- ಚುನಾವಣೆಗೆ ನಾಮಪತ್ರ ಸಲ್ಲಿಸಲು ಏ.20 ಕೊನೆಯ ದಿನ
- ಸ್ಥಿರಾಸ್ಥಿಯಷ್ಟೇ ಸಾಲವನ್ನು ಹೊಂದಿರುವ ಗೋವಿಂದರಾಜು
ವಿಧಾನಸಭಾ ಚುನಾವಣೆಯಲ್ಲಿ ಸ್ವರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಏ.20 ಕೊನೆಯ ದಿನವಾಗಿದ್ದರಿಂದ ಎಲ್ಲೆಡೆ ನಾಮಪತ್ರ ಸಲ್ಲಿಕೆ ಭರಾಟೆ ನಡೆಯುತ್ತಿದೆ. ನಾಮ ಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರವನ್ನು ಘೋಷಿಸಬೇಕಿದ್ದು, ತುಮಕೂರು ಜಿಲ್ಲೆಯಲ್ಲಿ ಸ್ಪರ್ಧಿಸುತ್ತುರುವ ಪ್ರಮುಖ ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ.
₹33 ಕೋಟಿ ಸ್ಥಿರಾಸ್ತಿ ಹೊಂದಿರುವ ಜ್ಯೋತಿಗಣೇಶ್
ತುಮಕೂರು ವಿಧಾನಸಭಾ ಕ್ಷೇತ್ರದ ಶಾಸಕ ಜ್ಯೋತಿ ಗಣೇಶ್ ಬಳಿ ₹33 ಕೋಟಿ ಸ್ಥಿರಾಸ್ತಿ ಇದ್ದು, ₹7.25 ಕೋಟಿ ಸಾಲ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ₹86 ಲಕ್ಷ ಮೌಲ್ಯದ ಚರಾಸ್ತಿ, ಪತ್ನಿ ಸುಮನ ಅವರ ಹೆಸರಿನಲ್ಲಿ ₹69.50 ಲಕ್ಷ ಮೌಲ್ಯದ ಚರಾಸ್ತಿ ಇರುವುದಾಗಿ ಹೇಳಿಕೊಂಡಿದ್ದಾರೆ. ಚರಾಸ್ಥಿ ಪೈಕಿ 20 ಗ್ರಾಂ ಚಿನ್ನ ಹಾಗೂ 1 ಕೆಜಿ ಬೆಳ್ಳಿ ಇರುವುದಾಗಿ ತಿಳಿಸಿದ್ದಾರೆ. ಹಾಗೆಯೇ ಜ್ಯೋತಿ ಗಣೇಶ್ ಹೆಸರಿನಲ್ಲಿ ಹೀರೋ ಹೋಂಡ ಬೈಕ್ ಇರುವುದಾಗಿ ಹೇಳಿಕೊಂಡಿದ್ದಾರೆ.
ಜಯಚಂದ್ರ ₹24 ಕೋಟಿ ಒಡೆಯ
ಶಿರಾ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಟಿ.ಬಿ ಜಯಚಂದ್ರ ಒಟ್ಟು ₹24.7 ಕೋಟಿ ಚರಾಸ್ತಿ ಹೊಂದಿದ್ದಾರೆ. ಆಸ್ತಿ ಘೋಷಣೆಯಲ್ಲಿ ತನ್ನ ಬಳಿ ₹1.51 ಲಕ್ಷ ಮತ್ತು 100 ಗ್ರಾಂ ಚಿನ್ನಾಭರಣವಿದೆ. ಹಾಗೆಯೇ ತನ್ನ ಪತ್ನಿ ₹74 ಲಕ್ಷ ಹೊಂದಿದ್ದಾರೆ. ಪತ್ನಿ ನಿರ್ಮಲಾ 610 ಗ್ರಾಂ ಚಿನ್ನ 2 ಕೆಜಿ ಬೆಳ್ಳಿ ಹೊಂದಿದ್ದಾರೆ. ಒಟ್ಟಾರೆಯಾಗಿ ಜಯಚಂದ್ರ ಅವರು ₹1.30 ಕೋಟಿ ಮೌಲ್ಯದ ಚರಾಸ್ತಿ ಹಾಗೂ ₹24.7 ಕೋಟಿ ಮೌಲ್ಯದ ಸ್ಥಿರಾಸ್ತಿ, ಪತ್ನಿ ಹತ್ತಿರ ₹8.62 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ₹99.60 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.
ಬಿ ಸಿ ನಾಗೇಶ್ ಆಸ್ತಿ ₹4 ಕೋಟಿ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ತಿಪಟೂರು ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಬಳಿ ₹4.35 ಕೋಟಿ ಚರಾಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಪತ್ನಿ ವೀಣಾ ಅವರ ಹೆಸರಿನಲ್ಲಿ ₹90.92 ಲಕ್ಷ ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಒಟ್ಟು ₹5.65 ಕೋಟಿ ಮೌಲ್ಯದ ಸ್ಥಿರಾಸ್ತಿ ಇದ್ದು, ತಮ್ಮ ಮಗ ವಿಶ್ವದೀಪ್ ಹೆಸರಿನಲ್ಲಿ ₹52.21 ಲಕ್ಷ ಚರಾಸ್ತಿ, ₹24 ಲಕ್ಷ ಮೌಲ್ಯದ ಸ್ಥಿರಾಸ್ತಿಯನ್ನು ನಾಗೇಶ್ ಅವರು ಘೋಷಣೆ ಮಾಡಿದ್ದಾರೆ.
ಜೆ ಸಿ ಮಾಧುಸ್ವಾಮಿ ₹27 ಕೋಟಿ ಒಡೆಯ
ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಅವರು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದು, ತಮ್ಮ ಬಳಿ ನಾಲ್ಕು ಮನೆ ಇರುವುದಾಗಿ ಘೋಷಿಸಿಕೊಂಡಿದ್ದಾರೆ. 5 ವರ್ಷಗಳ ಹಿಂದೆ ಕುಟುಂಬದ ಚರ – ಸ್ಥಿರಾಸ್ತಿ ₹4.13 ಕೋಟಿ ಇತ್ತು. ಈ ಬಾರಿ ₹27.5 ಕೋಟಿ ಹೆಚ್ಚಳವಾಗಿದೆ. ಟಿಎಂಸಿಸಿ ಬ್ಯಾಂಕಿನಲ್ಲಿ ಮಧುಸ್ವಾಮಿ ₹7.27 ಕೋಟಿ ಮತ್ತು ಪತ್ನಿ ₹10.50 ಕೋಟಿ ಸಾಲ ಹೊಂದಿದ್ದಾರೆ.
ನಾನಾ ಬ್ಯಾಂಕುಗಳಲ್ಲಿರುವ ಠೇವಣಿ, ಉಳಿತಾಯ, ಮ್ಯೂಚುವಲ್ ಫಂಡ್, ದಿ ಬೆಂಚರ್ಗಳಲ್ಲಿ ಜೆ ಸಿ ಮಾಧುಸ್ವಾಮಿ ಹಾಗೂ ಅವರ ಪತ್ನಿ ತ್ರಿವೇಣಿ ಹಣ ಹೂಡಿಕೆ ಮಾಡಿದ್ದಾರೆ. ಮಾಧುಸ್ವಾಮಿ ಹೆಸರಿನಲ್ಲಿ 83.25 ಎಕರೆ ಹಾಗೂ ಪತ್ನಿ ಹೆಸರಿನಲ್ಲಿ 47.20 ಎಕರೆ ಕೃಷಿ ಭೂಮಿ ಇದೆ. ಮಾಧುಸ್ವಾಮಿ ಬಳಿ ಜೆಸಿ ಪುರದಲ್ಲಿ ಪಿತ್ರಾರ್ಜಿತ ಮನೆ, ನಿವೇಶನ, ಮೈಸೂರು ಮತ್ತು ಬೆಂಗಳೂರಿನ ಸಂಜಯನಗರದಲ್ಲಿ ಅಪಾರ್ಟ್ಮೆಂಟ್ ಹೊಂದಿದ್ದಾರೆ.
ಪತ್ನಿ ತ್ರಿವೇಣಿ ಬಳಿ ತುಮಕೂರಿನಲ್ಲಿ 4,000 ಚದರ ವಿಸ್ತೀರ್ಣದ ಮನೆ, ಬೆಂಗಳೂರಿನಲ್ಲಿ ಫ್ಲಾಟ್, ಬೆಂಗಳೂರಿನ ರಾಜ್ ಮಹಲ್ ವಿಲಾಸ್ ಬಡಾವಣೆಯಲ್ಲಿ ₹4.81 ಕೋಟಿ ಮೌಲ್ಯದ ಮನೆ ಮತ್ತು ನಿವೇಶನ ಹೊಂದಿದ್ದಾರೆ. ಮಾಧುಸ್ವಾಮಿ ಹೆಸರಲ್ಲಿ ₹2 ಲಕ್ಷ ಮೌಲ್ಯದ ಟ್ರ್ಯಾಕ್ಟರ್, ಟಯೋಟ ಫಾರ್ಚುನರ್ ಕಾರು ಇದೆ. ಇವರ ಬಳಿ ₹50 ಸಾವಿರ ಹಾಗೂ ಪತ್ನಿಯ ಬಳಿ ₹30 ಸಾವಿರ ನಗದು ಹೊಂದಿರುವುದಾಗಿ ಘೋಷಿಸಿದ್ದಾರೆ. ಪೀಣ್ಯ ಇಂಡಸ್ಟ್ರೀಯಲ್ ಏರಿಯಾ ಬಳಿ ₹4 ಕೋಟಿ ಮೌಲ್ಯದ ಸ್ಥಿರಾಸ್ಥಿ ಸೇರಿ ಪತ್ನಿ ಹೆಸರಿನಲ್ಲಿ ₹15.14 ಕೋಟಿ ಸ್ಥಿರಾಸ್ತಿ ಖರೀದಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಸಚಿವ ಸುಧಾಕರ್ ಉಡುಗೊರೆ ನೀಡಿದ್ದ ಗ್ಯಾಸ್-ಸ್ಟೌ ಸ್ಫೋಟ
ಸ್ಥಿರಾಸ್ಥಿಯಷ್ಟೇ ಸಾಲ ಹೊಂದಿರುವ ಗೋವಿಂದರಾಜು
ತುಮಕೂರು ನಗರ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಗೋವಿಂದರಾಜು ಅವರು ₹26 ಕೋಟಿ ಸ್ಥಿರಾಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಅಷ್ಟೇ ಪ್ರಮಾಣದಲ್ಲಿ ಸಾಲ ಇರುವುದಾಗಿ ಹೇಳಿಕೊಂಡಿದ್ದಾರೆ.
ತಮ್ಮ ಬಳಿ ₹19.15 ಕೋಟಿ ಮೌಲ್ಯದ ಚರಾಸ್ತಿ, ಪತ್ನಿ ಹೇಮಲತಾ ಹೆಸರಿನಲ್ಲಿ ₹3.10 ಕೋಟಿ ಮೌಲ್ಯದ ಚರಸ್ಥಿ ಹೊಂದಿರುವುದಾಗಿ ತಿಳಿಸಿದ್ದಾರೆ. ಗೋವಿಂದರಾಜು ಅವರು ₹26.68 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದು, ಪತ್ನಿ ಹೆಸರಿನಲ್ಲಿ ₹1.76 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ ಎಂದಿದ್ದಾರೆ. ತಾವು ಹಲವು ಬ್ಯಾಂಕ್ನಿಂದ ₹26.68 ಕೋಟಿ ಸಾಲ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಹಾಗೆಯೇ ಪತ್ನಿ ಹೆಸರಿನಲ್ಲಿ ₹1.76 ಕೋಟಿ ಸಾಲ ಇದೆ ಎಂದಿದ್ದಾರೆ.