ಜಮ್ಮು ಕಾಶ್ಮೀರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಮಹಾರಾಷ್ಟ್ರ ಭವನ ಯೋಜನೆಯು ದಿನದಿಂದ ದಿನಕ್ಕೆ ವಿವಾದಕ್ಕೀಡಾಗುತ್ತಿದೆ. ಭವನ ನಿರ್ಮಾಣ ಮಾಡಲು ಭೂಮಿ ನೀಡಲು ವಿರೋಧ ವ್ಯಕ್ತಪಡಿಸಿರುವ ಒಮರ್ ಅಬ್ದುಲ್ಲಾ ಗೆ ಏಕನಾಥ್ ಶಿಂಧೆ ಬಣದ ನಾಯಕಿಯೊಬ್ಬರು ತಮ್ಮ ರಾಜ್ಯಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದಾರೆ.
ಮಹಾರಾಷ್ಟ್ರ ಸರ್ಕಾರವು ಜಮ್ಮು ಕಾಶ್ಮೀರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಹಾರಾಷ್ಟ್ರ ಭವನ ನಿರ್ಮಾಣಕ್ಕೆ ಕಣಿವೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ತಡೆ ನೀಡುವುದಾಗಿ ಮಾತನಾಡಿದ್ದರು.
ಒಮರ್ ಅಬ್ದುಲ್ಲಾ ಹೇಳಿಕೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಏಕನಾಥ್ ಶಿಂಧೆ ಬಣದ ಎಂಎಲ್ಸಿ ಡಾ. ಮನಿಶಾ ಕಯಾಂದೆ, ಮಹಾರಾಷ್ಟ್ರ ಭವನ ನಿರ್ಮಾಣಕ್ಕೆ ಒಮರ್ ಅಬ್ದುಲ್ಲಾ ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ? ಜಮ್ಮು ಕಾಶ್ಮೀರದಲ್ಲಿ ಗಲಭೆಯಿರುವ ಸಂದರ್ಭದಲ್ಲಿ ಒಮರ್ ಅಬ್ದುಲ್ಲಾ ಅವರು ಮುಂಬೈನಲ್ಲಿ ವ್ಯಾಸಂಗ ಮಾಡಿದ್ದಾರೆ. ಇದೇ ಮಹಾರಾಷ್ಟ್ರದಲ್ಲಿ ಉಳಿದುಕೊಂಡು ಪದವಿ ಪೂರೈಸಿದ್ದಾರೆ. ಇದನ್ನು ಅವರು ಮರೆತಿದ್ದಾರೆಯೆ? ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣೆ – ಐಪಿಎಲ್ ಕ್ರಿಕೆಟ್ನಲ್ಲಿ ಅಪ್ಪ-ಮಗನ ಆಟ
“ನಮ್ಮನ್ನು ಬೆದರಿಸಬೇಡಿ, ಇಲ್ಲದಿದ್ದರೆ ನಾವು ನಿಮ್ಮನ್ನು ಮಹಾರಾಷ್ಟ್ರ ಪ್ರವೇಶಿಸಲು ಬಿಡುವುದಿಲ್ಲ. ಮಹಾರಾಷ್ಟ್ರದ ಬಗ್ಗೆ ಇಂತಹ ಹೇಳಿಕೆಗಳನ್ನು ನಾವು ಸಹಿಸುವುದಿಲ್ಲ. ಅಮರನಾಥ ಯಾತ್ರೆಗೆ ಮಹಾರಾಷ್ಟ್ರದಿಂದ ತೆರಳುವ ಭಕ್ತರಿಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನಾಯಕತ್ವದಡಿ ನಾವು ಖಂಡಿತವಾಗಿಯೂ ಜಮ್ಮು ಕಾಶ್ಮೀರದಲ್ಲಿ ಮಹಾರಾಷ್ಟ್ರ ಭವನ ನಿರ್ಮಿಸುತ್ತೇನೆ” ಎಂದು ಕಯಾಂದೆ ಹೇಳಿದ್ದಾರೆ.
ಒಮರ್ ಅಬ್ದುಲ್ಲಾ ಹೇಳಿಕೆಯ ಬಗ್ಗೆ ಮೌನವಾಗಿರುವ ಶಿವಸೇನೆಯ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಕಯಾಂದೆ, ಬಾಳಾಸಾಹೇಬ್ ಠಾಕ್ರೆ ಇದ್ದಿದ್ದರೆ ಇಂತಹ ಹೇಳಿಕೆಗಳನ್ನು ಸಹಿಸುತ್ತಿರಲಿಲ್ಲ.ಇಂಡಿಯಾ ಒಕ್ಕೂಟದ ಸಂದರ್ಭದಲ್ಲಿ ಒಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಅವರ ಪಕ್ಕದಲ್ಲಿ ವೇದಿಕೆ ಹಂಚಿಕೊಳ್ಳುವ ಉದ್ದವ್ ಠಾಕ್ರೆ ಅವರಿಗೆ ಇದು ಅತ್ಯಂತ ನಾಚಿಕೆಯಾಗಬೇಕು.ಉದ್ಧವ್ ಅವರು ಈ ವಿಷಯದಲ್ಲಿ ಏಕೆ ಮೌನವಾಗಿದ್ದಾರೆ. ಒಮರ್ ಹೇಳಿಕೆಗೆ ಅವರು ಒಪ್ಪಿಗೆ ಸೂಚಿಸಿದ್ದಾರೆಯೆ? ಮಹಾರಾಷ್ಟ್ರದ ಬಗ್ಗೆ ಅವರ ಪ್ರೀತಿ ಕೊನೆಯಾಯಿತೆ? ಮಹಾರಾಷ್ಟ್ರ ಭವನ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಒಮರ್ ಅಬ್ದುಲ್ಲಾ ಅವರನ್ನು ಉದ್ಧವ್ ಅವರು ಏಕೆ ಪ್ರಶ್ನಿಸಬಾರದು ಎಂದು” ಏಕನಾಥ್ ಬಣದ ನಾಯಕಿ ಪ್ರಶ್ನಿಸಿದರು.
ಮಹಾರಾಷ್ಟ್ರ ಸರ್ಕಾರವು ಇತ್ತೀಚಿಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಧ್ಯಕ್ಷತೆಯಲ್ಲಿ 8.16 ಕೋಟಿ ರೂ. ವೆಚ್ಚದೊಂದಿಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಭೂವರ್ಗಾವಣೆ ಅನುಮತಿಯೊಂದಿಗೆ ಶ್ರೀನಗರದ ಬಳಿ ಭೂಮಿ ಖರೀದಿಸಲು ಅನುಮೋದನೆ ಪಡೆದಿತ್ತು.
ಮಹಾರಾಷ್ಟ್ರ ಸರ್ಕಾರ ಈ ನಿರ್ಧಾರದ ನಂತರ ಹೇಳಿಕೆ ನೀಡಿದ್ದ ಒಮರ್ ಅಬ್ದುಲ್ಲಾ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಈ ಒಪ್ಪಂದವನ್ನು ಮರುಪರಿಶೀಲಿಸುವುದಾಗಿ ತಿಳಿಸಿದ್ದರು.