ಒಳಗೆ ಹಾಗೂ ಹೊರಗೆ ಅಕ್ಷರಶಃ ಬೇಯುವ ಸ್ಥಿತಿಯಲ್ಲಿ ನಾವು ಬಂದು ತಲುಪಿದ್ದೇವೆ. ಅದು ಹವಾಮಾನ ವೈಪರೀತ್ಯವೆ ಆಗಿರಲಿ ಹಾಗೂ ಧಗೆ ಆಗಿರಬಹುದು, ಜೊತೆಗೆ ಲೋಕಸಭಾ ಚುನಾವಣೆಯು ಹಬ್ಬಿರುವಂತಹ ರಾಜಕೀಯ ದೂರ್ತತೆಯ ಕಾವು, ಉರಿ ಇವು ಕೂಡ ಆಗಿರಬಹುದು. ಇದೆಲ್ಲಕ್ಕಿಂತ ಮುಖ್ಯವಾಗಿ ನಾವು ಮಾನವೀಯವಾದಂತಹ ಶಾಂತಿ, ಸೌಹಾರ್ದತೆಯ ವಾತಾವರಣ ಕಟ್ಟಲು ಆಗ್ತಿಲ್ಲ ಅನ್ನುವ ಪ್ರಜ್ಞಾವಂತ ಒಳಮನಸಿನ ತಳಮಳ, ಒದ್ದಾಟ ಇದು ತುಂಬಾ ಪ್ರಮುಖವಾಗಿ ಇಗ ಕೆಲಸ ಮಾಡಬೇಕು ಎಂದು ಖ್ಯಾತ ಲೇಖಕ ಹಾಗೂ ಸಾಮಾಜಿಕ ಹೋರಾಟಗಾರ್ತಿ ರೂಪ ಹಾಸನ ಅಭಿಪ್ರಾಯಪಟ್ಟರು.
ಆವಿಷ್ಕಾರ, ಎಐಡಿಎಸ್ಒ, ಎಐಡಿವೈಒ ಹಾಗೂ ಎಐಎಮ್ಎಸ್ಎಸ್ ಸಂಘಟನೆಗಳ ನೇತೃತ್ವದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ 13ನೇ ವಿಜಯಪುರ ಸಾಂಸ್ಕೃತಿಕ ಜನೋತ್ಸವದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಈ ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮವನ್ನು ಹಲವು ಜಾತಿ ಧರ್ಮಗಳ ಸೌಹಾರ್ದತೆಗೆ ಪ್ರತೀಕವಾದಂತಹ ವಿಜಯಪುರ ನೆಲದಲ್ಲಿ ಮತ್ತೊಮ್ಮೆ ಆಚರಿಸುತ್ತಿರುವ ನಿಮಗೆಲ್ಲರಿಗೂ ಧನ್ಯವಾದ. ನಿಜವಾದ ಸಾಂಸ್ಕೃತಿಕ ಮಟ್ಟವನ್ನ ನಾವು ಜಾಗೃತಗೊಳಿಸಿಕೊಳ್ಳಲಿಕ್ಕೆ ಈ ಸಂದರ್ಭ ಕೂಡಿ ಬಂದಿದೆ ಎಂದು ನಾನು ಭಾವಿವಿಸಿದ್ದೇನೆ. ನಾವು ಇವತ್ತು ವಿಷಮ ಕಾಲಗಟ್ಟಕ್ಕೆ ಬಂದು ತಲುಪಿದ್ದೇವೆ ಎಂದರು.
ಸಂಸ್ಕೃತಿ ಎನ್ನುವಂತಹದ್ದು ನಿಂತ ನೀರಲ್ಲ, ಅದು ಹರಿಯುವ ನೀರು. ನಿಮಗೆಲ್ಲ ತಿಳಿದಿರುವ ಹಾಗೆ ನಮ್ಮದು ಬಹುಭಾಷೆ, ಬಹು ಸಂಸ್ಕೃತಿ, ಮತ್ತು ಬಹು ಆಚರಣೆಯನ್ನು ಒಳಗೊಂಡ ಬಹು ದೊಡ್ಡ ದೇಶ. ಇಲ್ಲಿ ಅನೇಕ ಜಾತಿ, ಧರ್ಮ, ಜನಾಂಗವನ್ನು ಹೊಂದಿದ್ದೇವೆ. ತಲತಲಾಂತರದಿಂದ ಅವರವರ ದೇವರು, ಧರ್ಮ, ಸಂಪ್ರದಾಯ ಆಚರಣೆಗಳನ್ನ ನಂಬಿ ಬದುಕುತ್ತಾ ಬಂದಿದ್ದಾರೆ. ಅದರಲ್ಲಿ ಅವೈಜ್ಞಾನಿಕ ವಾಗಿರುವಂತಹದ್ದು, ಅವೈಚಾರಿಕವಾಗಿರುವಂತದ್ದು ಮತ್ತು ಅಸಮಾನತೆಯನ್ನು ಆಧರಿಸಿದ್ದು ಕೂಡ ಇರಬಹುದು. ನಂತರ ಕಾಲಾಂತರದಲ್ಲಿ ಅದೆಲ್ಲ ಕೂಡ ನಿರ್ಮೂಲನೆ ಮಾಡುತ್ತಾ ಬಂದಿದ್ದೇವೆ, ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಕಥೆಗಾರರು ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ನೂತನ ಅಧ್ಯಕ್ಷರಾದ ಡಾ. ಚೆನ್ನಪ್ಪ ಕಟ್ಟಿಯವರು ಮಾತನಾಡಿ, ಯಾವ ದೇಶ ಸೌಹಾರ್ದತೆಯಿಂದ ಬದುಕಲು ಸಾದ್ಯವಿಲ್ಲವೋ, ಆ ದೇಶ ಎಷ್ಟೇ ಮುಂದುವರೆದಿರೋದು ಅಂತ ಹೇಳಿದರೂ ಕೂಡ, ಆ ದೇಶ ಆರ್ಥಿಕವಾಗಿ ಖಂಡಿತವಾಗಿಯೂ ಮುಂದುವರಿದಿರುವುದಿಲ್ಲ ಎಂಬುದನ್ನು ನಾವು ಗಮನಿಸಬೇಕು, ನಮ್ಮ ಅಂಕಿ-ಸಂಖ್ಯೆಗಳು ಏನಾದರು ಹೇಳಬಹುದು, ನಮಗೆ ಗೊತ್ತಿದೆ ವಾಸ್ತವವಾಗಿ ನಾವು ಹೇಳಿಕೊಳ್ಳುವಷ್ಟು ಆರ್ಥಿಕವಾಗಿ ಮುಂದುವರಿದಿಲ್ಲದಿರುವದನ್ನು ಒಪ್ಪಿಕೊಳ್ಳಲೇಬೇಕು.
ಈ ಆರ್ಥಿಕ ಪ್ರಗತಿಗೆ ಕುಂಠಿತಕ್ಕೆ ಕಾರಣವಾಗಿರುವುದರಲ್ಲಿ ಮುಖ್ಯವಾಗಿರುವುದು ಒಂದು ಸಮುದಾಯವೇ ಒಂದು ವ್ಯವಹಾರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಾಗಿದೆ. ಎಲ್ಲರೂ ಮಾರುಕಟ್ಟೆಯಲ್ಲಿ ತೊಡಗಿಕೊಳ್ಳದೇ ಹೋದರೆ, ಸಮಾಜ ಎಷ್ಟು ವಿಘಟನೆ ಆಗಿ ಹೋಗುತ್ತದೆ, ನಾಶ ಆಗುತ್ತದೆ ಅನ್ನುವುದನ್ನು ನಾವು ಇಲ್ಲಿ ಕಲ್ಪಸಿಕೊಳ್ಳಬೇಕಾಗುತ್ತದೆ ಎಂದರು.
ಇನ್ನೋರ್ವ ಅತಿಥಿ ಎಐಡಿಎಸ್ಒನ ಅಖಿಲ ಭಾರತ ಉಪಾಧ್ಯಕ್ಷರಾದ ಡಾ. ಎನ್. ಪ್ರಮೋದ ಅವರು ಮಾತನಾಡಿ, ಪ್ರಶ್ನೆ ಮಾಡುವ ಸಂಸ್ಕೃತಿಯನ್ನೇ ಬಲವಂತವಾಗಿ ಹತ್ತಿಕ್ಕುವ ವಾತಾವರಣ ಸೃಷ್ಠಿಯಾಗುತ್ತಿದೆ. ಪ್ರಶ್ನೆ ಮಾಡಿದರೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ ಎಂದರು.
ಟ್ರೋಲ್ ಸಂಸ್ಕೃತಿ ಮೂಲಕ ಪ್ರಶ್ನೆ ಮಾಡುವವರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಧಾರ್ಮಿಕ ಮೌಢ್ಯತೆ ಪ್ರಗತಿಗೆ ದೊಡ್ಡ ಅಡಚಣೆ ಎಂದು ಭಗತ್ ಸಿಂಗ್ ಹೇಳಿದ್ದರು. ಹಳೆಯದನ್ನು ಪ್ರಶ್ನೆ ಮಾಡದೇ ಒಪ್ಪಿಕೊಳ್ಳಬೇಡಿ ಎಂದು ಭಗತ್ ಸಿಂಗ್ ಹೇಳಿದ್ದರು. ಎಲ್ಲವನ್ನೂ ಹೇರಿಕೆ ಸಂಸ್ಕೃತಿ ಬೆಳೆಯುತ್ತಿದೆ. ಆಹಾರ, ಬಟ್ಟೆ, ಆಚಾರ, ವಿಚಾರಗಳ ಕುರಿತು ಹೇರಿಕೆ ಮಾಡಲಾಗುತ್ತಿದೆ. ಇದನ್ನೇ ಭಗತ್ ಸಿಂಗ್ ಧಿಕ್ಕರಿಸಿದ್ದರು. ಹೀಗಾಗಿ ಭಗತ್ ಸಿಂಗ್ ಮಾರ್ಕ್ಸ್ ವಾದದತ್ತ ಚಿತ್ತ ಹರಿಸಿದ್ದರು ಎಂದರು.
ಮುಂದುವರೆದು ಮಾತನಾಡಿದ ಅವರು, ಸಾಹಿತಿ ಶರತಚಂದ್ರ ಚಟರ್ಜಿ ಅವರು ಅನೇಕ ವೈಜ್ಞಾನಿಕ ಗ್ರಂಥಗಳನ್ನು ಅಧ್ಯಯನ ಮಾಡುತ್ತಿದ್ದರು. ಅವರ ಸಾಹಿತ್ಯವನ್ನು ಬ್ರಿಟಿಷರು ನಿಷೇಧಿಸಿದ್ದರು. ಮಹಿಳಾ ದೌರ್ಜನ್ಯದ ಕುರಿತು ಅವರು ಸಾಕಷ್ಟು ಗ್ರಂಥ ಬರೆದಿದ್ದರು. ಅವರ ಆದರ್ಶಗಳನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ರಂಗಮಂದಿರದ ಆವರಣದಲ್ಲಿಯ ಸೂಕ್ತಿ ಹಾಗೂ ಛಾಯಾಚಿತ್ರ ಪ್ರದರ್ಶನವನ್ನು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಅವರು ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಆವಿಷ್ಕಾರದ ಮುಖಂಡ ಅಶೋಕ ದೇಸಾಯಿ ಅವರು ಮಾತನಾಡಿದರು ಹಾಗೂ ಎ.ಐ.ಡಿ.ವೈ.ಒ. ರಾಜ್ಯ ಕಾರ್ಯದರ್ಶಿಗಳಾದ ಸಿದ್ಧಲಿಂಗ ಬಾಗೇವಾಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಂತರ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ವಿಜಯಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆಯಿಂದ ಸಮೂಹ ಗಾಯನ, ಗೀತಾಂಜಲಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿನಿಯರಿಂದ ಸಮೂಹ ನೃತ್ಯ, ಕಲಾವಿದರಾದ ಸಿದ್ದಣ್ಣ ಬಿಜ್ಜರಗಿ ಅವರಿಂದ ತತ್ವ ಪದಗಳು, ವಿದೂಷಿ ಲಕ್ಷ್ಮೀ ತೇರದಾಳಮಠ ಅವರ ನಾಟ್ಯಕಲಾ ಡಾನ್ಸ್ ಕ್ಲಾಸ್ನವರಿಂದ ನೃತ್ಯ ರೂಪಕ ಹಾಗೂ ಕಾವ್ಯ-ಕುಂಚ-ನೃತ್ಯ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಕ.ರಾ.ಅ.ಮ.ವಿ. ವಿಜಯಪುರದ ಸಂಗೀತ ಉಪನ್ಯಾಸಕರಾದ ಹರೀಶ ಹೆಗಡೆ ಮತ್ತು ತಂಡದವರಿಂದ ಕಾವ್ಯ, ಮಹಾಲ(ಐನಾಪುರ)ನ ಚಿತ್ರ ಕಲಾವಿದರಾದ ಪರಶುರಾಮ ಇಂಚಗೇರಿ ಹಾಗೂ ನಂದ್ಯಾಳ ಗ್ರಾಮದ ಚಿತ್ರ ಕಲಾವಿದರಾದ ಮಲ್ಲು ಹಡಪದ ಅವರಿಂದ ಕುಂಚ ಹಾಗೂ ಬಳ್ಳಾರಿಯ ಜಾನಪದ ಕಲಾವಿದರಾದ ತಿರುಮಲ ಡಿ. ಜಿ. ಮತ್ತು ವಿಜಯಪುರದ ಸ್ಮಿತಾ ರೂಡಗಿ ಅವರಿಂದ ನೃತ್ಯ ಕಾಯಕ್ರಮಗಳು ಜನರ ಮನ ಸೆಳೆದವು.
ಚಾಮರಾಜನಗರದ ಶಾಂತಲಾ ಕಲಾವಿದರು ಪ್ರಸ್ತುತ ಪಡಿಸಿದ, ಹೆನ್ರಿಕ್ ಇಬ್ಸೆನ್ ಅವರ ನಾಟಕವನ್ನು ಆದರಿಸಿ ಎಸ್. ಸುರೇಂದ್ರನಾಥ ಅವರು ರಚಿಸಿ, ನಿರ್ದೇಶಿಸಿರುವ ಜನ ಶತ್ರು ಎಂಬ ನಾಟಕವು ಪ್ರಸಕ್ತ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿತು.