ದೇಶದ ಪ್ರತಿಯೊಬ್ಬ ನಾಗರಿಕನು ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ದ ಧ್ವನಿ ಎತ್ತಬೇಕಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಬಿ.ಟಿ ವೆಂಕಟೇಶ ಹೇಳಿದರು.
ನಾಗರಿಕರ ಹಕ್ಕುಗಳ ಸಂರಕ್ಷಣಾ ಸಂಘ ರಾಯಚೂರು ಘಟಕದಿಂದ ನಗರದ ಇಸ್ಲಾಮಿಕ್ ಸೆಂಟರ್ನಲ್ಲಿ ಭಾನುವಾರ ಆಯೋಜಿಸಿದ್ದ ಹೊಸ ಅಪರಾಧ ಕಾನೂನುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಇಂದು ದೇಶದಲ್ಲಿ ಅನ್ಯಾಯವನ್ನು ಪ್ರಶ್ನಿಸಿದವರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ʼಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿʼ ಹೆಸರಿನಲ್ಲಿ ನಾಗರಿಕರ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆʼ ಎಂದು ಬೇಸರ ವ್ಯಕ್ತಪಡಿಸಿದರು.
ʼಎಲ್ಲರೂ ದೇಶದ ಮೂಲಭೂತ ಹಕ್ಕು ಹಾಗೂ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಬೇಕು. ಆದರೆ, ಕಳೆದ 10 ವರ್ಷಗಳಲ್ಲಿ ದೇಶದ ನಾಗರಿಕರ ಹಕ್ಕುಗಳಿಗೆ ಕಳಂಕ ತರಲಾಗುತ್ತಿದೆ. ಕೇಂದ್ರದ ಆಡಳಿತ ಸರ್ಕಾರವನ್ನು ಪ್ರಶ್ನಿಸಿದವರಿಗೆ ʼಕಾಂಗ್ರೆಸ್ ಪರʼ ಎಂದು ಟೀಕಿಸುತ್ತಾರೆ. ಇನ್ನು ದೇಶದ ಪತ್ರಕರ್ತರ ಧ್ವನಿಯನ್ನು ಅಡಗಿಸಲಾಗುತ್ತಿದೆʼ ಎಂದರು .
ʼಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೊಳಿಸಿ ನಾಗರಿಕರ ಮೇಲೆ ಹೇರಲಾಗುತ್ತಿದೆ. ಹಳೆಯ ಕಾನೂನು ಬ್ರಿಟಿಷರ ಕಾನೂನುಗಳೆಂದು ಕೇಂದ್ರ ಸರ್ಕಾರ ಹೆಸರು ಬದಲಾಯಿಸಿ ಅನೇಕ ಮಾರ್ಪಾಡು ಮಾಡಲಾಗಿದೆ. ಆದರೆ, ಕಾನೂನು ಜಾರಿಗೊಳಿಸಲು ಅನೇಕ ನಿಯಮಗಳಿವೆ. ಡ್ರಾಫ್ಟ್ ಬಿಲ್, ಎಕ್ಸ್ ಪೋರ್ಟ್ ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು. ಕೇಂದ್ರ ಸರಕಾರ ಕಲ್ಯಾಣ ರಾಜ್ಯದ ಬದಲಾಗಿ ಪೊಲೀಸ್ ರಾಜ್ಯವನ್ನಾಗಿ ನಿರ್ಮಿಸಲು ಮುಂದಾಗಿದೆʼ ಎಂದು ಹೇಳಿದರು.
ತೆಲಂಗಾಣದ ಹಿರಿಯ ವಕೀಲ ಸೈಯದ್ ಇಸ್ಲಾಮುದ್ದಿನ ಮುಜಾಹೀದ್ ಮಾತನಾಡಿ, ʼಈ ಹೊಸ ಕಾನೂನುಗಳು ಜಾರಿಯಾದರೆ 2029 ರಲ್ಲಿ ದೇಶದಲ್ಲಿ ಯಾವುದೇ ಚುನಾವಣೆಗಳು ನಡೆಯುವುದಿಲ್ಲ. ಹೊಸ ಕ್ರಿಮಿನಲ್ ಕಾನೂನುಗಳಿಂದ ಭಯದ ವಾತಾವರಣ ಸೃಷ್ಟಿಸುವ ಹುನ್ನಾರ ನಡೆದಿದೆ. ಹೊಸ ಕ್ರಿಮಿನಲ್ ಕಾನೂನುಗಳಿಂದ ಮೂಲಭೂತ ಹಕ್ಕುಗಳನ್ನು ತಿರುಚಲಾಗುತ್ತಿದೆʼ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ನೀತಿ ಆಯೋಗ ಸಭೆಯಲ್ಲಿ ಮಮತಾ ಬ್ಯಾನರ್ಜಿಗೆ ಅವಮಾನ: ಸಂಜಯ್ ರಾವತ್ ಖಂಡನೆ
ಕಾರ್ಯಕ್ರಮದಲ್ಲಿ ಪ್ರಮುಖರಾದ ಇಕ್ಬಾಲ್ ಅಹಮದ್, ಖಾಜಾ ಅಸ್ಲಾಂ, ಸಿರಾಜ್ ಜಾಫ್ರಿ, ಸುಲ್ತಾನ್ ವಕೀಲ್, ಅನ್ವರ್ ವಹೀದ್, ಖಾಜಾ ವಲಿದ, ಓವೈಸಿ ಅಹಮದ್ ಸಜ್ಜಾದ್ , ಅಸೀಮುದ್ದಿನ್ , ಪಾಷಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..