ಕೋವಿಡ್ ಸೋಂಕು ಲಸಿಕೆಯಿಂದ ಅಡ್ಡಪರಿಣಾಮವಾಗಿ ಗೆಜ್ಜಲಗಟ್ಟಾ ಗ್ರಾಮದ ಹುಸೇನಪ್ಪ ಎಂಬುವವರು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಕೋವಿಡ್ ಲಸಿಕೆ ಅಡ್ಡ ಪರಿಣಾಮದ ಆಧ್ಯಯನ ನಡೆಸಿರುವ ಸಮಿತಿಗಳು ಉಲ್ಲೇಖಿಸಿರುವ ಸಮಸ್ಯೆಗಳಿಂದಲೇ ಬಳಲುತ್ತಿದ್ದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಮುನ್ನಚ್ಚರಿಕೆ ಕ್ರಮಗಳನ್ನು ಘೋಷಿಸಬೇಕು ಎಂದು ಸಿಪಿಐ(ಎಂಎಲ್)ರೆಡ್ ಸ್ಟಾರ್ ಪಾಲಿಟೋ ಬರೋ ಸದಸ್ಯ ಆರ್ ಮಾನಸಯ್ಯ ಒತ್ತಾಯಿಸಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ಕೋವಿಡ್ ಸೋಂಕಿನ ಸಂದರ್ಭದಲ್ಲಿ ರೋಗಕ್ಕಿಂತ ಔಷಧಿ ಭಯಂಕರವಾಗಿರುವ ಜನರಿಂದ ಉದ್ಘಾರ ವ್ಯಕ್ತವಾಗಿತ್ತು. ಈಗ ಸಾಬೀತಾಗುತ್ತಿದೆ. ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ತೀವ್ರ ತಲೆನೋವು, ಹೊಟ್ಟೆನೋವು, ವಾಂತಿ, ಜ್ವರ, ಕೈಕಾಲು ಊತ ಕಾಣಿಸುತ್ತಿರುವುದು ಅಡ್ಡಪರಿಣಾಮದ ಲಕ್ಷಣಗಳಾಗಿವೆ” ಎಂದು ಹೇಳಿದರು.
“ಲಸಿಕೆ ಕುರಿತಾಗಿ ಅಧ್ಯಯನ ನಡೆಸಿರುವ ಬನಾರಸ, ದೆಹಲಿ, ಹೈದ್ರಾಬಾದ್, ಕೇರಳಗಳಲ್ಲಿ ನಡೆದಿರುವ ಅಧ್ಯಯನದಲ್ಲಿ ಉಲ್ಲೇಖಿಸಿರುವ ಲಕ್ಷಣಗಳು ಹುಸೇನಪ್ಪ ಗೆಜ್ಜಲಟ್ಟಾ ಅವರ ದೇಹದಲ್ಲಿ ಕಂಡಿದ್ದು, ಕಳೆದ ಹತ್ತು ದಿನಗಳಿಂದ ರಿಮ್ಸ್ನಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ರಿಮ್ಸ್ ವೈದ್ಯರು ನಿರಂತರ ಪ್ರಯತ್ನ ಮುಂದುವರೆಸಿದ್ದಾರೆ. ಲಸಿಕೆ ಅಡ್ಡಪರಿಣಾಮಗಳಿಂದಲೇ ಅನೇಕ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಅಸ್ಟ್ರಾಜೆನೆಕಾ ಕಂಪನಿ ಪೂರೈಸಿರುವ ಲಸಿಕೆ ಅಡ್ಡಪರಿಣಾಮ ದೃಢಪಟ್ಟಿರುವ ಹಿನ್ನಲೆಯಲ್ಲಿಯೇ ಲಸಿಕೆಯನ್ನು ಕಂಪನಿ ಹಿಂಪಡೆದಿದೆ. ಆದರೆ ಅಡ್ಡಪರಿಣಾಮದಿಂದ ಜೀವ ಕಳೆದುಕೊಳ್ಳುತ್ತಿರುವವರ ಜೀವ ರಕ್ಷಣೆ ಹೇಗೆ ಎಂಬದನ್ನು ಸರ್ಕಾರಗಳು ಉತ್ತರಿಸಬೇಕಿದೆ” ಎಂದು ಒತ್ತಾಯಿಸಿದರು.
“ಕೋವಿಶೀಲ್ಡ್ ಲಸಿಕೆಯೊಂದಿಗೆ ಕೋವ್ ವಾಕ್ಸಿನ್ ಕೂಡಾ ಅಡ್ಡಪರಿಣಾಮ ಹೊಂದಿರುವುದು ಬಯಲುಗೊಂಡಿದೆ. ಆದರೆ ಅಡ್ಡ ಪರಿಣಾಮದ ಲಸಿಕೆಯಿಂದ ಎದುರಾಗಿರುವ ಸಮಸ್ಯೆಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಸ್ಪಂದನೆ ನೀಡುತ್ತಿಲ್ಲ. ಲಸಿಕೆ ನೀಡುವಾಗ ಜನರಿಗೆ ಬೆದರಿಸಿ ಲಸಿಕೆ ನೀಡಲಾಯಿತು. ಪಡಿತರ ಕಡಿತ, ಸಾರಿಗೆ ಸಂಚಾರ ಸ್ಥಗಿತಗೊಳಿಸುವುದಾಗಿ ಹೇಳಲಾಗುತ್ತಿತ್ತು. ಆದರೀಗ ಲಸಿಕೆ ಪಡೆದವರು ಭಯ ಪಡುವಂತಾಗುತ್ತಿದೆ” ಎಂದರು.
“ಆರೋಗ್ಯ ಇಲಾಖೆ ರಾಯಚೂರಿನಲ್ಲಿ ಪ್ರಥಮ ಬಾರಿಗೆ ಪತ್ತೆಯಾಗಿರುವ ಲಸಿಕೆ ಅಡ್ಡ ಪರಿಣಾಮದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಮುಂದಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಲಸಿಕೆ ಉತ್ಪಾದಿಸಿರುವ ಕಂಪನಿಗಳು ಹಾಗೂ ಲಸಿಕೆ ಹಾಕಿಸಿಕೊಳ್ಳಲು ಅಧಿಕೃತ ನೋಟಿಫಿಕೇಷನ್ ಹೊರಡಿಸಿರುವ ಕಾನೂನು ಕ್ರಮ ಕೈಗೊಂಡು ಸಂಕಷ್ಟದಲ್ಲಿರುವ ರೋಗಿಗಳಿಗೆ ನೆರವು ನೀಡಬೇಕು” ಎಂದು ಆಗ್ರಹಿಸಿದರು.
ಕೋವಿಶೀಲ್ಡ್ ಅಡ್ಡಪರಿಣಾಮದಿಂದ ಆಸ್ಪತ್ರೆಗಳಿಗೆ ದಾಖಲಾಗಿರುವ ರೋಗಿಗಳನ್ನು ಪತ್ತೆ ಮಾಡಲು ಸಮೀಕ್ಷೆ ನಡೆಸಬೇಕು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಟಿಟಿಎಸ್ ಚಿಕಿತ್ಸಾ ಕೇಂದ್ರ ಪ್ರಾರಂಭಿಸಿ ಜನರಲ್ಲಿ ಉಂಟಾಗುತ್ತಿರುವ ಭಯವನ್ನು ನಿವಾರಿಸಬೇಕು. ಲಸಿಕೆ ಕುರಿತಾದ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ಆರ್ಟಿಕಲ್ 22 ರನ್ವಯ ಒತ್ತಾಯದಿಂದ ಚಿಕಿತ್ಸೆ ನೀಡುವುದು ಅಪರಾಧವೆಂದು ಹೇಳಿದೆ. ಅಡ್ಡಪರಿಣಾಮಕ್ಕೆ ಸರ್ಕಾರಗಳೇ ಹೊಣೆಯೆಂದೂ ಉಲ್ಲೇಖಿಸಿದೆ. 2019 ಕೋವಿಡ್ ವರ್ಷವಾದಂತೆ 2024-25 ಕೋವಿಡ್ ಅಡ್ಡ ಪರಿಣಾಮದ ವರ್ಷ ಆಗದಂತೆ ಎಚ್ಚರ ವಹಿಸಬೇಕಿದೆ. ಯುರೋಪ್, ಅಮೆರಿಕಾ ಸೇರಿದಂತೆ ಅನೇಕ ದೇಶಗಳು ಲಸಿಕೆ ಕುರಿತು ಎಚ್ಚರಿಕೆ ವಹಿಸುತ್ತಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲೋಕಸಭಾ ಚುನಾವಣೆಯಲ್ಲಿ ತಲ್ಲೀನವಾಗಿವೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹ; ಮೇ 30ರಂದು ಜನಪರ ಚಳವಳಿಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ
“ಜನರು ಭಯಭೀತರಾಗದೇ ಎಚ್ಚರ ವಹಿಸಿಕೊಳ್ಳಬೇಕು. ಲಕ್ಷಣಗಳು ಕಂಡುಬಂದರೆ ವೈದ್ಯರ ಸಲಹೆ ಪಡೆಯಬೇಕು. ಪ್ರಕರಣದ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ರಿಮ್ಸ್ ವೈದ್ಯರ ವರದಿ ಪಡೆದು ರಾಜ್ಯಕ್ಕೆ ರವಾನಿಸುವುದಾಗಿ ಭರವಸೆ ನೀಡಿದ್ದಾರೆ. ಕೂಡಲೇ ಹುಸೇನಪ್ಪ ಗೆಜ್ಜಲಗಟ್ಟಾ ಅವರ ಪ್ರಾಣ ಉಳಿಸುವ ಜತೆಗೆ ಸೂಕ್ತ ಪರಿಹಾರ ನೀಡಬೇಕು. ಸರ್ಕಾರಗಳು ಪರಿಸ್ಥಿತಿ ಕೈ ಮೀರವ ಮುನ್ನ ಮುಂಜಾಗ್ರತ ಕ್ರಮಗಳನ್ನು ಘೋಷಿಸಬೇಕು” ಎಂದು ಹೇಳಿದರು.
ಟಿಯುಸಿಐ ಜಿಲ್ಲಾಧ್ಯಕ್ಷ ಜಿ ಅಮರೇಶ, ಎಂ. ಗಗಾಧರ, ಅಜೀಜ್ ಜಹಾಗೀರದಾರ, ಲಕ್ಷ್ಮಣ ಇದ್ದರು.
ವರದಿ : ಹಫೀಜುಲ್ಲ
