ಹೆಣ್ಣಿನ ಜನುಮಕ್ಕೆ ಅಣ್ಣ ತಮ್ಮರು ಬೇಕು
ಬೆನ್ನು ಕಟ್ಟುವರು ಸಭೆಯೊಳಗೆ
ಬೆನ್ನು ಕಟ್ಟುವರು ಸಭೆಯೊಳಗೆ ಸಾವಿರ ಹೊನ್ನು ಕಟ್ಟುವರು ಉಡಿಯೊಳಗೆ…
ಜಾನಪದರು ಕಟ್ಟಿದ ಈ ಹಾಡು ಸಹೋದರ ಸಹೋದರಿಯರ ನಡುವಿನ ಸಹೋದರತ್ವ ಬಾಂಧವ್ಯ ಎಂತಹುದು ಮತ್ತು ಸಹೋದರಿಯ ಪ್ರತಿ ಯಶಸ್ಸಿನ ಹಿಂದಿನ ಅಣ್ಣ ತಮ್ಮಂದಿರ ಪಾತ್ರದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.
ಜಾನಪದದ ಈ ಪದ್ಯದ ಸಾಲುಗಳಂತೆ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಸಚಿವ ಸತೀಶ ಜಾರಕಿಹೊಳಿಯವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದು, ಅಕ್ಕಾ ಪ್ರಿಯಾಂಕಾ ಬೆನ್ನಿಗೆ ತಮ್ಮ ರಾಹುಲ್ ನಿಂತಿದ್ದು ಇಬ್ಬರೂ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಅಕ್ಕನ ಗೆಲುವಿಗಾಗಿ ಸಹೋದರ ರಾಹುಲ್ ಜಾರಕಿಹೊಳಿ ಅಕ್ಕನೊಟ್ಟಿಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿದ್ದು ಅಕ್ಕ ತಮ್ಮನ ಪ್ರಚಾರದ ವೈಖರಿಗೆ ಭೇಷ್ ಎನ್ನುತ್ತಿದ್ದಾರೆ.
ಸಾಮಾಜಿಕ ಕಾರ್ಯಗಳಲ್ಲೂ ಅಕ್ಕಾ ತಮ್ಮ ಒಟ್ಟಿಗೆ
ಪ್ರಿಯಾಂಕಾ ಮತ್ತು ರಾಹುಲ್ ಕೇವಲ ರಾಜಕೀಯ ಮಾತ್ರವಲ್ಲದೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿಯೂ ಸಹ ಒಟ್ಟಾಗಿ ಕೆಲಸ ಮಾಡಿದ್ದಾರೆ ಸತೀಶ ಜಾರಕಿಹೊಳಿ ಫೌಂಡೇಶನ್ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಒಟ್ಟಿಗೆ ಮಾಡಿ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದಾರೆ ನೆರೆ ಪ್ರವಾಹದ ಸಂದರ್ಭಗಳಲ್ಲಿ ಇಬ್ಬರೂ ಒಟ್ಟಾಗಿ ಪ್ರವಾಹ ಸಂತ್ರಸ್ತರೊಂದಿಗೆ ಜೊತೆಯಾಗಿ ನಿಂತಿದ್ದಾರೆ.
ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಬಲಾಬಲ
ಚಿಕ್ಕೋಡಿ ಲೋಕಸಭೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿದ್ದು, 3 ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಬಿಜೆಪಿ ಪಕ್ಷದಿಂದ ಎರಡನೇ ಬಾರಿ ಅಣ್ಣಾ ಸಾಹೇಬ್ ಜೊಲ್ಲೆಯವರು ಸ್ಪರ್ಧಿಸಿದ್ದು ಹಾಗೂ ಸತೀಶ ಜಾರಕಿಹೋಳಿ, ಲಕ್ಷ್ಮಣ ಸವದಿ, ಪ್ರಕಾಶ ಹುಕ್ಕೇರಿಯಂತಹ ಘಟಾನುಘಟಿ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿಯಾಗಿದ್ದಾರೆ. ಅದೇ ರೀತಿ ರಮೇಶ ಕತ್ತಿ ಮತ್ತು ಶಶಿಕಲಾ ಜೊಲ್ಲೆಯವರ ವರ್ಚಸ್ಸು ಬಿಜೆಪಿಗೆ ಲಾಭವಾಗಬಹುದಾದರು ರಮೇಶ್ ಕತ್ತಿ ಅಭಿಮಾನಿಗಳು ಲೋಕಸಭಾ ಟಿಕೆಟ್ ರಮೇಶ್ ಕತ್ತಿಯವರಿಗೆ ನೀಡದಿರುವುದಕ್ಕೆ ಮುನಿಸಿಕೊಂಡಿದ್ದು ಬಿಜೆಪಿಗೆ ನಷ್ಟವನ್ನುಂಟು ಮಾಡಬಹುದಾಗಿದೆ.
ಚಿಕ್ಕೋಡಿ ಲೋಕಸಭಾ ಜಾತಿ ಲೆಕ್ಕಾಚಾರ
ಚಿಕ್ಕೋಡಿ ಲೋಕಸಭಾ ಕ್ಷೇತ್ರದದಲ್ಲಿ ಒಟ್ಟು 17,41,758 ಮತದಾರರಿದ್ದು ಲಿಂಗಾಯತ ಮತ್ತು ಅಹಿಂದ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ.
ಕಿರಿಯ ವಯಸ್ಸಿನ ಸಂಸದೆಯಾಗಿ ಇತಿಹಾಸ ಸೃಷ್ಟಿಸುವರೆ
17ನೇ ಲೋಕಸಭಾ ಚುನಾವಣೆಯಲ್ಲಿ ಒಡಿಶಾದ 25ರ ಹರೆಯದ ಚಂದ್ರಾನಿ ಮರ್ಮು ಬಿಜೆಡಿ ಪಕ್ಷದಿಂದ ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಅದರಂತೆ ಕರ್ನಾಟಕದಿಂದ ಚಿಕ್ಕೋಡಿ ಲೋಕಸಭೆಗೆ 27 ವಯಸ್ಸಿನ ಪ್ರಿಯಾಂಕಾ ಜಾರಕಿಹೊಳಿಯವರು ಗೆದ್ದು ಕಿರಿಯ ವಯಸ್ಸಿನ ಸಂಸದರ ಸಾಲಿಗೆ ಸೇರ್ಪಡೆಯಾಗುವರೇ ಎಂದು ಕಾದು ನೋಡಬೇಕಾಗಿದೆ.
ರಾಜಕೀಯ ಲೆಕ್ಕಾಚಾರಗಳೇನಾದರೂ ಇರಲಿ, ಅಕ್ಕನ ಬೆನ್ನಿಗೆ ತಮ್ಮ ನಿಂತಿದ್ದು ನೋಡಿ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಇವರಿಬ್ಬರೂ ಒಟ್ಟಾಗಿ ನಿಂತರೆ ಗೆಲುವು ಅಕ್ಕಂದೆ ಎನ್ನುತ್ತಿದ್ದಾರೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು