ಮನರೇಗಾ ಯೋಜನೆಯಡಿ ಕೈಗೊಂಡ ಸಾಮೂಹಿಕ ಕಾಮಗಾರಿಗಳಲ್ಲಿ ಮಹಿಳಾ ಕೂಲಿಕಾರರು ಪುರುಷ ಕೂಲಿಕಾರರಿಗಿಂತ ಹೆಚ್ಚು ಪ್ರಮಾಣದಲ್ಲಿ ಭಾಗವಹಿಸುವ ಮೂಲಕ ನರಗುಂದ ತಾಲೂಕಿನಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಮೇಲುಗೈ ಸಾಧಿಸಿದ್ದಾರೆ. ತಾಲೂಕಿನಲ್ಲಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಪ್ರಮಾಣ ಶೇ.50.29ರಷ್ಟಿದೆ ಎಂದು ತಾಲೂಕು ಪಂಚಾಯತಿ ಮೂಲಗಳು ತಿಳಿಸಿವೆ.
ತಾಲೂಕಿನ 13 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ ಒಟ್ಟು 2,29,798 ಮಾನವ ದಿನಗಳ ಕೆಲಸವನ್ನು ನೀಡುವ ಗುರಿ ಹಾಕಿಕೊಳ್ಳಲಾಗಿತ್ತು. ಅದಕ್ಕೆ ಅನುಗುಣವಾಗಿ ಸದ್ಯ ಒಟ್ಟು 1,85,496 ಮಾನವ ದಿನಗಳ ಕೆಲಸ ನೀಡಲಾಗಿದೆ. ಈ ಪೈಕಿ, 93,420 (50.26%) ಮಾನವ ದಿನಗಳಲ್ಲಿ ಮಹಿಳಾ ಕೂಲಿಕಾರರು ಕೆಲಸ ಮಾಡಿದ್ದಾರೆ. ಈ ಮೂಲಕ ಪುರುಷ ಕೂಲಿಕಾರರಿಗಿಂತ ಮನರೇಗಾ ಕೆಲಸದಲ್ಲಿ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ.
ಮನರೇಗಾ ಕಾಮಗಾರಿ ಮಾನವ ದಿನಗಳ ಸೃಜನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ 2020-21ರಲ್ಲಿ 41.39%, 2022-23ನೇ ಸಾಲಿನಲ್ಲಿ 45.47% ಹಾಗೂ 2023-24ನೇ ಸಾಲಿನಲ್ಲಿ 48.77% ಇತ್ತು. ಈ ವರ್ಷ ಮಹಿಳೆಯರ ಭಾಗವಹಿಸುವಿಕೆ 50% ದಾಟಿದೆ.
ಸಮಾಜದಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶದಿಂದ ಮನರೇಗಾ ಕಾಮಗಾರಿಯಲ್ಲಿ ಪುರುಷರಿಗೆ ಸರಿಸಮಾನವಾಗಿ 349 ರೂ. ಕೂಲಿ ಮೊತ್ತವನ್ನು ಕೊಡಲಾಗುತ್ತಿದೆ. ತಾಲೂಕಿನಲ್ಲಿ ಏಪ್ರಿಲ್ 1ರಿಂದಲೇ 13 ಗ್ರಾಮ ಪಂಚಾಯತಿಗಳಲ್ಲಿ ಮನಾರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಯನ್ನು ಆರಂಭಿಸಲಾಗಿದೆ. ಮನರೇಗಾ ಕಾಮಗಾರಿಯಲ್ಲಿ ಮಹಿಳಾ ಕೂಲಿಕಾರರು ಯಾವುದೇ ಮುಜುಗರಕ್ಕೆ ಒಳಗಾಗದೇ ಕೆಲಸ ನಿರ್ವಹಣೆ ಮಾಡಬಹುದು ಎಂಬುದನ್ನು ಮಹಿಳೆಯರಿಗೆ ಮನದಟ್ಟು ಮಾಡಿಕೊಡಲಾಗಿದೆ. ಪ್ರತಿಯೊಂದು ಗ್ರಾಮ ಪಂಂಚಾಯತಿಗಳಲ್ಲಿ ಮಹಿಳಾ ಒಕ್ಕೂಟದ ಸಂಘಟನೆಗಳ ಸದಸ್ಯರನ್ನು ಸಂಪರ್ಕಿಸಿ ಮನರೇಗಾ ಕೆಲಸಗಳಲ್ಲಿ ಮಹಿಳೆಯರನ್ನು ತೊಡಗಿಸುವಂತೆ ಪ್ರೇರಣೆ ನೀಡಲಾಗಿದೆ. ಈ ಎಲ್ಲ ಕ್ರಮಗಳಿಂದಾಗಿ ಮನರೇಗಾ ಕೆಲಸಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ ಎಂದು ವರದಿಯಾಗಿದೆ.
“ಈ ವರ್ಷ ಶೇ.60ರಷ್ಟು ಮಹಿಳಾ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸುವ ಗುರಿ ಹೊಂದಲಾಗಿದೆ. ಸದ್ಯ ಶೇ.50.36ರಷ್ಟು ಪ್ರಗತಿ ಸಾಧಿಸಲಾಗಿದೆ. 2024-25ನೇ ಸಾಲಿನ ಆರ್ಥಿಕ ವರ್ಷ ಮುಕ್ತಾಯಕ್ಕೆ 9 ತಿಂಗಳು ಬಾಕಿಯಿದೆ. ಮುಂಬರುವ ಯೋಜನೆಯ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಮೂಲಕ ತಾಲೂಕಿನ ಗುರಿ ಸಾಧನೆಗೆ ಕ್ರಮವಹಿಸಲಾಗುವುದು. ತಾಲೂಕಿನ ಎಲ್ಲ ಮನರೇಗಾ ಸಿಬ್ಬಂದಿ ಹಾಗೂ ಆರ್.ಡಿ.ಪಿ.ಆರ್ ಇಲಾಖೆಯ ಸಿಬ್ಬಂದಿಗಳ ಸಹಕಾರದಿಂದ ನರಗುಂದ ತಾಲೂಕಿನಲ್ಲಿ ಈ ಪ್ರಗತಿ ಸಾಧ್ಯವಾಗಿದೆ” ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ.ಇನಾಮದಾರ ತಿಳಿಸಿದ್ದಾರೆ.
“ತಾಲೂಕಿನ ಪ್ರತಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಗ್ರಾಮಗಳ ಮನೆ-ಮನೆಗೆ ಯೋಜನೆಯ ಉದ್ದೇಶ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಮಹಿಳಾ ಕೂಲಿಕಾರರಿಗೆಂದೇ ಪ್ರತ್ಯೇಕವಾಗಿ ಸಮುದಾಯ ಕಾಮಗಾರಿ ಆರಂಭಿಸಿ ಮಹಿಳಾ ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿದೆ. ಯೋಜನೆಯಡಿ ಕಾಯಕ ಬಂಧುಗಳ ನೇಮಕದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗಿದೆ. ಕಾಯಕಬಂಧುಗಳಿಗೆ ಸೂಕ್ತ ತರಬೇತಿ ನೀಡಿ, ಯೋಜನೆಯಡಿ ಮಹಿಳಾ ಕೂಲಿಕಾರರನ್ನು ಸಂಘಟಿಸಿ ಮನರೇಗಾ ಕೆಲಸದಲ್ಲಿ ಮಹಿಳೆಯರನ್ನು ತೊಡಗಿಸಿಕೊಂಡಿದ್ದು ಮಹಿಳಾ ಕೂಲಿಕಾರರ ಪ್ರಮಾಣ ಹೆಚ್ಚಳಕ್ಕೆ ಸಹಾಯಕವಾಯಿತು” ಎಂದು ತಾಲೂಕು ಪಂಚಾಯತಿ ಗ್ರಾಮೀಣ ಉದ್ಯೋಗ ವಿಭಾಗದ ಸಹಾಯಕ ನಿರ್ದೇಶಕ ಸಂತೋಷಕುಮಾರ್ ಪಾಟೀಲ್ ಹೇಳಿದ್ದಾರೆ.
“ಈ ವರ್ಷ ಬರಗಾಲದಿಂದಾಗಿ ದುಡಿಯೋಕೆ ಕೆಲಸ ಇಲ್ಲ ಎಂಬ ಚಿಂತೆ ಇತ್ತು. ಆದರೆ ನಮ್ಮ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಡಿ ಕೆಲಸ ನೀಡಿದರು. ಒಡ್ಡಿನ (ಬದು ನಿರ್ಮಣ) ಕೆಲಸಕ್ಕೆ ಹೋಗಿದ್ದರಿಂದ ನನ್ನ ಖಾತೆಗೆ ಹಣ ಜಮಾವಣೆ ಆಯಿತು. ಬಂದ ಹಣದಲ್ಲಿ ಮಕ್ಕಳ ಶಾಲೆ ಖರ್ಚು, ಮನೆತನದ ಖರ್ಚಿಗೆ ಸಹಾಯಕವಾಯಿತು” ಎಂದು ಬೆನಕನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಹಿಳಾ ಕೂಲಿಕಾರರಾದ ಮಂಜುಳಾ ಗೊಬ್ಬರಗುಂಪಿ ತಿಳಿಸಿದ್ದಾರೆ.