- ಚುನಾವಣೆಗೂ ಮುನ್ನ ಕ್ಷೇತ್ರ ಜನರಿಗೆ ಗ್ಯಾಸ್-ಸ್ಟೌ ಹಂಚಿಕೆ
- ಸ್ಪೋಟಗೊಂಡಾಗ ಸ್ಥಳದಲ್ಲಿ ಯಾರು ಇಲ್ಲದಿದ್ದರಿಂದ ತಪ್ಪಿದ ಅನಾಹುತ
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರನ್ನು ಸೆಳೆಯಲು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ವಿತರಿಸಿದ್ದ ತಮ್ಮ ಭಾವಚಿತ್ರವಿರುವ ಗ್ಯಾಸ್-ಸ್ಟೌ ಸ್ಫೋಟಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಪುರ ಗ್ರಾಮದಲ್ಲಿ ಘಟನೆ ನಡೆಸಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಮಹಿಳಾ ಮತದಾರರನ್ನು ಸೆಳೆಯುವ ಉದ್ದೇಶದಿಂದ ಚುನಾವಣೆ ಘೋಷಣೆಗೂ ಮುನ್ನವೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮನೆ-ಮನೆಗೂ ಡಾ. ಕೆ ಸುಧಾಕರ್ ಭಾವಚಿತ್ರವಿರುದ ಗ್ಯಾಸ್-ಸ್ಟೌ ಹಂಚಲಾಗಿತ್ತು.
ಪುರ ಗ್ರಾಮದ ವೆಂಕಟೇಶ್ ಎಂಬುವರ ಪತ್ನಿ ಸ್ಟೌ ಮೇಲೆ ಬೇಳೆ ಬೇಯಿಸಲು ಇಟ್ಟು ಹೊರಗಡೆ ಕೆಲಸದಲ್ಲಿ ನಿರತರಾಗಿದ್ದರು. ಕೆಲವು ಸಮಯದ ಬಳಿಕ ಅಡುಗೆ ಮನೆಯಿಂದ ಸ್ಫೋಟದ ಸದ್ದು ಕೇಳಿದೆ. ಒಳಹೋಗಿ ನೋಡಿದಾಗಿ ಸ್ಟೌ ಸಿಡಿದು ಛಿದ್ರಗೊಂಡಿತ್ತು. ಅದರ ಮೇಲೆ ಇಟ್ಟಿದ್ದ ಕುಕ್ಕರ್ ಕೆಳಗೆ ಬಿದ್ದಿತ್ತು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನೀವು ಉಡುಗೊರೆಯಾಗಿ ಕೊಟ್ಟ ಕಳಪೆ ಸ್ಟೌನಿಂದ ಪ್ರಾಣಕ್ಕೆ ತೊಂದರೆಯಾಗಿದ್ದರೆ ಯಾರು ಜವಾಬ್ದಾರಿ? ಎಂದು ವೆಂಕಟೇಶ್ ಅವರು ಕೆ ಸುಧಾಕರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಪದ್ಮನಾಭನಗರದಲ್ಲಿ ಆರ್ ಅಶೋಕ್ ವಿರುದ್ಧ ಡಿಕೆ ಸುರೇಶ್ ಕಣಕ್ಕೆ?
ಸ್ಟೌ ಸ್ಫೋಟಗೊಂಡ ಬಳಿಕ ಅದರ ಚಿತ್ರ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ತಕ್ಷಣ ಬಿಜೆಪಿ ಸ್ಥಳೀಯ ಮುಖಂಡರು ಮತ್ತು ಅಭ್ಯರ್ಥಿ ಡಾ. ಕೆ ಸುಧಾಕರ್ ಫೌಂಡೇಶನ್ ಕಡೆಯುವರು ಸ್ಫೋಟವಾಗಿದ್ದ ಸ್ಟೌ ಕೊಂಡೊಯ್ದಿದ್ದಾರೆ.
ಘಟನೆಯಿಂದ ಭಯಗೊಂಡಿರುವ ಗ್ರಾಮದ ಮಹಿಳೆಯರು ತಮ್ಮ ಮನೆಗಳಿಗೂ ಉಡುಗೊರೆಯಾಗಿ ನೀಡಿದ್ದ ಸ್ಟೌಗಳ ಬಳಕೆಗೆ ಹಿಂಜರಿಯುತ್ತಿದ್ದಾರೆ. ಕಳಪೆ ಸ್ಟೌ ಕೊಟ್ಟ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.