ದೆಹಲಿ ಚಲೋ ಅಂಗವಾಗಿ ಪಂಜಾಬ್ನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಹೊರಟಿದ್ದ ರೈತರನ್ನು ಪಂಜಾಬ್-ಹರಿಯಾಣ ಗಡಿಯಲ್ಲಿ ತಡೆದಿದ್ದ ಕಾರಣಕ್ಕಾಗಿ ಹರಿಯಾಣ ಸರ್ಕಾರವು ಮೂವರು ಐಪಿಎಸ್ ಅಧಿಕಾರಿಗಳು ಮತ್ತು ಮೂವರು ಎಚ್ಪಿಎಸ್ (ಹರಿಯಾಣ ಪೊಲೀಸ್ ಸೇವೆ) ಅಧಿಕಾರಿಗಳಿಗೆ ಶೌರ್ಯ ಪೊಲೀಸ್ ಪದಕ ನೀಡುವಂತೆ ಶಿಫಾರಸು ಮಾಡಿದೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ಕನಿಷ್ಟ ಬೆಂಬಲ ಬೆಲೆಗೆ (ಎಂಎಸ್ಪಿ) ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಫೆಬ್ರವರಿಯಲ್ಲಿ ದೆಹಲಿ ಚಲೋಗೆ ಕರೆ ಕೊಟ್ಟಿದ್ದವರು. ದೆಹಲಿ ಚಲೋ ಅಂಗವಾಗಿ ರೈತರು ದೆಹಲಿಗೆ ಮೆರವಣಿಗೆ ಹೊರಟಿದ್ದರು. ಅವರನ್ನು ಅಂಬಾಲಾದ ಶಂಭು ಮತ್ತು ಜಿಂದ್ನ ಖಾನೌರಿ ಗಡಿಗಳಲ್ಲಿ ಹರಿಯಾಣ ಸರ್ಕಾರ ತಡೆದಿತ್ತು.
ಇದನ್ನು ಓದಿದ್ದೀರಾ? ‘ದೆಹಲಿ ಚಲೋ’ ಪ್ರತಿಭಟನೆಗೆ 100 ದಿನ: ಶಂಭು, ಖಾನೌರಿಯಲ್ಲಿ ಜಮಾಯಿಸಿದ ರೈತರು
ಗಡಿಗಳಲ್ಲಿನ ಹೆದ್ದಾರಿಗಳಲ್ಲಿ ಪೊಲೀಸರು ಬೃಹತ್ ಬ್ಯಾರಿಕೇಟ್ಗಳು ಹಾಗೂ ಕಾಂಕ್ರೀಟ್ ತಡೆಗೋಡೆಗಳನ್ನು ಹಾಕಿದ್ದರು. ರೈತರನ್ನು ಹರಿಯಾಣ ಪ್ರವೇಶಿಸದಂತೆ ತಡೆದಿದ್ದರು. ಪರಿಣಾಮ, ಫೆಬ್ರವರಿ 13ರಿಂದ ರೈತರು ಪಂಜಾಬ್ ಭಾಗದ ಎರಡು ಗಡಿ ಕೇಂದ್ರಗಳಲ್ಲಿ ಮೊಕ್ಕಾಂ ಹೂಡಿದ್ದಾರೆ.
ಜುಲೈ 10ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶಂಭು ಗಡಿಯಲ್ಲಿನ ಬ್ಯಾರಿಕೇಡ್ಗಳನ್ನು ಒಂದು ವಾರದೊಳಗೆ ತೆಗೆದುಹಾಕುವಂತೆ ಹರಿಯಾಣ ಸರ್ಕಾರಕ್ಕೆ ನಿರ್ದೇಶನ ನೀಡಿತು. ಈ ಆದೇಶವನ್ನು ಹರಿಯಾಣ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದು, ಜುಲೈ 22ರಂದು ಅರ್ಜಿಯ ವಿಚಾರಣೆ ನಡೆಯಲಿದೆ.
ಈ ನಡುವೆ, ಜುಲೈ 2 ರಂದು ಹರಿಯಾಣ ಸರ್ಕಾರವು ಕೇಂದ್ರಕ್ಕೆ ಶಿಫಾರಸುಗಳನ್ನು ಕಳಿಸಿದ್ದು, ಐಪಿಎಸ್ ಅಧಿಕಾರಿಗಳಾದ ಸಿಬಾಶ್ ಕಬಿರಾಜ್ (ಐಜಿಪಿ, ಕರ್ನಾಲ್), ಜಶನ್ದೀಪ್ ಸಿಂಗ್ ರಾಂಧವಾ (ಕುರುಕ್ಷೇತ್ರ ಎಸ್ಪಿ) ಸುಮಿತ್ ಕುಮಾರ್ (ಎಸ್ಪಿ ಚಂದ್) ಅವರಿಗೆ ಶೌರ್ಯ ಪದಕ ನೀಡುವಂತೆ ಶಿಫಾರಸು ಮಾಡಿದೆ.
ಮೂವರು ಎಚ್ಪಿಎಸ್ ಅಧಿಕಾರಿಗಳಲ್ಲಿ ನರೇಂದ್ರ ಸಿಂಗ್, ರಾಮ್ ಕುಮಾರ್ ಮತ್ತು ಅಮಿತ್ ಭಾಟಿಯಾ (ಎಲ್ಲಾ ಡಿಎಸ್ಪಿಗಳು) ಸೇರಿದ್ದಾರೆ. ಅವರ ಅಸಾಧಾರಣ ಶೌರ್ಯ ಮತ್ತು ನಾಯಕತ್ವಕ್ಕಾಗಿ ಡಿಜಿಪಿ ಶತ್ರುಜೀತ್ ಕಪೂರ್ ಅವರ ಶಿಫಾರಸು ಮಾಡಲಾಗಿದೆ.