ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಅತ್ಯಂತ ಖಂಡನೀಯವಾಗಿದ್ದು, ಇಂತಹ ಪ್ರಕರಣದ ಆರೋಪಿಗೆ ಎನ್ಕೌಂಟರ್ ಕಾನೂನು ಜಾರಿಗೆ ಬರಲೇಬೇಕು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಹುಬ್ಬಳ್ಳಿ ನಗರದ ಕಿಮ್ಸ್ ಶವಗಾರಕ್ಕೆ ಭೇಟಿ ನೀಡಿದ ಅವರು, ಕುಟುಂಬದವರಿಗೆ ಸಾಂತ್ವನ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
“ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಹಲವು ಮುಖಂಡರು ಮಾತನಾಡಿದ್ದಾರೆ. ಆ ಕುರಿತು ನಾನು ಹೆಚ್ವಿಗೆ ಹೇಳುವುದಿಲ್ಲ. ಆದರೆ, ಇಂತಹ ಪ್ರಕರಣಗಳಿಗೆ ಮುಂದೊಂದು ದಿನ ಎನ್ಕೌಂಟರ್ ಕಾನೂನು ಬರಲೇಬೇಕು. ಇದು ಜಾರಿಯಾದರೆ, ಇಂತಹ ಪ್ರಕರಣದ ಆರೋಪಿಗಳನ್ನು ಹೊಡೆದುರುಳಿಸಬಹುದು” ಎಂದು ಅಭಿಪ್ರಾಯಪಟ್ಟರು.
“ಎಲ್ಲ ಸರ್ಕಾರದ ಅವಧಿಯಲ್ಲಿಯೂ ಇಂತಹ ಘಟನೆಗಳು ನಡೆದಿವೆ. ಅವುಗಳ ಅಂಕಿ-ಸಂಖ್ಯೆ ನೀಡಬಲ್ಲೆ. ಆದರೆ, ಅವುಗಳಿಗೆಲ್ಲ ಉತ್ತರಿಸುವ ಪರಿಸ್ಥಿತಿ ಇದಲ್ಲ. ಕೆಲವರು ಇದನ್ನು ರಾಜಕೀಯ ಮಾಡಲು ಹೊರಟಿದ್ದಾರೆ. ಇಂತಹ ಸೂಕ್ಷ್ಮ ವಿಷಯಗಳನ್ನು ರಾಜಕೀಯ ಮಾಡದೆ, ಸೂಕ್ಷ್ಮತೆ ಹಾಗೂ ಸ್ವಯಂ ಜವಾಬ್ದಾರಿ ಕಾಯ್ದುಕೊಳ್ಳಬೇಕು” ಎಂದು ಹೇಳಿದರು.
“ನಗರದಲ್ಲಿ ಡ್ರಗ್ಸ್ ಮಾಫೀಯಾ ಬಹಳ ದಿನದಿಂದ ಇದೆ. ಡ್ರಗ್ಸ್ ಬೇರೆ ಬೇರೆ ರಾಜ್ಯ, ಜಿಲ್ಲೆಗಳಿಂದ ಇಲ್ಲಿಗೆ ಬರುತ್ತದೆ. ಎಲ್ಲಿಂದ ಸರಬರಾಜು ಆಗುತ್ತದೆಯೋ, ಅಲ್ಲಿಂದಲೇ ಅದನ್ನು ನಿಯಂತ್ರಿಸಬೇಕು. ನೇಹಾ ಕೊಲೆ ಪ್ರಕರಣಕ್ಕೂ, ಡ್ರಗ್ಸ್’ಗೂ ಹೋಲಿಕೆ ಬೇಡ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ
“ಎರಡು ವರ್ಷಗಳ ಅವಧಿಯಲ್ಲಿ ದೇಶದಲ್ಲಿ 13 ಲಕ್ಷ ಮಂದಿ ಯುವತಿಯರು, ಮಹಿಳೆಯರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸಚಿವ ಪ್ರಲ್ಹಾದ್ ಜೋಶಿ ಉತ್ತರ ನೀಡಬೇಕು. ನೇಹಾ ಕೊಲೆ ಪ್ರಕರಣವನ್ನು ಬಿಜೆಪಿ ರಾಜಕರಣ ಮಾಡುತ್ತಿದ್ದು, ಘಟನೆಯನ್ನು ಬೇರೆ ಆಯಾಮದಲ್ಲಿ ನೋಡಬಾರದು. ತನಿಖೆ ಮುಗಿಯುವ ಮೊದಲು ರಾಜಕೀಯ ಹೇಳಿಕೆ ನೀಡುವುದು ಸರಿಯಲ್ಲ. ಬಿಜೆಪಿ ಆಡಳಿತದ ಅವಧಿಯಲ್ಲಿ ಇಂತಹ ಪ್ರಕರಣ ನಡೆದೇ ಇಲ್ಲವಾ” ಎಂದು ಪ್ರಶ್ನಿಸಿದರು.
“ನೇಹಾ ಕೊಲೆ ಆಕಸ್ಮಿಕ” ಎಂಬ ಗೃಹ ಸಚಿವ ಜಿ ಪರಮೇಶ್ವರ ಹೇಳಿಕೆಯನ್ನು ಸಚಿವ ಲಾಡ್ ಸಮರ್ಥಿಸಿಕೊಂಡರು.
