ಬೆಳಗಾವಿ ಜಿಲ್ಲಾಧಿಕಾರಿಯಾಗಿ ಸೇವೆಯಲ್ಲಿದ್ದ ನಿತೀಶ್ ಪಾಟಿಲ್ ಅವರನ್ನು ರಾಜ್ಯ ಸರ್ಕಾರವು ಬೆಂಗಳೂರಿನ ಎಂಎಸ್ಎಂಇ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಿ, ನೂತನ ಜಿಲ್ಲಾಧಿಕಾರಿಯಾಗಿ ಮೊಹಮ್ಮದ್ ರೋಶನ್ ಅವರನ್ನು ನೇಮಕ ಮಾಡಿದೆ. ಶುಕ್ರವಾರ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವತ್ತ ಗಮನಹರಿಸಿ ಬೇಕಾಗಿದೆ.
ಕೃಷ್ಣಾನದಿ ತೀರದ ರೈತರ ಸಮಸ್ಯೆ
ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳ ಗ್ರಾಮಗಳು ಮತ್ತು ಪಟ್ಟಣಗಳು ಬರ ಮತ್ತು ಪ್ರವಾಹದ ಎರಡು ಸಮಸ್ಯೆಗಳಿಂದ ಬಳಲುತ್ತಿವೆ. ಕೃಷ್ಣಾ ಮತ್ತು ಅದರ ಉಪನದಿಗಳ ಮೇಲಿನ ಅಣೆಕಟ್ಟುಗಳ ವೈಜ್ಞಾನಿಕ ಮತ್ತು ಪಾರದರ್ಶಕ ನಿರ್ವಹಣೆಯಿಂದ ಈ ಎರಡೂ ಪರಿಸ್ಥಿತಿಗಳನ್ನು ಪರಿಹರಿಸಬಹುದಾಗಿದೆ.
ಕೃಷ್ಣಾ ಮತ್ತು ಅದರ ಐದು ಉಪನದಿಗಳಲ್ಲಿ ಮಹಾರಾಷ್ಟ್ರದ ಗಡಿಯಿಂದ ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಅಣೆಕಟ್ಟಿನವರೆಗೆ ಕನಿಷ್ಠ 11 ಅಣೆಕಟ್ಟುಗಳಿವೆ. ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಿ ಬೆಳೆ ನಷ್ಟ ಹಾಗೂ ಇತರೆ ಸಮಸ್ಯೆಗಳನ್ನು ಎದುರಿಸಬಹುದು.
ಕೃಷ್ಣಾ ಜಲಾನಯನ ಪ್ರದೇಶದಲ್ಲಿನ ಪ್ರವಾಹದಿಂದಾಗಿ ಬೆಳೆ ನಷ್ಟ ಮತ್ತು ಗ್ರಾಮಗಳ ಸ್ಥಳಾಂತರ ಹಾಗೂ ಅತಿವೃಷ್ಟಿಯಿಂದ ಮಾತ್ರವಲ್ಲದೆ, ಮಹಾರಾಷ್ಟ್ರದ ಅಣೆಕಟ್ಟುಗಳಿಂದ ಅನಿರೀಕ್ಷಿತವಾಗಿ ನೀರನ್ನು ಬಿಡುಗಡೆ ಮಾಡುವುದರಿಂದಲೂ ಪ್ರವಾಹ ಉಂಟಾಗುತ್ತಿದೆ. ನೂತನ ಜಿಲ್ಲಾಧಿಕಾರಿಗಳು ಪ್ರವಾಹ ಪ್ರದೇಶದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ.
ಬೇಸಿಗೆಯಲ್ಲಿ ನದಿ ಪಾತ್ರ ಬತ್ತದ ಹಾಗೆ ಮತ್ತು ಮಳೆಗಾಲದಲ್ಲಿ ಪ್ರವಾಹಕ್ಕೆ ಕಾರಣವಾಗದಂತೆ ಅಣೆಕಟ್ಟುಗಳನ್ನು ಸ್ವಯಂಚಾಲಿತಗೊಳಿಸಬೇಕು ಹಾಗೂ ನೀರಾವರಿ ಪ್ರದೇಶಗಳ ಕೃಷಿ ಭೂಮಿಗಳು ಜವಳು ಹೆಚ್ಚಳದ ಕಾರಣ ಫಲವತ್ತತೆಯ ಕೊರತೆಯಿಂದ ಆ ಭಾಗದ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕಿದೆ. ಅದಕ್ಕಾಗಿ ಜಮೀನುಗಳಲ್ಲಿ ಅಡ್ಡ ಕಾಲುವೆಗಳನ್ನು ನಿರ್ಮಿಸಿ ಈ ಸಮಸ್ಯೆಗಳಿಗೆ ಪರಿಹಾರ ನೀಡಬೇಕು.
ಒಣದ್ರಾಕ್ಷಿ ಸಂರಕ್ಷಣಾ ಘಟಕ ಸ್ಥಾಪನೆ
ಚಿಕ್ಕೋಡಿ ಭಾಗದಲ್ಲಿ ರೈತರು ಹೆಚ್ಚಾಗಿ ದ್ರಾಕ್ಷಿ ಬೆಳೆಯುತ್ತಾರೆ. ಒಣ ದ್ರಾಕ್ಷಿಯನ್ನು ರಕ್ಷಿಸಲು ದ್ರಾಕ್ಷಿ ಸಂಸ್ಕರಣಾ ಘಟಕಗಳು ಸ್ಥಾಪಿಸಿದರೆ ದ್ರಾಕ್ಷಿ ಬೆಳೆಯುವ ರೈತರಿಗೆ ಅನುಕೂಲವಾಗಲಿದೆ.
ಗ್ರಾಮ ಪಂಚಾಯತ್ಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬಹುದೇ?
ರಾಮದುರ್ಗ ತಾಲೂಕು ಪಂಚಾಯತ್ ವ್ಯಾಪ್ತಿ ಒಂದರಲ್ಲಿಯೇ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ಆರೋಪ ಸಾಬೀತಾಗಿದ್ದು, ಇನ್ನೂ ಕೂಡ ಆರೋಪಿಗಳ ವಿರುದ್ಧ ಕ್ರಮವಾಗಿಲ್ಲ. ಗ್ರಾಮ ಪಂಚಾಯತ್ ಮಟ್ಟದಲ್ಲೇ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಆಗಾಗ್ಗೆ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದೆ.
ಕೂಲಿ ನೇಕಾರ ಸಮುದಾಯಕ್ಕೆ ಬೇಕಿದೆ ಸರ್ಕಾರದ ಸಹಾಯ
ಬೆಳಗಾವಿ ಜಿಲ್ಲೆಯಲ್ಲಿ ನೇಕಾರಿಕೆ ಮಾಡಿಕೊಂಡು ಬದುಕುತ್ತಿರುವ ಕೂಲಿ ನೇಕಾರರು ಅತಿಯಾದ ಸಾಲದಿಂದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೂಲಿ ನೇಕಾರರಿಗೆ ಸರ್ಕಾರದಿಂದ ವಸತಿ ಸೌಲಭ್ಯ ಸೇರಿದಂತೆ ಅವರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಇದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ನೂತನ ಜಿಲ್ಲಾಧಿಕಾರಿಗಳು ಗಮನ ಸೆಳೆಯಲಿದ್ದಾರೆಯೇ ಎಂಬುದು ಕಾದು ನೋಡಬೇಕಿದೆ.
ಬೆಳಗಾವಿ ಮಿಲಿಟರಿ ದಂಡು ಪ್ರದೇಶದ ಅಭಿವೃದ್ಧಿ
ಬೆಳಗಾವಿಯ ಮಿಲಿಟರಿ ದಂಡು ಪ್ರದೇಶ ನಗರ ಪಾಲಿಕೆಯ ವ್ಯಾಪ್ತಿಗೆ ಬರಲಿದೆ. ಅದನ್ನು ನಗರದ ಉಪನಗರ ವನ್ನಾಗಿ, ಅಭಿವೃದ್ಧಿಪಡಿಸಬೇಕಿದೆ. ಇಲ್ಲಿ ಸುಮಾರು ಒಂದು ಸಾವಿರದ ನೂರು ಎಕರೆ ಪ್ರದೇಶದಲ್ಲಿ 200 ದೊಡ್ಡ ಬಂಗಲೆಗಳು ಇದ್ದು, ಇವುಗಳನ್ನು ಉಳಿಸಿಕೊಳ್ಳಬೇಕಿದೆ. ನೂರಾರು ಎಕರೆ ಪ್ರದೇಶದಲ್ಲಿ ಮಿಲಿಟರಿ ಫಾರ್ಮ್ ಇದೆ. ಅದನ್ನು ಕೃಷಿ ಕಾಲೇಜು ಆಗಿ ಪರಿರ್ವರ್ತನೆ ಮಾಡಿದರೆ ಅನುಕೂಲವಾಗಲಿದೆ ಎಂಬುದು ಇಲ್ಲಿನ ಜನರ ಅಭಿಪ್ರಾಯ.
ಜಿಲ್ಲೆಯ ಪ್ರವಾಸಿ ಹಾಗೂ ಐತಿಹಾಸಿಕ ತಾಣಗಳ ಅಭಿವೃದ್ಧಿ
ಭಾರತದ ನಯಾಗಾರ ಜಲಪಾತ ಎಂದು ಕರೆಯಲ್ಪಡುವ ಗೋಕಾಕ ಫಾಲ್ಸ್ ಬಳಿ ಇರುವ 201 ಮೀಟರ್ ಉದ್ದದ ತೂಗು ಸೇತುವೆ ಸುಮಾರು ವರ್ಷಗಳಿಂದ ದುಸ್ಥಿತಿಯಲ್ಲಿದೆ. ಇದನ್ನು ಸರಿಪಡಿಸುವಂತೆ ಪ್ರವಾಸಿಗರಿಂದ ಬೇಡಿಕೆ ಇದೆಯಾದರೂ ಈವರೆಗೆ ಸೂಕ್ತ ಕ್ರಮ ಆಗಿಲ್ಲ ಹಾಗೂ ನಾಗರಾಳಿ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಬೇಟೆಯಾಡುವುದನ್ನು ನಿಲ್ಲಿಸಿ ವನ್ಯಜೀವಿಗಳ ರಕ್ಷಣೆಗೆ ಕ್ರಮ ವಹಿಸಬೇಕು ಎಂಬ ಕೂಗು ಕೇಳಿಬಂದಿದೆ.
ಕಿತ್ತೂರು ರಾಣಿ ಚನ್ನಮ್ಮ ಕೋಟೆ ಸೇರಿದಂತೆ ಕಿತ್ತೂರು ನಾಡಿನ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಕಿತ್ತೂರು ಕ್ರಾಂತಿಯ ಇತಿಹಾಸವನ್ನು ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯವನ್ನು ಜಿಲ್ಲಾಧಿಕಾರಿಗಳು ಮಾಡಬೇಕಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಜನ ಭೇಟಿ ನಿಡುವ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ. ನೂತನ ಜಿಲ್ಲಾಧಿಕಾರಿಗಳು ಈ ಕಡೆ ಗಮನಹರಿಸಬೇಕಿದೆ.
ಬೆಳಗಾವಿಯಲ್ಲಿ 2 ವರ್ಷಗಳ ಹಿಂದೆ ಖಾಸಗಿ ಮಾರುಕಟ್ಟೆಯೊಂದು ನಿರ್ಮಾಣವಾಗಿದೆ. ಇದರಿಂದಾಗಿ ಸರ್ಕಾರವು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ್ದ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರವೇ ಇಲ್ಲದಂತಾಗಿರವುದರಿಂದ ಎಪಿಎಂಸಿ ವರ್ತಕರು ಸಂಕಷ್ಟಕ್ಕೀಡಾಗುವಂತಾಗಿದೆ.
ಬೆಳಗಾವಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ ಮೊಹಮ್ಮದ್ ರೋಶನ್ ಅವರು ಬೆಳಗಾವಿ ಜಿಲ್ಲೆಯ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವರೇ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ಸುನಿಲ್ ಹಂಪನ್ನವರ್,
ಬೆಳಗಾವಿ ಜಿಲ್ಲಾ ಕೋ-ಆರ್ಡಿನೆಟರ್

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು