆ ಹಾತೊರೆಯಬೇಕಾದ ಯುವ ಸಮುದಾಯ ಮೌಢ್ಯ, ಕಂದಾಚಾರ, ಭ್ರಷ್ಟಾಚಾರಗಳಲ್ಲಿ ಸಿಲುಕಿದ್ದನ್ನು ಖಂಡಿಸಿದ್ದರು” ಎಂದು ನುಡಿದರು.
“ಅಧಿಕಾರಶಾಹಿಗಳ ಅಧಿನತೆಯಿಂದ ಬಿಡುಗಡೆಯಾಗುವ ಅಗತ್ಯತೆ, ಪ್ರಭುತ್ವದ ಹಾಗೂ ಅಧಿಕಾರದ ಸ್ವಾರ್ಥಕ್ಕೆ ಚುನಾವಣೆಗಳು ಹಿಡಿದ ಹಾದಿ, ಪ್ರಜಾಪ್ರಭುತ್ವದ ಪರಿಕಲ್ಪನೆ, ಚಳುವಳಿಗಳ ಸಾಧ್ಯತೆ, ರಾಜಕಾರಣದ ಸಾಧ್ಯತೆ ಮತ್ತು ಸವಕಲುತನ, ಸಾಮಾಜಿಕ ವಾಸ್ತವದ ಸತ್ಯವನ್ನು ‘ವಿಚಾರ ಕ್ರಾಂತಿಗೆ ಆಹ್ವಾನ’ ಲೇಖನ ಕಥನಿಸುತ್ತದೆ. ಕುವೆಂಪು ಅವರು ಯುವಕರಲ್ಲಿ ಸಾಂಸ್ಕೃತಿಕ ಪ್ರಜ್ಞೆ ಬೆಳೆಸಿದ ಬಹುದೊಡ್ಡ ಲೇಖಕ” ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ಬಸವರಾಜ ಎವಲೆ ಮಾತನಾಡಿ, “ಕುವೆಂಪುರವರ ವೈಚಾರಿಕ ಚಿಂತನೆಗಳು ಈ ಕಾಲದ ಎಲ್ಲ ವಿದ್ಯಾರ್ಥಿಗಳ ಓದಿನ ವ್ಯಾಪ್ತಿಗೆ ಬರಬೇಕು. 50 ವರ್ಷಗಳ ಹಿಂದೆ ಅವರು ಮಾಡಿದ ಭಾಷಣ ಇಂದಿಗೂ ಚರ್ಚೆಗೆ ಒಳಗಾಗುತ್ತದೆ ಎಂದರೆ ಅವರ ವೈಚಾರಿಕತೆಯ, ಪ್ರಖರ ಚಿಂತನೆಯ ಚಲನಶೀಲತೆಯನ್ನು ಸಾಕ್ಷಿಕರಿಸುತ್ತದೆ. ‘ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ’ ಎಂದು ಕರೆ ನೀಡಿದ್ದರ ಹಿಂದೆ ಯುವ ಸಮುದಾಯ ಸ್ವತಂತ್ರ ಚಿಂತನೆ ಬೆಳೆಸಿಕೊಳ್ಳುವ ಆಶಯ ಕುವೆಂಪು ಅವರದಾಗಿತ್ತು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬರ ಪರಿಹಾರ ಬಿಡುಗಡೆ ಮಾಡದ ಕೇಂದ್ರ ಸರ್ಕಾರ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಜ್ಯ ಸರ್ಕಾರ
ಕಾರ್ಯಕ್ರಮದಲ್ಲಿ ಡಾ. ಲಕ್ಮಿಬಾಯಿ ಭಂಕೂರ, ಕಲ್ಯಾಣಪ್ಪ ನಾವದಗಿ, ಸೂರ್ಯಕಾಂತ ನಾಸೆ, ಶಿವಕುಮಾರ ಕೊಲ್ಲೆ, ಭಾರತಿ ಮಠ, ರತ್ನಸಾಗರ ರಗಟೆ, ಅಶ್ವಿನಿ ಜಲಾದೆ, ಚನ್ನಮ್ಮ ದಾಮಾ, ಶಿವಾನಂದ ಬಿರಾದಾರ, ಸಂದೀಪ ಮುಕಿಂದೆ, ಪ್ರತಿಷಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ, ನಿರ್ದೇಶಕ ಡಾ. ಶಿವಾಜಿ ಮೇತ್ರೆ ಸಂದೀಪ ಸೇರಿದಂತೆ ಹಲವರಿದ್ದರು. ಪ್ರೊ. ವಿಠೋಬಾ ಡೊಣ್ಣೆಗೌಡರ್ ಸ್ವಾಗತಿಸಿದರು. ನೇತ್ರಾ ಕಳಮಾಸೆ ನಿರೂಪಿಸಿದರು. ಡಾ. ಶಿವಕುಮಾರ ಪಾಟೀಲ ವಂದಿಸಿದರು.