ಬಿಸಿಲಿನ ಝಳಕ್ಕೆ ಹೈರಾಣಾದ ಜನ, ಜಾನುವಾರುಗಳ ರಕ್ಷಣೆಗೆ ಮುಂದಾದ ಸಾಮಾಜಿಕ ಅರಣ್ಯ ಇಲಾಖೆ, ಗುಬ್ಬಿ ತಾಲೂಕಿನಲ್ಲಿ ರಸ್ತೆ ಬದಿಯಲ್ಲಿ ನೆಟ್ಟ ಸಸಿಗಳಿಗೆ ನೀರು ಹಾಕಿ ಪೋಷಿಸುವ ಕೆಲಸ ಮಾಡುತ್ತಿದೆ. ಪೋಷಣೆ ಕಾರ್ಯಕ್ಕೆ ಅರಣ್ಯ ಇಲಾಖೆ ಸಾರ್ವಜನಿಕರ ಸಹಕಾರ ನೀಡುವಂತೆ ಕರೆ ನೀಡಿದೆ.
ಗ್ರಾಮೀಣ ಭಾಗದಲ್ಲಿನ ರಸ್ತೆಯ ಬದಿಯಲ್ಲಿ ನೆಟ್ಟ ಸಾಂಪ್ರದಾಯಿಕ ಸಸಿಗಳನ್ನು ಎರಡು ವರ್ಷಗಳ ಕಾಲ ಪೋಷಣೆ ಮಾಡಿದ ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿ, ಈಗಿನ ತಾಪಮಾನಕ್ಕೆ ಸಸಿ ಉಳಿಸುವ ನಿಟ್ಟಿನಲ್ಲಿ ಐದಾರು ವರ್ಷ ಬೆಳೆದು ನಿಂತ ದೊಡ್ಡ ಗಿಡಕ್ಕೂ ನೀರು ನೀಡುತ್ತಿದ್ದಾರೆ. ಈಚೆಗೆ ರಸ್ತೆ ಬದಿಯಲ್ಲಿ ಕಾಣಿಸಿಕೊಳ್ಳುವ ಬೆಂಕಿಗೆ ಆಹುತಿಯಾದ ದೊಡ್ಡ ಗಿಡಗಳನ್ನು ಮತ್ತೇ ಬೆಳೆಸುವ ಪ್ರಯತ್ನ ಮಾಡಿ, ಇಂದು ಶೇ. 75ರಷ್ಟು ಗಿಡಗಳನ್ನು ಉಳಿಸಿ ಬೆಳೆಸಲಾಗುತ್ತಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಮೇಘನಾ ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳು, ಉದ್ಯಾನವನಗಳು ಸೇರಿದಂತೆ ಸರ್ಕಾರಿ ಕಚೇರಿ ಆವರಣ ಹಾಗೂ ಸರ್ಕಾರಿ ಜಾಗದಲ್ಲಿ ಸಸಿ ನೆಟ್ಟು ಪೋಷಿಸಲಾಗಿದೆ. ಆದರೆ, ಈ ಸಸಿಗಳನ್ನು ಉಳಿಸಿಕೊಳ್ಳುವ ಕೆಲಸಕ್ಕೆ ಸಮುದಾಯ ಸಹಕಾರ ನೀಡಬೇಕು. ತಮ್ಮ ತೋಟದ ಗಿಡಮರಗಳನ್ನು ಪೋಷಿಸುವ ರೀತಿಯಲ್ಲೇ ಊರಿನ ರಸ್ತೆ ಬದಿಯ ಮರಗಳು, ಪಾರ್ಕ್ ಗಳು, ಅರಣ್ಯ ಪ್ರದೇಶಗಳು, ಗುಂಡು ತೋಪುಗಳು ಉಳಿಸಿಕೊಳ್ಳುವ ಕೆಲಸ ಇಲಾಖೆ ಮಾಡುತ್ತದೆ. ಈ ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣ ಬೆಂಬಲ ನೀಡಿ ಜೊತೆಗೆ ನಿಲ್ಲಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ.
ಶೇ. 17ರ ಪ್ರಮಾಣಕ್ಕೆ ಇಳಿದ ಅರಣ್ಯ ಪ್ರದೇಶ ಶೇಕಡಾ 33ಕ್ಕೆ ಏರಬೇಕಿದೆ. ಬಿಸಿಲಿನ ತಾಪಮಾನ ದಾಖಲೆಯಲ್ಲಿ ಸಾಗುತ್ತಿದೆ. ಈ ಮೊದಲು ಬೇಸಿಗೆಯಲ್ಲಿ 33 ಅಥವಾ 34 ಡಿಗ್ರಿ ಸೆಲ್ಸಿಯಸ್ ಇರುತ್ತಿದ್ದ ತಾಪಮಾನ ಇಂದು 50ರ ಗಡಿ ಮುಟ್ಟಿದೆ. ದಿನ ಕಳೆದಂತೆ ಏರುಮುಖದಲ್ಲಿ ಸಾಗುವ ಬಿಸಿಲು ಮುಂದಿನ ದಿನಮಾನದಲ್ಲಿ 60ಡಿಗ್ರಿ ಸೆಲ್ಸಿಯಸ್ ಮುಟ್ಟುವ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಹಾಗೂ ಪ್ರತಿ ವ್ಯಕ್ತಿ ಎರಡು ಸಸಿ ನೆಟ್ಟು ಪೋಷಿಸುವ ಕೆಲಸವನ್ನು ಜವಾಬ್ದಾರಿಯಿಂದ ಮಾಡಬೇಕಿದೆ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವ ಸ್ಲೋಗನ್ ನಿಜಾರ್ಥ ಈಗ ಜನರ ಮನದಲ್ಲಿ ಮೂಡುತ್ತಿದೆ. ಈ ನಿಟ್ಟಿನಲ್ಲಿ ಹಸಿರು ಕ್ರಾಂತಿ ಮಾಡಲು ಸಾಮಾಜಿಕ ಸಂಘ ಸಂಸ್ಥೆಗಳು, ಪರಿಸರ ಪ್ರೇಮಿಗಳು ಹಾಗೂ ರೈತಾಪಿ ವರ್ಗ ಮುನ್ನುಗ್ಗಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡದೆ.
ಗುಬ್ಬಿ ತಾಲೂಕಿನ ಯಡವನಹಳ್ಳಿ ರಸ್ತೆಯ ಬದಿಯಲ್ಲಿದ್ದ ದೊಡ್ಡ ಸಸಿಗಳು ಬೆಂಕಿಗೆ ಆಹುತಿಯಾಗಿತ್ತು. ಕೂಡಲೇ ನೀರು ಹಾಕಿ ಸಸಿ ಪೋಷಣೆ ನಡೆಸಿ ಬಹುತೇಕ ಸಸಿಗಳನ್ನು ಉಳಿಸಿದ್ದೇವೆ. ರಸ್ತೆ ಬದಿಯಲ್ಲಿ ಮರಗಿಡಗಳ ಬುಡದಲ್ಲಿ ಬೆಂಕಿ ಹಚ್ಚುವ ಕೆಟ್ಟ ಕೆಲಸ ಮಾಡಬಾರದು ಎಂದು ಗುಬ್ಬಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಮೇಘನಾ ಹೇಳಿದರು.
ಬಿಸಿಲಿನ ಹೆಚ್ಚಳದ ಬಗ್ಗೆ ಜಾಗೃತಿ ಮೂಡಬೇಕಿದೆ. ಹಸಿರು ಬೆಳೆಸುವ ಕಾರ್ಯ ಸಾಮಾಜಿಕ ಜವಾಬ್ದಾರಿ ಹೊತ್ತು ಜನರು ಮಾಡಬೇಕಿದೆ. ತಮ್ಮೂರಿನ ಖಾಲಿ ಜಾಗದಲ್ಲಿ ಸಸಿ ನೆಟ್ಟು ಬೆಳೆಸುವ ಕೆಲಸ ಮಾಡಬೇಕು. ಈ ಕಾರ್ಯಕ್ಕೆ ಹಲವು ಸಾಮಾಜಿಕ ಸಂಘ, ಸಂಸ್ಥೆಗಳು ಕೈ ಜೋಡಿಸಲಿದೆ ಎಂದು ಗುಬ್ಬಿ ಸಾಮಾಜಿಕ ಹೋರಾಟಗಾರ ನಾಗಸಂದ್ರ ವಿಜಯ್ ಕುಮಾರ್ ಹೇಳಿದರು.
ವರದಿ ಎಸ್. ಕೆ. ರಾಘವೇಂದ್ರ, ಸಿಟಿಜನ್ ಜನರ್ಲಿಸ್ಟ್, ಗುಬ್ಬಿ
