ಕಲ್ಕತ್ತಾ ಹೈಕೋರ್ಟ್ ಪಶ್ಚಿಮ ಬಂಗಾಳದ 26 ಸಾವಿರಕ್ಕೂ ಅಧಿಕ ಶಿಕ್ಷಕರ ನೇಮಕಾತಿಯನ್ನು ರದ್ದುಗೊಳಿಸಿದ ಕೆಲವು ಗಂಟೆಗಳ ನಂತರ ಬಿಜೆಪಿ ನಾಯಕರು ನ್ಯಾಯಾಂಗ ಹಾಗೂ ತೀರ್ಪುಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಬಿಜೆಪಿಯ ಸುವೆಂದು ಅಧಿಕಾರಿ ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ರಾಜಕೀಯ ಸ್ಫೋಟ ಉಂಟಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಸ್ಫೋಟ ಎಂದರೇನು? 26 ಸಾವಿರ ಉದ್ಯೋಗಿಗಳ ನೇಮಕಾತಿಯನ್ನು ಕಸಿದುಕೊಂಡು ಅವರನ್ನು ಸಾವಿನ ದವಡೆಗೆ ನೂಕಲಾಗಿದೆ. ತೀರ್ಪು ಬರುವ ಮುನ್ನವೇ ಕೋರ್ಟ್ ಏನು ಹೇಳುತ್ತದೆ ಎಂಬುದು ಇವರಿಗೆ ಹೇಗೆ ತಿಳಿದಿತ್ತು? ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಅಧಿಕಾರಿ ಅವರು ಕಳೆದ ವಾರ ರಾಜಕೀಯ ಸ್ಪೋಟಗೊಳ್ಳುವುದಾಗಿ ಭವಿಷ್ಯ ನುಡಿದಿದ್ದರು. ಸ್ಪೋಟದಿಂದ ಟಿಎಂಸಿ ಹಾಗೂ ಟಿಎಂಸಿ ನಾಯಕರಿಗೆ ತಲ್ಲಣ ಉಂಟಾಗಲಿದೆ ಎಂದು ಹೇಳಿದ್ದರು.
ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ ರಚಿಸಲಾಗಿದ್ದ 2016ರ ಶಾಲಾ ಶಿಕ್ಷಕ ನೇಮಕಾತಿ ಮಂಡಳಿಯನ್ನು ಉದ್ಯೋಗ ಹಗರಣದ ಹಿನ್ನೆಲೆಯಲ್ಲಿ ಕಲ್ಕತ್ತ ಹೈಕೋರ್ಟ್ ರದ್ದುಗೊಳಿಸಿದೆ. ಸುಮಾರು 24 ಸಾವಿರ ಉದ್ಯೋಗಗಳನ್ನು ಕೋರ್ಟ್ ರದ್ದುಪಡಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಇದ್ದಾರೆ, ಆದರೆ ಮೋದಿ ಅಲೆ ಇಲ್ಲ
ಕಲ್ಕತ್ತಾ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ದೇಬಾಂಗ್ಸು ಬಾಸಕ್ ಹಾಗೂ ಎಂಡಿ ಶಬ್ಬೀರ್ ರಶ್ದಿ ನೇತೃತ್ವದ ಪೀಠ ಇಂದು ಅಕ್ರಮವಾಗಿ ನೇಮಕಗೊಂಡಿದ್ದ ಶಾಲಾ ಶಿಕ್ಷಕರು ನಾಲ್ಕು ವಾರಗಳೊಳಗೆ ತಮ್ಮ ವೇತನವನ್ನು ವಾಪಸ್ ನೀಡಬೇಕೆಂದು ನಿರ್ದೇಶಿಸಿತು. ಶಿಕ್ಷಕರಿಂದ ಹಣ ವಾಪಸ್ ಪಡೆಯುವ ಜವಾಬ್ದಾರಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ನೀಡಲಾಗಿದೆ.
ನೇಮಕಾತಿ ಸಮಿತಿಯಿಂದ ರದ್ದುಗೊಂಡವರಲ್ಲಿ ಬೋಧಕೇತರ ಸಿಬ್ಬಂದಿ ಕೂಡ ಸೇರಿದ್ದು,2016ರಲ್ಲಿ ಶಾಲಾ ಶಿಕ್ಷಕ ನೇಮಕಾತಿ ಮಂಡಳಿಯ ಮೂಲಕ ಹಲವು ರಾಜ್ಯ ಸರ್ಕಾರಗಳಿಗೆ ಹಾಗೂ ಅನುದಾನ ಸಹಿತ ಶಾಲೆಗಳಿಗೆ ಶಿಕ್ಷಕರಾಗಿ ನೇಮಕಗೊಂಡಿದ್ದರು.
ನ್ಯಾಯಪೀಠವು ನೇಮಕಾತಿಯ ಸಂದರ್ಭದಲ್ಲಿ ಕೈಗೊಳ್ಳಲಾಗಿದ್ದ 23 ಒಎಂಆರ್ ಶೀಟ್ಗಳನ್ನು ಮರು ಮೌಲ್ಯಮಾಪನಗೊಳಿಸಬೇಕೆಂದು ಆದೇಶಿಸಿತ್ತು.
ನೇಮಕಾತಿಯ ಪ್ರಕ್ರಿಯೆಯ ವಿಷಯಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ಕೈಗೊಳ್ಳಬೇಕೆಂದು ಆದೇಶಿಸಿದ ಪೀಠ ಮೂರು ತಿಂಗಳೊಳಗೆ ವರದಿ ನೀಡಬೇಕೆಂದು ನಿರ್ದೇಶಿಸಿತ್ತು.
