ಸರ್ಕಾರಿ ನಿಯಮ ಮೀರಿ ಡೊನೇಷನ್ ವಸೂಲಿ ಮಾಡಿ ವಿದ್ಯಾರ್ಥಿನಿ ಭವಿಷ್ಯ ಹಾಳು ಮಾಡುತ್ತಿರುವ ಹಾವೇರಿಯ ಹೆಚ್.ಎಸ್.ಬಿ ಪಿಯು ಕಾಲೇಜಿನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಎಸ್ಎಫ್ಐ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.
ಸರ್ಕಾರಿ ನಿಯಮ ಮೀರಿ ಡೊನೇಷನ್ ವಸೂಲಿ ಮಾಡಿ ವಿದ್ಯಾರ್ಥಿನಿ ಭವಿಷ್ಯ ಹಾಳು ಮಾಡುತ್ತಿರುವ ಬನಶಂಕರಿ ವಿದ್ಯಾ ಸಂಸ್ಥೆಯ ಹೆಚ್.ಎಸ್.ಬಿ ಪಿಯು ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್ ಹಾಗೂ ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಉಮೇಶಪ್ಪ ಹೆಚ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರಾಣೆಬೆನ್ನೂರಿನಲ್ಲಿ ಹೊಸದಾಗಿ ಪ್ರಾರಂಭವಾಗಿರುವ ಡಿವಿಎಸ್ ಮೆಡಿಕಲ್ ಸಂಸ್ಥೆ ದಾವಣಗೆರೆ ಮೂಲದ್ದು. ಈ ಸಂಸ್ಥೆಯು ರಾಣೆಬೆನ್ನೂರಿನಲ್ಲಿ ಎಚ್.ಎಸ್.ಬಿ ಪಿಯು ಕಾಲೇಜ್ ಹೆಸರಿನಲ್ಲಿ ವಿಜ್ಞಾನ ವಿಭಾಗ ನಡೆಸುತ್ತಿದ್ದು, 18 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಂಡಿದೆ. ಕಾಕೋಳ ಗ್ರಾಮದ ವಿದ್ಯಾರ್ಥಿನಿ ಸಹನಾ ಮಹಾಂತೇಶ ಅಡಿವೇರ್ ಕಲಾ ವಿಭಾಗಕ್ಕೆ ಸೇರಬೇಕೆಂದಿರುವ ವಿದ್ಯಾರ್ಥಿನಿಯು ವಿಚಾರಿಸಲು ಹೋದಾಗ ಸರಿಯಾಗಿ ಮಾಹಿತಿ ನೀಡದೆ ಆಸೆ ಆಕಾಂಕ್ಷೆಗಳನ್ನು ತೋರಿಸಿ ವಿಜ್ಞಾನ ವಿಭಾಗಕ್ಕೆ 10 ಸಾವಿರ ಕಟ್ಟಿಸಿಕೊಂಡು ದಾಖಲಾತಿ ಮಾಡಿಸಿಕೊಂಡಿದ್ದಾರೆ. ಆದರೆ ವಿದ್ಯಾರ್ಥಿನಿ ಕೆಲವು ದಿನಗಳು ಕಾಲ ತರಗತಿಗೆ ಹೋಗಿ ವಿದ್ಯಾಭ್ಯಾಸ ಮಾಡಲು ಆಗುತ್ತಿಲ್ಲ, ಕಲಾ ವಿಭಾಗಕ್ಕೆ ಹೋಗುತ್ತೇನೆ. ಹಾಗಾಗಿ ವರ್ಗಾವಣೆ ಪತ್ರ (ಟಿ.ಸಿ) ಹಾಗೂ ಕಟ್ಟಿದ ಶುಲ್ಕ ವಾಪಸ್ ಕೊಡಿ ಎಂದು ಪಾಲಕರು ಕಾಲೇಜಿನ ಆಡಳಿತ ಮಂಡಳಿ ಹತ್ತಿರ ವಿನಂತಿಸಿಕೊಂಡಿದ್ದಾರೆ.
ಆಡಳಿತ ಮಂಡಳಿಯು ವಿದ್ಯಾರ್ಥಿನಿಗೆ ಅನುಕೂಲ ಮಾಡಿಕೊಡುವ ಬದಲಿಗೆ ಸರ್ಕಾರ ನಿಯಮಗಳನ್ನು ಗಾಳಿಗೆ ತೂರಿ ಯಾವುದೇ ಕಾರಣಕ್ಕೂ ವರ್ಗಾವಣೆ ಪತ್ರ ಕೊಡಲು ಸಾಧ್ಯವಿಲ್ಲ. ಕೂಡಲೇ ಬಾಕಿ ಉಳಿದ 25 ಸಾವಿರ ಕಾಲೇಜ್ ಶುಲ್ಕ ತುಂಬಬೇಕು ಹಾಗೂ ವರ್ಗಾವಣೆ ಪತ್ರವನ್ನು ಇನ್ನೂ ಒಂದು ತಿಂಗಳ ನಂತರ ಬೆಂಗಳೂರಿನ ಪಿಯು ಬೋರ್ಡ್ ಗೆ ಅರ್ಜಿ ಹಾಕಿ ದಂಡ ತುಂಬಿ ಪಡೆದುಕೊಳ್ಳಬೇಕು ಎಂದು ಇಲ್ಲಸಲ್ಲದ ನಿಯಮಗಳನ್ನು ಹಾಕಿ, ಶಿಕ್ಷಣದ ಜ್ಞಾನವಿಲ್ಲದ ಅನಕ್ಷರಸ್ಥ ಬಡತನದ ಹಿನ್ನೆಲೆ ಇರುವ ಕುಟುಂಬದ ವಿದ್ಯಾರ್ಥಿನಿ ಪಾಲಕರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ವಿದ್ಯಾರ್ಥಿ ಸಂಘಟನೆಗೆ ದೂರವಾಣಿ ಮೂಲಕ ವಿದ್ಯಾರ್ಥಿನಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಎಚ್.ಎಸ್.ಬಿ ಪಿಯು ಕಾಲೇಜ್ ಸಿಬ್ಬಂದಿ ಸುನೀತಾ ಅವರ ವಿಚಾರಿಸಲು ಮುಂದಾದಾಗ ವಿದ್ಯಾರ್ಥಿ ಸಂಘಟನೆದವರು ಇದರಲ್ಲಿ ಭಾಗವಹಿಸಬೇಡಿ, ನಮಗೆ ಗೊತ್ತಿದೆ ಯಾವ ರೀತಿ ಶುಲ್ಕ ವಸೂಲಿ ಮಾಡಬೇಕು ಎಂದು ಏರುಧ್ವನಿಯಲ್ಲಿ ಮಾತನಾಡಿದ್ದಾರೆ. ಅಲ್ಲದೇ, ಈ ವಿಚಾರದಲ್ಲಿ ಕೈ ಹಾಕಿದರೆ, ಸರಿ ಇರುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ. ಆದ್ದರಿಂದ ತಾವುಗಳು ಈ ಪ್ರಕರಣವನ್ನು ಸೂಕ್ತ ತನಿಖೆ ನಡೆಸಬೇಕು. ವಿದ್ಯಾರ್ಥಿನಿಗೆ ನ್ಯಾಯ ಒದಗಿಸುವುದರ ಜೊತೆಗೆ, ಕಾಲೇಜಿನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಮನವಿ ಪತ್ರ ಸ್ವೀಕರಿಸಿದ ಡಿಡಿಪಿಯು ಉಮೇಶಪ್ಪ ಹೆಚ್ ಅವರು, ದೂರವಾಣಿ ಮೂಲಕ ಆಡಳಿತ ಮಂಡಳಿಗೆ ನಾಳೆಯೇ ವಸೂಲಿ ಮಾಡಿದ ಶುಲ್ಕವನ್ನು ಮರುಹಿಂದಿರುಗಿಸಬೇಕು ಎಂದು ಎಚ್ಚರಿಕೆ ನೀಡಿದರು.
“ಒಂದು ವೇಳೆ ವಿದ್ಯಾರ್ಥಿನಿ ಸಹನಾ ಅಡಿವೇರ್ ಅವರಿಗೆ ನ್ಯಾಯ ಒದಗಿಸದಿದಲ್ಲಿ ಕಾಲೇಜ್ ಆಡಳಿತ ಮಂಡಳಿ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಡಳಿತ ಮುಂದಾಗದಿದ್ದರೆ ವಿದ್ಯಾರ್ಥಿನಿ ಪಾಲಕರೊಂದಿಗೆ ಸೇರಿ ಬೃಹತ್ ಪ್ರತಿಭಟನಾ ಧರಣಿ ನಡೆಸಲಾಗುವುದು” ಎಂದು ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಚಿಕ್ಕನಾಯಕನಹಳ್ಳಿ | ಸೌಲಭ್ಯಗಳಿಂದ ನಮ್ಮನ್ನು ವಂಚಿತರನ್ನಾಗಿಸಲಾಗುತ್ತಿದೆ: ಪೌರ ಕಾರ್ಮಿಕರ ಆರೋಪ
ಮನವಿಯ ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಸುಲೇಮಾನ್ ಮತ್ತಿಹಳ್ಳಿ, ಮುತ್ತುರಾಜ್ ಎಚ್ ದೊಡ್ಡಮನಿ, ಮರೆಪ್ಪ ಮ್ಯಾಗಳಮನಿ, ವಿದ್ಯಾರ್ಥಿನಿ ಸಹನಾ ಅಡಿವೇರ್, ಪಾಲಕರಾದ ಮಾಲತೇಶ ಅಡಿವೇರ್, ಸಾವೀತ್ರ ಅಡಿವೇರ್ ಉಪಸ್ಥಿತರಿದ್ದರು.
