ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ತನಿಖೆ ಎದುರಿಸಿ ಸತ್ಯವೆಂದು ಸಾಬೀತು ಮಾಡಲಿ ಎಂದು ಚಿತ್ರದುರ್ಗ ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
ಚಿತ್ರದುರ್ಗದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಒಂದೇ ಒಂದು ರೂಪಾಯಿಯ ಅಭಿವೃದ್ಧಿ ಕೆಲಸ ಮಾಡಿಲ್ಲ. ಭ್ರಷ್ಟಾಚಾರ, ಸ್ವಜನಪಕ್ಷಪಾತದಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಎಂ ಕಾರಜೋಳ ದೂರಿದರು.
“ನಾನು ಸಮಾಜವಾದಿ ಹಿನ್ನೆಲೆಯವನು, ಭ್ರಷ್ಟಾಚಾರ ಮಾಡುವುದಿಲ್ಲ, ಸಹಿಸುವುದಿಲ್ಲವೆಂದು ಸಿದ್ದರಾಮಯ್ಯ ಪದೇ ಪದೆ ಹೇಳುತ್ತಾರೆ. ಸಜ್ಜನ ರಾಜಕಾರಣಿ ಸಮಾಜಕ್ಕೆ ಮಾದರಿಯಾಗಬೇಕು. ತಮ್ಮ ಮೇಲೆ ಆಪಾದನೆ ಬಂದಾಗ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ತನಿಖೆಗೆ ಸಹಕಾರ ನೀಡಿದ ಮಾದರಿ ಉದಾಹರಣೆಗಳಿವೆ. ಆದರೆ ಸಿದ್ದರಾಮಯ್ಯ ಇನ್ನೂ ಆ ಕೆಲಸವನ್ನು ಮಾಡಿಲ್ಲ” ಎಂದು ಟೀಕಿಸಿದರು.
“ರಾಮಕೃಷ್ಣ ಹೆಗಡೆ ಟಿಲಿಫೋನ್ ಕದ್ದಾಲಿಕೆ ಆರೋಪ ಬಂದಾಗ ರಾಜೀನಾಮೆ ನೀಡಿ ತನಿಖೆ ಎದುರಿಸಿದ್ದರು. ಸಿದ್ದರಾಮಯ್ಯ ಸರ್ಕಾರ ವಾಲ್ಮೀಕಿ ಅಭಿವೃದ್ಧಿ ನಿಗಮದ ಹೆಸರಿನಲ್ಲಿ ಸರ್ಕಾರದ ಖಜಾನೆ ಲೂಟಿ ಹೊಡೆದಿದೆ. ಸರ್ಕಾರದ ಇಲಾಖೆಯ ಆಯುಕ್ತರ ಹೆಸರಿಗೆ ಹಣ ಬಿಡುಗಡೆ ಆಗಬೇಕು. ಆದರೆ, ಎಲ್ಲಿಯೋ ತೆಗೆದ ನಕಲಿ ಖಾತೆಗೆ ಹಣ ಜಮೆ ಆಗಿದ್ದು, ಇತಿಹಾಸದಲ್ಲಿ ಮೊದಲು” ಎಂದರು.
“ಮುಡಾ ಸ್ವಾಧೀನ ಮಾಡಿಕೊಂಡ ಜಮೀನನ್ನು ಡಿನೋಟಿಫಿಕೇಶನ್ ಮಾಡಿದ್ದೇ ಮೊದಲ ತಪ್ಪು. ಅದನ್ನು ಮತ್ತೊಬ್ಬರ ಹೆಸರಿನಲ್ಲಿ ಖರೀದಿಸಿದ್ದು, ಸ್ಪಷ್ಟವಾಗಿ ಭ್ರಷ್ಟಾಚಾರ ಕಾಣಿಸುತ್ತಿದೆ. ಸಿದ್ದರಾಮಯ್ಯ ಸಹಿತ ಇದರಲ್ಲಿ ಭಾಗಿಯಾದ ಸಂಪುಟದ ಎಲ್ಲರೂ ರಾಜೀನಾಮೆ ಕೊಡಬೇಕು. ನಾವು ಸಾಚಾ ಇದ್ದೇವೆಂದು ತನಿಖೆ ಮೂಲಕ ತಿಳಿಸಲಿ” ಎಂದು ಸವಾಲು ಹಾಕಿದರು.
“ಕೇಂದ್ರ ಸರ್ಕಾರ ಇಡಿ, ಸಿಬಿಐ, ಐಟಿ ದುರುಪಯೋಗ ಮಾಡಿಕೊಳ್ಳುತ್ತಿದೆಯೆಂದು ದಾಳಿಯಾದಾಗ ಪದೇ ಪದೆ ಹೇಳುತ್ತಾರೆ. ಅವೆಲ್ಲಾ ಸಾಂವಿಧಾನಿಕ ಸಂಸ್ಥೆಗಳು, ಅವು ಸಾಕ್ಷಗಳೊಂದಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ. ಅದು ದುರುಪಯೋಗ ಅಲ್ಲ, ಪ್ರಾಮಾಣಿಕವಾಗಿ ಕೆಲಸಮಾಡುತ್ತಿವೆ” ಎಂದು ತಿರುಗೇಟು ನೀಡಿದರು.
“ವಾಲ್ಮೀಕಿ ನಿಗಮದ ಹಗರಣದಲ್ಲಿ ಇಡಿ ಬಂದಿರುವುದು ಬ್ಯಾಂಕ್ಗಳ ಕಾರಣಕ್ಕೆ. ಇದೊಂದು ಅಂತಾರಾಜ್ಯ ಹಗರಣ. ಬ್ಯಾಂಕ್ ಕೇಂದ್ರದ ವ್ಯಾಪ್ತಿಗೆ ಬರುತ್ತವೆ. ಈ ಪ್ರಕರಣದಲ್ಲಿ ನೀವು ತಪ್ಪೇ ಮಾಡಿಲ್ಲ ಎನ್ನುವುದಾದರೆ ಭೈರತಿ ಸುರೇಶ್ ಓಡಿ ಹೋಗಿ ಅಧಿಕಾರಿಗಳನ್ನು ಅಮಾನತು ಮಾಡಿದ್ದ್ಯಾಕೆ. ಎಲ್ಲ ದಾಖಲೆಗಳನ್ನು ಬೆಂಗಳೂರಿಗೆ ತರಲಾಗಿದೆ. ತಿದ್ದುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅವರು ಮೌಲ್ಯಾಧಾರಿತ ರಾಜಕಾರಣಿ ಎನ್ನುವುದನ್ನು ಸಾಬೀತು ಮಾಡಲಿ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ನನ್ನ ಧನ್ಯವಾದ ಯಾತ್ರೆ, ರಾಜಕೀಯ ಯಾತ್ರೆಯಲ್ಲ: ಬಸವರಾಜ ಬೊಮ್ಮಾಯಿ
ಶಾಸಕ ಎಂ ಚಂದ್ರಪ್ಪ, ಮಾಜಿ ಶಾಸಕ ಜಿ ಎಚ್ ತಿಪ್ಪಾರೆಡ್ಡಿ, ಜಿಲ್ಲಾಧ್ಯಕ್ಷ ಎ ಮುರುಳಿ, ಮುಖಂಡರಾದ ಸುರೇಶ್ ಸಿದ್ದಾಪುರ, ಸಂಪತ್, ರಾಮರೆಡ್ಡಿ, ದಗ್ಗೆ ಶಿವಪ್ರಕಾಶ್, ಬೇದ್ರೆ ನಾಗರಾಜ್, ಚಾಲುಕ್ಯ ನವೀನ್, ವೆಂಕಟೇಶ್ ಯಾದವ್ ಇದ್ದರು.