ಹರಿಯಾಣದ ಫರಿದಾಬಾದ್ ಬಳಿಯ ಸಿಕ್ರಿ ಗ್ರಾಮದಲ್ಲಿ ಶನಿವಾರ ಮನೆಯ ಛಾವಣಿ ಕುಸಿದು ಮೂವರು ಸಹೋದರರು ಮೃತಪಟ್ಟಿದ್ದಾರೆ. ಮೃತರನ್ನು ಆಕಾಶ್ (10), ಮುಸ್ಕಾನ್ (8) ಹಾಗೂ ಆದಿಲ್ (6) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಸಾಮಾನ್ಯವಾಗಿ ‘ಛಜ್ಜಾ’ ಎಂದು ಕರೆಯಲ್ಪಡುವ ಛಾವಣಿ ಶಿಥಿಲಗೊಂಡಿತ್ತು. ಮಳೆ ಸುರಿದ ಪರಿಣಾಮ ಛಾವಣಿಯ ಕಾಂಕ್ರೀಟ್ ಚಪ್ಪಡಿ ಕುಸಿದಿದೆ. ಮನೆಯಲ್ಲಿದ್ದ ಮೂವರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ.
ಛಾವಣಿಯ ಅವಶೇಷಗಳನ್ನು ತೆಗೆದ ನಂತರ, ಸ್ಥಳೀಯ ನಿವಾಸಿಗಳು ಪ್ರಜ್ಞಾಹೀನ ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆ ವೇಳೆಗಾಗಲೇ ಮೂವರೂ ಸಾವನ್ನಪ್ಪಿದ್ದರು ಎಂದು ವೈದ್ಯರು ತಿಳಿಸಿದ್ದಾರೆ
ಮನೆ ಶಿಥಿಲಾವಸ್ಥೆಯಲ್ಲಿದೆ ಎಂಬುದು ತಿಳಿದಿದ್ದರೂ, ಮನೆಯನ್ನು ಬಾಡಿಗೆಗೆ ನೀಡಿದ್ದ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತ ಪರಾರಿಯಾಗಿದ್ದು, ಆತನ ಬಂಧನಕ್ಕೆ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ತಂದೆ ಧರ್ಮೇಂದ್ರ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ, ಶನಿವಾರ ಸೆಕ್ಟರ್ 58 ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 105 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಮಕ್ಕಳ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಸೆಕ್ಟರ್ 58 ಪೊಲೀಸ್ ಠಾಣೆಯ ಎಸ್ಎಚ್ಒ ಇನ್ಸ್ಪೆಕ್ಟರ್ ಕ್ರಿಶನ್ ಕುಮಾರ್ ತಿಳಿಸಿದ್ದಾರೆ.