ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಪಾಲಕರು ಬೆಳೆಸಿದಾಗ ಮಾತ್ರ ಸಮಾಜದಲ್ಲಿ ಉತ್ತಮವಾಗಿ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಪಾಲಕರು ಮುಂದಾಗಬೇಕೆಂದು ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರ ಗಿರಿಧರ್ ಪೂಜಾರ್ ಹೇಳಿದರು.
ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ವೇದಾಂತ ಕಾಲೇಜು, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದಿಂದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕಗಳು ಪಡೆದಿರುವುದು ಖುಷಿಯ ಸಂಗತಿ, ಇವತ್ತಿನ ಶಿಕ್ಷಣ ಅಂಕಗಳಿಸುವುದನ್ನು ಮಾತ್ರ ಕಲಿಸುತ್ತಿದೆಯೇ ವಿನಃ ನೈತಿಕತೆಯನ್ನು ಕಲಿಸುತ್ತಿಲ್ಲ. ಇದರ ಪರಿಣಾಮವನ್ನು ನಾವು ನಮ್ಮ ಸುತ್ತಲಿನ ಸಮಾಜದಲ್ಲಿ ಕಾಣುತ್ತಿದ್ದೇವೆ. ಪೋಷಕರು, ಶಿಕ್ಷಕರು ಪಠ್ಯದ ಆಚೆಗಿನ ಸಾಮಾಜಿಕ ಕಳಕಳಿ ಕುರಿತ ಕಾಳಜಿಯನ್ನು ತಿಳಿಸಿಕೊಡಬೇಕು” ಎಂದರು.
“ಪ್ರಸ್ತುತ ದಿನಮಾನಗಳಲ್ಲಿ ಆಧುನಿಕತೆಯ ಪರಿಣಾಮವಾಗಿ ಕುಟುಂಬದಲ್ಲಿನ ಸಂಬಂಧಗಳು ದೂರವಾಗುತ್ತಿವೆ. ಅಲ್ಲದೇ ಸಮಾಜದಲ್ಲಿ ಮೌಲ್ಯಗಳ ಸ್ಥಾನಪಲ್ಲಟದಿಂದಾಗಿ ಸಂಬಂಧಗಳು ಉತ್ತಮ ರೀತಿಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಕ್ಕಳನ್ನು ಪಾಲಕರು ಜವಬ್ದಾರಿಯುತವಾಗಿ ಬೆಳೆಸುವ ಮೂಲಕ ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮೂಲಕ ದೇಶಕ್ಕೆ ಸಮಾಜಕ್ಕೆ ಕೊಡುಗೆ ನೀಡಬೇಕಾಗಿದೆ” ಎಂದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಹನುಮಂತಪ್ಪ ಗವಾಯಿಯವರು ಮಾತನಾಡಿ, “ಹನಮಂತಪ್ಪ ಗವಾಯಿ ಸರ್ವರಿಗೆ ಹಿತವನ್ನು ನೀಡುವಂಥದ್ದೇ ಸಾಹಿತ್ಯ, ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತೃ ಭಾಷೆಯ ಮೇಲೆ ಪ್ರೇಮವನ್ನು ಹುಟ್ಟುವಂತಹ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ರೂಪಿಸಿರುವುದು ಸಂತೋಷದ ವಿಚಾರವಾಗಿದ್ದು, ಇಂತಹ ಕಾರ್ಯಕ್ರಮಗಳಿಂದ ಸಾಹಿತ್ಯ ಎನ್ನುವುದು ಜನಸಾಮಾನ್ಯರಿಗೆ ಮುಟ್ಟುವಂತಹ ಕೆಲಸ ಆಗಿದೆ. ಅಲ್ಲದೆ ಪ್ರಸಕ್ತ ವರ್ಷದ ಎಸ್ಎಸ್ಎಲ್ಸಿ ಫಲಿತಾಂಶ ಶಿಕ್ಷಣವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿದ್ದು, ಮುಂದೆಯೂ ಕೂಡ ಇದೇ ರೀತಿಯಲ್ಲಿ ಪರೀಕ್ಷೆ ನಡೆದಿದ್ದೇ ಆದರೆ ಶಿಕ್ಷಣವನ್ನು ಗಟ್ಟಿಗೊಳಿಸುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಮಾತೃ ಭಾಷೆಯಲ್ಲಿ ಮಕ್ಕಳು ಉತ್ತಮ ಅಂಕ ಪಡೆದಿದ್ದು, ಕನ್ನಡವನ್ನು ಗಟ್ಟಿಗೊಳಿಸುವ ಕಾರ್ಯವೆಂದೇ ಹೇಳಬಹುದು. ಮಕ್ಕಳು ಈ ರೀತಿಯ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶಿಕ್ಷಕರ ಶ್ರಮವೂ ಕೂಡ ಅಪಾರವಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ವಿಷಯದಲ್ಲಿ ಅತಿಹೆಚ್ಚು ಅಂಕ ಪಡೆದ 42 ಮಂದಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ದಲಿತ ಮುಖಂಡರ ವಿರುದ್ಧ ದೂರು ದಾಖಲು; ಹಿಂಪಡೆಯುವಂತೆ ದಸಂಸ ಆಗ್ರಹ
ಈ ಸಂದರ್ಭದಲ್ಲಿ ವೇದಾಂತ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಕೇಶ್ ರಾಜಲಬಂಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಮೋಹಿನುಲ್ ಹಕ್, ಮಲ್ಲೇಶ್ ನಾಯಕ್, ಶಾಂತಾ ಕುಲಕರ್ಣಿ, ರಾಜಪ್ಪಗೌಡ ಮಾಲೀಪಾಟೀಲ್ ದಿನ್ನಿ, ರಾವುತ್ರಾವ್ ಬರೂರು, ಡಾ. ವಿಜಯರಾಜೇಂದ್ರ ಸೇರಿದಂತೆ ಕಸಾಪ ಸದಸ್ಯರು ಪಾಲಕರು ಹಾಗೂ ಪೋಷಕರು ಇದ್ದರು.
ವರದಿ : ಹಫೀಜುಲ್ಲ
