ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಉಪ ಆದಾಯ ತಂದುಕೊಡುವ ಬಾಳೆಕಾಯಿಗೆ ಬೇಡಿಕೆ ಇದ್ದರೂ ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ. ಆದ್ದರಿಂದ ಬಾಳೆಗೊನೆಗಳು ತೋಟ, ರೈತರ ಮನೆಯಲ್ಲಿಯೇ ಕೊಳೆಯಲು ಆರಂಭಿಸಿದ್ದು ರೈತರು ಕಂಗಾಲಾಗಿದ್ದಾರೆ.
ಮೇ ತಿಂಗಳವರೆಗೆ ಶುಭ ಕಾರ್ಯಗಳು, ಜಾತ್ರೆ ಮತ್ತು ಉತ್ಸವಗಳು ನಡೆಯುವ ಕಾರಣ ಬಾಳೆಹಣ್ಣುಗಳಿಗೆ ಬೇಡಿಕೆ ಇರುತ್ತದೆ. ಆದರೆ, ಕಳೆದೊಂದು ವಾರದಿಂದ ಮಾರುಕಟ್ಟೆಯಲ್ಲಿ ಮತ್ತು ವ್ಯಾಪಾರಿಗಳು ಬಾಳೆಕಾಯಿ ಖರೀದಿಸುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.
ಸಿದ್ಧಾಪುರ ತಾಲೂಕಿನಲ್ಲಿ 622 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯಲಾಗುತ್ತಿದೆ. ಮಲೆನಾಡಿನ ಗ್ರಾಮಗಳ ರೈತರಿಂದ ಬಾಳೆಕಾಯಿ ಖರೀದಿಸುವ ರೈತರು ಅವುಗಳನ್ನು ಗೋವಾ, ಕರಾವಳಿ ಭಾಗಕ್ಕೆ ಪೂರೈಸುತ್ತಾರೆ. ಅತಿ ಬಿಸಿಲಿನಿಂದ ಬಾಳೆಕಾಯಿ ಸಾಗಣೆ ಮಾಡುವ ಅವಧಿಯಲ್ಲೇ ಹಣ್ಣಾಗುತ್ತಿರುವುದು ವ್ಯಾಪಾರಿಗಳನ್ನು ಚಿಂತೆಗೆ ತಳ್ಳಿದೆ. ಹಣ್ಣು ಕಡಿಮೆ ಅವಧಿಯಲ್ಲೇ ಕೊಳೆಯುವ ಕಾರಣ ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ ಎನ್ನುತ್ತಿದ್ದಾರೆ ರೈತರು.
ತಾಪಮಾನ ಹೆಚ್ಚಳದಿಂದ ಬಾಳೆಕಾಯಿ ಬೇಗ ಹಾಳಾಗುತ್ತವೆ. ಸಾಗಣೆ, ದಾಸ್ತಾನು ಮಾಡುವುದರಿಂದ ಲಾಭಕ್ಕಿಂತ ನಷ್ಟ ಹೆಚ್ಚು. ಮಳೆ ಆರಂಭವಾದರೆ, ಇಳುವರಿ ಕಡಿಮೆಯಾಗಿ ಬೆಲೆ ಹೆಚ್ಚುತ್ತದೆ ಎನ್ನುತ್ತಾರೆ ವ್ಯಾಪಾರಿಗಳು.
ಇಲ್ಲಿನ ಕೆಲವು ರೈತರು ಅಡಿಕೆ ನೆಟ್ಟಿದ್ದು, ಅಡಿಕೆಯಿಂದ ಆದಾಯಬರಲು ಇನ್ನೂ ನಾಲ್ಕು ವರ್ಷ ಕಾಯಬೇಕು. ಉಪಬೆಳೆಯಾಗಿ ಬಾಳೆ ಬೆಳೆಯುತ್ತಿದ್ದು, ತಿಂಗಳಿಗೆ ನಾಲ್ಕುಸಾವಿರದ ವರೆಗೆ ಆದಾಯ ಸಿಗುತ್ತಿತ್ತು. ಆದರೆ, ಬಾಳೆಕಾಯಿ ಮಾರಾಟವಾಗದೆ ನಿರ್ವಹಣೆ ಕಷ್ಟವಾಗಿದೆ ಎನ್ನುತ್ತಿದ್ದಾರೆ ಸ್ಥಳೀಯ ರೈತರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ತೋಟಗಾರಿಕೆ ಅಧಿಕಾರಿ ಪ್ರಶಾಂತ ಜಿ.ಎಸ್, ರೈತರು ಬಾಳೆಕಾಯಿಯ ಮೌಲ್ಯವರ್ಧನೆಯತ್ತ ಗಮನಹರಿಸಬೇಕು. ಬಾಳೆಕಾಯಿಯ ಚಿಪ್ಸ್, ಹಪ್ಪಳ ಮುಂತಾದ ಉತ್ಪನ್ನಗಳನ್ನು ತಯಾರಿಸಿದರೆ ಉತ್ತಮ ಮಾರುಕಟ್ಟೆ ಕಂಡುಕೊಳ್ಳಬಹುದು ಎಂದರು.