ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್ಎಸ್ಎಫ್ ಯೋಧರೊಬ್ಬರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಶತ್ರುಘ್ನ ವಿಶ್ವಕರ್ಮ(25) ಮೃತ ಯೋಧ. ಬುಧವಾರ ಬೆಳಗ್ಗೆ 5.25ಕ್ಕೆ ಘಟನೆ ನಡೆದಿದೆ.
ರಾಮಮಂದಿರದ ಆವರಣದಲ್ಲಿ ಏಕಾಏಕಿ ಗುಂಡಿನ ಸದ್ದು ಕೇಳಿದ ಬಳಿಕ ಅಲ್ಲಿನ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಸೈನಿಕ ಶತ್ರುಘ್ನ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಅದಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಅಯೋಧ್ಯೆ ದೇಗುಲ ಸಂಕೀರ್ಣದಲ್ಲಿ ಆತಂಕ ಮೂಡಿಸಿದೆ. ಘಟನಾ ಸ್ಥಳಕ್ಕೆ ಐಜಿ ಮತ್ತು ಎಸ್ಪಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಫೋರೆನ್ಸಿಕ್ ತಂಡ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.
ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಎಂದು ಪರಿಗಣಿಸಲಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ.
ಶತ್ರುಘ್ನ ವಿಶ್ವಕರ್ಮ 2019ರ ಬ್ಯಾಚ್ನವರು. ಅವರು ಆಯೋಧ್ಯೆಯ ಅಂಬೇಡ್ಕರ್ ನಗರದ ಕಾಜಪುರ ಗ್ರಾಮದ ನಿವಾಸಿಯಾಗಿದ್ದರು. ದೇವಸ್ಥಾನದ ಭದ್ರತೆಗಾಗಿ ಯೋಗಿ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಎಸ್ಎಸ್ಎಫ್ ಪಡೆಯನ್ನು ರಚಿಸಿತ್ತು. ಆ ಪಡೆಯಲ್ಲಿ ಶತ್ರುಘ್ನ ಕೂಡ ಸೇರಿದ್ದರು.
ಈ ಸುದ್ದಿ ಓದಿದ್ದೀರಾ? ಪತ್ನಿ ಸಾವಿನ ನಂತರ ಆತ್ಮಹತ್ಯೆಗೆ ಶರಣಾದ ಐಪಿಎಸ್ ಅಧಿಕಾರಿ
ಕೆಲವು ದಿನಗಳಿಂದ ಶತ್ರುಘ್ನ ಯಾವುದೋ ಚಿಂತೆಯಲ್ಲಿದ್ದರು. ಘಟನೆಗೂ ಮುನ್ನ ಮೊಬೈಲ್ ನೋಡುತ್ತಿದ್ದರು ಎಂದು ಮೃತ ಯೋಧನ ಸಹೋದ್ಯೋಗಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆ, ಪೊಲೀಸರು ಅವರ ಮೊಬೈಲ್ ಅನ್ನು ಕೂಡ ವಶಕ್ಕೆ ಪಡೆದಿದ್ದಾರೆ.