ರಾಜ್ಯಸಭೆಗೆ ಯಾವುದೇ ರಾಜ್ಯದ ನಾಯಕರು, ಉದ್ಯಮಿಗಳು ಸ್ಥಳೀಯ ರಾಜಕೀಯ ಪಕ್ಷದ ಬೆಂಬಲದಿಂದ ತಮಗೆ ಸಂಬಂಧವಿಲ್ಲದ ಅನ್ಯ ರಾಜ್ಯದಿಂದ ಸ್ಪರ್ಧಿಸಿ ಗೆಲುವು ಸಾಧಿಸುತ್ತಾರೆ. ಈ ಪದ್ಧತಿ ಹಲವು ದಶಕದಿಂದಲೂ ನಡೆದುಕೊಂಡು ಬರುತ್ತಿದೆ. ಆದರೆ ಲೋಕಸಭೆಗೆ ಸಾಮಾನ್ಯವಾಗಿ ಆಯಾ ಕ್ಷೇತ್ರದ ಮತದಾರರು ಸ್ಥಳೀಯ ಅಥವಾ ರಾಜ್ಯದ ನಾಯಕರನ್ನು ಚುನಾಯಿಸುವುದು ವಾಡಿಕೆ. ಕೆಲವೊಮ್ಮೆ ರಾಷ್ಟ್ರಮಟ್ಟದ ನಾಯಕರು ತಮ್ಮ ಜನಪ್ರಿಯತೆಯಿಂದ ಯಾವುದೇ ರಾಜ್ಯದಲ್ಲಾದರೂ ಚುನಾಯಿತರಾಗುತ್ತಾರೆ. ಅದಕ್ಕೆ ಇಂದಿರಾ ಗಾಂಧಿ, ರಾಹುಲ್ ಗಾಂಧಿ, ನರೇಂದ್ರ ಮೋದಿ ಕೆಲವು ಉದಾಹರಣೆ. ರಾಷ್ಟ್ರಮಟ್ಟದಲ್ಲಿ ನಾಯಕರಾಗಿರುವ ಅಷ್ಟೇನು ಪ್ರಭಾವಿಯಲ್ಲದ ನಾಯಕರು ಹೈಕಮಾಂಡ್ ನಿರ್ಧಾರದಿಂದ ತಮ್ಮ ಮೂಲ ರಾಜ್ಯವನ್ನು ಬಿಟ್ಟು ಬೇರೆ ಕಡೆ ಸ್ಪರ್ಧಿಸಿ ಗೆದ್ದಿರುವುದುಂಟು. ಇದಕ್ಕೆ ಕರ್ನಾಟಕ ಕೂಡ ಹೊರತಲ್ಲ.
ನಮ್ಮ ರಾಜ್ಯದಲ್ಲಿ ಸ್ಥಳೀಯರು ಮಾತ್ರವಲ್ಲದೆ ಹೊರ ರಾಜ್ಯದ ಕೆಲವು ನಾಯಕರು ಕೂಡ ಲೋಕಸಭೆಗೆ ಚುನಾಯಿತರಾಗಿದ್ದಾರೆ. ಇಲ್ಲಿಯವರೆಗೂ ಒಟ್ಟು 9 ಮಂದಿ ಆಯ್ಕೆಯಾಗಿದ್ದು, ಅವರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಸೋನಿಯಾ ಗಾಂಧಿ, ಲೋಕಸಭೆಯ ವಿಪಕ್ಷ ನಾಯಕ ಸಿ ಎಂ ಸ್ಟೀಫನ್ ಹಾಗೂ ಕೇರಳದ ರಾಜ್ಯಪಾಲರಾಗಿದ್ದ ಉತ್ತರ ಪ್ರದೇಶದ ಅಜಿತ್ ಪ್ರಸಾದ್ ಜೈನ್ ಪ್ರಮುಖರು.
ಇಂದಿರಾ ಗಾಂಧಿ: ಭಾರತದ ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗಿದ್ದು ವಿಶೇಷ. 1975ರಲ್ಲಿ ಕೇಂದ್ರದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾರಣಕ್ಕಾಗಿ 1977ರಲ್ಲಿ ಇಂದಿರಾ ಗಾಂಧಿ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಇಂದಿರಾ ಅವರನ್ನು ಒಳಗೊಂಡು ಹಲವು ಘಟಾನುಘಟಿ ನಾಯಕರು 1977ರ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಜನತಾ ಪಕ್ಷದ ನಾಯಕ ರಾಜ್ ನಾರಾಯಣ್ ವಿರುದ್ಧ 50 ಸಾವಿರ ಅಧಿಕ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.
ಆಗ ಇಂದಿರಾ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಕರ್ನಾಟಕದ ಚಿಕ್ಕಮಗಳೂರು ಕ್ಷೇತ್ರ. ಅಂದಿನ ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸು ಅವರು ಇಂದಿರಾ ಗಾಂಧಿ ಅವರನ್ನು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಮನವೊಲಿಸಿದ್ದರು. ಹಾಲಿ ಸಂಸದರಾಗಿದ್ದ ಡಿ ಬಿ ಚಂದ್ರೇಗೌಡ ಅವರು ಇಂದಿರಾ ಅವರಿಗಾಗಿಯೇ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆ 1978ರಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಲೋಕಸಭಾ ಉಪ ಚುನಾವಣೆ ನಡೆದಿತ್ತು. ಜನತಾ ಪಕ್ಷದಿಂದ ಮಾಜಿ ಸಿಎಂ ವೀರೇಂದ್ರ ಪಾಟೀಲ್ ಕಣಕ್ಕಿಳಿದಿದ್ದರು. ಅಂತಿಮವಾಗಿ ಇಂದಿರಾಗಾಂಧಿ ಅವರು 70 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯದ ಪತಾಕೆ ಹಾರಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ | ಬಿಜೆಪಿ ಭದ್ರಕೋಟೆ ವಶಕ್ಕೆ ಕಾಂಗ್ರೆಸ್ ಅವಿರತ ಪ್ರಯತ್ನ
ಸೋನಿಯಾ ಗಾಂಧಿ: ಬಿಜೆಪಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪತ್ನಿ ಅಂದಿನ ಎಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು 1999ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಥಿ ಜೊತೆ ಕರ್ನಾಟಕದ ಬಳ್ಳಾರಿ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದರು. ಸೋನಿಯಾ ಅವರಿಗೆ ಎದುರಾಳಿಯಾಗಿ ಬಿಜೆಪಿಯಿಂದ ಕಣಕ್ಕಿಳಿದಿದ್ದು, ದೆಹಲಿಯ ಮಾಜಿ ಮುಖ್ಯಮಂತ್ರಿ ಸುಷ್ಮಾ ಸ್ವರಾಜ್. ಇಬ್ಬರು ದಿಗ್ಗಜ ನಾಯಕಿಯರು ಸ್ಪರ್ಧಿಸಿದ ಕಾರಣ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಆಗ ರೋಚಕ ಹಣಾಹಣಿ ನಡೆದಿತ್ತು. ಅಂತಿಮವಾಗಿ ಪ್ರಕಟವಾದ ಫಲಿತಾಂಶದಲ್ಲಿ ಸೋನಿಯಾ ಗಾಂಧಿ ಅವರು 50 ಸಾವಿರಕ್ಕೂ ಅಧಿಕ ಮತಗಳಿಂದ ಜಯಭೇರಿ ಬಾರಿಸಿದರು.
ಸಿ ಎಂ ಸ್ಟೀಫನ್: ಕೇರಳದ ಪ್ರಮುಖ ಕಾಂಗ್ರೆಸ್ ನಾಯಕರಲ್ಲಿ ಸಿ ಎಂ ಸ್ಟೀಫನ್ ಕೂಡ ಒಬ್ಬರು. 1980ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಎನ್ ಧರ್ಮಸಿಂಗ್ ಅವರು ಅಂದಿನ ಕೆಲವು ರಾಜಕೀಯ ಸ್ಥಿತ್ಯಂತರಗಳ ಪರಿಣಾಮ ತಾವು ಪ್ರತಿನಿಧಿಸುತ್ತಿದ್ದ ಗುಲಬರ್ಗ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಆಗ ನಡೆದ ಉಪ ಚುನಾವಣೆಯಲ್ಲಿ ಸಿ ಎಂ ಸ್ಟೀಫನ್ ಸ್ಪರ್ಧಿಸಿ ಜನತಾ ಪಕ್ಷದ ಅಭ್ಯರ್ಥಿ ಎದುರು ಗೆಲುವು ಸಾಧಿಸಿದರು. ಇದೇ 1980-82ರ ಅವಧಿಯಲ್ಲಿ ಇಂದಿರಾ ಗಾಂಧಿ ಸಂಪುಟದಲ್ಲಿ ಮಾಹಿತಿ ತಂತ್ರಜ್ಞಾನ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅದಕ್ಕೂ ಮುನ್ನ 1978-79ರ ಅವಧಿಯಲ್ಲಿ ಲೋಕಸಭೆಯ ವಿಪಕ್ಷ ನಾಯಕರಾಗಿದ್ದರು.

ಅಜಿತ್ ಪ್ರಸಾದ್ ಜೈನ್: ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಮುಖ ನಾಯಕ ಅಜಿತ್ ಪ್ರಸಾದ್ ಜೈನ್. 1962ರಲ್ಲಿ ರಾಜ್ಯ ಕಾಂಗ್ರೆಸ್ ನಾಯಕ ಎಂ ವಿ ಕೃಷ್ಣಪ್ಪ ಅಂದಿನ ತಮ್ಮ ತುಮಕೂರು ಲೋಕಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ನಡೆದ ಉಪ ಚುನಾವಣೆಯಲ್ಲಿ ಅಜಿತ್ ಪ್ರಸಾದ್ ಜೈನ್ ಸ್ಪರ್ಧಿಸಿ ಗೆಲುವು ಗಳಿಸಿದ್ದರು. ಅಜಿತ್ ಪ್ರಸಾದ್ ಅವರು 1965ರಲ್ಲಿ ಕೇರಳದ ರಾಜ್ಯಪಾಲ, 1954ರ ಅವಧಿಯಲ್ಲಿ ಪ್ರಧಾನಿ ಜವಾಹರ್ಲಾಲ್ ನೆಹರು ಸಂಪುಟದಲ್ಲಿ ಕೇಂದ್ರ ಕೃಷಿ ಸಚಿವರಾಗಿದ್ದರು.

ವಿ ಕೆ ಆರ್ ವಿ ರಾವ್: ದೆಹಲಿ ವಿವಿ ಕುಲಪತಿ, ಯೋಜನಾ ಆಯೋಗದ ಸದಸ್ಯ, ಕೇಂದ್ರ ಸಚಿವ ಸೇರಿದಂತೆ ಹಲವು ಹುದ್ದೆಗಳನ್ನು ನಿರ್ವಹಿಸಿದವರು ವಿ ಕೆ ಆರ್ ವಿ ರಾವ್. ಇವರು ಮೂಲತಃ ಕನ್ನಡಿಗರಾದರೂ ತಮ್ಮ ಬಾಲ್ಯ, ವಿದ್ಯಾಭ್ಯಾಸ ಪೂರೈಸಿದ್ದು ತಮಿಳುನಾಡಿನಲ್ಲಿ. ರಾವ್ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ 1967 ಹಾಗೂ 71ರ ಅವಧಿಯಲ್ಲಿ ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದರು. ವಿ ಕೆ ಆರ್ ವಿ ರಾವ್ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನ ಸಂಸ್ಥಾಪಕರು ಕೂಡ.

ಎ ಶಂಕರ್ ಆಳ್ವ: ಕೇರಳದ ಕಾಸರಗೋಡುವಿನಲ್ಲಿ ಜನಿಸಿದ ಎ ಶಂಕರ್ ಆಳ್ವ 1962 ರಿಂದ 1967ರವರೆಗೆ ಮಂಗಳೂರು ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದರು. ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿ ಡಿ ದೇವರಾಜ ಅರಸು ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ರಾಜಾರಾಂ ಗಿರಿಧರ್ ಲಾಲ್ ದುಬೆ: ಮಹಾರಾಷ್ಟ್ರದವರಾದ ರಾಜಾರಾಂ ಗಿರಿಧರ್ ಲಾಲ್ ದುಬೆ ಬಿಜಾಪುರದ ಉತ್ತರ ಲೋಕಸಭಾ ಕ್ಷೇತ್ರದಿಂದ 1952 ಹಾಗೂ 1962ರಲ್ಲಿ ಸಂಸದರಾಗಿದ್ದರು. 1952ರಲ್ಲಿ ಅಂದಿನ ಬಿಜಾಪುರ ಬಾಂಬೆ ಪ್ರಾಂತ್ಯಕ್ಕೆ ಸೇರಿದ್ದರೆ, 1962ರಲ್ಲಿ ಅಖಂಡ ಕರ್ನಾಟಕಕ್ಕೆ ಸೇರ್ಪಡೆಗೊಂಡಿತ್ತು.

ಡಾ. ಶೌಕತ್ವುಲ್ಲ ಶಾ ಅನ್ಸಾರಿ: ಒಡಿಶಾ ರಾಜ್ಯಪಾಲರಾಗಿದ್ದ ಡಾ. ಶೌಕತ್ವುಲ್ಲ ಶಾ ಅನ್ಸಾರಿ ಉತ್ತರ ಪ್ರದೇಶದವರು. 1952ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಬೀದರ್ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ ಬೀದರ್ ಅಂದು ಹೈದರಾಬಾದ್ ಪ್ರಾಂತ್ಯಕ್ಕೆ ಸೇರಿತ್ತು. ಅಖಂಡ ಕರ್ನಾಟಕ ನಿರ್ಮಾಣವಾಗಿರಲಿಲ್ಲ. ಇವರು ಭೌತ ವಿಜ್ಞಾನಿಯಾಗಿ ಕೂಡ ಹೆಸರು ಮಾಡಿದ್ದಾರೆ.

ಹೆಚ್ ಟಿ ಸಾಂಗ್ಲಿಯಾನ: ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಜನಿಸಿದ ಹೆಚ್ ಟಿ ಸಾಂಗ್ಲಿಯಾನ ಅವರು ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿ ಸೇವೆ ಸಲ್ಲಿಸಿದ್ದಾರೆ. ಪೊಲೀಸ್ ಸೇವೆಯಿಂದ ನಿವೃತ್ತರಾದ ನಂತರ ರಾಜಕೀಯ ಕ್ಷೇತ್ರಕ್ಕೆ ಸೇರ್ಪಡೆಗೊಂಡು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ 2004ರಲ್ಲಿ ಬಿಜೆಪಿಯಿಂದ ಸಂಸದರಾಗಿದ್ದರು. ನಂತರದಲ್ಲಿ ಕಾಂಗ್ರೆಸ್ಗೆ ಸೇರಿ ಬೆಂಗಳೂರು ಕೇಂದ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಇವರಲ್ಲದೆ ಕರ್ನಾಟಕ ಮೂಲದ ದೇಶದ ಕಾರ್ಮಿಕ ನಾಯಕರಾಗಿ ಗುರುತಿಸಿಕೊಂಡು ಮುಂಬೈ, ಬಿಹಾರದಲ್ಲಿ ಸಂಸದರಾಗಿದ್ದ ಜಾರ್ಜ್ ಫರ್ನಾಂಡಿಸ್ 1984ರಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಜನತಾ ಪಕ್ಷದಿಂದ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್ನ ಜಾಫರ್ ಷರೀಷ್ ಎದುರು ಸೋಲು ಅನುಭವಿಸಬೇಕಾಯಿತು.
ಈ ಬಾರಿ ಏಳು ಹಂತದ ಚುನಾವಣೆ
ಭಾರತದ ಸಂಸತ್ತಿನ 543 ಕ್ಷೇತ್ರಗಳ 18ನೇ ಲೋಕಸಭಾ ಚುನಾವಣೆ ಯು ಏ.19 ರಿಂದ ಜೂನ್ 1ರವರೆಗೆ ಒಟ್ಟು 7 ಹಂತಗಳಿಗೆ ನಡೆಯಲಿದೆ. ಈಗಾಗಲೇ 102 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ಮುಕ್ತಾಯಗೊಂಡಿದ್ದು, ಎರಡನೇ ಹಂತದ ಚುನಾವಣೆ ಏ.26 ರಂದು ನಡೆಯಲಿದೆ. ಕರ್ನಾಟಕದ ಒಟ್ಟು 28 ಕ್ಷೇತ್ರಗಳಿಗೆ ಏ.26 ಹಾಗೂ ಮೇ 7 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಎಲ್ಲ ಹಂತಗಳ ಚುನಾವಣಾ ಫಲಿತಾಂಶ ಜೂನ್ 4ರಂದು ಪ್ರಕಟಗೊಳ್ಳಲಿದೆ.
ಕರ್ನಾಟಕದ ರಾಜಕೀಯ ರಣಾಂಗಣ ಕೂಡ ಬಿರುಸಿನಿಂದ ಸಾಗುತ್ತಿದೆ. ಆಡಳಿತಾರೂಢ ಕಾಂಗ್ರೆಸ್ಗೆ ಪೈಪೋಟಿಯಾಗಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷ ಜೆಡಿಎಸ್ ಸ್ಪರ್ಧೆ ನೀಡಿದೆ. ರಾಜ್ಯದಲ್ಲಿ 1952ರ ಲೋಕಸಭಾ ಚುನಾವಣೆಯಿಂದ ಇಲ್ಲಿಯವರೆಗೂ ನಡೆದ 18 ಲೋಕಸಭಾ ಚುನಾವಣೆಗಳಲ್ಲಿ ಬಹುತೇಕ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. 1996 ರಲ್ಲಿ ಜನತಾದಳ ಹಾಗೂ 2004ರಿಂದ 2019 ರವರೆಗಿನ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆದಿದ್ದು ಬಿಟ್ಟರೆ ಉಳಿದ ಅವಧಿಗಳಲ್ಲಿ ಕಾಂಗ್ರೆಸ್ ಏಕಪಕ್ಷವಾಗಿ ವಿಜೃಂಭಿಸಿದೆ.