ಮೌಢ್ಯತೆ, ಕಂದಾಚಾರ, ಅಂಧಶ್ರದ್ಧೆ ಸಮಾಜದಲ್ಲಿ ಇಂದಿಗೂ ಬೇರೂರಿದ್ದು ಅವುಗಳ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದ ಗುರುಪ್ರಸಾದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಆವರಣದಲ್ಲಿ ವಿದ್ಯಾರ್ಥಿ ಬಂಧುತ್ವ ವೇದಿಕೆ ಜಿಲ್ಲಾ ಘಟಕ ಮತ್ತು ಹಿರೇಮಠ ಸಂಸ್ಥಾನ ಭಾಲ್ಕಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಬಸವ ಪಂಚಮಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ʼನಾಗರ ಪಂಚಮಿ ಹಬ್ಬದ ಹೆಸರಿನಲ್ಲಿ ಜನರು ಪ್ರತಿವರ್ಷ ಹುತ್ತ ಮತ್ತು ಕಲ್ಲು ನಾಗನಿಗೆ ಹಾಲು, ನೈವೇದ್ಯ ಅರ್ಪಿಸಿ ದುಂದು ವೆಚ್ಚ ಮಾಡುತ್ತಿದ್ದಾರೆ. ಇದರಿಂದ ಲಕ್ಷಾಂತರ ಲೀಟರ್ ಹಾಲು ಮಣ್ಣು ಪಾಲು ಆಗುತ್ತಿದೆ. ಇದರಿಂದ ಯಾರಿಗೆ ತಾನೇ ಉಪಯೋಗವಿಲ್ಲ.
ಇದರ ಬದಲಾಗಿ ಬಡ ಮಕ್ಕಳು, ರೋಗಿಗಳು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲು, ಹಣ್ಣು ನೀಡಿದರೆ ದೇವರಿಗೆ ನಿಜವಾದ ಪೂಜೆ ಸಲ್ಲಿಸಿದಂತಾಗುತ್ತದೆ. ಮೌಢ್ಯತೆ ವಿರುದ್ಧ ಸಮಾಜದಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಎಲ್ಲರಿಂದ ನಡೆಯಲಿʼ ಎಂದು ಆಶಿಸಿದರು.
ನೇತೃತ್ವ ವಹಿಸಿದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ʼಬುದ್ಧ, ಬಸವ, ಅಂಬೇಡ್ಕರ್ ಅವರು ಸಾರಿದ ಸಂದೇಶ ಪ್ರತಿಯೊಬ್ಬರು ನಿಜ ಜೀವನದಲ್ಲಿ ಆಚರಣೆಗೆ ತಂದಲ್ಲಿ ಮಾತ್ರ ಸಮಾಜದಲ್ಲಿ ಬೇರೂರಿರುವ ಮೌಢ್ಯತೆ ತೊಲಗಲಿದೆ. ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ರಾಜ್ಯಾದ್ಯಂತ ವಿವಿಧ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಮೌಢ್ಯದ ವಿರುದ್ಧ ಜಾಗೃತಿ ಸಾರುತ್ತಿರುವುದು ಶ್ಲಾಘನೀಯʼ ಎಂದರು.
ವಿದ್ಯಾರ್ಥಿ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ರತ್ನದೀಪ ಕಸ್ತೂರೆ ಮಾತನಾಡಿ, ʼವೇದಿಕೆ ಸಂಸ್ಥಾಪಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಮೌಢ್ಯ ಮುಕ್ತ ಕರ್ನಾಟಕ ನಿರ್ಮಾಣ ಹಾಗೂ ಮೂಢನಂಬಿಕೆ ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆʼ ಎಂದರು.
ಈ ಸಂದರ್ಭದಲ್ಲಿ ಕಸಾಪ ರಾಜ್ಯ ಮಹಿಳಾ ಪ್ರತಿನಿಧಿ ಮಲ್ಲಮ್ಮ ಆರ್.ಪಾಟೀಲ್, ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ, ರೇಖಾಬಾಯಿ ಅಷ್ಟೂರೆ, ಕಾಂಗ್ರೆಸ್ ಗ್ಯಾರಂಟಿ ಯೋಜನೆ ಸಮಿತಿ ಸದಸ್ಯ ಸಂಗಮೇಶ ವಾಲೆ, ಔರಾದ ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಔರಾದ ತಾಲೂಕು ಜಾನಪದ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಂಜುಕುಮಾರ ಜುಮ್ಮಾ, ಔರಾದ್ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶಿವು ಮುಕ್ತೇದಾರ, ಪ್ರಮುಖರಾದ ಶಿವಶರಣಪ್ಪ ವಲ್ಲೇಪೂರೆ, ಶರಣಪ್ಪ ಪಾಟೀಲ್, ಸುನಿಲ ಮಿತ್ರಾ, ಚಂದು ಡಿಕೆ, ಅಭಿಷೇಕ ಮಾನಕರೆ, ಧಮ್ಮದೀಪ, ನಾಗೇಶ ನಾಗೂರೆ, ಗುರುಪ್ರಸಾದ ಶಾಲೆಯ ಮುಖ್ಯಗುರು ಬಾಬು ಬೆಲ್ದಾಳ ಸೇರಿದಂತೆ ಹಲವರು ಇದ್ದರು.
ವಿವಿಧೆಡೆ ಹಾಲು ವಿತರಣೆ :
ಇದೇ ವೇಳೆ ಬಸವ ಪಂಚಮಿ ಅಂಗವಾಗಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಸಮಿತಿ ಸದಸ್ಯ ಸಂಗಮೇಶ ವಾಲೆ ವತಿಯಿಂದ ಪ್ರಸಾದ ನಿಲಯದ ನೂರಾರು ಮಕ್ಕಳಿಗೆ ಹಾಲು ವಿತರಿಸಲಾಯಿತು. ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು ಮಕ್ಕಳಿಗೆ ಹಾಲು ವಿತರಿಸಿದರು.

ಭಾಲ್ಕಿ ಪಟ್ಟಣದ ಎಪಿಎಂಸಿ ಸಮೀಪದ ಡೊಂಬರಾಟ ಬಡಾವಣೆಯಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಬಸವ ಪಂಚಮಿ ಮತ್ತು ಅಕ್ಕನಾಗಮ್ಮ ಜಯಂತಿ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಹಾಲು ಮತ್ತು ಮಹಾಪ್ರಸಾದ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬೀದರ್ | ಬುದ್ಧಿ ಮಾಂದ್ಯ ಮಕ್ಕಳಿಗೆ ಹಾಲು-ಹಣ್ಣು ವಿತರಣೆ :
ಬೀದರ ನಗರದ ನವ ಜೀವನ ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಡಾ. ಚನ್ನಬಸವಪಟ್ಟದ್ದೇವರ ಪ್ರಸಾದ ನಿಲಯದ ವತಿಯಿಂದ ನಾಗರ ಪಂಚಮಿ ಹಬ್ಬವನ್ನು ಬಸವ ಪಂಚಮಿ ಹಬ್ಬವೆಂದು ಆಚರಿಸಲಾಯಿತು.
ಭಾಲ್ಕಿ ಹಿರೇಮಠ ಸಂಸ್ಥಾನದ ಮಹಾಲಿಂಗ ಮಹಾಸ್ವಾಮಿಗಳು ಮಾತನಾಡಿ, ʼನಾಗರ ಪಂಚಮಿ ಬದಲಾಗಿ ಬಸವ ಪಂಚಮಿ ಆಚರಿಸಿ, ಮಕ್ಕಳಿಗೆ ಹಾಲು ಹಣ್ಣುಗಳನ್ನು ಕೊಡುವುದರಿಂದ ನಿಜವಾದ ಪಂಚಮಿ ಆಚರಣೆ ಮಾಡಿದ್ದು ಸಾರ್ಥಕವಾಗುತ್ತದೆ. ಜಡವಸ್ತುವಿನ ಮೇಲೆ ಹಾಲು ಹಾಕಿದರೆ ಆ ವಸ್ತುವಿಗೆ ಚೈತನ್ಯ ಬರುವುದಿಲ್ಲ. ಹುತ್ತಿನ ಮೇಲೆ ಹಾಲು-ಅಳ್ಳು ಹಾಕಿ ಪೂಜಿಸಿದರೆ ದೇವರಿಗೆ ಅರ್ಪಿತವಾಗುವುದಿಲ್ಲ. ಅದರಿಂದ ರಾಷ್ಟ್ರ ಸಂಪತ್ತು ಹಾಳಾಗುತ್ತದೆʼ ಎಂದರು.

ʼಸಮಾಜದಲ್ಲಿ ಎಷ್ಟೋ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಅಂತಹವರಿಗೆ ಅನ್ನ ದಾಸೋಹ ಮಾಡುವುದು ಎಲ್ಲಕ್ಕಿಂತ ದೊಡ್ಡದು. ಇಲ್ಲಿಯ ಬುದ್ಧಿಯ ಮಾಂಧ್ಯರ ಮಕ್ಕಳು ದೈಹಿಕ, ಮಾನಸಿಕವಾಗಿ ಸದೃಢವಾಗಬೇಕಾದರೆ, ಉತ್ತಮ ಪರಿಸರ, ಉತ್ತಮ ಆಹಾರ ಅದರ ಜೊತೆಗೆ ಪ್ರೀತಿ-ಪ್ರೇಮದಿಂದ ವರ್ತಿಸುವುದು ಬಹು ಮುಖ್ಯವಾದುದು, ಬುದ್ಧಿ ಮಾಂಧ್ಯ ಮಕ್ಕಳ ಸೇವೆ ಮಾಡುವುದೇ ದೇವರ ಸೇವೆʼ ಎಂದು ನುಡಿದರು.
ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಉಮಾಕಾಂತ ಮೀಸೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಭಾರತ ಉತ್ತಮ ಸಂಸ್ಕೃತಿ, ಪರಂಪರೆ ಮತ್ತು ಹಬ್ಬ ಹರಿದಿನಗಳ ದೇಶವಾಗಿದೆ. ಆದರೆ ನಾಗರ ಪಂಚಮಿ ದಿವಸ ಮೌಢ್ಯತೆಯಿಂದ ಹುತ್ತಿಗೆ ಹಾಲೆರೆವುದು ಮತ್ತು ಅಳ್ಳನ್ನು ಚೆಲ್ಲುವುದು ವೈಜ್ಞಾನಿಕವಾಗಿ ತಪ್ಪು. ಬಸವಾದಿ ಶರಣರು ಮೌಢ್ಯತೆಯ ಆಚರಣೆಗಳನ್ನು ವಿರೋಧಿಸಿದರುʼ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮೇಲ್ವಿಚಾರಕ ವಸಂತ ಜ್ಯಾಂತೆ, ಶಿಕ್ಷಕರಾದ ಮಾರುತಿ ಕಾಂಬ್ಳೆ, ಶ್ರೀಕಾಂತ ಬಿರಾದಾರ, ಸೋಮಶೇಖರ ಪಾಟೀಲ ಬಲ್ಲೂರ ಉಪಸ್ಥಿತರಿದ್ದರು. ಪ್ರಮುಖರಾದ ಸಂಗ್ರಾಮಪ್ಪಾ ಬಿರಾದಾರ, ಭೀಮಾಶಂಕರ ಬಿರಾದಾರ, ಮಲ್ಲಿಕಾರ್ಜುನ ಶಿವಪೂಜೆ, ಸಂಕೇತ ಬ್ಯಾಲಹಳ್ಳಿ, ಸಚಿನ ಮುಚಳಂಬೆ, ಶಿವರಾಜ ಹಾಗೂ ಶಾಲೆಯ ಸಿಬ್ಬಂದಿಗಳಾದ ನಜಿಮಾ, ನೂರಜಹಾ ಮತ್ತು ಶಾಹಿದ್ ಪಾಲ್ಗೊಂಡಿದ್ದರು.
ಬಸವಕಲ್ಯಾಣ | ಕಲ್ಲು ದೇವರಿಗೆ ಹಾಲೆರೆಯುವುದು ಮೌಢ್ಯ: ರವೀಂದ್ರ ಕೋಳಕೂರು
ನಾಗರ ಪಂಚಮಿ ಹಬ್ಬದಂದು ಕಲ್ಲು ನಾಗರಕ್ಕೆ ಹಾಗೂ ಹುತ್ತಕ್ಕೆ ಹಾಲು ಎರೆಯುವುದು ಮೌಢ್ಯದ ಪರಮಾವಧಿ ಎಂದು ರಾಷ್ಟ್ರೀಯ ಬಸವ ದಳದ ಬಸವಕಲ್ಯಾಣ ತಾಲೂಕಾಧ್ಯಕ್ಷ ರವೀಂದ್ರ ಕೋಳಕೂರು ಹೇಳಿದರು.
ಬಸವ ಪಂಚಮಿ ಪ್ರಯುಕ್ತ ಎಚ್ಚರಿಕೆಯ ಮುಕ್ತಿನಾಥ ದೇವಾಲಯದಲ್ಲಿ ಅನುಭವ ಮಂಟಪ ಹಾಗೂ ಕಲ್ಯಾಣ ಧ್ವನಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಹಾಲು ಪೌಷ್ಟಿಕ ಆಹಾರವಾಗಿದ್ದರಿಂದ ಅದನ್ನು ಪೋಲು ಮಾಡದೆ ಸ್ಥಳೀಯ ಬಡ ಮಕ್ಕಳಿಗೆ ಹಾಲುಣಿಸಬೇಕು. ಕಲ್ಲು, ಮಣ್ಣು ದೇವರಿಗೆ ಹಾಲು ಎರೆಯುವುದು ವ್ಯರ್ಥ ಆಚರಣೆ’ ಎಂದರು.

ಸಾನಿಧ್ಯ ವಹಿಸಿದ ಅನುಭವ ಮಂಟಪದ ಶಿವಾನಂದ ದೇವರು ಮಾತನಾಡಿ, ‘ಸಮಾಜದಲ್ಲಿ ಸಂಪ್ರದಾಯ ಹೆಸರಿನಲ್ಲಿ ನಡೆಯುವ ಅಂಧಕಾರ, ಮೌಢ್ಯ, ಅವೈಜ್ಞಾನಿಕ ಆಚರಣೆಗಳ ವಿರುದ್ಧ ಜನರು ಜಾಗ್ರತರಾಗಿ ವೈಚಾರಿಕತೆ ಬೆಳೆಸಿಕೊಳ್ಳಬೇಕು’ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ತೀವ್ರ ಬರ, ಸಾಲಬಾಧೆ : 15 ತಿಂಗಳಲ್ಲಿ 39 ರೈತರು ಆತ್ಮಹತ್ಯೆ
ಕಾರ್ಯಕ್ರಮದಲ್ಲಿ ದೇವಿ ತಾಂಡಾದ ಅನೀಲ ಮಹಾರಾಜರು, ಯೋಗ ಗುರು ಲೋಕೇಶ್, ರಾಜಕುಮಾರ ರಟಗಲೆ, ಅನುಭವ ಮಂಟಪದ ಶಂಕರ, ಗಂಗಾಧರ, ಸಚೀನ್ ಕಾವಟೆ, ಮುಕ್ತಿನಾಥ ಸಮುದಾಯದ ಅಧ್ಯಕ್ಷ ರಿತೀಶ್, ಬಸವರಾಜ ಹಾಗೂ ಓಣಿಯ ಸಾರ್ವಜನಿಕರು, ಮಕ್ಕಳು ಪಾಲ್ಗೊಂಡಿದ್ದರು