ರಾಜಕೀಯವನ್ನು ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಅರ್ಥ ಮಾಡಿಕೊಳ್ಳೋಕೆ ಆರಂಭಿಸಿದೆ. ಗುಜರಾತ್ನಲ್ಲಿನ ರಾಜಕೀಯ ವ್ಯವಸ್ಥೆಯು ದೇಶದ ರಾಜಕೀಯದ ಬಗ್ಗೆ ಹಚ್ಚು ಅರ್ಥ ಮಾಡಿಸಿತು. 2014ರಿಂದ ರಾಜಕೀಯ ವ್ಯವಸ್ಥೆಯ ಮೇಲೆ ಕೋಪ ಶುರುವಾಯಿತು. ಅದರೆ, ಕೋಪದಿಂದ ಬಿಜೆಪಿ, ಆರ್ಎಸ್ಎಸ್ಅನ್ನು ಮಣಿಸಲು ಸಾಧ್ಯವಿಲ್ಲ ಎಂಬುದನ್ನು ಗ್ರಹಿಸಿದೆ ಎಂದು ಮಾಜಿ ಐಎಎಸ್ ಅಧಿಕಾರಿ, ತಮಿಳುನಾಡು ಹಾಲಿ ಸಂಸದ ಸಸಿಕಾಂತ್ ಸೆಂತಿಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಜಾಗೃತ ಕರ್ನಾಟಕ ಸಂಘಟನೆ ಆಯೋಜಿಸಿದ್ದ ‘ಜನಾದೇಶ 2024: ಸಂವಿಧಾನ ಕಲ್ಪಿಸಿದಭಾರತಕ್ಕಾಗಿ ಹೊಸ ರಾಜಕಾರಣ ಹೇಗೆ?’ ಎಂಬ ವಿಷಯ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ನನ್ನ ಹಾಗೆ ಬಂದವರಿಗೆ ಸಂಸತ್ತು ದೊಡ್ಡ ಜಾಗದಂತೆ ಕಾಣಿಸುತ್ತದೆ. ಆದರೆ, ಅಲ್ಲಿಗೆ ಹೋದ ಮೇಲೆ ಅಲ್ಲಿ ಇರುವವರು ನಮಗಿಂತ ಚಿಕ್ಕವರಂತೆ ಕಾಣಿಸುತ್ತಾರೆ. ರಾಜಕೀಯದಲ್ಲಿ ಪಕ್ಷಗಳು ಏನೆಂದು ಮೊದಲು ಅರ್ಥ ಮಾಡಕೊಬೇಕು. ಯಾವುದೇ ಪಕ್ಷವು ತನ್ನ ಸಿದ್ದಾಂತ ಮತ್ತು ಸಂಘಟನೆಯ ಮೇಲೆ ನೆಲೆಗೊಂಡಿರುತ್ತದೆ” ಎಂದು ಹೇಳಿದರು.
“ಕಾಂಗ್ರೆಸ್ ಮತ್ತು ಬಿಜೆಪಿ ಐಡಿಯಾಲಜಿ ಏನೆಂದು ತಿಳಿದುಕೊಳ್ಳಬಹುದು. ಕಾಂಗ್ರೆಸ್ನಲ್ಲಿ ಸಮಾನತೆ ಇದೆ. ಜನಪರ ಸಿದ್ದಾಂತ, ದೃಷ್ಟಿಕೋನ ಇದೆ. ಆದರೆ, ಬಿಜೆಪಿಯಲ್ಲಿ ಹಿಂದುತ್ವವಿದೆ. ಸಮಾನತೆ ಇಲ್ಲ. ಕಾಂಗ್ರೆಸ್ ಅಂದರೆ ಅದು ಒಂದು ಪಕ್ಷ ಅಲ್ಲ – ಚಳುವಳಿ. ಕಾಂಗ್ರೆಸ್ ಎಂಬ ಪದಕ್ಕೆ ಅರ್ಥವೇ ಒಳಗೊಳ್ಳುವಿಕೆ. ಚುನಾವಣೆ ಗೆಲ್ಲಲು ಬಿಜೆಪಿ ಮುಸ್ಲಿಮರನ್ನು ಮಾಡುತ್ತದೆ. ಆದರೆ, ಪ್ರಮುಖವಾಗಿ ಬಿಜೆಪಿಗೆ ಟಾರ್ಗೆಟ್ ಇರುವುದು ದಲಿತರು, ಸಂವಿಧಾನ” ಎಂದು ಹೇಳಿದ್ದಾರೆ.
“ಬಿಜೆಪಿಗೆ ಸಮಾನತೆ ಬೇಕಿಲ್ಲ. ಅದು ಸಂವಿಧಾನವನ್ನು ಬದಲಿಸಬೇಕೆಂದು ಬಯಸುತ್ತದೆ. ಬಿಜೆಪಿ ಸಿದ್ದಾಂತ ಹಿಂದುತ್ವ. ಹಿಂದುತ್ವದ ಮೇಲೆ ಜನರನ್ನು ಕ್ರೋಢಿಕರಿಸಿ, ವಿಷ ಬಿತ್ತುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸದ್ದರೆ, ಜನಪರವಾಗಿ ನಿಲ್ಲದಿದ್ದರೆ ಅದು ರಾಜಕಾರಣವಲ್ಲ” ಎಂದು ಸೆಂತಿಲ್ ತಿಳಿಸಿದ್ದಾರೆ.
“ಎಲ್ಲ ಸಮಾಜದಲ್ಲಿಯೂ ಕೂಡ ಏರುಪೇರು ಇರುತ್ತದೆ. ಆದರೆ, ಭಾರತದಲ್ಲಿ ಒಂದು ಭಯಾನಕ ವ್ಯವಸ್ಥೆ ಇದೆ. ಅದು ಜಾತಿ ವ್ಯವಸ್ಥೆ. ಇಲ್ಲಿ ನಮ್ಮ ಹೋರಾಟ ಜಾತಿ ವ್ಯವಸ್ಥೆ ವಿರುದ್ದ ಇರಬೇಕು. ಜಾತಿ ವ್ಯವಸ್ಥೆಯಲ್ಲಿ ದಲಿತರು ಹೆಚ್ಚಾಗಿ ದೌರ್ಜನ್ಯಕ್ಕೆ ತುತ್ತಾಗುತ್ತಾರೆ. ಅದೇ ರೀತಿ, ಮಹಿಳೆಯರನ್ನು ಶೋಷಣೆ ಮಾಡುವ ವ್ಯವಸ್ಥೆಯೂ ಇದೆ” ಎಂದಿದ್ದಾರೆ.
“ನಾನು ಶರ್ಟ್ ಹಾಕಿರುವುದು ಸಂವಿಧಾನ ಕಾರಣದಿಂದ. ಸಂವಿಧಾನ ಇಲ್ಲದಿದ್ದರೆ, ನಮಗೆ ಅಂಗಿ ಧರಿಸಲು ಬಿಡುತ್ತಿರಲಿಲ್ಲ.ಇದು ನಮಗೆ ಅರ್ಥ ಆದರೆ, ನಾವು ಮತ್ತೆ ಬಿಜೆಪಿಗೆ ಮತ ಹಾಕುವುದಿಲ್ಲ. ಕರ್ನಾಟಕದ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ” ಎಂದು ಕರೆಕೊಟ್ಟಿದ್ದಾರೆ.
“ಬಾಬಾ ಸಾಹೇಬರು ವಿರೋಧ ಮಾಡಿದ್ದು ಜಾತಿವ್ಯವಸ್ಥೆಯನ್ನು. ನಾವು ದೇಶ ಕಟ್ಟಬೇಕೆಂಬುದನ್ನು ಮರೆತಿದ್ದೇವೆ. ದೇಶ ಕಟ್ಟೊ ಕೆಲಸವನ್ನು ಪಕ್ಷ ಅಷ್ಟೇ ಅಲ್ಲದೇ ಪ್ರತಿಯೊಬ್ಬ ನಾಗರಿಕರು ಕೂಡ ಮಾಡಬೇಕು. ಈ ಪ್ರಕ್ರಿಯೆಯನ್ನು ಪಕ್ಷ ಮುನ್ನಡೆಸಬೇಕಾಗುತ್ತದೆ. ದೇಶ ಕಟ್ಟೋದು ಮುಖ್ಯ. ಅದನ್ನ ನಾವೆಲ್ಲರೂ ಸೇರಿ ಮಾಡಬೇಕಿದೆ” ಎಂದು ತಿಳಿಸಿದ್ದಾರೆ.
“ನಾವು ಸಂವಿಧಾನವನ್ನು ಸಂಭ್ರಮಿಸುವುದನ್ನೇ ಬಿಟ್ಟಿದ್ದೇವೆ. ನಾವು ಸಂವಿಧಾನವನ್ನು ಸಂಭ್ರಮಿಸಬೇಕು. ಪ್ರೀತಿ, ಸಮಾನತೆಯನ್ನು ಹರಡಬೇಕು. ಯುದ್ಧ ಎಂಬುದು ಭಾರತದ ತತ್ವವಲ್ಲ. ಈ ಯುದ್ದ ಎರಡು ಮೈಂಡ್ಸೆಟ್ಗಳ ನಡುವೆ ಇದೆ. ಒಂದು ಶ್ರೇಣೀಕರಣ, ಇನ್ನೊಂದು ಸಮಾನತೆ. ಕಾಂಗ್ರೆಸ್ ಅಂದರೆ ಸಮಾನತೆ, ಪ್ರೀತಿ, ಬಿಜೆಪಿ/ಆರ್ಎಸ್ಎಸ್ ಎಂದರ ಶೇಣೀ ವ್ಯವಸ್ಥೆ” ಎಂದು ವಿವರಿಸಿದ್ದಾರೆ.
“ಬಿಜೆಪಿ ಮತ್ತು ಆರ್ಎಸ್ಎಸ್ 70ರ ದಶಕದಲ್ಲಿ ಒಂದು ಫಾರ್ಮೂಲವನ್ನು ಕಂಡುಕೊಂಡವು. ಅದು, ಮುಸ್ಲಿಮರನ್ನು ವಿಲನ್ಗಳಾಗಿ ಬಿಂಬಿಸುವುದು. 20%ಕ್ಕಿಂತ ಕಡಿಮೆ ಇರುವ ಮುಸ್ಲಿಮರು 80% ಹಿಂದುಗಳನ್ನ ಹೆದರಿಸುತ್ತಾರೆ. ದಬ್ಬಾಳಿಕೆ ಮಾಡುತ್ತಾರೆ ಎಂಬ ವಾದವನ್ನು ಮುಂದಿಟ್ಟವು. ಹಿಂದುಗಳೆಲ್ಲರೂ ಒಂದಾಗಬೇಕೆಂದು ಜನರನ್ನು ಕ್ರೋಢೀಕರಿಸಲು ಮುಂದಾದವು. ಬಿಜೆಪಿ/ಆರ್ಎಸ್ಎಸ್ನ ಅಜೆಂಡಾವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಕೋಮುವಾದವನ್ನು ಮಣಿಸಬೇಕು” ಎಂದು ಕರೆ ಕೊಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ವಿಧಾನಸಭಾ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಶಾಸಕಿ ಸೌಮ್ಯಾ ರೆಡ್ಡಿ, ಜಾಗೃತ ಕರ್ನಾಟಕದ ದೊಡ್ಡಿಪಾಳ್ಯ ನರಸಿಂಹ ಮೂರ್ತಿ, ಬಸವರಾಜ್ ಬಿ.ಸಿ, ರಾಜಶೇಖರ್ ಅಕ್ಕಿ, ಡಾ. ವಾಸು ಎಚ್.ವಿ, ಸುನೀಲ್ ಸಿರಸಂಗಿ, ರಾಜಲಕ್ಷ್ಮಿ ಅಂಕಲಗಿ, ಕರ್ನಾಟಕ ಜನಶಕ್ತಿಯ ಗೌರಿ, ಹಿರಿಯ ಪತ್ರಕರ್ತ ಉಮಾಪತಿ, ಹುಲಿಕುಂಟೆ ಮೂರ್ತಿ, ಮುತ್ತುರಾಜ್, ಅನಿಲ್ ಸೇರಿದಂತೆ ಹಲವರು ಇದ್ದರು.