ದೇಶದಲ್ಲಿ ಬಹುತ್ವವನ್ನು ಉಳಿಸಿ ಬೆಳೆಸುವ ಮತ್ತು ಸಂವಿಧಾನವನ್ನು ರಕ್ಷಿಸುವ ನೆಲೆಯಲ್ಲಿ ಹಾಗೂ ಸರ್ವಜನಾಂಗದ ಶಾಂತಿಯ ತೋಟ ಸಂರಕ್ಷಿಸಿಕೊಳ್ಳಲು ರಾಜ್ಯದ ಜನರು ಮತ ಚಲಾಯಿಸಬೇಕು ಎಂದು ಮಾಜಿ ಸಚಿವೆ ಬಿ ಟಿ ಲಲಿತಾನಾಯಕ್ ತಿಳಿಸಿದರು.
ತುಮಕೂರು ನಗರದ ಜನಚಳವಳಿ ಕೇಂದ್ರದಲ್ಲಿ ಜಾಗೃತಿ ನಾಗರಿಕರು ಕರ್ನಾಟಕ ಮತ್ತು ತುಮಕೂರು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸಂವಿಧಾನ ರಕ್ಷಿಸಿ-ಪ್ರಜಾಪ್ರಭುತ್ವ ಉಳಿಸಿ ಜಾಗೃತಿ ಆಂದೋಲನ ಕುರಿತು ನಡೆದ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.
“ಮತದಾರರು ಯಾವುದೇ ಅಮಿಷಗಳಿಗೆ ಒಳಗಾಗದಂತೆ ದೇಶದ ಸಾಮರಸ್ಯ ಪರಂಪರೆಯ ಪರವಾಗಿ ನಿಲ್ಲಬೇಕು. ನಿರ್ಭೀತಿಯಿಂದ ಚುನವಾಣೆ ನಡೆಯಬೇಕು ಮತ್ತು ಸಂವಿಧಾನದ ಆಶಯಗಳಿಗೆ ಯಾವುದೇ ಧಕ್ಕೆ ಆಗಬಾರದು” ಎಂದರು.
“ಏಪ್ರಿಲ್ 1 ರಿಂದ 8 ರವರೆಗೆ ರಾಜ್ಯವ್ಯಾಪಿ ಸಂಕಲ್ಪ ಯಾತ್ರೆಯನ್ನು ಬೆಂಗಳೂರಿನಿಂದ ಬೆಳಗಾವಿವರೆಗೆ ಹಮ್ಮಿಕೊಂಡು ಮತಜಾಗೃತಿ ಅಭಿಯಾನ ಪ್ರಾರಂಭಿಸಲಾಗಿದೆ. ತುಮಕೂರಿನ ಜೀವಪರ ಮತ್ತು ಸಂವಿಧಾನ ಪ್ರಿಯರೇ ಈ ಜಾಗೃತಿ ಅಭಿಯಾನಕ್ಕೆ ಕೈಜೊಡಿಸಬೇಕು” ಎಂದು ಮನವಿ ಮಾಡಿದರು.
ಪ್ರಗತಿಪರ ಚಿಂತಕ ಸಿ ಯತಿರಾಜ್ ಮತ್ತು ಪ್ರೊ. ಕೆ ದೊರೈರಾಜ್ ಮಾತನಾಡಿ, “ದೇಶದಲ್ಲಿ ಜನಾಂಗೀಯ ದ್ವೇಷ ಮತ್ತು ಧರ್ಮತೀತವಾಗಿ ಪ್ರಜಾಪ್ರಭುತ್ವವನ್ನು ಆಳುವ ಯಾವುದೇ ಪಕ್ಷಗಳು ಉಳಿದಿಲ್ಲ. ದೇಶದಲ್ಲಿ ಶಾಂತಿ, ಸೌಹಾರ್ದತೆಯನ್ನು ಬಯಸುವ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸುವ ಮನಸ್ಸುಗಳು ಸಂವಿಧಾನದ ಉಳಿವಿಗಾಗಿ, ರೈತರ ಉಳಿವಿಗಾಗಿ ಮತ್ತು ಭವಿಷ್ಯದಲ್ಲಿ ನೆಮ್ಮದಿಯ ಬದುಕಿಗಾಗಿ ಉತ್ತಮರನ್ನು ಆಯ್ಕೆ ಮಾಡಲು ಎಚ್ಚರವಹಿಸಿ ಮತ ಚಲಾಯಿಸಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಗ್ರಾಮಾಂತರ | ಆಸೆ ಆಮಿಷಗಳಿಗೆ ಬಲಿಯಾಗದೆ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಿ: ಜಿಲ್ಲಾಧಿಕಾರಿ
ಸಭೆಯಲ್ಲಿ ಸಂವಿಧಾನ ರಕ್ಷಿಸಿ- ಪ್ರಜಾಪ್ರಭುತ್ವ ಉಳಿಸಿ ಜಾಗೃತಿ ನಾಗರಿಕರು-ಕರ್ನಾಟಕದ ಮುಖಂಡರುಗಳಾದ ಡಾ ಕೆ ಮರುಳಸಿದ್ದಪ್ಪ, ಹಾಗೂ ರೈತಮುಖಂಡರು, ತುಮಕೂರು ಪ್ರಗತಿಪರ ಸಂಘಟನೆಗಳ ಒಕ್ಕೂಟ ಪದಾಧಿಕಾರಿಗಳಾದ ಸೈಯದ್ ಮುಜೀಬ್, ತಾಜುದ್ದೀನ್ ಶರೀಫ್, ಮುರುಗೇಶ್ ಫ್ರಾಂಕ್ಲಿನ್ ಕೃಷ್ಣಮೂರ್ತಿ, ಅರುಣ್ ಸೇರಿದಂತೆ ವಿವಿಧ ಸಂಘನೆಗಳ ಮುಖಂಡರು ಇದ್ದರು.
