ಮಂಗಳವಾರ ತಡರಾತ್ರಿ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನಗರದ ಹೃದಯಭಾಗದಲ್ಲಿ ಸುರಿದ ಗಾಳಿ ಮಳೆಗೆ ಬೃಹತ್ ಆಲದ ಮರದ ಕೊಂಬೆಯೊಂದು ಬಿದ್ದ ಪರಿಣಾಮ, ಕೆಲವು ವಾಹನಗಳು ಜಖಂಗೊಂಡ ಘಟನೆ ನಡೆದಿದೆ.
ಮಂಗಳೂರು ನಗರದ ಕರಂಗಲ್ಪಾಡಿಯ ಕಡೆಯಿಂದ ಕೋರ್ಟ್ ಕಟ್ಟಡಕ್ಕೆ ತೆರಳುವ ರಸ್ತೆಯ ಬಳಿಯಲ್ಲಿ(ಸೈಂಟ್ ಅಲೋಶಿಯಸ್ ಐಟಿಐ ಸಮೀಪ) ಈ ಘಟನೆ ಮಂಗಳವಾರ ರಾತ್ರಿ 9.30ರ ಸುಮಾರಿಗೆ ನಡೆದಿದೆ.
ಆಲದ ಮರದ ಕೊಂಬೆ ಬಿದ್ದ ಪರಿಣಾಮ ಎರಡು ಕಾರುಗಳು ಜಖಂಗೊಂಡಿದ್ದು, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕರಾವಳಿ ಭಾಗದಲ್ಲಿ ಸೋಮವಾರದಿಂದ ನಿರಂತರ ಮಳೆಯಾಗುತ್ತಿದೆ.
ಮರದ ಕೊಂಬೆ ವಾಹನಗಳ ಮೇಲೆ ಬಿದ್ದಿರುವ ಘಟನೆಯ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, “ರಾತ್ರಿ 9:30ರ ಸುಮಾರಿಗೆ ಈ ಘಟನೆ ನಡೆದಿದೆ. ಮಾಹಿತಿ ತಿಳಿದ ಕೂಡಲೇ ಹೊಯ್ಸಳ ಪೂರ್ವ ವಿಭಾಗದ ಪೊಲೀಸರು ತೆರಳಿದ್ದಾರೆ. ವಿದ್ಯುತ್ ತಂತಿಗಳ ಮೇಲೂ ಕೊಂಬೆ ಬಿದ್ದ ಪರಿಣಾಮ ಹಾನಿಗೀಡಾಗಿತ್ತು. ಹಾಗಾಗಿ, ಕೂಡಲೇ ಮೆಸ್ಕಾಂ ಸಿಬ್ಬಂದಿಯನ್ನು ಕರೆಸಿ, ಮರವನ್ನು ತೆರವುಗೊಳಿಸಲಾಗಿದೆ. ಘಟನೆಯಿಂದ ಎರಡು ವಾಹನಗಳಿಗೆ ಹಾನಿಯುಂಟಾಗಿದೆ” ಎಂದು ತಿಳಿಸಿದ್ದಾರೆ.
