ಹಾಸನ ಪೆನ್‌ಡ್ರೈವ್‌ ಪ್ರಕರಣ: ನಾಲ್ವರು ಸಂತ್ರಸ್ತೆಯರು ಆತ್ಮಹತ್ಯೆಗೆ ಯತ್ನ

Date:

Advertisements

ಹಾಸನದ ಪೆನ್‌ಡ್ರೈವ್‌ ಪ್ರಕರಣ ದಿನದಿಂದ ದಿನಕ್ಕೆ ಜಿಲ್ಲಾದ್ಯಂತ ಆತಂಕ ಹೆಚ್ಚಿಸ್ತಾ ಇದೆ. ಕಾಮುಕ ಯುವ ನಾಯಕನ ಅಶ್ಲೀಲ ವಿಡಿಯೋಗಳು ವಾಟ್ಸ್‌ಆಪ್‌ಗಳಲ್ಲಿ ಹರಿದಾಡ್ತಾ ಇವೆ. ವಿಡಿಯೋಗಳು ಹೊರಬಂದ ಪರಿಣಾಮ, ಸುಮಾರು ನಾಲ್ಕು ಸಂತ್ರಸ್ತ ಹೆಣ್ಣುಮಕ್ಕಳು ಆತ್ಮಹತ್ಯೆಗೂ ಕೂಡ ಯತ್ನಿಸಿದ್ದಾರೆ ಎಂಬ ಮಾಹಿತಿ ಈಗಷ್ಟೆ ಬಂದಿದೆ. ಆ ಕಾಮುಕ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿದ್ದಾನೆ ಎಂದೂ ಹೇಳಲಾಗುತ್ತಿದೆ.

ಆತ ಹಲವು ಮಹಿಳೆಯರನ್ನ ಮನವೊಲಿಸಿ, ಪುಸಲಾಯಿಸಿ, ಆಮಿಷ ಒಡ್ಡಿ, ಬೆದರಿಸಿ ಲೈಂಗಿಕ ತೃಷೆ ತೀರಿಸಿಕೊಂಡಿದ್ದಾನೆ. ತನ್ನ ಕೃತ್ಯವನ್ನ ತಾನೇ ರೆಕಾರ್ಡ್ ಮಾಡಿಕೊಂಡಿದ್ದ ಎನ್ನಲಾಗಿದೆ. ಸರಿಸುಮಾರು 2976ಕ್ಕೂ ಹೆಚ್ಚು ವಿಡಿಯೊಗಳನ್ನು ಆತ ಇಟ್ಟುಕೊಂಡಿದ್ದ. ಅವುಗಳನ್ನು ಯಾರೋ ಕಾಪಿ ಮಾಡಿಕೊಂಡು ಸಾವಿರಾರು ಪೆನ್‌ಡ್ರೈವ್‌ಗಳಿಗೆ ಹಾಕಿ, ಹಾಸನದ ಸ್ಟೇಡಿಯಂ, ಮಹಾರಾಜ ಪಾರ್ಕ್‌ ಸೇರಿದಂತೆ ಹಲವು ಕಡೆ ಎಸೆದಿದ್ದಾರೆ. ಅವು ಜನರ ಕೈಗೆ ಸಿಕ್ಕಿ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿವೆ. ಆತನ ಕಾಮವಾಂಛೆಗೆ ಬಲಿಯಾದ ಸಂತ್ರಸ್ತೆಯ ಚಿತ್ರಗಳು ಹೊರಬಂದ ಕಾರಣ, ನಾಲ್ವರು ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿರುವವರಲ್ಲಿ ಒರ್ವ ಮಹಿಳೆ ಸರ್ಕಾರಿ ಅಧಿಕಾರಿಯೂ ಆಗಿದ್ದಾರೆ ಎನ್ನಲಾಗುತ್ತಿದೆ. ಮಾಧ್ಯಮಗಳ ಅಥವಾ ಪೊಲೀಸರ ಮುಂದೆ ಹೋಗಿ ನ್ಯಾಯ ಕೇಳಲು ಸಿದ್ದರಿರುವ ಸಂತ್ರಸ್ತ ಮಹಿಳೆಯರಿಗೆ ಬೆದರಿಕೆ ಒಡ್ಡಲಾಗುತ್ತಿದೆ. ಅವರ ಫೋನ್‌ ಕರೆಗಳನ್ನು ಕದ್ದಾಲಿಸುವುದು,‌ ಬೆದರಿಕೆ ಹಾಕುವುದು, ಮಹಿಳಾಪರ ಹೋರಾಟಗಾರರ, ಸಾಮಾಜಿಕ ಕಾರ್ಯಕರ್ತರ ಸಂಪರ್ಕಕ್ಕೆ ಸಿಗದಂತೆ ಮಾಡುವ ಹುನ್ನಾರಗಳು ಜಿಲ್ಲಾದ್ಯಂತ ನಡೆಯುತ್ತಿವೆ ಎಂದು ಸ್ಥಳೀಯ ಹೋರಾಟಗಾರರು ಆರೋಪಿಸಿದ್ದಾರೆ.

Advertisements

“ಕೆಲವು ಸಂತ್ರಸ್ತ ಮಹಿಳೆಯರು ದೂರು ನೀಡಲು ಮುಂದೆ ಬಂದರೂ ಕುಟುಂಬಸ್ಥರೇ ಅವರನ್ನು ತಡೆಯುತ್ತಿದ್ದಾರೆ. ಕೌಟುಂಬಿಕ ಮಾಹಿತಿ ಬಹಿರಂಗವಾಗುವ, ಮಾಧ್ಯಮಗಳಲ್ಲಿ ತಮ್ಮ ವಿವರ ಪ್ರಕಟವಾಗುವ ಭಯದಿಂದ ಅಂಜಿ ಹಿಂದೆ ಸರಿಯುತ್ತಿದ್ದಾರೆ. ಅಲ್ಲದೆ, ಆ ವಿಡಿಯೋಗಳಲ್ಲಿ ಇರುವ ಬಹುತೇಕ ಮಹಿಳೆಯರು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಯ ಪಕ್ಷಕ್ಕೆ ಸೇರಿದವರು, ಆ ವ್ಯಕ್ತಿಯಿಂದ ಹಲವು ರೀತಿಯ ಸಹಾಯ ಪಡೆದಿರುವವರ ಕುಟುಂಬದ ಮಹಿಳೆಯರು. ಕಾರ್ಯಕರ್ತರ ಪತ್ನಿಯರು-ಮಕ್ಕಳು ಎಂಬುದೇ ಆತಂಕದ ವಿಷಯ. ಇನ್ನೂ ನಿತ್ಯ ಮೂರ್ನಾಲ್ಕು ಬಾರಿ ಸರಣಿಯಂತೆ ನೂರಾರು ವಿಡಿಯೋಗಳನ್ನ ಹರಿಬಿಡಲಾಗುತ್ತಿರುವುದು ಸಂತ್ರಸ್ತರನ್ನ ಹೆಚ್ಚಿನ ಆತಂಕಕ್ಕೆ ದೂಡಿದೆ. ಪರಿಸ್ಥಿತಿ ಹೀಗೆಯೇ ಬಿಗಡಾಯಿಸಿದರೆ ಸಂತ್ರಸ್ತ ಹೆಣ್ಣುಮಕ್ಕಳ ಹಾಗೂ ಅವರ ಕುಟುಂಬಸ್ಥರ ಸಾಲು-ಸಾಲು ಸಾವುಗಳನ್ನ ಕಾಣಬೇಕಾದ ಪರಿಸ್ಥಿತಿ ಜಿಲ್ಲೆಗೆ ಎದುರಾಗಬಹುದು” ಎಂದೂ ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಸಂಬಂಧ ಪೆನ್‌ಡ್ರೈವ್‌ನಲ್ಲಿ ವಿಡಿಯೋ ತುಂಬಿಸಿ ಸಾರ್ವಜನಿಕವಾಗಿ ಸಿಗುವಂತೆ ಮಾಡಿರುವುದರ ಕುರಿತು ಸುಮೊಟೊ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಂಗ ತನಿಖೆ ನಡೆಸಬೇಕೆಂದು ಹಿರಿಯ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಆರ್‌.ಪಿ ವೆಂಕಟೇಶ ಮೂರ್ತಿ ಆಗ್ರಹಿಸಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಒತ್ತಾಯಿಸಿದ್ದಾರೆ. ಪ್ರಕರಣದಲ್ಲಿ ಯಾರು ಅಪರಾಧಿ ಇದ್ದಾರೋ, ಅವರಿಗೆ ಕಠಿಣ ಶಿಕ್ಷೆಯಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಆದರೆ, ಸುದ್ದಿಗೋಷ್ಠಿ ನಡೆದ ಕೆಲವೇ ಗಂಟೆಗಳಲ್ಲಿ ಮತ್ತಷ್ಟು ಅಶ್ಲೀಲ ವಿಡಿಯೋಗಳನ್ನ ವಾಟ್ಸಪ್‌ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ಈದಿನ.ಕಾಮ್‌ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಹಾಗೂ ಸಾಹಿತಿ ರೂಪ ಹಾಸನ, ”ಇಂತಹದೊಂದು ಕೃತ್ಯ ನಡೆದಿರುವುದು ತಿಳಿದಾಗ ಮತ್ತು ಅಂತಹ ಕೆಲವು ವಿಡಿಯೋಗಳನ್ನ ಸ್ವತಃ ನೋಡಿದಾಗ ಅಕ್ಷರಶಃ ಆಘಾತವಾಯಿತು, ಅದರಿಂದ ವೈಯಕ್ತಿಕವಾಗಿ ನಾನು ಸುಧಾರಿಸಿಕೊಳ್ಳುವುದೇ ಕಷ್ಟ ಆಗಿತ್ತು. ಹೀಗಿರುವಾಗ ಆ ವಿಡಿಯೋದಲ್ಲಿರುವ ಹೆಣ್ಣುಮಕ್ಕಳ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಮೂರಕ್ಕೂ ಹೆಚ್ಚು ಹೆಣ್ಣುಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಗೆಲ್ಲ ಧೈರ್ಯ ತುಂಬಲಾಗಿದ್ದು, ಕುಟುಂಬಗಳು ಸಂತ್ರಸ್ತ ಹೆಣ್ಣುಮಕ್ಕಳನ್ನು ಸೂಕ್ಷ್ಮವಾಗಿ ನೋಡಿಕೊಳ್ಳಬೇಕಿದೆ” ಎಂದು ಅವರು ಹೇಳಿದರು.

ಅಲ್ಲದೆ, ಪ್ರಕರಣ ಸಂಬಂಧ ”ಹಲ್ಲುಕಿತ್ತ ಹಾವಿನಂತಿರುವ ಮಹಿಳಾ ಆಯೋಗ, ಪರಿಶೀಲನೆ ನಡೆಸಿ ವರದಿ ನೀಡಬಹುದಷ್ಟೆ. ಆದರೆ, ಸಮಗ್ರ ತನಿಖೆ, ಸಂತ್ರಸ್ತರ ರಕ್ಷಣೆಯ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ರಮವಹಿಸಬೇಕು. ವಿಶೇಷ ನ್ಯಾಯಾಂಗ ತನಿಖೆ ನಡೆಸಬೇಕು” ಎಂದು ರೂಪ ಹಾಸನ ಆಗ್ರಹಿಸಿದ್ದಾರೆ.

”ಚುನಾವಣಾ ಕಣದಲ್ಲಿರುವ ಅಭ್ಯರ್ಥಿಯು ತಮ್ಮ ಮಾರ್ಫ್‌ ವಿಡಿಯೋಗಳನ್ನ ಎಲ್ಲ ಕಡೆ ಬಿತ್ತರಿಸಲಾಗುತ್ತಿದೆ ಎಂದು ಆರೋಪಿಸಿ ದೂರು ನೀಡಿದ್ದು, ಆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಸಂತ್ರಸ್ತರು ಯಾರು ದೂರು ನೀಡಲು ಮುಂದೆ ಬರುತ್ತಿಲ್ಲ. ಮಾಹಿತಿ ಇರುವವರು ಕೂಡ ಮುಂದೆ ಬಂದು ದೂರು ನೀಡಲು ಹೆದರುತ್ತಿದ್ದಾರೆ ಹಾಗಾಗಿ ಈ ಪ್ರಕರಣದಲ್ಲಿ ಹೇಗೆ ಮುಂದುವರೆದು ನ್ಯಾಯಕ್ಕಾಗಿ ಆಗ್ರಹಿಸುವುದು ಎಂಬುದೇ ತಿಳಿಯುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹಿರಿಯ ಲೇಖಕಿ, ವಕೀಲರಾದ ಬಾನು ಮುಷ್ತಾಕ್.

ಒಟ್ಟಾರೆಯಾಗಿ ಚುನಾವಣಾ ಕಣದಲ್ಲಿರುವ ವ್ಯಕ್ತಿಯನ್ನು ರಾಜಕೀಯವಾಗಿ ಮುಗಿಸುವ ಉದ್ದೇಶಕ್ಕೆ ನಡೆದಿರುವ ಈ ಕೃತ್ಯದಿಂದ ವಿಡಿಯೋಗಳಲ್ಲಿರುವ ಸಾವಿರಾರು ಹೆಣ್ಣುಮಕ್ಕಳ ಮಾನ-ಪ್ರಾಣ ತೂಗುಗತ್ತಿಯ ಮೇಲೆ ನಿಂತಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X