ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರೂರಾದ ಕಲಬುರಗಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೇಯರ್ ಮತ್ತು ಉಪ ಮೇಯರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಮತ್ತೆ ಹಂತಹಂತವಾಗಿ ತನ್ನ ಪ್ರಾಬಲ್ಯ ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ.
ಈ ಮೂಲಕ ಕಾಂಗ್ರೆಸ್ ಪಾಲಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಮೇಯರ್ ಸ್ಥಾನಕ್ಕೆ ಯಲ್ಲಪ್ಪ ನಾಯಕೋಡಿ ಮತ್ತು ಉಪ ಮೇಯರ್ ಸ್ಥಾನಕ್ಕೆ ಹೀನಾ ಬೇಗಂ ಮುಲ್ಲಾ ಅವರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಪಾಲಿಕೆಯಲ್ಲಿ ಮರಳಿ ಅಧಿಕಾರದ ಗದ್ದುಗೆ ಹಿಡಿದಿದೆ.
ಮೇಯರ್ ಸ್ಥಾನ ಎಸ್ಟಿಗೆ ಮೀಸಲಾಗಿದ್ದು, ಇಡೀ ಪಾಲಿಕೆ ಸದಸ್ಯರಲ್ಲಿ ವಾರ್ಡ್ ನಂ.53ರ ಸದಸ್ಯ ಯಲ್ಲಪ್ಪ ನಾಯ್ಕೋಡಿ ಒಬ್ಬರೇ ಎಸ್ಟಿ ಪ್ರಮಾಣ ಪತ್ರ ಹೊಂದಿದ್ದರು. ಬಿಜೆಪಿಯ ದಿಗಂಬರ ನಾಡಗೌಡ ಸಹ ನಾಮಪತ್ರ ಸಲ್ಲಿಸಿದ್ದರೂ, ಅವರ ನಾಮಪತ್ರ ತಿರಸ್ಕೃತ ಹಿನ್ನೆಲೆಯಲ್ಲಿ ಅವಿರೋಧವಾಗಿ ಯಲ್ಲಪ್ಪ ನಾಯ್ಕೋಡಿ ಮೇಯರ್ ಆಗಿ ಆಯ್ಕೆಯಾದರು.
ನಾಮಪತ್ರ ವಾಪಸ್ ಪಡೆದ ಮೈತ್ರಿ ಅಭ್ಯರ್ಥಿ
ಉಪ ಮೇಯರ್ ಸ್ಥಾನಕ್ಕೆ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ನ ಅಲೀಂ ಪಟೇಲ್ ಹಾಗೂ ಕಾಂಗ್ರೆಸ್ನ ಹೀನಾ ಬೇಗಂ ನಾಮಪತ್ರ ಸಲ್ಲಿಸಿದ್ದರು. ಆದರೆ ಕೊನೇ ಕ್ಷಣದಲ್ಲಿ ಮೈತ್ರಿ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಉಪ ಮೇಯರ್ ಸ್ಥಾನಕ್ಕೆ ಹೀನಾ ಬೇಗಂ ಅವಿರೋಧವಾಗಿ ಆಯ್ಕೆಯಾದರು.
ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರ ಸ್ಥಾನಕ್ಕೂ ಅವಿರೋಧವಾಗಿ ಆಯ್ಕೆ ನಡೆಯಿತು ಎಂದು ಚುನಾವಣಾ ಅಧಿಕಾರಿಯಾಗಿ ಕೃಷ್ಣಾ ಬಾಜಪೇಯಿ ತಿಳಿಸಿದರು. ಫಲಿತಾಂಶದ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಈ ಹಿಂದೆ ಮೇಯರ್ ಆಗಿ ಬಿಜೆಪಿಯ ವಿಶಾಲ ದರ್ಗಿ ಉಪಮೇಯರ್ ಆಗಿ ಶಿವಾನಂದ ಪಿಸ್ತಿ ಅವರು ಆಯ್ಕೆಯಾಗಿದ್ದರು. ಅವರ ಸ್ಥಾನಕ್ಕೆ ಕಾಂಗ್ರೆಸ್ನ ಯಲ್ಲಪ್ಪ ನಾಯ್ಕೋಡಿ ಮತ್ತು ಉಪಮೇಯರ್ ಆಗಿ ಹೀನಾ ಬೇಗಂ ಆಯ್ಕೆಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೊಂದಾಣಿಕೆ ರಾಜಕಾರಣ ಮತ್ತು ಪಾದಯಾತ್ರೆ ಪಾಲಿಟಿಕ್ಸ್
2019ರಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಉಮೇಶ್ ಜಿ ಜಾಧವ್ ಅವರು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು 95 ಸಾವಿರ ಮತಗಳ ಭಾರೀ ಅಂತರದಿಂದ ಸೋಲಿಸಿದ್ದು ಕೈ ಪಡೆಗೆ ಬಹಳ ದೊಡ್ಡ ಹಿನ್ನಡೆಯಾಗಿತ್ತು. ಹಲವು ದಶಕಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಜಿಲ್ಲೆಯಲ್ಲಿ ಬಿಜೆಪಿ ನಿಧಾನವಾಗಿ ತಳವೂರುವ ಪ್ರಯತ್ನ ನಡೆಸಿತ್ತು.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಗತವೈಭವಕ್ಕೆ ಮರಳುವ ಸೂಚನೆ ನೀಡಿತು. ಅಫಜಲಪುರದಲ್ಲಿ ಕಾಂಗ್ರೆಸ್ನ ಎಂ ವೈ ಪಾಟೀಲ್, ಜೇವರ್ಗಿಯಲ್ಲಿ ಅಜಯ್ ಸಿಂಗ್, ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆ, ಸೇಡಂನಲ್ಲಿ ಶರಣುಪ್ರಕಾಶ್ ಪಾಟೀಲ್, ಕಲಬುರಗಿ ದಕ್ಷಿಣದಲ್ಲಿ ಅಲ್ಲಮ ಪ್ರಭು ಪಾಟೀಲ್, ಕಲಬುರಗಿ ಉತ್ತರದಲ್ಲಿ ಕನೀಜ್ ಫಾತಿಮಾ ಅವರು ಜಯಭೇರಿ ಭಾರಿಸಿದ್ದರು.
ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 6ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವುಗಳಿಸಿದ್ದರು. ಆ ಬಳಿಕ ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಿ ಜಾಧವ್ ಅವರನ್ನು ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ಕಾಂಗ್ರೆಸ್ನ ರಾಧಾಕೃಷ್ಣ ಅವರು 27 ಸಾವಿರ ಮತಗಳ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದ್ದರು.
