ರಾಜಸ್ಥಾನದ ಬನ್ಸ್ವಾರಾದಲ್ಲಿ ಏಪ್ರಿಲ್ 21ರಂದು ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೋಮು ದ್ವೇಷ ಭಾಷಣ ಮಾಡಿದ್ದಾರೆ., ಅವರ ವಿರುದ್ಧ ಕ್ರಮ ಕೃಗೊಳ್ಳಬೇಕೆಂದು ಅಹಮದಾಬಾದ್ನ ಐಐಎಂನ ನಿವೃತ್ತ ಪ್ರಾಧ್ಯಾಪಕ ಜಗದೀಪ್ ಚೋಕರ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಅವರ ಪತ್ರಕ್ಕೆ 93 ಮಂದಿ ನಿವೃತ್ತ ಅಧಿಕಾರಿಗಳು ಸಹಿ ಹಾಕಿದ್ದಾರೆ.
ಮೋದಿ ಅವರ ಭಾಷಣವು ಮುಸ್ಲಿಮರ ವಿರುದ್ಧ ದ್ವೇಷ ತುಂಬಿದ ಟೀಕೆಗಳಿಂದ ಕೂಡಿತ್ತು. ಅವರು ಮುಸ್ಲಿಮರನ್ನು ‘ನುಸುಳುಕೋರರು; ಎಂದಿದ್ದರು. “ವಿರೋಧ ಪಕ್ಷಗಳು ಅಧಿಕಾರಕ್ಕೆ ಬಂದರೆ, ಹಿಂದುಗಳ ಮಂಗಳಸೂತ್ರ ಮತ್ತು ಭೂಮಿಯನ್ನು ಕಸಿದುಕೊಂಡು, ಮುಸ್ಲಿಮರಿಗೆ ನೀಡುತ್ತಾರೆ” ಎಂದು ಕೋಮು ಪ್ರಚೋದನೆಯ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಗಳನ್ನು ಖಂಡಿಸಿ, ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಸುಮಾರು 2,200ಕ್ಕೂ ಹೆಚ್ಚು ದೂರುಗಳನ್ನು ನೀಡಲಾಗಿದೆ. ಆದರೆ, ಆಯೋಗವು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬುಧವಾರ, ವಿವರ ಕೇಳಿ ನೋಟಿಸ್ಅನ್ನು ಮಾತ್ರವೇ ಜಾರಿ ಮಾಡಿದೆ.
ಇದೀಗ, ಜಗದೀಪ್ ಚೋಕರ್ ಸೇರಿದಂತೆ ನಿವೃತ್ತ ಅಧಿಕಾರಿಗಳು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹಾಗೂ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಡಾ. ಎಸ್.ಎಸ್ ಸಂಧು ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಮೋದಿ ಅವರ ಭಾಷಣವು ಮಾದರಿ ನೀತಿ ಸಂಹಿತೆ, ಜನರ ಪ್ರಾತಿನಿಧ್ಯ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯನ್ನು ಉಲ್ಲಂಘಿಸುತ್ತದೆ ಎಂದು ವಿವರಿಸಿದ್ದಾರೆ.
“ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಮಾಜಿ ಅಧಿಕಾರಿಗಳು. ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ಆದರೆ, ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಆದರ್ಶಗಳಿಗೆ ನಾವು ಬದ್ಧರಾಗಿದ್ದೇವೆ” ಎಂದು ನಿವೃತ್ತ ಅಧಿಕಾರಿಗಳು ಹೇಳಿದ್ದಾರೆ.
“ಸಾಂವಿಧಾನಿಕ ನಡವಳಿಕೆ ಗುಂಪಿನ (ಸಿಸಿಜಿ – ಕಾನ್ಸ್ಟಿಟ್ಯೂಷನಲ್ ಕಂಡಟ್ಸ್ ಗ್ರೂಪ್) ಸದಸ್ಯರಾಗಿ, ಚೋಕರ್ ಅವರು ಮೋದಿ ಅವರ ಅತಿರೇಕದ ಕೋಮು ದ್ವೇಷ ಭಾಷಣ ಖಂಡಿಸಿ ಬರೆದಿರುವ ಪತ್ರವನ್ನು ನಾವು ಬೆಂಬಲಿಸುತ್ತೇವೆ” ಎಂದಿದ್ದಾರೆ.
ಚೋಕರ್ ಅವರು ಬರೆದಿರುವ ಪತ್ರ ಹೀಗಿದೆ;
ವಿಷಯ: ಮಾದರಿ ನೀತಿ ಸಂಹಿತೆ, 1951ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 125, 123(3) ಮತ್ತು (3ಎ), ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ ನಿಬಂಧನೆಗಳನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಏಪ್ರಿಲ್ 21ರ ಭಾಷಣದಲ್ಲಿ ಉಲ್ಲಂಘಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ರಾಜಕೀಯ ಚರ್ಚೆಗಳನ್ನು ನಾನು ಗಮನಿಸಿದ್ದೇವೆ. 2024ರ ಏಪ್ರಿಲ್ 21ರಂದು ರಾಜಸ್ಥಾನದ ಬನ್ಸ್ವಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿದ ಭಾಷಣವು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಆ ಬಗ್ಗೆ ನಿಮಗೆ ದೂರು ನೀಡುವ ಸ್ವಾತಂತ್ರ್ಯವಿದೆ.
ಮೋದಿ ಅವರ ಭಾಷಣದ ವಿಡಿಯೋ ನೋಡಿದೆ. ಅವರು ಬಿಜೆಪಿಯ ಸ್ಟಾರ್ ಪ್ರಚಾರಕಾಗಿದ್ದಾರೆ. “ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ‘ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು’ ಎಂದಿದ್ದರು. ಇದರರ್ಥ ಈ ಸಂಪತ್ತನ್ನು ಯಾರು ಹೆಚ್ಚು ಮಕ್ಕಳಿರುವವರಿಗೆ ವಿತರಿಸುವುದಾಗಿದೆ. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ನುಸುಳುಕೋರರೊಂದಿಗೆ ಹಂಚಿಕೊಳ್ಳುತ್ತೀರಾ? ನೀವು ಒಪ್ಪುತ್ತೀರಾ? ಇದನ್ನೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಲಾಗಿದೆ” ಎಂದು ಮೋದಿ ಆರೋಪಿಸಿದ್ದಾರೆ.
“ನನ್ನ ತಾಯಂದಿರೇ ಮತ್ತು ಸಹೋದರಿಯರೇ, ಇದು ನಗರ ನಕ್ಸಲರ ಆಲೋಚನೆ. ನಿಮ್ಮ ಮಂಗಳಸೂತ್ರವನ್ನೂ ಅವರು ಬಿಡುವುದಿಲ್ಲ” ಎಂದು ಕಾಂಗ್ರೆಸ್ ಮತ್ತು ಸಿಂಗ್ ವಿರುದ್ಧ ಮೋದಿ ದ್ವೇಷ ಪೂರಿತ ಮಾತನಾಡಿದ್ದಾರೆ.
ಆ ವಿಡಿಯೋ ತುಣುಕನ್ನು ವೀಕ್ಷಿಸುವಂತೆ ನಾನು ಚುನಾವಣಾ ಆಯೋಗದ ಆಯುಕ್ತರನ್ನು ಒತ್ತಾಯಿಸುತ್ತೇನೆ. ಮೋದಿಯವರ ಭಾಷಣದ ಮೇಲಿನ ಹೇಳಿಕೆಗಳು 1951ರ ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 123 (3), 123 (3A), ಮತ್ತು ಸೆಕ್ಷನ್ 125ರ ಉಲ್ಲಂಘನೆಯಾಗಿದೆ ಎಂಬುದು ನನಗೆ ಸ್ಪಷ್ಟವಾಗಿದೆ.
123(3) – ಯಾವುದೇ ಚುನಾವಣಾ ಅಭ್ಯರ್ಥಿ ಅಥವಾ ಅವರ ಪರ ಪ್ರಚಾರಕರು ಯಾವುದೇ ವ್ಯಕ್ತಿಯನ್ನು ಅವರ ಧರ್ಮ, ಜನಾಂಗ, ಜಾತಿ, ಸಮುದಾಯದ ಆಧಾರದ ಮೇಲೆ ಮತ ಚಲಾಯಿಸಲು ಮನವಿ ಮಾಡುವಂತಿಲ್ಲ. ಅಲ್ಲದೆ, ಅದಕ್ಕಾಗಿ ಭಾಷೆ ಅಥವಾ ಧಾರ್ಮಿಕ ಚಿಹ್ನೆಗಳ ಬಳಕೆ, ಅಥವಾ ರಾಷ್ಟ್ರೀಯ ಧ್ವಜ ಅಥವಾ ರಾಷ್ಟ್ರೀಯ ಲಾಂಛನದಂತಹ ರಾಷ್ಟ್ರೀಯ ಚಿಹ್ನೆಗಳ ಬಳಕೆ ಮಾಡುವಂತಿಲ್ಲ. ಅವುಗಳನ್ನು ಬಳಸುವುದು ಕಾಯ್ದೆಯ ಉಲ್ಲಂಘನೆ ಆಗಿರುತ್ತದೆ.
123(3A) – ಯಾವುದೇ ಅಭ್ಯರ್ಥಿ ಅಥವಾ ಆತನ ಪ್ರಚಾರಕರು – ಆ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಜನರನ್ನು ಸೆಳೆಯುವ ಉದ್ದೇಶದಿಂದ ಯಾವುದೇ ಧರ್ಮ, ಜನಾಂಗ, ಜಾತಿ, ಸಮುದಾಯ ಅಥವಾ ಭಾಷೆಯ ಆಧಾರದ ಮೇಲೆ ಭಾರತದ ವಿವಿಧ ವರ್ಗಗಳ ನಾಗರಿಕರ ನಡುವೆ ದ್ವೇಷ ಅಥವಾ ದ್ವೇಷದ ಭಾವನೆಗಳನ್ನು ಪ್ರಚೋದಿಸುವುದು ಅಥವಾ ಪ್ರಚಾರ ಮಾಡಲು ಪ್ರಯತ್ನಿಸುವುದು ಕಾಯ್ದೆಯ ಉಲ್ಲಂಘಟನೆಯಾಗುತ್ತದೆ.
ಸೆಕ್ಷನ್ 125 – ಈ ಕಾಯಿದೆಯ ಅಡಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿ ಧರ್ಮ, ಜನಾಂಗ, ಜಾತಿ, ಸಮುದಾಯ ಅಥವಾ ಭಾಷೆ ಆಧಾರ ಮೇಲೆ ಚುನಾವಣೆಗೆ ಸಂಬಂಧಿಸಿದಂತೆ ವರ್ಗಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಶಿಕ್ಷಾರ್ಹ ಅಪರಾಧವೆಂದು ಹೇಳುತ್ತದೆ. ಅಂತಹ ವ್ಯಕ್ತಿಯು ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡೂ ಶಿಕ್ಷೆಗೆ ಗುರಿಯಾಗುತ್ತಾರೆ.
ಹೆಚ್ಚುವರಿಯಾಗಿ, ಪ್ರಜಾ ಪ್ರತಿನಿಧಿ ಕಾಯ್ದೆ-1951ಅನ್ನು ಉಲ್ಲಂಘಿಸಿ ನಡೆಸುವ ಭಾಷಣಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A ಅಡಿಯಲ್ಲಿ ಕ್ರಮ ಕೈಗೊಳ್ಳಬಹುದು ಎಂದು ಸೂಚಿಸಲಾಗಿದೆ.
153A – ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೌಹಾರ್ದತೆಯನ್ನು ಹಾಳುಮಾಡಲು ಪೂರ್ವಾಗ್ರಹ ಪೀಡಿತ ವಿಷಯಗಳನ್ನು ಜನರ ಮನಸ್ಸಿನಲ್ಲಿ ತುಂಬಿಸುವುದು ಅಪರಾಧ.
ಜೋಕರ್ ಅವರ ಪತ್ರವನ್ನು ಬೆಂಬಲಿಸಿ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿಯೇಟ್ನ ಕಾರ್ಯದರ್ಶಿ ಆನಂದ್ ಅರ್ನಿ, ಗಣಿ ಸಚಿವಾಲಯದ ಮಾಜಿ ಜಂಟಿ ಕಾರ್ಯದರ್ಶಿ ಅರುಣಾ ಬಾಗ್ಚೀ, ಮಹಾರಾಷ್ಟ್ರ ಸರ್ಕಾರದ ಮಾಜಿ ಪ್ರಧಾನ ಕಾರ್ಯದರ್ಶಿ ಸಂದೀಪ್ ಬಾಗ್ಚೀ, ಪಶ್ಚಿಮ ಬಂಗಾಳ ಸರ್ಕಾರದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ ಬಾಲಚಂದ್ರನ್, ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿಯೇಟ್ನ ಮಾಜಿ ವಿಶೇಷ ಕಾರ್ಯದರ್ಶಿ ವಪ್ಪಲ ಬಾಲಚಂದ್ರನ್ ಮತ್ತು ರಾಣಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಸರ್ಕಾರದ ಮಾಜಿ ವಿಶೇಷ ಕಾರ್ಯದರ್ಶಿ ಗೋಪಾಲನ್ ಬಾಲಗೋಪಾಲ್, ಕಲ್ಲಿದ್ದಲು ಸಚಿವಾಲಯದ ಮಾಜಿ ಕಾರ್ಯದರ್ಶಿ ಚಂದ್ರಶೇಖರ್ ಬಾಲಕೃಷ್ಣನ್, ಮಧ್ಯಪ್ರದೇಶ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಶರದ್ ಬೆಹರ್, ಪೋರ್ಚುಗಲ್ನ ಮಾಜಿ ರಾಯಭಾರಿ ಮಧು ಭಾದುರಿ ಸೇರಿದಂತೆ 93 ಮಂದಿ ಸಹಿ ಹಾಕಿದ್ದಾರೆ.