ನಮ್ಮ ಸರ್ಕಾರಗಳು- ಯಡಿಯೂರಪ್ಪ/ಬೊಮ್ಮಾಯಿ/ಸಿದ್ಧರಾಮಯ್ಯ.. ಎಲ್ಲರೂ ಕೈಗಾರಿಕಾ ನೀತಿ ರೂಪಿಸಿ, ಬರುವವರಿಗೆ ಸಬ್ಸಿಡಿ ದಕ್ಷಿಣೆ ಸಹಿತ ಕೆಂಪು ಹಾಸಿನ ಸ್ವಾಗತ ನೀಡಿದ ಮೇಲೆ, ನಮ್ಮ ಜನರಿಗೆ ಅಲ್ಲಿ ಕೆಲಸ ಕೊಡಿ ಎಂದರೆ, ಅದೇ ಸದ್ರಿ ಮೋಹನದಾಸ ಪೈಯವರು, ‘ಇದು ಸಂವಿಧಾನ ಬಾಹಿರ’ ಎಂದು ಹರಿಹಾಯುತ್ತಾರೆ!
ಈ ತಾಳಮದ್ದಳೆಯ ದೊಡ್ಡದೊಡ್ಡ ಅರ್ಥಧಾರಿಗಳು, ಆ ದಿನ ಅವರದು ಯಾವ ಪಾತ್ರವೋ ಅದನ್ನು ಇನ್ನಿಲ್ಲದಂತೆ ವಿಜೃಂಭಿಸಿಬಿಡುತ್ತಾರೆ. ಕರಾವಳಿಯವರಿಗೆ ಇದು ಚೆನ್ನಾಗಿ ಗೊತ್ತು. ಉದಾಹರಣೆಗೆ, ಶೇಣಿಯವರು ರಾಮನಾಗಿ ಬಂದರೆ ರಾಮಾಯಣದಲ್ಲಿ ರಾವಣನದೇ ತಪ್ಪು; ರಾವಣನಾಗಿ ಬಂದರೆ ರಾಮಾಯಣದಲ್ಲಿ ರಾಮನದೇ ತಪ್ಪು… ಅಷ್ಟು ಪ್ರಖರ ವಾದಸರಣಿ.
ನಮ್ಮ ಕರ್ನಾಟಕದಲ್ಲಿ ಕೆಲವರು ಆಧುನಿಕ ‘ಸರ್ವರೋಗ ಪರಿಹಾರ ಪರಿಣತರು’ ಇದ್ದಾರೆ. ಉದಾರೀಕರಣದ ಬಳಿಕ, ಯಶಸ್ವೀ ವ್ಯವಹಾರಸ್ಥರಾಗಿರುವ ಅವರ ಅಭಿಪ್ರಾಯವನ್ನು ಎಲ್ಲದಕ್ಕೂ ಕೇಳುವುದು ಮತ್ತು ಅವರು ಅದಕ್ಕೆ ‘ಹಾಜಿರ್ ಜವಾಬ್’ ಆಗಿರುವುದು ಈಗ ಪರಿಪಾಠವಾಗಿಬಿಟ್ಟಿದೆ. ಅವರಿಲ್ಲದೇ ಕರ್ನಾಟಕ ಕದಲುವುದಿಲ್ಲ ಎಂದು ಅವರು ಖಚಿತವಾಗಿ ತಿಳಿದುಕೊಂಡುಬಿಟ್ಟಿದ್ದಾರೆ.
ನಿನ್ನೆ ಇಂತಹದೇ ಒಂದು ಹಾಜಿರ್ ಜವಾಬಿ ಸಂದರ್ಶನದಲ್ಲಿ ಟಿ.ವಿ. ಮೋಹನದಾಸ ಪೈಯವರು, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಎಂಬ ಉದ್ದೇಶಿತ ಸರ್ಕಾರಿ ವಿಧೇಯಕವನ್ನು ಬಹಳ ಕಟು ಶಬ್ದಗಳಲ್ಲಿ ಟೀಕಿಸಿದರು. ಅವರ ವಾದ ಸರಣಿಗೆ ಎಲ್ಲ ಡಿಯರ್ ಮೀಡಿಯಾಗಳೂ ತಲೆದೂಗಿದವು.
ಎರಡು ವರ್ಷ ಹಿಂದೆ, ಇದೇ ಸದ್ರಿಯವರು ಕರ್ನಾಟಕದ GDPಯನ್ನು ಒಂದು ಟ್ರಿಲಿಯನ್ ಡಾಲರ್ಗೆ ಏರಿಸಲು ದೃಷ್ಟಿಕೋನ ಪತ್ರವೊಂದನ್ನು ‘pai 3 one 4 Capital’ ಎಂಬ ಸಲಹಾ ಸಂಸ್ಥೆಯ ಮೂಲಕ ಸಿದ್ಧಪಡಿಸಿದ್ದು, ಅದಕ್ಕೆ ಕರ್ನಾಟಕದ ಅಂದಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಮುನ್ನುಡಿ ಬರೆದಿದ್ದಾರೆ.
ಇದನ್ನು ಓದಿದ್ದೀರಾ?: ಮೂರು ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಡಿಎಂಕೆ
ಈ ದೃಷ್ಟಿಕೋನ ಪತ್ರದ ಎರಡು ಪುಟದ ಸಾರಾಂಶಗಳಲ್ಲಿ ಒಂದು ಪುಟವನ್ನು ಇಲ್ಲಿ ಕೊಟ್ಟಿದ್ದೇನೆ. ಅದರಲ್ಲಿ, ಮುಖ್ಯ ಲೇಖಕರಾಗಿರುವ ಸದ್ರಿ ಪೈ ಅವರು, ಕರ್ನಾಟಕದಲ್ಲಿ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಜನ ತೊಡಗಿಕೊಂಡಿದ್ದರೂ, ಅದರಿಂದ ರಾಜ್ಯದ ಆರ್ಥಿಕತೆಗೆ ಒದಗುವ ಮೌಲ್ಯ (GVA) ತೀರಾ ಕಡಿಮೆ ಇದೆ. ಅದನ್ನು ಸಂತುಲನಗೊಳಿಸಲು ಅವರಿಗೆ ಕೃಷಿ ಭೂಮಿಯಿಂದ ಹೊರಗೆ, ದೊಡ್ಡ ಪ್ರಮಾಣದಲ್ಲಿ ಗುಣಮಟ್ಟದ ಉದ್ಯೋಗಾವಕಾಶ ಸೃಷ್ಟಿಸಲು ಕೈಗಾರಿಕೆಗಳು ಹಾಗೂ ನಿರ್ಮಾಣ ರಂಗದಲ್ಲಿ ಉದ್ಯೋಗ ಸೃಷ್ಟಿ ದೊಡ್ಡ ಪ್ರಮಾಣದಲ್ಲಿ ಆಗಬೇಕೆಂದು ಸಲಹೆ ನೀಡುತ್ತಾರೆ. (ಗುಟ್ಟೇನೆಂದರೆ ಕೇಂದ್ರದಲ್ಲಿರುವ ಅವರ ಒಲವಿನ ಸರ್ಕಾರದ ನಿಲುವು ಇದು. ರೈತರ ಆದಾಯ ದುಪ್ಪಟ್ಟಿನಿಂದ ಹಿಡಿದು, ಆಗಿರುವ ಎಲ್ಲ ಆರ್ಥಿಕ ಅಸಮತೋಲನಗಳ ಮೂಲವೇ ಈ ರೀತಿಯ ತಪ್ಪು ಹಾದಿಯ ತೀರ್ಮಾನಗಳು)
ಇವರ ಮಾತು ಕೇಳಿಕೊಂಡು, ನಮ್ಮ ಸರ್ಕಾರಗಳು (ಯಡಿಯೂರಪ್ಪ/ಬೊಮ್ಮಾಯಿ/ಸಿದ್ಧರಾಮಯ್ಯ.. ಎಲ್ಲರೂ) ಕೈಗಾರಿಕಾ ನೀತಿ ರೂಪಿಸಿ, ಬರುವವರಿಗೆ ಸಬ್ಸಿಡಿ ದಕ್ಷಿಣೆ ಸಹಿತ ಕೆಂಪು ಹಾಸಿನ ಸ್ವಾಗತ ನೀಡಿದ ಮೇಲೆ, ನಮ್ಮ ಜನರಿಗೆ ಅಲ್ಲಿ ಕೆಲಸ ಕೊಡಿ ಎಂದರೆ, ಅದೇ ಸದ್ರಿ ಪೈಯವರು, ‘ಇದು ಸಂವಿಧಾನ ಬಾಹಿರ’ ಎಂದು ಹರಿಹಾಯುತ್ತಾರೆ!
ರಾಮನಾಗಿ ರಾಮನ ಡೈಲಾಗಿಗೂ ಸೈ; ರಾವಣನಾಗಿ ರಾವಣಾನ ಡೈಲಾಗಿಗೂ ಸೈ!!
ಈ ಬುದ್ಧಿವಂತ ಉದ್ಯಮಿಗಳ ಉದ್ದೇಶ ನಿಜಕ್ಕೂ ಏನು ಎಂಬುದನ್ನು ಸಾರ್ವಜನಿಕವಾಗಿ ತಿಳಿಯುವುದಕ್ಕಿದು ಸಕಾಲ. ಈಗೀಗ ಇವರೆಲ್ಲ ‘ಈಸ್ಟ್ ಇಂಡಿಯಾ ಕಂಪನಿ 2.0ದ ಏಜಂಟ’ರಂತೆಯೇ ಕಾಣಿಸತೊಡಗಿದ್ದಾರೆ!

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು. ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದರು. 2000ರಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿಗೆ ಸುದ್ದಿ ಸಂಪಾದಕರಾಗಿ, ಆರೋಗ್ಯ ಪುರವಣಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್(ರಿ.) ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲೇ 2015ರಲ್ಲಿ ಪ್ರೊಡಿಜಿ ಮುದ್ರಣ -ಸಂಸ್ಥೆ ಆರಂಭಿಸಿದರು. ಪ್ರಕಟಿತ ಕೃತಿಗಳು: 'ನುಣ್ಣನ್ನ ಬೆಟ್ಟ' (2017), 'ತಲ್ಲೂರು ಎಲ್ ಎನ್'(2018), 'ಏನಿದು ಪೌರತ್ವ ಕಾಯಿದೆ? (2019), 'ದುಪ್ಪಟ್ಟು'(2020), ಕರಿಡಬ್ಬಿ(2022). ಪುರಸ್ಕಾರಗಳು: ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020).