ಸ್ವಚ್ಛ, ನಿಷ್ಕಳಂಕ ರಾಜಕಾರಣಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಖಾಸಗಿ ವ್ಯಕ್ತಿ ನೀಡಿದ ದೂರಿನನ್ವಯ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಆ.27ರಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ನೇತೃತ್ವದಲ್ಲಿ ರಾಜಭವನ ಚಲೋ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಕೆ.ಎಂ.ಕೃಷ್ಣಮೂರ್ತಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಒಳ್ಳೆಯವರೇ. ಆದರೆ, ಅವರು ಕೇಂದ್ರ ಸರಕಾರದ ಕೈಗೊಂಬೆಯಾಗಿದ್ದಾರೆ. ಇಕ್ಕಟ್ಟಿಗೆ ಸಿಲುಕಿಸಿ ಅವರಿಂದ ಈ ರೀತಿಯ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಖಾಸಗಿ ವ್ಯಕ್ತಿ ದೂರು ನೀಡಿದ 24 ಗಂಟೆಗಳಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿಸಲಾಗಿದೆ. ರಾಜ್ಯಪಾಲರು ಇದನ್ನು ತಡೆಯಬಹುದಿತ್ತು. ಆದರೆ, ಕೇಂದ್ರದ ತಾಳಕ್ಕೆ ಕುಣಿಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ತನಿಖಾ ಸಂಸ್ಥೆಗಳ ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥರು ಎಂದು ಸಾಬೀತುಪಡಿಸಿರುವ ಕುಮಾರಸ್ವಾಮಿ(ಗಣಿ ಹಗರಣ), ಶಶಿಕಲಾ ಜೊಲ್ಲೆ(ಮೊಟ್ಟೆ ಹಗರಣ), ಜನಾರ್ಧನ ರೆಡ್ಡಿ(ಅಧಿಕ ಆಸ್ತಿ ಗಳಿಕೆ), ಮುರುಗೇಶ್ ನಿರಾಣಿ(ಭ್ರಷ್ಟಾಚಾರ) ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಅನುಮತಿ ಕೋರಿ ಮನವಿ ಸಲ್ಲಿಸಿ ವರ್ಷಗಳಾಗಿದ್ದರೂ, ರಾಜ್ಯಪಾಲರು ಇದುವರೆಗೆ ಅನುಮತಿ ನೀಡಿಲ್ಲ. ಇದು ಅವರ ಪಕ್ಷಪಾತೀಯ ನಡೆ ಎಂದು ಆಕ್ರೋಶಗೊಂಡರು.

ಜನಾರ್ಧನ ರೆಡ್ಡಿ ಅವರಿಗೆ ಬಳ್ಳಾರಿಗೆ ಹೋಗಲು ಅವಕಾಶವೇ ಇಲ್ಲ. ಹಗರಣಗಳಲ್ಲಿ ತಪ್ಪಿತಸ್ಥರಾಗಿರುವ ಜೊಲ್ಲೆ, ನಿರಾಣಿ, ಜನಾರ್ಧನ ರೆಡ್ಡಿ ಇಂತಹವರೆಲ್ಲಾ ಸಿದ್ದರಾಮಯ್ಯ ವಿರುದ್ಧ ಪಾದಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದ ವಿಚಾರ ಎಂದು ಟೀಕಿಸಿದರು.
ಆರ್.ಅಶೋಕ್ ಅವರು ಕೈಗಾರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ. ಇಂದು ಎಷ್ಟು ಆಸ್ತಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಒಂದು ಮನೆ ಸಹ ಇಲ್ಲ. ಅವರ ಧರ್ಮಪತ್ನಿಯವರನ್ನು ಇದುವರೆಗೆ ನಾವ್ಯಾರೂ ನೋಡಿಯೇ ಇಲ್ಲ. ಅಂತಹವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಪಾರ್ವತಮ್ಮ ಅವರು ಅಣ್ಣನಿಂದ ಬಳುವಳಿಯಾಗಿ ಬಂದ ಜಾಗಕ್ಕೆ ಪರ್ಯಾಯವಾಗಿ ನಿವೇಶನ ಪಡೆದಿದ್ದಾರೆ. ಅದರಲ್ಲಿ ಯಾವುದೇ ತಪ್ಪೇನಿದೆ ಎಂದು ವಿಪಕ್ಷಗಳನ್ನು ಪ್ರಶ್ನಿಸಿದರು.
40 ವರ್ಷಗಳ ಕಾಲ ನಿಷ್ಕಳಂಕ ರಾಜಕಾರಣ ಮಾಡುತ್ತಿರುವ ಸಿದ್ದರಾಮಯ್ಯ ಅವರನ್ನು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸವಾಲೆಸೆದರು.
ದಲಿತ ಮುಖಂಡ, ಜಿಪಂ ಮಾಜಿ ಸದಸ್ಯ ರಾಜೀಕಾಂತ್ ಮಾತನಾಡಿ, ರಾಜ್ಯಪಾಲರನ್ನು ದಲಿತ ಎಂದು ಹೇಳಲಾಗುತ್ತಿದೆ. ಅವರು ಎಂದಿಗೂ ದಲಿತರ ಪರ ಧ್ವನಿ ಎತ್ತಿರುವುದನ್ನು ಕಂಡಿಲ್ಲ. ಸಂವಿಧಾನ ಕಾಪಾಡಬೇಕಿರುವ ವ್ಯಕ್ತಿಗಳು, ಸಂವಿಧಾನದ ಸಿದ್ಧಾಂತಗಳನ್ನು ಗಾಳಿಗೆ ತೂರುತ್ತಿದ್ದಾರೆ. ಪ್ರಸ್ತುತ ಸಂವಿಧಾನ ಅಪಾಯದಲ್ಲಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೇ ಸಂವಿಧಾನಕ್ಕೆ ಅಪಾಯ ಬಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದರು.
ಸಿದ್ದರಾಮಯ್ಯ ಅವರು 14 ಬಾರಿ ರಾಜ್ಯದ ಹಣಕಾಸು ಮಂತ್ರಿಯಾಗಿದ್ದವರು. ಅಂತವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದು ಖಂಡನೀಯ. ರಾಜ್ಯಪಾಲರು ರಾಜ್ಯವನ್ನು ದಿವಾಳಿ ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಇವರು ದಲಿತ ರಾಜ್ಯಪಾಲ ಅಲ್ಲ. ಬಲಿತ ರಾಜ್ಯಪಾಲ ಎಂದು ತಿವಿದರು.
ಹಿಂದುಳಿತ ವರ್ಗಗಳ ಒಕ್ಕೂಟದ ಸುಧಾ ವೆಂಕಟೇಶ್ ಮಾತನಾಡಿ, ಇಂದು ಸಂವಿಧಾನದ ಕಗ್ಗೊಲೆ ನಡೆಯುತ್ತಿದೆ. ಶೋಷಿತ ಸಮುದಾಯದವರು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರುವುದನ್ನು ಇವರಿಂದ ಸಹಿಸಲಾಗುತ್ತಿಲ್ಲ. ಆ ಕಾರಣಕ್ಕೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಸುಳ್ಳನ್ನು ಸತ್ಯವೆಂದು ಬಿಂಬಿಸಲು ಹೊರಟಿರುವ ವಿಪಕ್ಷ ನಾಯಕರಿಗೆ ಆ.27ರ ರಾಜಭವನ ಚಲೋ ಮೂಲಕ ತಕ್ಕ ಉತ್ತರ ನೀಡುತ್ತೇವೆ ಎಂದು ಸಿಡಿದೆದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಿದ್ದರಾಮಯ್ಯನವರ ಸರ್ಕಾರದ ಆತ್ಮಾವಲೋಕನಕ್ಕಿದು ಸಕಾಲ
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪಟ್ರೇನಹಳ್ಳಿ ಕೃಷ್ಣ, ರಾಮಕೃಷ್ಣಪ್ಪ, ಗೌರಿಬಿದನೂರು ಲಿಂಗಣ್ಣ, ದೇವೇಂದ್ರ, ಲಕ್ಷ್ಮಣ ಸೇರಿದಂತೆ ಇತರರು ಹಾಜರಿದ್ದರು.
