ರಾಜ್ಯದಲ್ಲಿ ತೀವ್ರ ಬರ ಎದುರಾಗಿದ್ದರೂ, ರಾಜ್ಯಕ್ಕೆ ಕೇಂದ್ರ ಸರ್ಕಾರ ಬರ ಪರಿಹಾರ ನೀಡಿರಲಿಲ್ಲ. ಇದೀಗ, ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಬಳಿಕ, ರಾಜ್ಯಕ್ಕೆ 3,454 ಕೋಟಿ ರೂ. ಪರಿಹಾರ ನೀಡುವುದಾಗಿ ಕೇಂದ್ರ ಘೋಷಿಸಿದೆ.
ಕೇಳಿದ್ದು 18,174 ಕೋಟಿ ರೂ., ಆದರೆ, ಕೇಂದ್ರ ಕೊಟ್ಟಿರುವುದು ಕೇವಲ 3,454 ಕೋಟಿ ರೂ. ಈ ಬಗ್ಗೆ ಸುಪ್ರೀಂ ಗಮನಕ್ಕೆ ತರುತ್ತೇವೆಂದು ರಾಜ್ಯ ಸರ್ಕಾರ ಹೇಳಿದೆ. ಆದರೂ, ಕೊಟ್ಟ ಬಿಡಿಗಾಸನ್ನೇ ಇಟ್ಟುಕೊಂಡು ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾದ ಬಿಜೆಪಿ, ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ್ದು, ನೆಟ್ಟಿಗರ ಟ್ರೋಲ್ಗೆ ಗುರಿಯಾಗಿ, ಅಪಹಾಸ್ಯಕ್ಕೆ ಒಳಗಾಗಿದೆ.
ಕೇಂದ್ರ ಸರ್ಕಾರ ಬರ ಪರಿಹಾರ ಘೋಷಿಸುತ್ತಿದ್ದಂತೆ, ಪ್ರಧಾನಿ ಮೋದಿಗೆ ರಾಜ್ಯ ಬಿಜೆಪಿ ಅಭಿನಂದನೆ ಸಲ್ಲಿಸಿದೆ. “ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವ ಸಮಯದಲ್ಲೇ ಕನ್ನಡಿಗರಿಗೆ ನೆರವಾದ ಪ್ರಧಾನಿ ನರೇಂದ್ರ ಮೋದಿ… 3,454 ಕೋಟಿ ರೂ. ಪರಿಹಾರ ನೀಡುವ ಮೂಲಕ ಕನ್ನಡಿಗರ ಹಿತ ಕಾಯ್ದಿದೆ ಮೋದಿ ಸರ್ಕಾರ” ಎಂದು ಹೊಗಳಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಂಚಿಕೊಂಡಿದೆ.
ಪೋಸ್ಟರ್ ಹಾಕಿದ ಬಿಜೆಪಿಯನ್ನು ಹಲವರು ತರಾಟೆಗೆ ತೆಗೆದುಕೊಂಡಿದ್ದರೆ, ಇನ್ನೂ ಕೆಲವರು ಅಪಹಾಸ್ಯ ಮಾಡಿದ್ದಾರೆ. “ಬರ ಪರಿಹಾರ ಕೊಡಬೇಕಿದ್ದ ಸಮಯದಲ್ಲಿ ನೀವು ಕೊಡಲಿಲ್ಲ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರ ಪರಿಣಾಮ, ಕೇಂದ್ರ ಸರ್ಕಾರ ಅನಿವಾರ್ಯವಾಗಿ ಪರಿಹಾರ ಬಿಡುಗಡೆ ಮಾಡಿದೆ. ಧನ್ಯವಾದ ಸಲ್ಲಿಸಬೇಕಿರುವ ಕೇಂದ್ರಕ್ಕೆ – ಮೋದಿಗೆ ಅಲ್ಲ. ಸುಪ್ರೀಂ ಕೋರ್ಟಿಗೆ, ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇವೆ” ಎಂದು ನೆಟ್ಟಿಗರು ಬಿಜೆಪಿ ಕಾಲೆಳೆದಿದ್ದಾರೆ.
ಕರ್ನಾಟಕದಲ್ಲಿ ಕಂಡು ಕೇಳರಿಯದಂತಹ ಬರ ಉಂಟಾದರೂ, ರೈತರಿಗೆ ಬಿಡಿಗಾಸು ಮಧ್ಯಂತರ ಪರಿಹಾರ ನೀಡದೆ ರಾಜ್ಯ @INCKarnataka ಸರ್ಕಾರ ಸಂಪೂರ್ಣ ಓಲೈಕೆ ರಾಜಕಾರಣದಲ್ಲಿ ನಿರತವಾಗಿತ್ತು
ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿಯೂ ಕನ್ನಡಿಗರ ಸಂಕಷ್ಟಕ್ಕೆ ನೆರವಾಗಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ₹3,454… pic.twitter.com/pdnFafZpLG
— BJP Karnataka (@BJP4Karnataka) April 27, 2024
“ರಾಜ್ಯ ಸರ್ಕಾರ ಕೇಳಿದ್ದು, 18 ಸಾವಿರ ಕೋಟಿ ರೂ., ಕೇಂದ್ರ ಸರ್ಕಾರ ಕೊಟ್ಟಿರೋದು 3,454 ಕೋಟಿ ರೂ., ಆನೆ ಕೇಳಿದರೆ, ಇಲಿ ಕೊಟ್ಟಿದ್ದಾರೆ. ಅದನ್ನೂ ಅಭಿನಂದನೆಗೆ ಬಳಸಿಕೊಳ್ಳುತ್ತಿರುವ ನಿಮಗೆ ನಾಚಿಕೆ ಮಾನ ಮರ್ಯಾದೆ ಇದೆಯಾ?” ಎಂದು ಆಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ವಿರುದ್ಧ ಕಿಡಿಕಾರಿರುವ ನೆಟ್ಟಿಗ ರಮೇಶ್ ಮದಕರಿ ಎಂಬವರು, “ಮೂರೂ ಬಿಟ್ಟೋರು ಊರಿಗೆ ದೊಡ್ಡೋರು ಅನ್ನೋ ಗಾದೆ ಬಿಜೆಪಿ ನೋಡೇ ಬರ್ದಿರಬೋದು” ಎಂದಿದ್ದಾರೆ.
“ಬರ ಪರಿಹಾರ ಕೊಟ್ಟಿಲ್ಲವೆಂದು ರಾಜ್ಯ ಸರ್ಕಾರ ದೂರು ಕೊಟ್ಟಿತ್ತು, ಸುಪ್ರೀಂ ಕೋರ್ಟ್ ಕ್ಯಾಕರಿಸಿ ಕೇಂದ್ರಕ್ಕೆ ಉಗಿದಿತ್ತು. ಹಾಗಾಗಿ ಇಂದು ನಮಗೆ ಬರ ಪರಿಹಾರ ಸಿಕ್ಕಿದೆ. ಯಾವನ್ನಾದ್ರೂ ಮೋದಿ ಕೊಟ್ರು, ಥ್ಯಾಂಕ್ಸ್ ಅಂದ್ರೆ ಕೆರ ಕಿತ್ತೋಗ್ತವೆ ಹುಷಾರ್” ಎಂದು ಮುತ್ತುರಾಜ್ ಎಂಬವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ಸ್ವಾಮಿ ಕನ್ನಡಿಗರೇನೂ ದಡ್ಡರಲ್ಲ. ಕಳೆದ ತಿಂಗಳಿನಿಂದ ನೋಡಿದೀವಿ ನೀವೂ ಭಾರೀ ದನಿ ಎತ್ತಿದ್ದನ್ನ. ನೀವೆಲ್ಲಾ ನಾಯಕರು?” ಎಂದು ಉತ್ಸಾಹಿ ಎಂಬವರು ಕಿಡಿಕಾರಿದ್ದಾರೆ.
“ನಿಮ್ಮ ಯೋಗ್ಯತೆ ಜನರಿಗೆ ಗೊತ್ತಿದೆ ಸುಪ್ರೀಂ ಕೋರ್ಟ್ ಉಗಿದಮೇಲೆ ಬುದ್ಧಿ ಬಂದಿದೆ, ತಡವಾಗಿ ಅಂತ ಬೇರೆ ನಾಟಕ” ಎಂದು ಶ್ರವಣ್ ಎಂಬವರು ವ್ಯಂಗ್ಯವಾಡಿದ್ದಾರೆ.