ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದ ಹಿರಿಯ ನ್ಯಾಯವಾದಿ ಕೆ ಸುಬ್ಬರಾವ್ (92) ಅವರು ಶುಕ್ರವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ ಅಂತಿಮ ಗೌರವ ಮತ್ತು ನಮನ ಸಲ್ಲಿಸಲು ಲಖಿಲ ಭಾರತ ವಕೀಲರ ಒಕ್ಕೂಟ (ಎಐಎಲ್ಯು) ಬೆಂಗಳೂರಿನಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದೆ.
“1956ರ ಜೂನ್ 4ರಂದು ಬೆಂಗಳೂರು ಬಾರ್ ಕೌನ್ಸಿಲ್ ಗೆ ಆಯ್ಕೆಯಾಗಿ ಬಳಿಕ ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ 1999ರಲ್ಲಿ ಹಿರಿಯ ನ್ಯಾಯವಾದಿಯಾಗಿ ನೇಮಕವಾಗಿದ್ದರು. ಅಸಮಾನತೆಯನ್ನು ತೊಲಗಿಸುವ ತುಡಿತ ಹೊಂದಿದ್ದ ಸುಬ್ಬರಾವ್ ಸಾರ್ಥಕ ಬದುಕು ಸಾಗಿಸಿದ್ದಾರೆ. ತಾತ್ವಿಕಕವಾಗಿ ಮಾರ್ಕ್ಸ್ ವಾದದ ಮೇರು ವ್ಯಕ್ತಿತ್ವವನ್ನು ಅವರು ಹೊಂದಿದ್ದರು” ಎಂದು ಎಐಎಲ್ಯು ಸ್ಮರಿಸಿದೆ.
“1975ರಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರಿದ್ದರ ವಿರುದ್ಧ ಪ್ರಜಾಪ್ರಭುತ್ವದ ಉಳಿವಿಗಾಗಿ ನ್ಯಾಯಾಂಗ ಹೋರಾಟವನ್ನು ಸುಬ್ಬರಾವ್ ಮುನ್ನಡೆಸಿದ್ದರು. ಆ ವೇಳೆ, ಹಿರಿಯ ಹೋರಾಟಗಾರರು ನಿಗೂಢವಾಗಿ ಬಂಧನಕ್ಕೊಳಗಾಗಿದ್ದಾಗ ಹೇಬಿಯೆಸ್ ಕಾರ್ಪಸ್ ಮೂಲಕ ಪ್ರಕರಣವನ್ನು ಬಯಲಿಗೆಳೆದಿದ್ದರು” ಎಂದು ಒಕ್ಕೂಟ ಹೇಳಿದೆ.
“ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದ ಸುಬ್ಬರಾವ್, ಕಾಸರಗೋಡಿನ ಗ್ರಾಮವೊಂದರಲ್ಲಿ ಕನ್ನಡ ಶಾಲೆ ಸ್ಥಾಪಿಸಿ ಕನ್ನಡ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಿದ್ದರು. ಅಲ್ಲಿಯೇ ಸಾಮಾಜಿಕ ಬದಲಾವಣೆಯ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದ್ದರು. ದಲಿತ, ಆದಿವಾಸಿ, ಹಿಂದುಳಿದ, ಅಲ್ಪ ಸಂಖ್ಯಾತ ಸಮುದಾಯಗಳ ಬಗ್ಗೆ ಅವರು ಅಪಾರ ಕಾಳಜಿ ಹೊಂದಿದ್ದರು. ಅದಕ್ಕಾಗಿ ತಮ್ಮ ಭೂಮಿಯನ್ನು ದಾನ ಮಾಡಿ ,ಟ್ರಸ್ಟ್ ಒಂದನ್ನು ಸ್ಥಾಪಿಸಿ ಮಾದರಿಯಾಗಿದ್ದರು” ಎಂದು ಸ್ಮರಿಸಿದೆ.
ಈ ಸುದ್ದಿ ಓದಿದ್ದೀರಾ?: ಕನ್ನಡದ ಖ್ಯಾತ ಕತೆಗಾರ, ಹಿರಿಯ ಸಾಹಿತಿ ಶ್ರೀನಿವಾಸ ವೈದ್ಯ ಇನ್ನಿಲ್ಲ
“ತಮ್ಮ ಜೀವನದ ಅಮೂಲ್ಯ ಸಮಯ, ಸಂಪನ್ಮೂಲಗಳನ್ನು ಜನತೆಗಾಗಿ ಸಮರ್ಪಿಸಿದ, ಮಾದರಿ ವ್ಯಕ್ತಿತ್ವದ ಹಿರಿಯ ಚೇತನವಾಗಿದ್ದ ಸುಬ್ಬರಾವ್ ಎಐಎಲ್ಯು ಕರ್ನಾಟಕ ಘಟಕದ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದರು. ಒಕ್ಕೂಟದ ರಾಜ್ಯ ಸಮಿತಿಯಲ್ಲಿ ಎರಡು ಅವಧಿಗೆ ಗೌರವಾಧ್ಯಕ್ಷರಾಗಿಯೂ ವಕೀಲರನ್ನು ಸಂಘಟಿಸುವಲ್ಲಿ ಹಾಗೂ ವಕೀಲರನ್ನು ಸಮಾಜಮುಖಿಯಾಗಿಸುವಲ್ಲಿ ಕೊಡುಗೆ ನೀಡಿದ್ದಾರೆ” ಎಂದು ಒಕ್ಕೂಟ ನೆನಪಿಸಿಕೊಂಡಿದೆ.
ಶ್ರದ್ಧಾಂಜಲಿ ಸಭೆಯಲ್ಲಿ ಎಐಎಲ್ಯು ರಾಜ್ಯ ಪ್ರಧಾನಕಾರ್ಯದರ್ಶಿ ಶ್ರೀನಿವಾಸಕುಮಾರ್, ದಕ್ಷಿಣ ಭಾರತ ಸಂಚಾಲಕರಾದ ರಾಮಚಂದ್ರರೆಡ್ಡಿ, ರಾಜ್ಯ ಮುಖಂಡರಾದ ಶಿವಾರೆಡ್ಡಿ, ಶರಣಬಸವ ಮರದ್, ಹುಳ್ಳಿ ಉಮೇಶ್, ರಮೇಶ್ ಪಿ.ಎಸ್, ರವಿ.ಜಿ ಎನ್, ಸೇರಿದಂತೆ ಹಲವರು ಇದ್ದರು.