ಬಲಾಢ್ಯರಿಂದ ಶೋಷಣೆ, ತುಳಿತಕ್ಕೆ ಒಳಗಾದ ತಳಸಮುದಾಯಗಳನ್ನು ಒಗ್ಗೂಡಿಸಿ ಶೋಷಣೆ ವಿರುದ್ಧ ಸಾಮಾಜಿಕ ಹೋರಾಟಕ್ಕೆ ಪ್ರೊ. ಬಿ ಕೃಷ್ಣಪ್ಪ ಅವರು ಕಟ್ಟಿದ ದಲಿತ ಚಳವಳಿಗೆ 50 ವರ್ಷ ತುಂಬಿದ ಹಿನ್ನಲೆ ಸಂಭ್ರಮೋತ್ಸವ ಆಚರಿಸುತ್ತಿದ್ದು, ತುಮಕೂರು ಜಿಲ್ಲೆಯ ಎಲ್ಲ ದಲಿತ ಮುಖಂಡರು, ಸಂಘಟನೆಯ ಸದಸ್ಯರು ಆಗಮಿಸುವಂತೆ ದಸಂಸ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಜಿ ಎನ್ ಲಾವಣ್ಯ ಮನವಿ ಮಾಡಿದರು.
ಜಿಲ್ಲೆಯ ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, “ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ 1974ರಲ್ಲಿ ಪ್ರೊ. ಬಿ ಕೃಷ್ಣಪ್ಪ ಅವರು ಸಂಘಟನೆ ಕಟ್ಟಿ ಅಂಬೇಡ್ಕರ್ ಅವರ ಸಂಘಟನೆ ಹೋರಾಟ ಅದರ್ಶವಾಗಿಟ್ಟುಕೊಂಡು ಚಳವಳಿ ಆರಂಭಿಸಿದ್ದರು. ಇದರ ಪರಿಣಾಮ ಮೂಕ ಸಮುದಾಯಗಳು ಮಾತನಾಡಿದ್ದವು. ಇದೇ ಮಾದರಿಯಲ್ಲಿ ಪ್ರಜ್ಞೆ, ಅರಿವು, ಹೋರಾಟವನ್ನು ನಿರಂತರ ಕಲಿಸಿ ಸಾಮಾಜಿಕ ನ್ಯಾಯ ಕಾಪಾಡಿದೆ” ಎಂದರು.
“ಚಳವಳಿಯ ಕ್ರಾಂತಿಯ 50 ವರ್ಷದ ಸಂಭ್ರಮವನ್ನು ಆಗಸ್ಟ್ ತಿಂಗಳ 7ರಂದು ಬೆಂಗಳೂರು ಚಲೋ ಮೂಲಕ ರಾಜ್ಯದ ನಾನಾ ಭಾಗದಿಂದ ಆಗಮಿಸುವ ದಲಿತ ಸದಸ್ಯರಿಗೆ ಆಹ್ವಾನ ನೀಡಿ ವಸಂತನಗರ ಬಡಾವಣೆಯ ಡಾ. ಅಂಬೇಡ್ಕರ್ ಭವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಸದಸ್ಯರು ಭಾಗವಹಿಸಬೇಕು. ಈ ಜತೆಗೆ ಮಹಿಳಾ ಘಟಕದ ಸದಸ್ಯರಿಗೆ ವಿಶೇಷ ಆಹ್ವಾನ ನೀಡಿದ್ದು, ಗುಬ್ಬಿ ತಾಲೂಕಿಗೆ ಎರಡು ಬಸ್ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಕ್ಕೆ ಹಲವು ಹಕ್ಕೊತ್ತಾಯ ಈಡೇರಿಕೆಗೆ ಆಗ್ರಹಿಸಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಹಾಸ್ಟೆಲ್ ಆಹಾರ ಭತ್ಯೆ ಹೆಚ್ಚಿಸಿ ಉತ್ತಮ ಗುಣಮಟ್ಟದ ಆಹಾರ ಒದಗಿಸಿ: ಎಸ್ಎಫ್ಐ ಆಗ್ರಹ
“ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ ಗುರುಮೂರ್ತಿ ಅವರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಹನುಮಂತಪ್ಪ ಕಾಕರಗಲ್, ಮುಂಡರಗಿ ನಾಗರಾಜ್ ಇನ್ನಿತರ ಮುಖಂಡರು ಸಾಕ್ಷಿಯಾಗಲಿದ್ದಾರೆ. ಪ್ರೊ ಬಿ ಕೃಷ್ಣಪ್ಪ ಅವರ ಜನ್ಮದಿನವನ್ನು ಸರ್ಕಾರಿ ಕಾರ್ಯಕ್ರಮವಾಗಿ ಆದೇಶಿಸಿ ಎಲ್ಲಡೆ ಆಚರಿಸಬೇಕು. ಎಸ್ಸಿ/ಎಸ್ಟಿ ಮೀಸಲು 39 ಸಾವಿರ ಕೋಟಿ ಹಣವನ್ನು ಎಲ್ಲ ಅಭಿವೃದ್ದಿ ನಿಗಮಕ್ಕೆ ಹಂಚಿ ಕೆಳವರ್ಗವನ್ನು ಮೇಲೆತ್ತುವ ಕೆಲಸ ಮಾಡಬೇಕು. ಮಕ್ಕಳಿಗೆ ವ್ಯಾಸಂಗ ಪ್ರೋತ್ಸಾಹ ಧನ ನೀಡುವಲ್ಲಿ ವಿಧಿಸಿದ್ದ ಆದಾಯ ಮಿತಿ ರದ್ದುಮಾಡಿ ಬಗರ್ ಹುಕುಂ ಸಮಿತಿ ಮೂಲಕ ಹಕ್ಕುಪತ್ರ ವಿತರಣೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಲು ಒತ್ತಾಯ ಸೇರಿದಂತೆ ಹಲವು ಬೇಡಿಕೆಯನ್ನು ಸರ್ಕಾರದ ಮುಂದಿಡಲಾಗುವುದು” ಎಂದರು.
ಈ ಸಂದರ್ಭದಲ್ಲಿ ದಸಂಸ ಮಹಿಳಾ ಘಟಕದ ಮಂಗಳಮ್ಮ, ಮೀನಾಕ್ಷಮ್ಮ, ಸಾವಿತ್ರಿ, ವಿಜಯಮ್ಮ, ಸೀಮಾ, ರಾಧಾ ಸೇರಿದಂತೆ ಇತರರು ಇದ್ದರು.