ತುರ್ತು ಪರಿಸ್ಥಿತಿಯ ವೇಳೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ನನ್ನನ್ನೂ ಸೇರಿದಂತೆ ಅನೇಕ ನಾಯಕರನ್ನು ಜೈಲಿಗೆ ಹಾಕಿದ್ದರು. ಆದರೆ, ಅವರು ಯಾವತ್ತೂ ನಮ್ಮನ್ನು ನಿಂದಿಸಲಿಲ್ಲ ಎಂದು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ
ತುರ್ತು ಪರಿಸ್ಥಿತಿಯ ಸಂದರ್ಭವನ್ನು ನೆನೆದು ತಾವು ಮತ್ತು ಪತ್ರಕರ್ತ ನಳಿನ್ ವರ್ಮಾ ಬರೆದ ‘ದಿ ಸಂಘ್ ಸೈಲೆನ್ಸ್ ಇನ್ 1975’ ಲೇಖನವನ್ನು ಲಾಲು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಲೇಖನದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 1975ನೇ ವರ್ಷವು ದೇಶದ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದ್ದರೂ, 2024ರಲ್ಲಿ ವಿರೋಧ ಪಕ್ಷವನ್ನು ಯಾರು ಗೌರವಿಸುತ್ತಿಲ್ಲ ಎಂಬುದನ್ನು ನಾವು ಮರೆಯಬಾರದು ಎಂದಿದ್ದಾರೆ.
I was the convener of the steering committee that Jayaprakash Narayan—had constituted to carry forward the movement against the excesses of Emergency imposed by the then PM Indira Gandhi. I was in jail under the Maintenance of Security Act (MISA) for over 15 months. My colleagues… pic.twitter.com/9fyThckm01
— Lalu Prasad Yadav (@laluprasadrjd) June 29, 2024
“ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಹೇರಿದ್ದ ತುರ್ತುಪರಿಸ್ಥಿತಿ ವಿರುದ್ಧದ ಚಳವಳಿಯನ್ನು ಮುನ್ನಡೆಸಲು ಜಯಪ್ರಕಾಶ್ ನಾರಾಯಣ್ ರಚಿಸಿದ್ದ ಸ್ಟೀರಿಂಗ್ ಕಮಿಟಿಗೆ ನಾನು ಸಂಚಾಲಕನಾಗಿದ್ದೆ. ನಾನು 15 ತಿಂಗಳಿಗೂ ಹೆಚ್ಚು ಕಾಲ ಭದ್ರತಾ ಕಾಯಿದೆ (ಮಿಸಾ) ಅಡಿಯಲ್ಲಿ ಜೈಲಿನಲ್ಲಿದ್ದೆ. ಇಂದು ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುವ ಬಿಜೆಪಿಯ ಹಲವು ಸಚಿವರು ನನಗೆ ಮತ್ತು ನನ್ನ ಸಹೋದ್ಯೋಗಿಗಳಿಗೆ ಅಂದು ಗೊತ್ತೇ ಇರಲಿಲ್ಲ. ಇಂದು ನಮಗೆ ಸ್ವಾತಂತ್ರ್ಯದ ಮೌಲ್ಯದ ಬಗ್ಗೆ ಉಪನ್ಯಾಸ ನೀಡುವ ಮೋದಿ, ಜೆಪಿ ನಡ್ಡಾ ಮತ್ತು ಕೆಲವು ಬಿಜೆಪಿ ಸಚಿವರ ಬಗ್ಗೆ ಅಂದು ನಮಗೆ ತಿಳಿದೇ ಇರಲಿಲ್ಲ. ಅವರ್ಯಾರೂ ತುರ್ತು ಪರಿಸ್ಥಿತಿ ವಿರುದ್ಧ ದನಿ ಎತ್ತಿರಲಿಲ್ಲ. ಹೋರಾಟ ಮಾಡಿರಲಿಲ್ಲ” ಎಂದು ಹೇಳಿದ್ದಾರೆ.
“ಇಂದಿರಾ ಗಾಂಧಿಯವರು ನಮ್ಮಲ್ಲಿ ಅನೇಕರನ್ನು ಜೈಲಿಗೆ ಹಾಕಿದ್ದರು. ಆದರೆ, ಅವರು ಎಂದಿಗೂ ನಮ್ಮನ್ನು ನಿಂದಿಸಲಿಲ್ಲ. ಅವರು ಅಥವಾ ಅವರ ಮಂತ್ರಿಗಳು ನಮ್ಮನ್ನು ‘ದೇಶವಿರೋಧಿ’ ಅಥವಾ ‘ದೇಶದ್ರೋಹಿ’ ಎಂದು ಕರೆಯಲಿಲ್ಲ. ನಮ್ಮ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸ್ಮರಣೆಯನ್ನು ಅಶುದ್ಧಗೊಳಿಸಲು ವಿಧ್ವಂಸಕರಿಗೆ ಅವರು ಎಂದಿಗೂ ಅವಕಾಶ ನೀಡಲಿಲ್ಲ. 1975ರ ತುರ್ತುಪರಿಸ್ಥಿತಿ ನಮ್ಮ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆ. ಆದರೆ, 2024ರಲ್ಲಿ ವಿರೋಧ ಪಕ್ಷವನ್ನು ಯಾರು ಗೌರವಿಸುತ್ತಿಲ್ಲ ಎಂಬುದನ್ನು ನಾವು ಮರೆಯಬಾರದು” ಎಂದು ಟ್ವೀಟ್ ಮಾಡಿದ್ದಾರೆ.
1975ರ ಜೂನ್ 25ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು 21 ತಿಂಗಳ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಈ ವರ್ಷ ತುರ್ತು ಪರಿಸ್ಥಿತಿಯ 50ನೇ ವಾರ್ಷಿಕೋತ್ಸವವಾಗಿದೆ. ಗುರುವಾರ, ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು, ‘ತುರ್ತು ಪರಿಸ್ಥಿತಿ’ ಹೇರಿಕೆಯನ್ನು ಟೀಕಿಸಿದರು.
“ತುರ್ತು ಪರಿಸ್ಥಿತಿಯು ಸಂವಿಧಾನದ ಮೇಲಿನ ನೇರ ದಾಳಿಯ ಅತಿದೊಡ್ಡ ಮತ್ತು ಕರಾಳ ಅಧ್ಯಾಯವಾಗಿದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಇಡೀ ದೇಶವು ಗೊಂದಲದಲ್ಲಿ ಮುಳುಗಿತ್ತು. ಆದರೆ, ಅಂತಹ ಅಸಂವಿಧಾನಿಕ ಶಕ್ತಿಗಳ ವಿರುದ್ಧ ರಾಷ್ಟ್ರವು ವಿಜಯಶಾಲಿಯಾಗಿದೆ” ಎಂದು ಮುರ್ಮು ಹೇಳಿದರು.
ರಾಷ್ಟ್ರಪತಿ ಹೇಳಿಕೆಗಳು ‘ಇಂಡಿಯಾ’ ಒಕ್ಕೂಟದ ನಾಯಕರು ಪ್ರತಿಕ್ರಿಯೆ ನೀಡುವಂತೆ ಮಾಡಿವೆ. ಮುರ್ಮು ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಲಾಲೂ ಟ್ವೀಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.