ವಿಕೃತ ಕ್ರೂರಿಯೊಬ್ಬ ತನ್ನ ಮನೆಯಲ್ಲಿಯೇ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಬೇರೆ ಬೇರೆ ಮೋರಿಗಳಲ್ಲಿ ದೇಹದ ಭಾಗಗಳನ್ನು ಎಸೆದಿರುವ ದುರ್ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಕೆ.ವಿ.ಶ್ರೀಕಾಂತ್ (34) ಕೊಲೆಯಾದ ದುರ್ದೈವಿ. ಮಾಧವ ರಾವ್ ಶ್ರೀನಾಥ್ ಕೊಲೆ ಆರೋಪಿ. ಈ ಭಯಾನಕ ಕೃತ್ಯವನ್ನು ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸರು ಬಯಲಿಗೆಳೆದಿದ್ದಾರೆ.
ಮೃತ ವ್ಯಕ್ತಿ ಶ್ರೀಕಾಂತ್ ಬಸವೇಶ್ವರನಗರದಲ್ಲಿರುವ ಮಾರ್ಗದರ್ಶಿ ಚೀಟ್ ಫಂಡ್ನಲ್ಲಿ ಡೆವಲಪ್ಮೆಂಟ್ ಆಫೀಸರ್ ಆಗಿದ್ದರು. ಇವರು ಥಣಿಸಂದ್ರದ ಅಂಜನಾದ್ರಿ ಲೇಔಟ್ನಲ್ಲಿ ವಾಸವಿದ್ದರು. ಮೃತ ವ್ಯಕ್ತಿ ಮತ್ತು ಆರೋಪಿ ಇಬ್ಬರು ಸ್ನೇಹಿತರಾಗಿದ್ದರು. ಇವರಿಬ್ಬರ ನಡುವೆ ಹಣಕಾಸಿನ ವ್ಯವಹಾರ ಕೂಡ ಇತ್ತು.
ಆರೋಪಿ ಶ್ರೀನಾಥ್ ಕೊಲೆ ಮಾಡಿ ಸಾಕ್ಷ್ಯ ನಾಶಮಾಡುವ ಉದ್ದೇಶದಿಂದ ಮೃತದೇಹವನ್ನು ಕತ್ತರಿಸಿ ಬೇರೆ ಬೇರೆ ಮೊರೆಗಳಿಗೆ ಎಸೆದಿದ್ದನು. ಪೊಲೀಸರು ಹಾಗೂ ನುರಿತ ತಜ್ಞರು ಮೂರು ದಿನಗಳಿಂದ ಮೃತದೇಹಕ್ಕಾಗಿ ಹುಡುಕಿದರೂ ಪತ್ತೆಯಾಗಿಲ್ಲ.
ಮೇ 28ರಂದು ಬೆಳಿಗ್ಗೆ ಎಂದಿನಂತೆ ಮನೆಯಿಂದ ಹೊರಟಿದ್ದ ಶ್ರೀಕಾಂತ್ ಮನೆಗೆ ವಾಪಾಸ್ ಆಗಿರಲಿಲ್ಲ. ಮೇ 29ರಂದು ಶ್ರೀಕಾಂತ್ ಪತ್ನಿ, ಪತಿ ನಾಪತ್ತೆಯಾಗಿರುವ ಬಗ್ಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ತನಿಖೆ ನಡೆಸಿದ ಪೊಲೀಸರಿಗೆ ಶ್ರೀಕಾಂತ್, ಕೆ.ಆರ್.ಪುರಂನ ವಿಜಿಪುರದಲ್ಲಿರುವ ಮಾಧವರಾವ್ ಮನೆಗೆ ಹೋಗಿರುವುದು ಪತ್ತೆಯಾಗಿದೆ. ಮನೆಯ ಸಿಸಿಟಿವಿಯಲ್ಲಿ ಶ್ರೀಕಾಂತ್ ಮಾಧವರಾವ್ ಮನೆ ಪ್ರವೇಶಿಸಿದ್ದು ಸೆರೆಯಾಗಿದ್ದು, ಮನೆಯಿಂದ ವಾಪಾಸ್ ಆಗಿರುವ ಬಗ್ಗೆ ರೆಕಾರ್ಡ್ ಇರಲಿಲ್ಲ. ಮನೆಯಲ್ಲಿ ಪರಿಶೀಲಿಸಿದಾಗ ರಕ್ತದ ಕಲೆಗಳು ಇದ್ದವು. ಆದರೆ, ಮಾಧವರಾವ್ ನಾಪತ್ತೆಯಾಗಿದ್ದನು.
ಬಳಿಕ, ಆಂಧ್ರಪ್ರದೇಶದಲ್ಲಿ ಮಾಧವ ರಾವ್ ಪತ್ತೆ ಮಾಡಿ ಪೊಲೀಸರು ಕರೆತಂದಿದ್ದರು. ಪೊಲೀಸರ ವಿಚಾರಣೆ ವೇಳೆ ಮಾಧವ ರಾವ್ ಸತ್ಯಾಂಶ ಬಾಯ್ಬಿಟ್ಟಿದ್ದು, ನಡೆದ ವಿಚಾರದ ಬಗ್ಗೆ ತಿಳಿಸಿದ್ದಾನೆ.
ಮಾಧವ ರಾವ್ ಮತ್ತು ಶ್ರೀಕಾಂತ್ಗೆ ಎರಡು ವರ್ಷಗಳಿಂದ ಪರಿಚಯ ಇತ್ತು. ಶ್ರೀಕಾಂತ್ ಬಳಿ ಮಾಧವರಾವ್ ₹5 ಲಕ್ಷ ಹಣದ ಚೀಟಿ ಹಾಕಿದ್ದನು. ಈ ಚೀಟಿ ಹಣದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಚೀಟಿ ಹಣ ವಾಪಸ್ ಕೊಡುವಂತೆ ಮಾಧವ ರಾವ್ ಒತ್ತಾಯ ಮಾಡುತ್ತಿದ್ದನು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಿಗರೇಟ್ ವಿಚಾರಕ್ಕೆ ಸ್ನೇಹಿತನ ಮೇಲೆ ಹಲ್ಲೆ; 7 ಮಂದಿಯ ಬಂಧನ
ಶ್ರೀಕಾಂತ್ ಮೇ 28ರಂದು ಬೆಳಗ್ಗೆ ಮಾಧವ ರಾವ್ ಮನೆಗೆ ತೆರಳಿದ್ದನು. ಮನೆಯಲ್ಲಿ ಇಬ್ಬರ ನಡುವೆ ಹಣದ ವಿಚಾರಕ್ಕೆ ಜಗಳ ನಡೆದಿದೆ. ಬಳಿಕ, ಮಾಧವ ರಾವ್ ಮನೆಯಲ್ಲಿದ್ದ ಜಾಕ್, ರಾಡ್ನಿಂದ ಶ್ರೀನಾಥ್ ತಲೆಗೆ ಹೊಡೆದಿದ್ದನು. ಕುಸಿದು ಬಿದ್ದ ಶ್ರೀಕಾಂತ್ ದೇಹವನ್ನು ಮಚ್ಚಿನಿಂದ ತುಂಡು ತುಂಡಾಗಿ ಕತ್ತರಿಸಿದ್ದನು. ಸಾಕ್ಷಿ ನಾಶ ಮಾಡಲು ಶ್ರೀಕಾಂತ್ ಮೃತದೇಹವನ್ನು ಮೂರು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಮೃತದೇಹದ ತುಂಡುಗಳನ್ನು ಬೆಳತ್ತೂರು ಬಳಿಯ ಮೋರಿಯಲ್ಲಿ (ಪಿನಾಕಿನಿ ನದಿ) ಹಾಕಿದ್ದನು ಎಂದು ತಿಳಿದುಬಂದಿದೆ.
ಈ ಘಟನೆಯ ನಂತರ ತನ್ನ ಆರೋಪಿ ಶ್ರೀನಾಥ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದನು.
ಸದ್ಯ ಪ್ರಕರಣ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ. ಕೊಲೆ ಮಾಡಿದ ಸ್ಥಳ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಗೆ ಬರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ರಾಮಮೂರ್ತಿನಗರ ಪೊಲೀಸರಿಂದ ಕೊಲೆ (302) ಮತ್ತು ಸಾಕ್ಷಿ ನಾಶ (201)ರಡಿ ಪ್ರಕರಣ ದಾಖಲಾಗಿದೆ.