ಗದಗ ಜಿಲ್ಲೆಯ ನೂತನ ಡಿಸಿಯಾಗಿ ಗೋವಿಂದ ರೆಡ್ಡಿ ಅವರು ನಿರ್ಗಮಿತ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವರಿಂದ ಅಧಿಕಾರ ಸ್ವೀಕರಿಸಿದ್ದು, ಜಿಲ್ಲೆಯ ಅನೇಕ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಹರಿಸಬೇಕಿದೆ.
ಕುಡಿಯುವ ನೀರಿನ ಸಮಸ್ಯೆ : ಸುಮಾರು ವರ್ಷಗಳಿಂದ ಗದಗ ಬೆಟಗೇರಿ ಅವಳಿ ನಗರಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಗರದ ಜನತೆ ಎದುರಿಸುತ್ತಾ ಬಂದಿದ್ದಾರೆ. ಈ ಸಮಸ್ಯೆ ಬಗೆಹರಿಸಲು 24×7 ಕುಡಿಯುವ ನೀರಿನ ಯೋಜನೆ ಜಾರಿ ಆಗಿದ್ದರೂ, ಸಮಸ್ಯೆ ತಪ್ಪಿಲ್ಲ. ಸರತಿಯಂತೆ ಇಪ್ಪತೈದು ದಿನಗಳಿಗೊಮ್ಮೆ ಪ್ರತಿ ವಾರ್ಡಗಳಿಗೆ ನೀರು ಬಿಡುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಸುಮಾರು ವರ್ಷಗಳ ಈ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಧಿಕಾರಿ ಮುಂದಾಗಬೇಕಿದೆ.
ಫುಡ್ ಪಾರ್ಕ್ ಸ್ಥಾಪಿಸಬೇಕಿದೆ : ರಾಜ್ಯದಲ್ಲಿ ಅತಿಹೆಚ್ಚು ಈರುಳ್ಳಿ ಬೆಳೆಯುವ ಗದಗ ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ಈರುಳ್ಳಿ ಶೈತ್ಯಾಗಾರ ನಿರ್ಮಾಣ ಆಗಬೇಕೆಂಬುದು ಆಗ್ರಹವಿದೆ. ಈರುಳ್ಳಿ ಅಷ್ಟೇ ಅಲ್ಲದೆ ಮೆಣಸಿನಕಾಯಿ, ಹೆಸರು, ಕಡಲೆ, ಗೋವಿನಜೋಳದಂತಹ ಬೆಳೆಗಳನ್ನು ರೈತರು ಹೆಚ್ಚಾಗಿ ಬೆಳೆಯುವುದರಿಂದ ಇವುಗಳ ಸಂಸ್ಕರಣೆ ಮಾಡಿ, ರಫ್ತು ಮಾಡಲು ಅನುಕೂಲವಾಗುವಂತೆ ಫುಡ್ ಪಾರ್ಕ್ ಸ್ಥಾಪಿಸಬೇಕಿದೆ.
ರಾಜ ಕಾಲುವೆಗಳ ಸ್ವಚ್ಛತೆ ಆಗಬೇಕಿದೆ : ಗದಗ-ಬೆಟಗೇರಿ ಅವಳಿ ನಗರಗಳಲ್ಲಿ ಮೂರು ರಾಜಕಾಲುವೆಗಳು ಹರಿಯುತ್ತಿವೆ. ಇವುಗಳಲ್ಲಿ ಸರಿಯಾದ ನಿರ್ವಹಣೆಯಿಲ್ಲದೆ ಮಳೆಗಾಲದಲ್ಲಿ ಪ್ರತಿ ವರ್ಷವೂ ರಾಜ ಕಾಲುವೆಗಳು ತುಂಬಿ ಪಕ್ಕದ ಕಾಲೋನಿಗಳ ಮನೆಗಳಿಗೆ ಗಟಾರ್ ನೀರು ಹೊಕ್ಕು ಜನರು ಹೆಚ್ಚು ತೊದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗುತ್ತದೆ. ಈಗ ಮಳೆಗಾಲ ಆರಂಭವಾಗಿದೆ. ಹಾಗಾಗಿ ಈ ರಾಜಕಾಲುವೆಗಳ ಸರಿಯಾದ ನಿರ್ವಹಣೆ ಮಾಡಬೇಕಿದೆ.
ಅಕ್ರಮ ಗಣಿಗಾರಿಕೆ ಕ್ರಮ ತೆಗೆದುಕೊಳ್ಳಬೇಕಿದೆ: ಗದಗ ಜಿಲ್ಲೆಯ ಗಜೇಂದ್ರಗಡ, ಶಿರಹಟ್ಟಿ, ಮುಂಡರಗಿ, ತಾಲೂಕುಗಳಲ್ಲಿ ಅಕ್ರಮವಾಗಿ ಮರಳು, ಮಣ್ಣು ಗಣಿಗಾರಿಕೆ ಹೆಚ್ಚಾಗಿದೆ. ಇದರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಮರಳು ಭೂಗಳ್ಳರ ಪಾಲಾಗುತ್ತಿದೆ. ಈ ಅಕ್ರಮ ಗಣಿಗಾರಿಕೆಗಳನ್ನು ತಡೆಯಬೇಕೆಂದು ಹಲವಾರು ಪ್ರತಿಭಟನೆಗಳು ನಡೆದಿವೆ. ಈ ಕುರಿತು ಜಿಲ್ಲಾಧಿಕಾರಿಯವರು ಕ್ರಮ ತೆಗೆದುಕೊಳ್ಳಬೇಕಿದೆ.
ರಸ್ತೆಗಳ ದುರಸ್ತಿಗೆ ಮುಂದಾಗಬೇಕಿದೆ: ಗದಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ರಸ್ತೆಗಳು ಹಾಳಾಗಿರುವುದನ್ನು ಕಾಣುತ್ತೇವೆ. ಇನ್ನೂ ಡಾಂಬರ್ ಕಾಣದ ರಸ್ತೆಗಳು, ಕಳಪೆ ರಸ್ತೆ ಕಾಮಗಾರಿ, ರಸ್ತೆಯುದ್ದಕ್ಕೂ ತುಂಬಿರುವ ಗುಂಡಿಗಳಿಂದ ವಾಹನ ಸವಾರರು, ಜನಸಾಮಾನ್ಯರೂ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಅಪಘಾತಗಳಿಂದ ಜೀವಗಳೇ ಹೋಗಿವೆ. ಅಕಾಲಿಕ ಮಳೆಯಿಂದ ಲಕ್ಷ್ಮೇಶ್ವರ ತಾಲೂಕಿನ ಹಳ್ಳಿಗಳಲ್ಲಿ ಸೇತುವೆಗಳು, ರಸ್ತೆಗಳು ಹಾಳಾಗಿವೆ. ಇವುಗಳ ದುರಸ್ತಿ ಕಾರ್ಯ ಮಾಡಬೇಕಿದೆ.
ಪ್ರವಾಸಿ ತಾಣಗಳ ಅಭಿವೃದ್ಧಿ: ಗದಗ ಜಿಲ್ಲೆಯದ್ಯಾಂತ ವಾಸ್ತುಶಿಲ್ಪಕ್ಕೆ ಪ್ರಸಿದ್ದಿ ಪಡೆದ ಐತಿಹಾಸಿಕ ದೇವಾಲಯಗಳು ಲಕ್ಕುಂಡಿ, ಹರ್ತಿ, ಡಂಬಳ, ಹುಲಕೋಟಿ ಸವಡಿ, ಸೂಡಿ, ಗಜೇಂದ್ರಗಡ ಸೇರಿದಂತೆ ಇತರೆ ಸ್ಥಳಗಳಲ್ಲಿ ಇವೆ. ಮಲೆನಾಡಿನ ಸೆರಗು ಎಂದೇ ಪ್ರಸಿದ್ದಿ ಪಡೆದ ಕಪ್ಪತಗುಡ್ಡ ಔಷಧಿ ಗುಣವುಳ್ಳ ಸಸ್ಯ ಸಂಪತ್ತನ್ನು ತನ್ನ ಒಡಲಲ್ಲಿ ಅಡಗಿಸಿಕೊಂಡು ಸಹ್ಯಾದ್ರಿಯಾಗಿದೆ. ಬಿಂಕದಕಟ್ಟಿಯಲ್ಲಿ ಪ್ರಾಣಿ ಸಂಗ್ರಹಾಲಯ, ಮಾಗಡಿ ಪಕ್ಷಿಧಾಮ ಪ್ರವಾಸಿ ತಾಣಗಳಿವೆ. ಇವುಗಳನ್ನು ಇನ್ನೂ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮವನ್ನಾಗಿ ಮಾಡಬೇಕಿದೆ.
ಈ ಸುದ್ದಿ ಓದಿದ್ದೀರಾ? ಕರ್ನಾಟಕದ 148 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ ಎಬಿಬಿ ಇಂಡಿಯಾ
ಗದಗ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಗೋವಿಂದರೆಡ್ಡಿ ಅವರು, ಗದಗ ಜೆಲ್ಲೆಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಾರಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.