“ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಹಸಿವಿನಿಂದ ಜನರು ಕಂಗಾಲಾಗಿದ್ದಾರೆ. ಆದರೆ ಜನರ ಕಷ್ಟ ಕೇಳುವ ಮನಸ್ಥಿತಿ ಸರ್ಕಾರಕ್ಕೆ ಇಲ್ಲ. ಹಸಿವಿನ ಸೂಚ್ಯಂಕದಲ್ಲಿ ಭಾರತ 142ನೇ ಸ್ಥಾನಕ್ಕೆ ಕುಸಿದಿದೆ. ಆದರೆ ಈ ದೇಶದಲ್ಲಿ ಯಾರೂ ಹಸಿವಿನಿಂದ ಬಳಲುತ್ತಿಲ್ಲ ಎಂದು ಕೇಂದ್ರ ಸರ್ಕಾರದ ಸಚಿವರೇ ಹೇಳುತ್ತಾರೆ. ಜನ ಹಸಿದಿಲ್ಲ ಎಂದ ಮೇಲೆ 83 ಕೋಟಿ ಜನರಿಗೆ ತಿಂಗಳಿಗೆ ಐದು ಕೇಜಿಯಷ್ಟು ಆಹಾರ ಧಾನ್ಯ ಪೂರೈಸುತ್ತಿರುವುದು ಯಾಕಾಗಿ” ಎಂದು ಖ್ಯಾತ ಆರ್ಥಿಕ ತಜ್ಞ ಪರಕಾಲ ಪ್ರಭಾಕರ ಪ್ರಶ್ನಿಸಿದರು.
ಶುಕ್ರವಾರ ಬೆಂಗಳೂರಿನಲ್ಲಿ ʼಸಂವಿಧಾನದ ಹಾದಿಯಲ್ಲಿʼ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ದೇಶದ ಧ್ವನಿ’ ಉಪನ್ಯಾಸ ನೀಡಿದರು.
ಸರ್ಕಾರದ ಜವಾಬ್ದಾರಿಯುತ ಸಚಿವರೊಬ್ಬರು ಹಸಿವಿನ ಸೂಚ್ಯಂಕದ ವರದಿಯ ಬಗ್ಗೆ ಲಘುವಾಗಿ ಮಾತನಾಡಿದ್ದರು. ಅವರು ತಮ್ಮ ದಿನಚರಿಯ ಉದಾಹರಣೆ ಕೊಡುತ್ತಾ, ನಿರಂತರ ಪ್ರಯಾಣದಿಂದಾಗಿ ಊಟ ಮಾಡಿರಲಿಲ್ಲ. ಯಾರೋ ಫೋನ್ ಮಾಡಿ ಹಸಿದಿದ್ದೀರಾ ಎಂದು ಕೇಳುತ್ತಾರೆ, ಹೌದು ಹಸಿದಿದ್ದೇನೆ ಎಂದು ಹೇಳುತ್ತೇನೆ. ಈ ರೀತಿ ಜಾಗತಿಕ ಹಸಿವಿನ ಸೂಚ್ಯಂಕ ಸಿದ್ಧಪಡಿಸಲಾಗುತ್ತದೆ ಎಂದು ವ್ಯಂಗ್ಯವಾಡಿದ್ದರು. ಐದು ಕೇಜಿ ಅಕ್ಕಿ ಬಡವರಿಗೆ ಕೊಟ್ಟು, ಐದು ವಿಮಾನ ನಿಲ್ದಾಣಗಳನ್ನು ಗೆಳೆಯರಿಗೆ ಕೊಡುವುದು ಇಂದಿನ ಆಡಳಿತದ ವಿಚಿತ್ರ “ಆರ್ಥಿಕ ತತ್ವಶಾಸ್ತ್ರ” ಎಂದು ಅವರು ಲೇವಡಿ ಮಾಡಿದರು.
ಕಳೆದ ಹತ್ತು ವರ್ಷಗಳಲ್ಲಿ ದೇಶದ ಆರ್ಥಿಕ ಸ್ಥಿತಿ ನಾಶವಾಗಿದೆ. ಈ ಸರ್ಕಾರ ಸಮಾನತೆಗೆ ಯಾವುದೇ ಪ್ರಾಮುಖ್ಯತೆ ಕೊಟ್ಟಿಲ್ಲ. ಇತ್ತೀಚಿಗೆ ಬಂದ ಅಸಮಾನತೆಯ ಕುರಿತ ಜಾಗತಿಕ ಸಮೀಕ್ಷೆಯ ಪ್ರಕಾರ ದೇಶದ 1% ಜನಸಂಖ್ಯೆಯ ಬಳಿ 40% ಆಸ್ತಿ ಇದೆ. ಕಳೆದ ಹತ್ತು ವರ್ಷಗಳಲ್ಲಿ ಅಸಮಾನತೆಯ ಅಂತರ ಗಣನೀಯವಾಗಿ ಹೆಚ್ಚಿದೆ. ಈ ಅಸಮಾನತೆ ದೇಶದ ಗಂಭೀರ ಸಮಸ್ಯೆ ಎಂದರು.
ಒಂದು ಕಡೆ ಪ್ರಧಾನಿ ಮೋದಿ ಅವರು ಭಾರತ ಬ್ರಿಟನ್ ದೇಶವನ್ನು ಹಿಂದಿಕ್ಕಿ ಐದನೇ ಅರ್ಥವ್ಯವಸ್ಥೆಯಾಗಿ ಬೆಳೆದಿದೆ ಎನ್ನುತ್ತಾರೆ. ಇನ್ನೊಂದೆಡೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು 2027ರವರೆಗೆ ಕಾಯಬೇಕು ಎನ್ನುತ್ತಾರೆ. ದೇಶದ ಸಾಲದ ಪ್ರಮಾಣ ಶೇ 40 ಇದೆ. ಉಳಿತಾಯ ಶೇ 5 ಇದೆ. ಇಂತಹ ಸ್ಥಿತಿಯಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವೇ ಇಲ್ಲ. ಉದ್ಯಮಿಗಳು ನಂಬಿಕೆ ಕಳೆದುಕೊಂಡಿದ್ದಾರೆ. ಪ್ರತಿ ವರ್ಷ 1.50 ಲಕ್ಷ ಭಾರತೀಯರು ಪೌರತ್ವ ತ್ಯಜಿಸುತ್ತಿದ್ದಾರೆ ಎಂದು ಹೇಳಿದರು
ಈಗಿನ ಯುವಕರು ಬಿಲ್ಗೇಟ್ಸ್, ಮಾರ್ಕ್ ಜುಕರ್ ಬರ್ಗ್ ಆಗಲು ಬಯಸಲ್ಲ, ಅವರು ಬುದ್ಧಿವಂತರಾಗಲು ಬಯಸುತ್ತಿದ್ದಾರೆ. ಅವರು ಚರ್ಚೆ ಮಾಡಲು ಬಯಸುತ್ತಾರೆ. ಇದೇ ಅವರಿಗೆ ದೊಡ್ಡ ಸಮಸ್ಯೆ ಎಂದು ವ್ಯಂಗ್ಯವಾಡಿದರು.
ಈ ಚುನಾವಣೆಯಲ್ಲಿ ಜನ ಎಚ್ಚೆತ್ತುಕೊಳ್ಳದಿದ್ದರೆ, ಎಲ್ಲ ರಾಜ್ಯಗಳೂ ಮಣಿಪುರವಾಗಲಿದೆ ಎಂದು ಅವರು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟದ 28 ಸಂಸದರ ಐದು ವರ್ಷಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಾಯಿತು. ಅಂಕಣಕಾರ ಆಕಾರ್ ಪಟೇಲ್, ಸಾಮಾಜಿಕ ಚಿಂತಕ ಸಲೀಲ್ ಶೆಟ್ಟಿ, ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ, ಶಿಕ್ಷಣ ತಜ್ಞ ನಿರಂಜನಾರಾಧ್ಯ, ಸಂಶೋಧಕಿ ಎ ಎಆರ್ ವಾಸವಿ, ಚಿಂತಕಿ ಜಾನಕಿ ನಾಯರ್ ಅಭಿಪ್ರಾಯ ಹಂಚಿಕೊಂಡರು.
