ಸಿಎಂ ಸಿದ್ದರಾಮಯ್ಯ ವಿರುದ್ಧ ನಮ್ಮವರೇ ಬಿಜೆಪಿ ನಾಯಕರಿಗೆ ದಾಖಲೆ ನೀಡುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ. ಅವರು ಎಲ್ಲಿಂದ ಇಂತಹ ವಿಷಯ ಸಂಗ್ರಹಿಸಿ ಮಾತನಾಡುತ್ತಾರೆ ಎಂಬುದೇ ವಿಚಿತ್ರ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಸಲು ಕಾಂಗ್ರೆಸ್ನವರೇ ದಾಖಲೆ ಕೊಡುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸುತ್ತಾರೆ. ಡಿ ಕೆ ಶಿವಕುಮಾರ್ ಋಣ ತೀರಿಸಲು ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ ಎನ್ನುತ್ತಾರೆ. ಅವರದ್ದು ಯಾವ ಋಣ ಅಂತ ನನಗೆ ಗೊತ್ತಿಲ್ಲ” ಎಂದು ವ್ಯಂಗ್ಯವಾಗಿ ನುಡಿದರು.
ಬಿಜೆಪಿಯಲ್ಲಿ ಸಿಎಂ ಹುದ್ದೆಗಾಗಿ ಹೈಕಮಾಂಡ್ಗೆ ₹2,000 ಕೋಟಿ, ಮಂತ್ರಿಸ್ಥಾನಕ್ಕೆ ₹500 ಕೋಟಿ ನೀಡಬೇಕಿದೆ ಎಂದು ಹಿಂದೆ ಇದೇ ಯತ್ನಾಳ್ ಅವರು ಹೇಳಿದ್ದರು. ಈಗ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿಯನ್ನು ಬಿಜೆಪಿಯವರು ಆಯ್ಕೆ ಮಾಡುತ್ತಾರೆ ಎನ್ನುತ್ತಾರೆ. ಅವರು ಮಾತು ಕೇಳಿದರೆ ಸೂರ್ಯ ಪಶ್ಚಿಮ ದಿಕ್ಕಿನಲ್ಲಿ ಹುಟ್ಟುತ್ತಾನೆಯೇನೋ ಎಂಬಂತಿದೆ” ಎಂದು ಲೇವಡಿ ಮಾಡಿದರು.
ಬೆಳಗಾವಿ ವಿಭಜನೆ
“ಜಿಲ್ಲೆ ವಿಭಜನೆಯಾಗದ ಕಾರಣ ಆಡಳಿತಕ್ಕೆ ಹಾಗೂ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ. ಇದನ್ನು ಎರಡು ಅಥವಾ ಮೂರು ಜಿಲ್ಲೆಗಳಾಗಿ ವಿಭಜಿಸಬೇಕೆಂಬ ಚರ್ಚೆ ಇದೆ. ಉನ್ನತಮಟ್ಟದ ಸಭೆಯಲ್ಲೇ ತೀರ್ಮಾನಿಸಲಾಗುವುದು” ಎಂದರು.
ಪ್ರವಾಹ ಕುರಿತು ಸಿಎಂ, ಡಿಸಿಎಂ ಮಾಹಿತಿ
“2019ರಲ್ಲಿ ಬೆಳಗಾವಿ ಜಿಲ್ಲೆ ಶತಮಾನದಲ್ಲೇ ಕಂಡರಿಯದ ಪ್ರವಾಹಕ್ಕೆ ಒಳಗಾಗಿತ್ತು. ಆಗಲೂ ಪ್ರಧಾನಿ ಮೋದಿ ಇಲ್ಲಿಗೆ ಭೇಟಿ ಕೊಟ್ಟಿರಲಿಲ್ಲ. ಸದ್ಯದ ಪ್ರವಾಹಪೀಡಿತ ಸ್ಥಳಗಳ ಬಗ್ಗೆ ಸಿಎಂ, ಡಿಸಿಎಂ ಮಾಹಿತಿ ಪಡೆಯುತ್ತಿದ್ದಾರೆ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಧಿಕಾರಿಗಳಿಂದ ತಪ್ಪು ಮಾಹಿತಿ
“ಜಿಲ್ಲೆಯಲ್ಲಿ ಪ್ರವಾಹದಿಂದ ಆಗಿರುವ ಹಾನಿ ಬಗ್ಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ನಾನು ಸ್ವತಃ ಖಾನಾಪುರ ತಾಲ್ಲೂಕಿಗೆ ಹೋಗಿ ಪರಿಶೀಲಿಸಿದ್ದೇನೆ. ಅಧಿಕಾರಿಗಳು ಕೊಟ್ಟ ಮಾಹಿತಿಗಿಂತಲೂ ಹೆಚ್ಚಿನ ಮನೆಗಳು ಬಿದ್ದಿವೆ. ಅಧಿಕಾರಿಗಳಿಂದ ಬೇಜವಾಬ್ದಾರಿ ಕೆಲಸ ಆಗಬಾರದು” ಎಂದು ಸೂಚಿಸಿದರು.