ಅತ್ಯಾಚಾರ ಹಾಗೂ ಕೊಲೆಯಾದ ಕೋಲ್ಕತ್ತಾದ ಟ್ರೈನಿ ವೈದ್ಯೆಗೆ ನ್ಯಾಯ ದೊರಕಿಸಬೇಕೆಂಬ ಪ್ರತಿಭಟನೆಯನ್ನು ಬೆಂಬಲಿಸಿ ಭಾರತೀಯ ವೈದ್ಯಕೀಯ ಸಂಘ ಆಗಸ್ಟ್ 17 ರಂದು ತುರ್ತು ಸೇವೆಗಳನ್ನು ಹೊರತುಪಡಿಸಿ ದೇಶಾದ್ಯಂತ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸುವ 24 ಗಂಟೆಗಳ ಬಂದ್ಗೆ ಕರೆ ನೀಡಿದೆ.
ಬಂದ್ನ ಸಮಯದಲ್ಲಿ ಒಪಿಡಿ ಹಾಗೂ ಸಾಮಾನ್ಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುವುದಿಲ್ಲ. ದೇಶಾದ್ಯಂತ ಆಧುನಿಕ ಔಷಧ ವೈದ್ಯರ ಸೇವೆಯನ್ನು ಹಿಂತೆಗೆದುಕೊಳ್ಳಲಾಗುತ್ತದೆ. ಐಎಂಎ ತನ್ನ ವೈದ್ಯರ ನ್ಯಾಯಯುತ ಬೇಡಿಕೆಗಾಗಿ ರಾಷ್ಟ್ರದ ಸಹಾನುಭೂತಿಯನ್ನು ಬಯಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಐಎಂಎ ಪ್ರಕಟಣೆಯ ನಂತರ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್(ಎಫ್ಒಆರ್ಡಿಎ) ಕೂಡ ತಾನು ಹಿಂಪಡೆದಿದ್ದ ಪ್ರತಿಭಟನೆಯ ನಿರ್ಧಾರವನ್ನು ವಾಪಸ್ ಪಡೆದಿದ್ದು ಪುನಃ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದೆ.
“ಆರೋಗ್ಯ ಸಚಿವಾಲಯದ ಭರವಸೆಯ ಆಧಾರದ ಮೇಲೆ ಉತ್ತಮ ನಂಬಿಕೆಯಿಂದ ಮುಷ್ಕರವನ್ನು ಹಿಂತೆಗೆದುಕೊಳ್ಳುವ ನಮ್ಮ ಹಿಂದಿನ ನಿರ್ಧಾರವು ನಮ್ಮ ಸಮುದಾಯದಲ್ಲಿ ದುಃಖ ಮತ್ತು ನಿರಾಶೆಯನ್ನುಉಂಟುಮಾಡಿದೆ ಎಂದು ನಾವು ಒಪ್ಪಿಕೊಳ್ಳುತ್ತೇವೆ. ನಾವು ಪ್ರತಿಭಟನೆಗೆ ಮತ್ತೆ ಬೆಂಬಲ ನೀಡುತ್ತೇವೆ” ಎಂದು ಎಫ್ಒಆರ್ಡಿಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಈ ದಿನ.ಕಾಮ್ ಇಟ್ಟ ಎರಡು ಪುಟ್ಟ ಹೆಜ್ಜೆಗಳು; ನಮ್ಮ ಪ್ರಯತ್ನ ನಿಮ್ಮ ಭಾಗೀದಾರಿಕೆ
ಎಫ್ಒಆರ್ಡಿಎಯ ಪ್ರತಿನಿಧಿಗಳು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಮುಷ್ಕರವನ್ನು ಹಿಂತೆಗೆದುಕೊಳ್ಳುವುದಾಗಿ ಎರಡು ದಿನಗಳ ಹಿಂದೆ ಘೋಷಿಸಿದ್ದರು.
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಘಟನೆ ಕೂಡ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದೆ.
ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್ಜಿಕರ್ ವೈದ್ಯಕೀಯ ಕಾಲೇಜಿನಲ್ಲಿ ಅಮಾನುಷವಾಗಿ ಅತ್ಯಾಚಾರ ಮತ್ತು ಹತ್ಯೆಗೀಡಾದ ಮಹಿಳಾ ವೈದ್ಯರಿಗೆ ನ್ಯಾಯವನ್ನು ಕೋರುವುದರ ಜೊತೆಗೆ ಹಿಂಸಾಚಾರಕ್ಕೊಳಗಾಗುತ್ತಿರುವ ಆರೋಗ್ಯ ಕಾರ್ಯಕರ್ತರನ್ನು ರಕ್ಷಿಸುವ ಕಾನೂನಿಗೆ ಒತ್ತಾಯಿಸಿ ವಿವಿಧ ವೈದ್ಯಕೀಯ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿವೆ.
