ಈ ಲೋಕಸಭೆ ಚುನಾವಣೆಯು ಭಾರತದ ಪ್ರಜಾಪ್ರಭುತ್ವದ ಭವಿಷ್ಯ ಮತ್ತು ಸಂವಿಧಾನದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಹೇಳಿದ್ದಾರೆ.
ಬಾಲಸೋರ್ ಮತ್ತು ಭದ್ರಕ್ನಲ್ಲಿ ಚುನಾವಣಾ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, “ಸಂವಿಧಾನವನ್ನು ಬದಲಾಯಿಸಲು ಮತ್ತು ಸಮಾಜದ ದುರ್ಬಲ ವರ್ಗಗಳಿಗೆ ಮೀಸಲಾತಿಯನ್ನು ಕೊನೆ ಮಾಡಲು ಬಿಜೆಪಿ ಇಂದಲ್ಲ ಬಹಳ ಕಾಲಗಳಿಂದ ಯೋಜನೆ ರೂಪಿಸಿಕೊಂಡಿದೆ” ಎಂದು ಆರೋಪಿಸಿದರು.
ಜೂನ್ 1 ರಂದು ನಡೆಯಲಿರುವ ಕೊನೆಯ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ನೀಡುವಂತೆ ಜನರಿಗೆ ಮನವಿ ಮಾಡಿದ ಖರ್ಗೆ, “ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ಕಾರ್ಯಗಳ ವಿರುದ್ಧ ಹೋರಾಡಲು ನೀವು ಕೂಡಾ ಭಾಗಿಯಾಗಬೇಕು ಎಂದು ನಾವು ಬಯಸುತ್ತೇವೆ” ಎಂದರು.
ಇದನ್ನು ಓದಿದ್ದೀರಾ? ಕಾಂಗ್ರೆಸ್ ಪ್ರಣಾಳಿಕೆ| ಜನರ ದಾರಿ ತಪ್ಪಿಸುತ್ತಿರುವ ‘ಸುಳ್ಳುಗಳ ಸರದಾರ’ ಮೋದಿ: ಖರ್ಗೆ ಟೀಕೆ
“ಕಳೆದ 10 ವರ್ಷಗಳಲ್ಲಿ ಖಾಸಗೀಕರಣಗೊಳಿಸುತ್ತಾ ಬಂದಿರುವ ಬಿಜೆಪಿಯು ತನ್ನ ಉದ್ದೇಶವನ್ನು ಈಗಾಗಲೇ ಸ್ಪಷ್ಟಪಡಿಸಿದೆ. ಸಂಪೂರ್ಣ ಖಾಸಗೀಕರಣ ಮಾಡಲೆಂದೇ ಸರ್ಕಾರಿ ಉದ್ಯೋಗದಲ್ಲಿಯೂ ಗುತ್ತಿಗೆ ಸೇವೆಗಳನ್ನು ಪರಿಚಯಿಸಲಾಗಿದೆ. ಇದು ಹಿಂಬಾಗಿಲ ಮೂಲಕ ಮೀಸಲಾತಿಯನ್ನು ಕೊನೆಗಾಣಿಸುವ ಷಡ್ಯಂತ್ರ” ಎಂದು ಆರೋಪಿಸಿದರು.
“ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಸಂವಿಧಾನವನ್ನು ದುರ್ಬಲಗೊಳಿಸಲು ಇಂತಹ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಆದರೆ ಈ ಬಗ್ಗೆ ಈಗ ಮಾತನಾಡಲ್ಲ” ಎಂದು ಖರ್ಗೆ ಟೀಕಿಸಿದರು.
“30 ಲಕ್ಷ ಕೇಂದ್ರ ಸರ್ಕಾರದ ಹುದ್ದೆಗಳು ಖಾಲಿಯಿದ್ದು, ಆರ್ಥಿಕವಾಗಿ ದುರ್ಬಲ ವರ್ಗಗಳು, ದಲಿತರು ಮತ್ತು ಪರಿಶಿಷ್ಟ ಪಂಗಡದವರಿಗೆ 15 ಲಕ್ಷ ಉದ್ಯೋಗಗಳನ್ನು ಪಡೆಯುವ ಹಕ್ಕಿದೆ. ಒಡಿಶಾದಲ್ಲಿ 1.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿಯಿವೆ, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಾಗುವುದು” ಎಂದು ಭರವಸೆ ನೀಡಿದರು.