ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರದ್ದು ಆತ್ಮಹತ್ಯೆ ಅಲ್ಲ, ಅದು ಸರ್ಕಾರದ ಕೊಲೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದರು.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿ ಮಾತನಾಡಿದ ಅವರು, “ರಾಜ್ಯ ಸರ್ಕಾರದ ಹಗರಣಗಳು ದೇಶಾದ್ಯಂತ ಚರ್ಚೆ ಆಗುತ್ತಿವೆ. ನಾನು ಆಂಧ್ರಪ್ರದೇಶಕ್ಕೆ ಹೋದಾಗ, ಅಲ್ಲೂ ಕೂಡ ಚರ್ಚೆ ಆಗುತ್ತಿದೆ” ಎಂದರು.
ಸಿದ್ದರಾಮಯ್ಯ ಅವರು ತಾವು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದಕ್ಕೆ ಸಹಿಸಿಕೊಳ್ಳುತ್ತಿಲ್ಲ ಎಂದು ಹೇಳುತ್ತಿದ್ದಾರೆ. 62 ಕೋಟಿ ಕೊಡಬೇಕು ಅಂತನೂ ಹೇಳಿದ್ದಾರೆ. ಅದು ಪಿತ್ರಾರ್ಜಿತ ಆಸ್ತಿನಾ? ಎಲ್ಲ ದಾಖಲೆ ಇಟ್ಟುಕೊಂಡಿದ್ದೀನಿ. ಅವರ ಪತ್ನಿ ಖರೀದಿ ಮಾಡಿದ್ದು ಸರ್ಕಾರದ ಆಸ್ತಿ. ಮುಡಾದವರು ಪಾರ್ಕ್ ,ಸೈಟ್ ಹಂಚಿಕೆ ಮಾಡಿದ ಮೇಲೆ ಖರೀದಿ ಮಾಡಿದ್ದಾರೆ” ಎಂದು ದೂರಿದರು.
“ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಆರೋಪ ಸಂಬಂಧ ಮುಡಾ ನಿವೇಶನಗಳ ಹಂಚಿಕೆ ಕುರಿತ ನೀಲನಕ್ಷೆ ಬಿಡುಗಡೆ ಮಾಡಿ, ಯಾವಾಗ ವರ್ಗಾವಣೆ ಯಾವ ರೀತಿ ವ್ಯವಸ್ಥೆ ತಂದಿದ್ದೀರಾ? ನನಗೆ ಅನುಭವ ಆಗಿದೆ. ನಾನು ಇದ್ದ 14 ತಿಂಗಳು ನಾನು ಕೆಲಸ ಮಾಡೋಕೆ ಬಿಟ್ಟಿಲ್ಲ ಸಿದ್ದರಾಮಯ್ಯ” ಎಂದು ಕಿಡಿ ಕಾರಿದರು.
“ಮೈಸೂರಿನ ಮುಡಾದಿಂದ ಮುಖ್ಯಮಂತ್ರಿಗಳ ಧರ್ಮಪತ್ನಿ ಪರಿಹಾರ ಪಡೆದಿರುವ ಜಮೀನು ಮುಡಾಗೆ ಸೇರಿದ ಸ್ವತ್ತು. ಡಿನೋಟಿಫಿಕೇಷನ್ ಬಳಿಕ ನಾಲ್ಕು ವರ್ಷ ಏನೂ ಬೆಳವಣಿಗೆಯೇ ಆಗಿಲ್ಲ. ಸತ್ತವರ ಹೆಸರಿನಲ್ಲಿ ಜಮೀನು ಡಿ ನೋಟಿಫಿಕೇಷನ್ ಆಗಿದೆ” ಎಂದು ಗಂಭೀರ ಆರೋಪ ಮಾಡಿದರು.
“ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಭಾಮೈದ ಖರೀದಿ ಮಾಡಿರುವ ಮೈಸೂರಿನ ಕೆಸರೆ ಬಳಿಯ ಜಮೀನಿಗೆ ಮುಡಾ ಭೂಸ್ವಾಧೀನ ಮಾಡಿ ಪರಿಹಾರ ನೀಡಲಾಗಿದೆ. ಈಗಿರುವಾಗ ಇದು ಖಂಡಿತವಾಗಿಯೂ ಮುಡಾಗೆ ಸೇರಿದ ಜಮೀನು ಆಗುತ್ತದೆ. ಈ ಜಮೀನನ್ನು ಡಿ ನೋಟಿಫಿಕೇಷನ್ ಮಾಡಿ ಖರೀದಿಸಲಾಗಿದೆ. ಇದು ಕಾನೂನುಬಾಹಿರ” ಎಂದು ದೂರಿದರು.
ಜಿಲ್ಲಾಧಿಕಾರಿ ಏನು ಮಾಡುತ್ತಿದ್ದರು?
“ಸಿಎಂ ಸಿದ್ಧರಾಮಯ್ಯ ಅವರ ಧರ್ಮಪತ್ನಿಗೆ ದಾನ ಮಾಡಿದಾಗ ಕೃಷಿ ಭೂಮಿ ಎಂದು ತೋರಿಸುತ್ತಾರೆ. ಆದರೆ, ಆ ಜಾಗ ಭೂ ಪರಿವರ್ತನೆ ಆಗಿತ್ತು. ಜಮೀನಿನ ಹಿನ್ನಲೆಯನ್ನು ಯಾರೂ ಪರಿಶೀಲಿಸಲಿಲ್ಲ ಏಕೆ? ಭೂಮಿ ಬದಲಾವಣೆಯಾದಾಗ ಜಿಲ್ಲಾಧಿಕಾರಿಗಳು ಏನು ಮಾಡುತ್ತಿದ್ದರು” ಎಂದು ಪ್ರಶ್ನಿಸಿದರು.
“ಈ ಜಮೀನಿನ ಮೂಲದಾರರು ಲಿಂಗ ಆಲಿಯಾಸ್ ಜವರ ಎಂದಿದೆ. ಈ ಜಮೀನನ್ನು 1992ರಲ್ಲಿ ಮುಡಾ ತನ್ನ ವಶಕ್ಕೆ ಪಡೆಯುವ ನೋಟಿಫಿಕೇಷನ್ ಹೊರಡಿಸಿತ್ತು. 1995ರಲ್ಲಿ ಜಮೀನಿನ ಅಂತಿಮ ಭೂಸ್ವಾಧೀನದ ನೋಟಿಫಿಕೇಷನ್ ಆಗಿದೆ. ಆಗ 3 ಎಕರೆ 16 ಗುಂಟಗೆ 1992 ರಲ್ಲೇ ಈ ಜಮೀನಿಗೆ ಮುಡಾದಿಂದ ಕೋರ್ಟ್ಗೆ ಹಣ ಸಂದಾಯ ಆಗಿದೆ. ಜಮೀನಿನ ಪೋತಿಯೂ ಆಗಿದೆ. ಆದರೂ 1998ರಲ್ಲಿ ಲಿಂಗನ ಹೆಸರು ಬರುತ್ತದೆ. ಡಿ ನೋಟಿಫಿಕೇಷನ್ ಆಗುತ್ತದೆ. ಈ ಜಮೀನು ಡಿ ನೋಟಿಫಿಕೇಷನ್ ಆದಾಗ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಆಗಿದ್ದರು” ಎಂದು ಮಾಹಿತಿ ನೀಡಿದರು.
₹62 ಕೋಟಿ ಯಾರಪ್ಪನ ಆಸ್ತಿ?
“ಮುಡಾದಿಂದ ತಮಗೆ ₹62 ಕೋಟಿ ಪರಿಹಾರ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಯಾರಪ್ಪನ ಆಸ್ತಿ ಎಂದು ₹62 ಕೋಟಿ ಕೊಡಬೇಕು. ಇದು ಪಿತಾರ್ಜಿತ ಆಸ್ತಿನಾ? ಯಾರ ಬಳಿ ಖರೀದಿ ಮಾಡಿದ್ದಾರೆ ಎಲ್ಲವೂ ಗೊತ್ತಿದೆ, ನನ್ನ ಬಳಿ ಎಲ್ಲ ದಾಖಲೆ ಇದೆ ಎಂದು ದಾಖಲೆಗಳನ್ನು ಪ್ರದರ್ಶಿಸಿದ ಕುಮಾರಸ್ವಾಮಿ ಅವರು, ಇದು ಹಿಟ್ ಅಂಡ್ ರನ್ ಅಲ್ಲ. ದಾಖಲೆ ಸಮೇತ ಮಾಹಿತಿ ಕೊಡುತ್ತಿದ್ದೇನೆ” ಎಂದು ತಿರುಗೇಟು ನೀಡಿದರು.
“ನ್ಯಾ.ನಾಗಮೋಹನ್ ದಾಸ್ ಅವರಿಂದ 40% ತನಿಖೆ ಮಾಡಿಸುತ್ತಿದ್ದೀರಿ. ದಾಖಲೆ ಇಲ್ಲದೆ ಡಂಗೂರ ಹೊಡೆದಿರಿ ಅಲ್ಲವೇ? ಸಾಕ್ಷಿ ಇಲ್ಲದೆ ಈಗ ಹುಡುಕುತ್ತಾ ಇದ್ದೀರಾ? ಕೆಂಪಣ್ಣ ಆಯೋಗದ ವರದಿಯನ್ನು ಏನು ಮಾಡಿದೀರಿ? ನಿಮಗೆ ನನ್ನನ್ನು ಪ್ರಶ್ನೆ ಮಾಡಲು ಆಗಲ್ಲ. ನನ್ನನ್ನು ಕ್ಲರ್ಕ್ ಆಗಿ ಇಟ್ಟುಕೊಂಡಿದ್ದಿರಿ. ಅದಕ್ಕೆ ಕೇಳೋಕೆ ಆಗಲ್ಲ” ಎಂದರು.
ಟಿ.ಬಿ. ಜಯಚಂದ್ರ ಅವರಿಗೆ ಕೊಲೆ ಬೆದರಿಕೆ!
“ಹಾಲಿ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರು ನೈಸ್ ಹಗರಣ ವರದಿ ಕೊಟ್ಟರು. ಅದನ್ನು ಏನು ಮಾಡಿದೀರಿ? ವರದಿ ಕೊಟ್ಟ ಜಯಚಂದ್ರ ಅವರಿಗೆ ಕೊಲೆ ಬೆದರಿಕೆ ಹಾಕಿದರು ನಿಮ್ಮ ಪಕ್ಷದವರು. ವಾಲ್ಮೀಕಿ ನಿಗಮದ ಹಣ 10 -20 ಬ್ಯಾಂಕ್ ಖಾತೆಗಳಿಗೆ ಐದು, ಮೂರು ಕೋಟಿ ಹಣ ಹೋಗಿದೆ. ಅವೆಲ್ಲಾ ಬೇನಾಮಿ ಅಕೌಂಟ್ಗಳು. ಲೋಕಸಭಾ ಚುನಾವಣೆ ನೀತಿ ಜಾರಿಯಾದ ಸಂದರ್ಭದಲ್ಲಿ ಹೋಗಿದೆ” ಎಂದರು.
ನಿಖಿಲ್ ಮೇಲೆ ಕೇಸ್ ಹಾಕಲು ಡಿಜಿಪಿ ಚರ್ಚೆ; ಪೇದೆ ಮಟ್ಟಕ್ಕೆ ಇಳಿದ ಡಿಜಿಪಿ!
“ಮೊನ್ನೆ ರಾಮನಗರದಲ್ಲಿ ನಡೆದ ಪ್ರತಿಭಟನೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕೇಸ್ ದಾಖಲಿಸುವ ಬಗ್ಗೆ ಡಿಜಿಪಿ ಕಚೇರಿಯಲ್ಲಿ ರಾತ್ರಿ 11 ಗಂಟೆವರೆಗೂ ಚರ್ಚೆ ಮಾಡಿದ್ದಾರೆ. ಹೆಚ್.ಡಿ. ದೇವೆಗೌಡರ ಕುಟುಂಬದಲ್ಲಿ ಎಲ್ಲರನ್ನು ಮುಗಿಸಿದ್ದಿವಿ. ನಿಖಿಲ್ ಒಬ್ಬ ಉಳಿದಿದ್ದಾನೆ. ಅವನನ್ನೂ ಎ1 ಆರೋಪಿ ಮಾಡುಲು ಹೊರಟ್ಟಿದಿರಾ?” ಎಂದು ಆಕ್ರೋಶ ವ್ಯಕ್ತಪಡಿಸಿದರು.