ತಂಗಳಾನ್‌ ಸಿನಿಮಾ ಮತ್ತು ತಿರುಕುಲದ ಹೊಲೆಯರು

Date:

Advertisements

ರಾಮಾನುಜರಿಂದ ಮತಾಂತರಗೊಂಡ ತಿರುಕುಲದ ಹೊಲೆಯರು, ಸ್ಥಳೀಯ ಹೊಲೆಯರೊಂದಿಗೆ ಬೆರೆಯಲಾಗದೇ, ಬ್ರಾಹ್ಮಣರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲೂ ಸಾಧ್ಯವಾಗದೇ, ತಮಿಳುನಾಡು, ಆಂಧ್ರಪ್ರದೇಶ, ಮುಂಬೈನಂತಹ ಶಹರಗಳಿಗೆ ವಲಸೆ ಹೋಗಬೇಕಾಯಿತು.

ನೀವು ಕಮಲ ಹಾಸನ್ ಅವರ ದಶಾವತಾರಂ ಸಿನಿಮಾ ನೋಡಿರಬಹುದು. ʼಓಂ ನಮಃ ಶಿವಾಯʼ ಎಂದು ಹೇಳುವಂತೆ ವೈಷ್ಣವರನ್ನು ಒತ್ತಾಯ ಮಾಡಲಾಗುತ್ತದೆ. ಅವನು ʼಓಂ ನಮೋ, ನಾರಾಯಣಾಯʼ ಎನ್ನುತ್ತಾನೆ. ಅವನನ್ನು ವಿಷ್ಣುವಿನ ವಿಗ್ರಹಕ್ಕೆ ಕಟ್ಟಿ ಸಮುದ್ರಕ್ಕೆ ಎಸೆಯಲಾಗುತ್ತದೆ. ಅದರಲ್ಲಿ ಶೈವರಿಗೂ, ವೈಷ್ಣವರಿಗೂ ನಡೆದ ಸಾಂಸ್ಕೃತಿಕ (ಯುದ್ಧ) ಹಿಂಸೆಯನ್ನು ನಿರೂಪಿಸಲಾಗಿದೆ.

ವಿಜಯನಗರ ಸಾಮ್ರಾಜ್ಯ ಹಾಳಾಗಿದ್ದು ಶೈವ – ವೈಷ್ಣವರ ವೈಷಮ್ಯದಿಂದ ಎನ್ನುವುದನ್ನು ಇತಿಹಾಸ ತಜ್ಞರು ಸಾಬೀತು ಮಾಡಿರುವ ವಿಚಾರ. ನಂತರದಲ್ಲಿ ಹರಿಯ ಹಾಗೂ ಹರನ ಭಕ್ತರನ್ನು ಒಂದುಗೂಡಿಸುವ ಸಲುವಾಗಿ ಹರಿಹರನ ವಿಗ್ರಹವನ್ನು ಸೃಷ್ಟಿಸಿ ಅದರ ಪೂರಕವಾಗಿ ಹರಿಹರರ ಪುರಾಣವನ್ನು ರಚಿಸಲಾಯಿತು. ಈ ಪುರಾಣದಲ್ಲಿ ವರ್ಣವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ ಮನುಷ್ಯ ಅಯ್ಯಪ್ಪನನ್ನು ತಂದು ತುರುಕಲಾಯಿತು. ಹರಿ-ಹರನ ಅವತಾರ, ಅಯ್ಯಪ್ಪ ಸ್ವಾಮಿ, ಇವೆಲ್ಲಾ ಕ್ರಿ.ಶ. 15ನೇ ಶತಮಾನದ ಆಸುಪಾಸಿನಲ್ಲಿ ಸೃಷ್ಟಿಯಾದ ಕಥೆಗಳು.

Advertisements

ದಕ್ಷಿಣ ಭಾರತದಲ್ಲಿ ವೈಷ್ಣವರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದರು. ಇಲ್ಲಿ ಆಳರಸರೂ ಸೇರಿದಂತೆ ಶಿವನ ಆರಾಧಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ರಾಮಾಯಣದಲ್ಲಿ ಬರುವ ರಾವಣನೂ ಸೇರಿದಂತೆ ರಾಜ ಕರಿಕಾಳ ಚೋಳನೂ ಶಿವನ ಆರಾಧಕರೇ ಆಗಿದ್ದರು ಎಂದರೆ ನೀವೇ ಊಹಿಸಿಕೊಳ್ಳಿ.

ಇದು ತಮಿಳುನಾಡಿನ ರಾಜ ಕರಿಕಾಳ ಚೋಳನ ಕಾಲದಲ್ಲಿ ನಡೆದ ಘಟನೆ. ಇದೇ ಕಾಲಘಟ್ಟದಲ್ಲಿ ಜೀವಿಸಿದ್ದ ರಾಮಾನುಜಾಚಾರ್ಯರು, ವೈಷ್ಣವ ಪಂಥದ ಜನಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿದ್ದ ಅಸ್ಪೃಶ್ಯರಿಗೆ ದೀಕ್ಷೆ ನೀಡಲು ಮುಂದಾದರು. ಆಗಿನ ಕಾಲದ ಬಹುತೇಕ ಕೆಳಜಾತಿಯ ಜನ ಶಿವನ ಆರಾಧಕರಾಗಿದ್ದರು (ಶೈವರು) ಎನ್ನುವುದನ್ನು ಮರೆಯಬಾರದು. ದೀಕ್ಷೆ ಕೊಟ್ಟು ಕೆಳಜಾತಿಯ ಜನರನ್ನು ಅವರ ಪೂರ್ವಜರ ವಿರುದ್ಧ ಗುರಾಣಿಯಾಗಿ ಬಳಸುವ ಉದ್ದೇಶವಿತ್ತೆ ಹೊರತು, ಈ ಅಸ್ಪೃಶ್ಯತೆಗೆ ತಳ್ಳಲ್ಪಟ್ಟ ಜನರನ್ನು ಕೆಳಜಾತಿಯಿಂದ ವಿಮೋಚನೆ ಗೊಳಿಸುವ ಉದ್ದೇಶದಿಂದ ಕೂಡಿರಲಿಲ್ಲ, ಇದು ಸಾಧ್ಯವೂ ಇಲ್ಲ ಎನ್ನುವುದು ಐತಿಹಾಸಿಕವಾಗಿ ಸಾಬೀತಾಗಿರುವ ಸತ್ಯ.

ರಾಮಾನುಜರ ಈ ಕೆಲಸಕ್ಕೂ ಕರ್ಮಠ ಬ್ರಾಹ್ಮಣರ ತೀವ್ರವಾದ ವಿರೋಧವಿತ್ತು. ಕಾರಣ, ಸಣ್ಣ-ಪುಟ್ಟ ಬದಲಾವಣೆಗಳನ್ನೂ ಕರ್ಮಠ ಮನಸ್ಥಿತಿಗಳು ಒಪ್ಪಲಾರವು ಎನ್ನುವುದು ಬೇರೆ ಮಾತು. ರಾಮಾನುಜಾಚಾರ್ಯರು ಮಾಡುತ್ತಿದ್ದ ಈ ತಂತ್ರಗಾರಿಕೆಯ ಅರಿವಿದ್ದ ರಾಜ ಕರಿಕಾಳ ಚೋಳ, ರಾಮಾನುಜಾಚಾರ್ಯರನ್ನು ಬಂಧಿಸುವಂತೆ ಆಜ್ಞೆ ಹೊರಡಿಸಿದ. ಈ ಅಪಾಯದ ಜಾಡನ್ನು ಅರಿತ ರಾಮಾನುಜರು, ತಲೆ ತಪ್ಪಿಸಿಕೊಂಡು ಕೊಯಮತ್ತೂರು, ಸೇಲಂ ಮಾರ್ಗವಾಗಿ ಕಾವೇರಿ ನದಿಯನ್ನು ದಾಟಿ ಚಾಮರಾಜನಗರ, ಕೊಳ್ಳೆಗಾಲದ ಮೂಲಕ ಮಂಡ್ಯದ ಹಳ್ಳಿಗೆ ಬಂದು, ಗಡಿ ಭಾಗದಲ್ಲಿದ್ದ ಮಂಡ್ಯದ ಹಳ್ಳಿಯ ಹೊಲೆಯರ ಹಟ್ಟಿಯಲ್ಲಿ ಆಶ್ರಯ ಪಡೆದರು. ಇವರನ್ನು ಹುಡುಕಿಕೊಂಡು ಬಂದ ಕರಿಕಾಳ ಚೋಳ ರಾಜನ ಸೈನಿಕರು, ಇಂತಹ ಹೆಸರಾಂತ ಗುರುಗಳು ಹೊಲೆಯರ ಹಟ್ಟಿಯಲ್ಲಿ ಆಶ್ರಯ ಪಡೆದಿರಬಹುದು ಎನ್ನುವ ಅಂದಾಜನ್ನು ಸಹ ಮಾಡಲು ಸಾಧ್ಯವಾಗಲಿಲ್ಲ.

ರಾಮಾನುಜರನ್ನು ಬೆನ್ನಟ್ಟಿ ಬಂದ ಸೈನಿಕರು, ಅಗ್ರಹಾರ ಹಾಗೂ ಪ್ರಮುಖ ಪಟ್ಟಣಗಳಲ್ಲಿ ಹುಡುಕಿದರು. ಆದರೆ ರಾಮಾನುಜರು ಸೈನಿಕರ ಕೈಗೆ ಸಿಗಲಿಲ್ಲ. ಒಂದು ವೇಳೆ ರಾಮಾನುಜರು ಸೈನಿಕರ ಕೈಗೆ ಸಿಕ್ಕಿದ್ದರೆ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾರಂತಹ ಹೆಸರಾಂತ ರಾಜಕಾರಣಿ, ವೈಜಯಂತಿ ಮಾಲಾ ಅವರಂತಹ ಚಿತ್ರ ತಾರೆ, ರಾಮಾನುಜಂ ಅವರಂತಹ ಮೇರು ವಿಜ್ಞಾನಿ ಹುಟ್ಟುತ್ತಲೇ ಇರಲಿಲ್ಲ.

ಈ ಮಂಡ್ಯದ ಹಳ್ಳಿ ಆ ಕಾಲಘಟ್ಟದಲ್ಲಿ ವಿಜಯನಗರದ ಅರಸರ ಅಧೀನದಲ್ಲಿದ್ದ ಸಾಮಂತರ ಆಳ್ವಿಕೆಗೆ ಸೇರಿದ್ದ ಗಡಿ ಭಾಗದ ಪ್ರದೇಶವಾಗಿತ್ತು. ಹಾಗೆ ಹೊಲೆಯರ ಹಟ್ಟಿಯಲ್ಲಿ ಕೆಲವು ದಿನಗಳ ಕಾಲ ತಲೆ ಮರೆಸಿಕೊಂಡು ಆಶ್ರಯ ಪಡೆದಿದ್ದ ರಾಮಾನುಜಾ ಚಾರ್ಯರನ್ನು ಅಲ್ಲಿನ ಹಿರಿಯರ ಆಣತಿಯ ಮೇರೆಗೆ, ಮೇನೆಯಲ್ಲಿ ಕೂರಿಸಿಕೊಂಡು, ಮೇಲುಕೋಟೆಗೆ ತಲುಪಿಸಿದರು. ತಮ್ಮ ಜೀವ ಉಳಿಸಿದ್ದು ಅಸ್ಪೃಶ್ಯರು ಎನ್ನುವ ಕಳಂಕ, ಇತಿಹಾಸದ ಪುಟಗಳಲ್ಲಿ ಉಳಿದು ಬಿಡಬಾರದು ಎನ್ನುವ ದೃಷ್ಟಿಯಿಂದ ಹೊಲೆಯರಿಗೆ ತಿರುಕುಲದ ಹೊಲೆಯರು ಎಂದು ದೀಕ್ಷೆ ನೀಡಲಾಯಿತು.

ಈಗಲೂ ಮಂಡ್ಯ ಸುತ್ತ ಮುತ್ತಲಿನ ಭಾಗದಲ್ಲಿರುವ ಅಯ್ಯಂಗಾರಿ ಬ್ರಾಹ್ಮಣರನ್ನು ತಿರುಕುಲದ ಹೊಲೇರು ಎಂದು ಹೆಸರಿಸುತ್ತಾರೆ. ಹೀಗೆ ದೀಕ್ಷೆ ಪಡೆದ ಹೊಲೆಯರು, ನಿಜವಾಗಿಯೂ ಬ್ರಾಹ್ಮಣ್ಯದ ಎತ್ತರಕ್ಕೆ ಏರಲು ಸಾಧ್ಯವಾಯಿತೇ?. ಹಿಂದೂ ಧರ್ಮ ರೂಪಿಸಿರುವ ಈ ಕೆಟ್ಟ ವರ್ಣ ವ್ಯವಸ್ಥೆಯಲ್ಲಿ ಇಂತಹ ಎಷ್ಟೇ ಪ್ರಯತ್ನಗಳು ನಡೆದರೂ ಕಿಂಚಿತ್ತೂ ಬದಲಾವಣೆಯೂ ಸಾಧ್ಯವಿಲ್ಲ ಎನ್ನುವುದು ನಮ್ಮ ಕಣ್ಣ ಮುಂದೆ ಇರುವ ಐತಿಹಾಸಿಕ ಸತ್ಯ.

ಹೀಗೆ ರಾಮಾನುಜರಿಂದ ಮತಾಂತರಗೊಂಡ ಈ ತಿರುಕುಲದ ಹೊಲೆಯರು, ಸ್ಥಳೀಯ ಹೊಲೆಯರೊಂದಿಗೆ ಬೆರೆಯಲಾಗದೇ, ಬ್ರಾಹ್ಮಣರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗದೇ, ತಮಿಳುನಾಡು, ಆಂಧ್ರಪ್ರದೇಶ, ಮುಂಬೈನಂತಹ ಶಹರಗಳಿಗೆ ವಲಸೆ ಹೋಗಬೇಕಾಯಿತು. ನಿಜವಾಗಿಯೂ ಜಾತಿ ವಿನಾಶವಾಗಬೇಕಾದರೆ, ಜಾತಿವಾದವನ್ನು ಅನುಸರಿಸುವ, ಅದನ್ನು ಜಾರಿ ಮಾಡುವ ಗುಂಪಿನಲ್ಲಿ ಬದಲಾವಣೆ ಬರಬೇಕು. ದೀಕ್ಷೆ ಪಡೆದ ಒಂದು ಸಣ್ಣ ಗುಂಪಿನ ತುಣುಕನ್ನು ತಂಗಳಾನ್‌ ತಮಿಳು ಸಿನಿಮಾದಲ್ಲಿ ತೋರಿಸಲಾಗಿದೆ. ಇದನ್ನೇ ದೊಡ್ಡ ಬದಲಾವಣೆ ಎನ್ನುವುದು ಸೂಕ್ತವಲ್ಲ. ʼವಸಂತ ಕಾಲದ ಮೇಘ, ಮಳೆ ಮೋಡವಲ್ಲʼ ಎನ್ನುವ ಮಾತಿಗೆ ಇಂಬು ಕೊಡುತ್ತದೆ.

ರಮೇಶ್ ಸಂಕ್ರಾಂತಿ
ರಮೇಶ್‌ ಸಂಕ್ರಾಂತಿ
+ posts

ಲೇಖಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

4 COMMENTS

  1. I long back told this story for our community people ,but so many were not believed this but some of our community people were accepted this including one srinivas,ie Dravida Hindu Parishad chairman.

  2. ಸ್ವಾಮಿಗಳೇ ನೀವು ಕನ್ನಡ ಬರಹಗಾರ ರೇ ಅಥವಾ ತಮಿಳು ಚಲನ ಚಿತ್ರ ಪ್ರಚಾರ ಕರೆ. ನಾನು ಮೂರು ವರ್ಷ ತಮಿಳು ನಾಡಿನಲ್ಲಿ ಇದ್ದು ಬಂದವನು. ಅಲ್ಲಿನ ಎಲ್ಲಾ ಜಾತಿಯ ಜನ ಮೊದಲು ತಮಿಳು ಭಾಷೆ ಗೆ ಪ್ರಾಮುಖ್ಯತೆ, ಅನಂತರ ಜಾತಿ ಗೆ, ನೀವು ಕನ್ನಡ ಲೇಖಕರಾಗಿ ತಮಿಳು ಚಿತ್ರವನ್ನು ಪ್ರೊಸ್ತಾಹ ಮಾಡುವುದು ಯಾವ ಕನ್ನಡ ಅಭಿಮಾನ.

  3. ಮರಸು ನಾಡಿನ ಹೊಲೆಯರು ಎಂಬ ಮೂರು ನಾಮದ ಹೊಲೆಯರು ಕರ್ನಾಟಕ ಪ್ರದೇಶಕ್ಕೆ ವಲಸೆ ಬಂದರು. ಇವರ ಮೂಲ ತಮಿಳುನಾಡಿನ ಶ್ರೀರಂಗಮ್. ರಾಮಾನುಜಾರ್ಯರ ಅನುಯಾಯಿಗಳು. ಅಲ್ಲಿಂದ ವಲಸೆ ಬಂದವರು ಮರಸು ನಾಡು ಈಗಿನ ಡೆಂಕನಿಕೋಟೆ ಆನೇಕಲ್ಲು ಹಾರಗದ್ದೆ ಬೆಂಗಳೂರು ಗ್ರಾಮಾಂತರ, ಸ್ವಲ್ಪ ಭಾಗ ಮೈಸೂರು ಮೇಲುಕೋಟೆ,ಕೋಲಾರ ಪ್ರದೇಶ ಗಳಲ್ಲಿ ನೆಲಸಿದರು ಎಂಬ ಮಾಹಿತಿ ಬೆಂಗಳೂರಿನ mythic society ಪತ್ರಗಾರದಲ್ಲಿ ಇದೆ. ಅಲ್ಲಿನ ಅಧಿಕಾರಿಯೊಬ್ಬರು ಇದರ ಬಗ್ಗೆ ನನಗೆ P hd ಮಾಡಲು ಒತ್ತಾಯಿಸಿದರು. ನಾನು ಬೇರೆ ವಿಷಯದ ಬಗ್ಗೆ ಶಾಸನ ಹುಡುಕಲು ಹೋದಾಗ ನಡೆದ ಸಂಗತಿ ನೆನಪಿಗೆ ಬಂತು

  4. ತಮಿಳರಿಗೆ ಭಾಷೆ ಮುಖ್ಯ. ಕನ್ನಡಿಗರಿಗೆ ಜಾತಿ ಮುಖ್ಯ. ಕೊನೆಯಲ್ಲಿ ಕೋಟಿ ತಿಂದ ಬಾಳೆ ಹಣ್ಣು ಸಿಪ್ಪೆಯನ್ನು ಮೇಕೆ ಮೂತಿಗೆ ಮೆತ್ತಿದಂತೆ ಹಿಂದೂಗಳು ಅಸಹಿಷ್ಣರು ಎನ್ನುತ್ತಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

Download Eedina App Android / iOS

X