ಕನಕಪುರ ತಾಲೂಕಿನ ಗ್ರೇಡ್-2 ತಹಶೀಲ್ದಾರ್ ಶಿವಕುಮಾರ್ ಕಾರ್ಯನಿರ್ವಹಿಸುತ್ತಿದ್ದ ಕಚೇರಿಯನ್ನು ಸಕಾರಣ ಇಲ್ಲದೆ ತೆರವುಗೊಳಿಸಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ದಿಲೀಪ್ ಅವರಿಗಾಗಿ ಅದ್ದೂರಿಯಾಗಿ ನವೀಕರಣಗೊಳಿಸುತ್ತಿರುವುದು ಖಂಡನೀಯ ಎಂದು ದಲಿತ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರ ಪಟ್ಟಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಧಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, “ಕನಕಪುರ ತಾಲೂಕಿನಲ್ಲಿ ಪರಿಶಿಷ್ಟರ ಮೇಲಿನ ದೌರ್ಜನ್ಯಗಳು ಮಿತಿಮೀರಿದ್ದು, ಇತ್ತೀಚೆಗೆ ಪರಿಶಿಷ್ಟರ ಕೈಕಡಿದಿದ್ದರು. ಆದರೆ ಇಂದು ಪರಿಶಿಷ್ಟ ಜನಾಂಗದ ವ್ಯಕ್ತಿ ಉನ್ನತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಸಹಿಸಲಾಗದೆ ಅವರನ್ನು ಏಕಾಏಕಿ ತೆರವುಗೊಳಿಸಿರುವುದು ನಿಜಕ್ಕೂ ಅಕ್ಷಮ್ಯ, ಪರಿಶಿಷ್ಟರ ಹಿತ ಕಾಯಬೇಕಾದ ಆಡಳಿತ ಕಚೇರಿಯಲ್ಲೇ ಜಾತಿಯ ಕಾರಣಕ್ಕೆ ಶೋಷಣೆ ನಡೆದಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ” ಎಂದರು.
ಕೆಆರ್ಎಸ್ ಪಕ್ಷದ ಮುಖಂಡ ಪ್ರಶಾಂತ್ ಹೊಸದುರ್ಗ ಮಾತನಾಡಿ, “ಕನಕಪುರದ ಎಲ್ಲ ಜನಗಳಿಗೆ ಹತ್ತಿರದಲ್ಲಿ ಸಿಗುತ್ತಿದ್ದ ಅಧಿಕಾರಿ ಅಂದರೆ ಗ್ರೇಡ್-2 ತಹಶೀಲ್ದಾರ್ ಮಾತ್ರ. ವೃದ್ಧರರು, ಅಂಗವಿಕಲರನ್ನು ಅಲೆದಾಡಿಸದೆ ಮಾಸಿಕ ವೇತನಗಳನ್ನು ಕೊಡಿಸುತ್ತಿದ್ದರು. ಅಂಥವರನ್ನು ಹಾಗೂ ಅವರ ಕಚೇರಿಯ ದಾಖಲಾತಿಗಳನ್ನು ಯಾವುದೋ ಒಂದು ಮೂಲೆಗೆ ಸ್ಥಳಾಂತರಿಸಿರುವುದು ಅನ್ಯಾಯ” ಎಂದರು.
“ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಎಲ್ಲ ತಾಲೂಕುಗಳಲ್ಲೂ ಅಧ್ಯಕ್ಷರನ್ನು ಆಯ್ಕೆ ಮಾಡಿರುವುದು ಸಂತೋಷ. ಆದರೆ ಎಲ್ಲ ಕಡೆಯೂ ಗ್ರೇಡ್-2 ತಹಶೀಲ್ದಾರರನ್ನು ಖಾಲಿ ಮಾಡಿಸಿ ಕೂರಿಸಿದ್ದಾರಾ ಅಂತ ನೋಡಿದರೆ ಇಲ್ಲ. ಕನಕಪುರದಲ್ಲಿ ಮಾತ್ರ ಜಾತಿಕಾರಣಕ್ಕೆ ಅಧಿಕಾರಿಯನ್ನು ಸ್ಥಳಾಂತರಿಸಿದ್ದು, ಸರ್ವಾಧಿಕಾರಿ ಧೋರಣೆಯ ರಾಜಕಾರಣಿಗಳು ಅಧಿಕಾರಿಯ ಘನತೆಯನ್ನು ಕಳೆದಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ಮೂಲನಿವಾಸಿ ಕಾವಲು ಪಡೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜ್ ಮೌರ್ಯ ಮಾತನಾಡಿ, “ಸಾವಿರಾರು ಜನರಿಗೆ ಅನುಕೂಲವಾಗುವಂತಹ ಸಬ್ರಿಜಿಸ್ಟಾರ್ ಕಚೇರಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಅದನ್ನು ತಾಲೂಕು ಕಚೇರಿಗೆ ಸ್ಥಳಾಂತರಿಸಿ. ಅದನ್ನು ಬಿಟ್ಟು ಶಾಶ್ವತವಲ್ಲದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಚೇರಿಗಾಗಿ ಲಕ್ಷಾಂತರ ವೆಚ್ಚದಲ್ಲಿ ಕಟ್ಟಡ ನವೀಕರಿಸುತ್ತಿರುವುದು ಏಕೆ ಎಂಬುದನ್ನು ಜನರಿಗೆ ಉತ್ತರಿಸಬೇಕು” ಎಂದರು.
“ಗ್ರೇಡ್-2 ತಹಶೀಲ್ದಾರ್ ಶಿವಕುಮಾರ್ ಕೊಠಡಿಯಲ್ಲಿ ಇದ್ದಂತಹ ಪೀಠೋಪಕರಣ ಹಾಗೂ ಕಡತಗಳನ್ನು ಬೇಕಾಬಿಟ್ಟಿಯಾಗಿ ಒಂದು ಮೂಲೆಯ ಕೊಠಡಿಯಲ್ಲಿ ತುಂಬಲಾಗಿದೆ. ಸಂವಿಧಾನಿಕ ಸ್ಥಾನ-ಮಾನವನ್ನು ರಾಜಕಾರಣಿಗಳ ಓಲೈಕೆಗಾಗಿ ಕಳೆಯಬಾರದು. ಅವರಿಗೆ ಕಚೇರಿಯಲ್ಲಿ ಸೂಕ್ತ ಜಾಗ ಕೊಡಬೇಕು” ಎಂದು ಆಗ್ರಹಿಸಿದರು.
“ಇನ್ನು ಮೂರು ದಿನಗಳೊಳಗಾಗಿ ಶಿವಕುಮಾರ್ ಇದ್ದಂತಹ ಕೊಠಡಿಯಲ್ಲೇ ಅವರಿಗೆ ಸ್ಥಳ ಒದಗಿಸದಿದ್ದಲ್ಲಿ ತಾಲೂಕಿನ ದಲಿತಪರ, ಪ್ರಗತಿಪರ, ರೈತಪರ ಸಂಘಟನೆಗಳ ಬೆಂಬಲ ಕೋರಿ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು” ಎಂದು ಎಚ್ಚರಿಸಿದ್ದಾರೆ.
ಬುದ್ದವಿಹಾರ ಸಮಿತಿಯ ದಿನೇಶ್ ಮಳಗಾಳು, ಕೆಆರ್ಎಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ತುಂಗಣಿ ಶಿವಮ್ಮ, ಬಿ ಎಂ ಕೆ ಗಣೇಶ್, ಕಚುವನಹಳ್ಳಿ ಕುಮಾರ್ ಇದ್ದರು.