ಭದ್ರಾ ಡ್ಯಾಂನಿಂದ ಕೂಡಲೇ ನೀರು ಹರಿಸಿ, ರೈತರ ಹಿತಾಸಕ್ತಿ ಕಾಪಾಡಿ ಎಂದು ದಾವಣಗೆರೆ ಜಿಲ್ಲಾ ರೈತ ಮುಖಂಡ ಕೊಳೇನಹಳ್ಳಿ ಸತೀಶ್ ಆಗ್ರಹಿಸಿದ್ದಾರೆ.
ದಾವಣಗೆರೆಯಲ್ಲಿ ಪತ್ರಿಕೆ ಹೇಳಿಕೆ ನೀಡಿರುವ ಅವರು, “ಆಗಸ್ಟ್ 5 ಅಥವಾ 6ರಂದು ಭದ್ರಾ ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆ ಕರೆದು, ತದನಂತರ ನಾಲೆಗೆ ನೀರು ಹರಿಸಲು ತೀರ್ಮಾನಿಸಬೇಕೆಂದು ಕರ್ನಾಟಕ ನೀರಾವರಿ ನಿಗಮದ ಸಭೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ಶಾಸಕರು, ಸಚಿವರು ಚರ್ಚಿಸಿರುವುದು ಅವೈಜ್ಞಾನಿಕ, ದುರ್ದೈವದ ಸಂಗತಿ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಜಿಲ್ಲೆಯ ಜನರ, ರೈತರಿಗೆ ಜೀವಜಲಕ್ಕೆ ಆಧಾರವಾದ ಭದ್ರಾ ಡ್ಯಾಂ ನೀರಿನ ಮಟ್ಟ ದಿನೇ ದಿನೆ ಹೆಚ್ಚಾಗುತ್ತಿದೆ. ನೀರಿನ ಮಟ್ಟ ಗುರುವಾರ ಬೆಳಿಗ್ಗೆ 6 ಗಂಟೆಗೆ 171 ಅಡಿ 6 ಇಂಚು ಇದ್ದು, 26,044 ಕ್ಯೂಸೆಕ್ ಒಳಹರಿವು ಇದೆ. ನಿನ್ನೆ ಅಂದರೆ ಬುಧವಾರ ಒಳಹರಿವು 15,383 ಕ್ಯೂಸೆಕ್ ಇದ್ದದ್ದು ಇಂದು ಏರಿಕೆಯಾಗಿದೆ. ಡ್ಯಾಂ ತುಂಬುವುದು ಖಚಿತವಾಗಿದೆ. ರೈತರಲ್ಲಿ ಸಂತಸ ಮನೆ ಮಾಡಿದೆ. ಮೊನ್ನೆ ನಡೆದ ರೈತರ ಸಭೆಯಲ್ಲಿ ಜಿಲ್ಲಾಧಿಕಾರಿಯವರು ಇನ್ನೊಂದೆರಡು ದಿನಗಳಲ್ಲಿ ನಾಲೆಗೆ ನೀರು ಹರಿಸಲಾಗುವುದೆಂದು ಹೇಳಿದ್ದರು. ಅದರಂತೆ ಇಂದಿನಿಂದ ನೀರು ಹರಿಸಿದರೆ, ಕಳೆದ ಹಂಗಾಮಿನಲ್ಲಿ ಭೀಕರ ಬಿಸಿಲಿನ ತಾಪಮಾನದಿಂದ ಒಣಗಿರುವ ಕೆರೆ ಕಟ್ಟೆಗಳನ್ನು ತುಂಬಿಸಿಕೊಳ್ಳಬಹುದು ಮತ್ತು ರೈತರು ಭತ್ತ ಬೀಜ ಚೆಲ್ಲಿಕೆಗೆ ಅನುಕೂಲವಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಹೆಚ್ ಡಿ ಕೋಟೆ; ಮೂಲಭೂತ ಸೌಕರ್ಯ ಒದಗಿಸಲು ಆಗ್ರಹಿಸಿ ಗ್ರಾ. ಪಂ. ಮುಂದೆ ಆದಿವಾಸಿ ಜನರಿಂದ ಧರಣಿ
“ಭದ್ರಾ ಡ್ಯಾಂ ಸಂಪೂರ್ಣ ತುಂಬುವ ಎಲ್ಲ ಲಕ್ಷಣಗಳಿದ್ದು, ಸಾಮಾನ್ಯವಾಗಿ ಡ್ಯಾಂ ಗರಿಷ್ಟ ನೀರಿನ ಮಟ್ಟ 186 ಅಡಿ ಇದ್ದು, ಪೂರ್ಣ ತುಂಬಲು ಬಿಡುವುದಿಲ್ಲ. ಮುಂಜಾಗರೂಕತೆ ಕ್ರಮವಾಗಿ ನೀರಿನ ಮಟ್ಟ 182-183 ಅಡಿ ತಲುಪಿದ ಕೂಡಲೇ ಹೊಳೆಗೆ ಹರಿಸಲಾಗುತ್ತದೆ. ಇದರಿಂದ ನೀರು ವ್ಯರ್ಥವಾಗಿ ಹರಿದು ಹೋಗುತ್ತದೆ. ಆದ್ದರಿಂದ ನಾಲೆಗೆ ನೀರು ಹರಿಸಬೇಕು. ಇದರಿಂದ ರೈತರು ಕೃಷಿ ಚಟುವಟಿಕೆಗಳಿಗೆ ಸನ್ನದ್ಧರಾಗಲು, ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಅನುಕೂಲವಾಗಲಿದೆ” ಎಂದು ರೈತ ಮುಖಂಡ ಬಿ ಎಂ ಸತೀಶ್ ಆಗ್ರಹಿಸಿದ್ದಾರೆ.