ಶೈಕ್ಷಣಿಕ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಗಾಗಿ ಶಿಕ್ಷಣ ತಜ್ಞರು ಹಾಗೂ ಶಿಕ್ಷಕರೊಂದಿಗೆ ಚರ್ಚಿಸಿ ಪ್ರಣಾಳಿಕೆ ಸಿದ್ದಪಡಿಸಲಾಗಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ತಿಳಿಸಿದರು.
ತುಮಕೂರು ನಗರದ ಖಾಸಗಿ ಹೋಟೆಲ್ನಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ತಮ್ಮ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
“ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳು ಇಂದಿಗೂ ಬಗೆಹರಿಯದೆ ಉಳಿದಿದ್ದು, ಅವುಗಳ ನಿವಾರಣೆಗಾಗಿ ರಾಜ್ಯದ ಹಲವಾರು ಶಿಕ್ಷಣ ತಜ್ಞರು ಹಾಗೂ ಶಿಕ್ಷಕರೊಂದಿಗೆ ಸಂವಾದ ಹಾಗೂ ಚರ್ಚೆ ನಡೆಸಿ ಪ್ರಣಾಳಿಕೆ ಸಿದ್ಧಪಡಿಸಿದ್ದು ಅವುಗಳನ್ನು ನೂರು ಪ್ರತಿಶತ ಸಾಧಿಸಲಾಗುವುದು” ಎಂದು ಭರವಸೆ ನೀಡಿದರು.
“ಈಗಾಗಲೇ ನಾನು ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಕೋವಿಡ್ ಪ್ಯಾಕೇಜ್ ಕೊಡಿಸಿದ್ದು, ಶಿಕ್ಷಕರ ಕಲ್ಯಾಣ ನಿಧಿ ಸಂಸ್ಥೆಯಲ್ಲಿ ಎಲ್ಲ ಶಿಕ್ಷಕರಿಗೂ ನಗದು ರಹಿತ ಆರೋಗ್ಯ ವಿಮಾ ಸೌಲಭ್ಯ ಕೊಡಿಸುವ ಆದೇಶ ಮಾಡಿಸಿದ್ದೇನೆ. ಆದರೆ ಆದೇಶವನ್ನು ಸರ್ಕಾರ ಹಿಂಪಡೆದು ಶಿಕ್ಷಕರ ಪಾಲಿಗೆ ಮರಣ ಶಾಸನ ಬರೆಯಿತು. ಸರ್ಕಾರಿ ಶಾಲೆಗಳಿಗೆ 15,000 ಮಂದಿ ಶಿಕ್ಷಕರನ್ನು ಭರ್ತಿ ಮಾಡಲು ಒತ್ತಾಯಿಸಿ ಹೋರಾಟ ನಡೆಸಿ ಅದರಲ್ಲಿ ಯಶಸ್ಸನ್ನು ಕಂಡಿದ್ದು, ಹತ್ತು ವರ್ಷಕ್ಕೊಮ್ಮೆ ಮಾನ್ಯತೆ ನವೀಕರಣ ನೀಡಲು ರಾಜ್ಯ ಹೈಕೋರ್ಟ್ನಿಂದ ಆದೇಶ ತಂದಿದ್ದೇನೆ” ಎಂದು ಹೇಳಿದರು.
“5, 8ಹಾಗೂ 9ನೇ ತರಗತಿಯವರೆಗೆ ಯಾವುದೇ ಬೋರ್ಡ್ ಪರೀಕ್ಷೆ ನಡೆಸುವಂತಿಲ್ಲವೆಂದು ಸುಪ್ರಿಂ ಕೋರ್ಟ್ನಲ್ಲಿ ಕಾನೂನಿನ ಹೋರಾಟ ನಡೆಸಿ ಅಂತಿಮ ತೀರ್ಪು ಪಡೆದಿದ್ದೇನೆ” ಎಂದರು.
“ಪ್ರಸ್ತುತ ಹತ್ತು ಹಲವು ಗುರಿಯನ್ನಿರಿಸಿಕೊಂಡಿದ್ದು, ಅದರಲ್ಲಿ ಓಪಿಎಸ್ ಅಥವಾ ಪಿಂಚಣಿ ಮುಂಜೂರು ಮಾಡಿಸುವುದು, ಕಾಲ್ಪನಿಕ ವೇತನವನ್ನು ಕೊಡಿಸುವುದು, ಬಡ್ತಿ ಪಡೆದ ಶಿಕ್ಷಕರಿಗೆ ಟೈಮ್ ಬಾಂಡ್ ಮತ್ತು ವೇತನ ಹೆಚ್ಚಿಸುವುದು, ವೇತನ ತಾರತಮ್ಯ ಸರಿಪಡಿಸುವುದು, ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರ ಸೇವಾಭದ್ರತೆ ಹಾಗೂ ಸಮಾನ ವೇತನಕ್ಕೆ ಒತ್ತು ನೀಡುವುದು, 1985ರ ನಂತರದ ಕನ್ನಡ ಮತ್ತು ಇತರೆ ಭಾಷೆಗಳ ಎಲ್ಲ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿರುವ ಎಲ್ಲ ಶಿಕ್ಷಕರಿಗೂ ನಗದು ರಹಿತ ಆರೋಗ್ಯ ವಿಮೆ ಕೊಡಿಸುವುದು, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆ ಕಾಲೇಜುಗಳಿಗೆ ಮಾನ್ಯತೆ ನವೀಕರಣವನ್ನು ಭ್ರಷ್ಟಾಚಾರ ಮುಕ್ತವಾಗಿಸಿ ಶಾಶ್ವತ ಮಾನ್ಯತೆ ನವೀಕರಣ ಪಡೆಯುವ ಗುರಿ ಹೊಂದಲಾಗಿದೆ” ಎಂದರು.
“ಶಾಲೆ ಕಾಲೇಜುಗಳಲ್ಲಿ ಖಾಲಿ ಇರುವ ಎಲ್ಲ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಸುವುದು,
ಎಲ್ಲ ವರ್ಗದ ಅತಿಥಿ ಶಿಕ್ಷಕರನ್ನು ಖಾಯಂಗೊಳಿಸುವುದು, ಐಟಿಐ, ಡಿಪ್ಲೊಮಾ ಹಾಗೂ ಬಿಎಡ್ ಮುಂತಾದ ಕಾಲೇಜುಗಳಲ್ಲಿಯ ಶಿಕ್ಷಕರ ಸಮಸ್ಯೆಗಳನ್ನು ಹೋಗಲಾಡಿಸುವುದು,
ಅನುದಾನಿತ ಶಾಲೆಗಳಲ್ಲಿಯ 2015ರ ನಂತರದ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿಸುವುದು, ಅನುದಾನಿತ ಶಾಲಾ ಕಾಲೇಜುಗಳ ತರಗತಿಗಳ ವಿದ್ಯಾರ್ಥಿಗಳ ಮಿತಿಯನ್ನು ಕನಿಷ್ಠ 10ಕ್ಕೆ ಇಳಿಸುವುದು, ಅನುದಾನಿತ ಸಂಸ್ಥೆಗಳ ಶಿಕ್ಷಕರುಗಳಿಗೆ ವಿಳಂಬವಿಲ್ಲದೆ ಕಾಲಕಾಲಕ್ಕೆ ಸಂಬಳ ಕೊಡಿಸುವುದು ಸೇರಿದಂತೆ ಒಟ್ಟಾರೆ ಶಿಕ್ಷಕರಿಗೆ, ಶಿಕ್ಷಣ ಸಂಸ್ಥೆಗಳಿಗೆ, ಸರ್ಕಾರದಿಂದ ಮತ್ತು ಅಧಿಕಾರಿಗಳಿಂದ ಕಿರುಕುಳ ಆಗದಂತೆ ನೋಡಿಕೊಳ್ಳುವುದು ನನ್ನ ಮೂಲ ಗುರಿಗಳಾಗಿದ್ದು, ಇವುಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿ ಹೋರಾಟ ನಡೆಸುತ್ತೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕರುನಾಡು ಕಂಡ ಮಹಾನ್ ಚಿಂತಕ ಜಗಜ್ಯೋತಿ ಬಸವಣ್ಣ: ವೈ ಸಿ ಮಯೂರ್
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ರೇಣುಕಯ್ಯ, ಉಪನ್ಯಾಸಕ ಗೋವಿಂದರಾಜು, ಡಾ. ಎಂ ಆರ್ ರಂಗಸ್ವಾಮಿ, ನಟರಾಜು, ಭೂತರಾಜು ಸೇರಿದಂತೆ ಇತರರು ಇದ್ದರು.
