ದಾವಣಗೆರೆ ತಾಲೂಕಿನ ಕೊಗ್ಗನೂರು ಗ್ರಾಮದ ನಿಂಗಮ್ಮ ಅವರಿಗೆ ಸೇರಿದ ಜಮೀನಿನ ಪಹಣಿಯಲ್ಲಿ 26 ಗುಂಟೆ ಜಾಗವನ್ನು ಮೇ 27ರೊಳಗೆ ಸರಿಪಡಿಸಬೇಕು. ಇಲ್ಲವಾದಲ್ಲಿ ದಾವಣಗೆರೆ ತಹಶೀಲ್ದಾರ್ ಕಚೇರಿ ಎದುರು ತೀವ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬುಳ್ಳಾಪುರದ ಹನುಮಂತಪ ಎಚ್ಚರಿಕೆ ನೀಡಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಕೊಗ್ಗನೂರು ಗ್ರಾಮದ ನಿಂಗಮ್ಮ, ಬಸಮ್ಮ, ಕೆಂಚಪ್ಪ ಅವರಿಗೆ ಸೇರಿದ ಸರ್ವೇ ನಂಬರ್ 1 ರಲ್ಲಿ 2 ಎಕರೆ 19 ಗುಂಟೆ ಜಮೀನಿದ್ದು, ರಾಷ್ಟ್ರೀಯ ಹೆದ್ದಾರಿಗೆ 14 ಗುಂಟೆ ಹೋಗಿದೆ. ಆದರೆ, ಪಹಣಿಯಲ್ಲಿ 12 ಗುಂಟೆ ತೋರಿಸುತ್ತಿದೆ. ಕೊಗ್ಗನೂರು ಬಸಮ್ಮ ಅವರಿಂದ ಎರಡು ಗುಂಟೆ ಇಂಡೀಕರಣೆ ಮಾಡಿ, ನಿಂಗಮ್ಮ ಅವರಿಗೆ ಸೇರಿದ ಜಮೀನಿಗೆ 26 ಗುಂಟೆಯನ್ನು ಪಹಣಿಯಲ್ಲಿ ಸರಿಪಡಿಸಬೇಕು” ಎಂದು ಒತ್ತಾಯಿಸಿದರು.
“ಪಹಣಿ ಸರಿಪಡಿಸುವಂತೆ ಕೋರಿ ನಿಂಗಮ್ಮ ಮತ್ತು ಅವರ ಮಗ ಹಾಲೇಶ್ ಕಳೆದ ಒಂದು ವರ್ಷದಿಂದ ತಹಶೀಲ್ದಾರ್ ಕಚೇರಿಗೆ ಅಲೆದಾಡುತ್ತಿದ್ದಾರೆ. ರೈತ ಸಂಘದ ಗಮನಕ್ಕೆ ತಂದ ನಂತರ ತಹಶೀಲ್ದಾರ್ ಅವರನ್ನು ಭೇಟಿ ಮಾಡಿದಾಗ ಒಂದು ವಾರದಲ್ಲೇ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ, ಈವರೆಗೆ ಆಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಮ್ಮ ಸಂಘದಿಂದ ಹಮ್ಮಿಕೊಳ್ಳಲಾಗುವ ಹೋರಾಟದ ಬ್ಯಾನರ್ ಅನ್ನು ಮೇ 20ರಂದು ತಹಶೀಲ್ದಾರ್ ಕಚೇರಿ ಮುಂದೆ ಕಟ್ಟಲಾಗುವುದು. ನಮ್ಮ ಹೋರಾಟ ಮುಗಿಯುವವರೆಗೆ ನಮ್ಮ ಸಂಘದ ಬ್ಯಾನರ್ಗೆ ಏನೇ ಆದರೂ ತಹಶೀಲ್ದಾರ್ ಅವರೇ ನೇರ ಹೊಣೆಯಾಗುತ್ತಾರೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಜಮೀನು ಮಾರಾಟ ನಿಲ್ಲಿಸಿ ಒಕ್ಕಲುತನ ಉಳಿಸಿ: ಆದಿ ಚುಂಚನಗಿರಿ ಶ್ರೀಗಳ ಕರೆ
ಎಸ್ ಟಿ ಪರಮೇಶ್ವರಪ್ಪ, ಐಗೂರು ಶಿವಮೂರ್ತಪ್ಪ, ಕೊಗ್ಗನೂರು ಹನುಮಂತಪ್ಪ, ಕರಿಲಕ್ಕೇನಹಳ್ಳಿ ಹನುಮಂತಪ್ಪ, ಸಿಡ್ಲಪ್ಪ ಇದ್ದರು.
