ಸಾಹಿತ್ಯ, ಸಂಗೀತ, ಕಾನೂನು, ಕೃಷಿ, ರಾಜಕಾರಣ... ಹೀಗೆ ಎಲ್ಲವನ್ನೂ ಬಲ್ಲ, ಎಲ್ಲ ಕ್ಷೇತ್ರಗಳ ಜನರೊಂದಿಗೂ ಉತ್ತಮ ಬಾಂಧವ್ಯವನ್ನಿಟ್ಟುಕೊಂಡಿದ್ದ ಕೆ.ಎಚ್. ಶ್ರೀನಿವಾಸ್ ಆ. 30ರಂದು ನಮ್ಮನ್ನಗಲಿದ್ದಾರೆ. ಅವರಿಗೆ ದೇವರಾಜ ಅರಸು ಜೊತೆಗೆ ಆಪ್ತ ಒಡನಾಟವಿತ್ತು. ಕಳೆದ ಕಾಲವನ್ನು ಮೆಲುಕು ಹಾಕಿದ್ದು, ಅರಸು ಕುರಿತು ಅವರಾಡಿದ್ದು… ಆ ಮಾತು, ಚಿಂತನೆ ಓದುಗರಿಗಾಗಿ.
ಕಾನಗೋಡು ಮನೆ, ಒಳಸೊನ್ನೆ ಹೊರಸೊನ್ನೆ, ಚಂದ್ರ ನೀನೊಬ್ಬನೆ- ಮೂರು ಕವನ ಸಂಕಲನಗಳು; ಗುಬ್ಬಚ್ಚಿಯ ಗೂಡು ಎಂಬ ಚುಟುಕುಗಳ ಸಂಕಲನ; ಕೀನ್ ಎಂಬ ನಾಟಕ, ಸಾರ್ತೃನ ಪದಚರಿತ, ಸಾದತ್ ಹಸನ್ ಮಾಂಟೊ ಕುರಿತ ಅನುವಾದಿತ ಕೃತಿಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ಕೊಡುಗೆಯಾಗಿ ಕೊಟ್ಟ ಕೆ.ಎಚ್. ಶ್ರೀನಿವಾಸ್ ಶಿವಮೊಗ್ಗ ಜಿಲ್ಲೆಯ ಸಾಗರದವರು. 1939ರಲ್ಲಿ ಜನಿಸಿದವರು.
ಕೆ.ಎಚ್. ಶ್ರೀನಿವಾಸರ ಯೌವನದ ದಿನಗಳಲ್ಲಿ ಸಾಗರ ಸಮಾಜವಾದಿಗಳ ತವರೂರಾಗಿತ್ತು. ಗೇಣಿದಾರರ ಹೋರಾಟದ ಕಣವಾಗಿತ್ತು. ಸೈದ್ಧಾಂತಿಕ ರಾಜಕಾರಣಿಗಳನ್ನು ಹುಟ್ಟುಹಾಕಿದ ಸ್ಥಳವಾಗಿತ್ತು. ತಂದೆಯ ಕಾಲಕ್ಕೇ ಪ್ರಭುತ್ವದ ವಿರುದ್ಧ ನಿಲ್ಲುವ, ತಮ್ಮ ಮನೆಯನ್ನೇ ಅಡಗುತಾಣವನ್ನಾಗಿ ಪರಿವರ್ತಿಸಿದ ಕೀರ್ತಿಗೆ ಇವರ ಕುಟುಂಬ ಭಾಜನವಾಗಿತ್ತು.
ಅಂತಹ ಪರಿಸರದಿಂದ ಬಂದ ಶ್ರೀನಿವಾಸರು ಸಹಜವಾಗಿಯೇ ಸಮಾಜವಾದಿ ಸಿದ್ಧಾಂತ, ಪ್ರಗತಿಪರ ಆಲೋಚನೆ ಮತ್ತು ಜಾತ್ಯತೀತ ನಿಲುವುಗಳನ್ನು ಮೈಗೂಡಿಸಿಕೊಂಡು ಬೆಳೆದರು. ಕುವೆಂಪು-ಗೋಪಾಲಗೌಡರ ಪ್ರಭಾವಕ್ಕೆ ಒಳಗಾಗಿ, ಅನಂತಮೂರ್ತಿ-ಲಂಕೇಶರಂತಹ ಸಾಹಿತಿಗಳ ಸಹವಾಸಕ್ಕೆ ಬಿದ್ದು, ಸಮಾಜವಾದಿ ಹೋರಾಟಗಾರರ ಒಡನಾಟವಿಟ್ಟುಕೊಂಡವರು. ಕವಿ ಹೃದಯದ, ಸೌಮ್ಯಸ್ವಭಾವದ ವ್ಯಕ್ತಿ ಎಂದೇ ಹೆಸರಾದ ಕೆ.ಎಚ್. ಶ್ರೀನಿವಾಸ್, ಇಂಗ್ಲಿಷ್ ಎಂಎ ಜೊತೆಗೆ ಕಾನೂನು ಪದವಿ ಪಡೆದವರು. ನ್ಯಾಯವಾದಿಯಾಗಬೇಕಿದ್ದವರು ಆಕಸ್ಮಿಕವಾಗಿ ರಾಜಕಾರಣಿಯಾದರು.
ಮೂರು ಬಾರಿ ಶಾಸಕರಾಗಿ ಗೆದ್ದು, ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡ ಶ್ರೀನಿವಾಸರು ಗೆಲುವಿಗಿಂತ ಹೆಚ್ಚಾಗಿ ಸೋಲನ್ನೇ ಕಂಡವರು. ದೇವರಾಜ ಅರಸು ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಇಂಧನ, ವಾರ್ತಾ, ಯುವಜನ ಸೇವೆ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಯೋಜನಾ ಖಾತೆಗಳನ್ನು ನಿರ್ವಹಿಸಿದವರು. ಅರಸು ಮತ್ತು ಜೆ.ಎಚ್. ಪಟೇಲರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗಿ ಮುಖ್ಯಮಂತ್ರಿಗಳ ಕಚೇರಿಯ ರಾಜಕಾರಣವನ್ನು ಅರೆದು ಕುಡಿದವರು.
1990ರಲ್ಲಿ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಶ್ರೀನಿವಾಸರು, 1999ರಲ್ಲಿ ಜೆ.ಎಚ್. ಪಟೇಲರ ಮೂಲಕ ಜನತಾದಳ ಸೇರಿ ವಿಧಾನ ಪರಿಷತ್ ಸದಸ್ಯರಾಗಿ, ಮೇಲ್ಮನೆ ನಾಯಕರಾದರು. ಎಸ್.ಎಂ. ಕೃಷ್ಣರ ಕಾಲಕ್ಕೆ ಮತ್ತೆ ಕಾಂಗ್ರೆಸ್ಗೆ ಮರಳಿ ಬಂದರು. ನಂತರ ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ ಬಿಜೆಪಿ ಸೇರಿದರು. ಅವರು ಬಿಜೆಪಿ ಬಿಟ್ಟು ಕೆಜೆಪಿ ಮಾಡಿದಾಗ, ಅಲ್ಲೂ ಸ್ವಲ್ಪ ದಿನ ಇದ್ದರು.
ರಾಜಕೀಯದಲ್ಲಿದ್ದರೂ ವೃತ್ತಿವಂತ ರಾಜಕಾರಣಿಯಾಗಿರದೆ, ಕಾನೂನು ಪದವಿ ಗಳಿಸಿದ್ದರೂ ವಕೀಲಿಕೆ ಮಾಡದೆ, ಓದುವುದು, ಬರೆಯುವುದು, ಸಂಗೀತ ಕೇಳುವುದರ ಕಡೆ ಒಲವು ಬೆಳೆಸಿಕೊಂಡಿದ್ದರು. ಅವರು ಹುಟ್ಟಿದ ಊರು ಹೋರಾಟವನ್ನು ಕಲಿಸಿದರೆ, ಸಾಹಿತಿಗಳ ಸಹವಾಸ ಕಲೆ-ಸಂಗೀತ-ಸಾಹಿತ್ಯದತ್ತ ಸೆಳೆದಿತ್ತು. ಸಾಗರದ ಲಾಲ್ ಬಹದ್ದೂರ್ ವಿದ್ಯಾ ಕೇಂದ್ರದ ಉಸ್ತುವಾರಿ ಹೊತ್ತಿದ್ದರು. ದೇವರಾಜ ಅರಸು ಅವರ ನೆನಪಿನಲ್ಲಿ ಅರಸು ಕಲಾಕ್ಷೇತ್ರ ಸ್ಥಾಪಿಸಿದ್ದರು. ಸಾಹಿತ್ಯ, ಸಂಗೀತ, ಕಾನೂನು, ಕೃಷಿ, ರಾಜಕಾರಣ… ಹೀಗೆ ಎಲ್ಲವನ್ನೂ ಬಲ್ಲ, ಎಲ್ಲ ಕ್ಷೇತ್ರಗಳ ಜನರೊಂದಿಗೂ ಉತ್ತಮ ಬಾಂಧವ್ಯವನ್ನಿಟ್ಟುಕೊಂಡ ಶ್ರೀನಿವಾಸರು ಇಂದು(ಆ.30) ನಮ್ಮನ್ನಗಲಿದ್ದಾರೆ.
ಕೆ.ಎಚ್.ಶ್ರೀನಿವಾಸರು, 1967ರಿಂದ 1982ರವರೆಗೆ ದೇವರಾಜ ಅರಸು ಅವರನ್ನು ಹತ್ತಿರದಿಂದ ಬಲ್ಲವರು, ಅವರ ಆಪ್ತ ಬಳಗದಲ್ಲೊಬ್ಬರು. ಏಳು ವರ್ಷಗಳ ಹಿಂದೆ, ದೇವರಾಜ ಅರಸು ಅವರೊಂದಿಗೆ ಕಳೆದ ಕಾಲವನ್ನು ಮೆಲುಕು ಹಾಕಲು, ಅವರನ್ನು ಕಂಡು ಮಾತನಾಡಿಸಿದ್ದೆ. ಅರಸು ಕುರಿತು ಅವರಾಡಿದ ಮಾತುಗಳು ಇಂದು ಕೂಡ ಮುಖ್ಯ ಎನಿಸುವಂತಿವೆ. ಇವತ್ತಿನ ರಾಜಕಾರಣಕ್ಕೆ ಮದ್ದಾಗಲಿವೆ. ಅದರ ಆಯ್ದ ಭಾಗ ಇಲ್ಲಿದೆ…
ಲಾಯರ್ ಆಗಬೇಕಾದವನು ಶಾಸಕನಾದೆ
1967ರಲ್ಲಿ ವಿದ್ಯಾಭ್ಯಾಸ ಮುಗಿಸಿ, ದೆಹಲಿಯ ಸೀನಿಯರ್ ಅಡ್ವೋಕೇಟ್ರೊಂದಿಗೆ ಮಾತಾಡಿ, ಅವರ ಕೈಕೆಳಗೆ ಕೆಲಸ ಮಾಡಲು ದಿಲ್ಲಿಗೆ ಹೋಗಲು ತೀರ್ಮಾನಿಸಿದ್ದೆ. ದಿಲ್ಲಿಗೆ ಹೋಗಲು ಇನ್ನೂ ಟೈಮಿತ್ತು, ಊರಿಗೆ ಹೋಗಿ ಬರೋಣವೆಂದು ಸಾಗರಕ್ಕೆ ಹೋದೆ. ಅಲ್ಲಿ ನನ್ನ ಸೋಷಿಯಲಿಸ್ಟ್ ಪಾರ್ಟಿ ಗೆಳೆಯರು ಸಿಕ್ಕಿದರು. ಅಂದು ಅಲ್ಲೊಂದು ಸಭೆ ಇದ್ದು, ಅವರು ಭಾಗವಹಿಸುವುದಿತ್ತು. ನನ್ನನ್ನೂ ಬಲವಂತವಾಗಿ ಆ ಸಭೆಗೆ ಕರೆದುಕೊಂಡು ಹೋದರು. ಆಕಸ್ಮಿಕವಾಗಿ ಹೋದವನು, ಅಲ್ಲಿ ನಡೆದ ವಿದ್ಯಮಾನಗಳಿಂದಾಗಿ ಚುನಾವಣೆಗೆ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದೆ, ಗೆದ್ದು ಶಾಸಕನಾದೆ. ಲಾಯರ್ ಆಗಿ ದಿಲ್ಲಿಯ ಸುಪ್ರೀಂ ಕೋರ್ಟ್ ಮೆಟ್ಟಿಲು ತುಳಿಯಬೇಕಾದವನು ಶಾಸಕನಾಗಿ ಬೆಂಗಳೂರಿನ ವಿಧಾನಸೌಧದ ಮೆಟ್ಟಿಲು ಹತ್ತಿದೆ.
ಆಗ ದೇವರಾಜ ಅರಸು ಅವರು ಸಾರಿಗೆ ಮಂತ್ರಿಯಾಗಿದ್ದರು. ಅವರ ಗತ್ತು-ವಿದ್ವತ್ತು-ಗಾಂಭೀರ್ಯವನ್ನು ಕೇಳಿದ್ದೆ, ತುಂಬಾನೆ ಆದರ್ಶಗಳಿರುವ ಒಳ್ಳೆಯ ಮನುಷ್ಯ ಅಂತ ಗೊತ್ತಿತ್ತು, ಪರಿಚಯವಿರಲಿಲ್ಲ. ಒಂದು ವರ್ಷದೊಳಗೆ ಶಾಸನಸಭೆಯಲ್ಲೊಮ್ಮೆ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸುವ ಕೆಲಸ ನನ್ನದಾಗಿತ್ತು. ರಾಜ್ಯಶಾಸ್ತ್ರ ಓದಿದ್ದೆ, ಕಾನೂನು ಪದವಿ ಪಡೆದಿದ್ದೆ, ಸಮಾಜವಾದಿ ಗೋಪಾಲಗೌಡರ ಸಂಪರ್ಕವಿತ್ತು… ಈ ಹಿನ್ನೆಲೆಯಲ್ಲಿ ಅವತ್ತು ನಾನು ಮಾಡಿದ ಭಾಷಣ ನನ್ನನ್ನು ಶಾಸನ ಸಭೆಯ ಮೂಲಕ ನಾಡಿಗೆ ಪರಿಚಯಿಸಿತು. ಹಲವು ಹಿರಿಯ ನಾಯಕರ ಕಣ್ಣಿಗೆ ಬಿದ್ದೆ. ಅರಸು ಕೂಡ ನನ್ನನ್ನು ಗಮನಿಸಿದರು. ಭಾಷಣ ಮೆಚ್ಚಿ ಮಾತನಾಡಿದರು.
1968ರಲ್ಲಿ ನಿಜಲಿಂಗಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು. ಆಗ ಸಹಜವಾಗಿಯೇ ಮುಖ್ಯಮಂತ್ರಿಯಾಗುವ ರೇಸ್ನಲ್ಲಿ ಅರಸು, ಹೆಗಡೆ ಮತ್ತು ವೀರೇಂದ್ರ ಪಾಟೀಲರಿದ್ದರು. ನಿಜಲಿಂಗಪ್ಪನವರಿಗೆ ದೇವರಾಜ ಅರಸು ಅವರನ್ನು ಮುಖ್ಯಮಂತ್ರಿ ಮಾಡಬೇಕೆಂಬುದಿತ್ತು. ಅರಸರಿಗೂ ಸಿಎಂ ಆಗಬೇಕೆಂಬ ಆಸೆ ಇತ್ತು. ಆದರೆ ರಾಜಕಾರಣ, ಯಾರಿಗೆ ಯಾರು ಯಾವಾಗ ವಿರೋಧಿಗಳಾಗುತ್ತಾರೆಂದು ಹೇಳಲಿಕ್ಕೆ ಬರುವುದಿಲ್ಲ. ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾದರು. ಅರಸು ಅವರನ್ನು ಪಕ್ಷದಿಂದ ಎಕ್ಸ್ಪೆಲ್ ಮಾಡಿ ಅವಮಾನಿಸಿದರು. ಅರಸು ವಿರೋಧಿಗಳ ಗುಂಪಿನಲ್ಲಿ ಗುರುತಿಸಿಕೊಂಡು ಸರಕಾರದಿಂದ ಹೊರಗುಳಿದರು.
ಇದನ್ನು ಓದಿದ್ದೀರಾ?: ಆರ್ಎಸ್ಎಸ್ – ಬಿಜೆಪಿಯ ಮುಖವಾಡವನ್ನು ಹೊಸ ತಲೆಮಾರಿನ ಓದುಗರಿಗೆ ಪರಿಚಯಿಸಿದ ನೂರಾನಿ
ಆ ನಂತರ ನಾನು, ವೀರೇಂದ್ರ ಪಾಟೀಲರ ಸರಕಾರದಲ್ಲಿ ಶಾಸಕಾಂಗ ಪಕ್ಷದ ಕಾರ್ಯದರ್ಶಿಯಾಗಿ ನೇಮಕಗೊಂಡೆ. ಶಾಸನ ಸಭೆಗಳಲ್ಲಿ ಯಾರು ಮಾತನಾಡಬೇಕು, ಯಾರು ಪ್ರಶ್ನೆ ಮಾಡಬೇಕು, ಮಾತನಾಡುವವರಿಗೆ ಸಮಯ ಅಲಾಟ್ ಮಾಡೋದು ಇದೆಲ್ಲ ನಾನೇ ನಿರ್ಧರಿಸುತ್ತಿದ್ದೆ. ಅರಸು ಡಿಬೇಟ್ಗಳನ್ನು ಇಷ್ಟಪಡ್ತಿದ್ದರು. ಇಂಪಾರ್ಟೆಂಟ್ ಸಬ್ಜೆಕ್ಟ್ ಗಳ ಮೇಲೆ ಮಾತಾಡೋರು. ಅವರು ಬಂದು, ‘ಮಿಸ್ಟರ್ ಶ್ರೀನಿವಾಸ್, ಡು ಯೂ ಥಿಂಕ್ ದಟ್ ಐ ಯಾಮ್ ಸ್ಪೀಕ್ ಟುಡೆ’ ಎಂದರು. ನಾನು ‘ವೈ ನಾಟ್ ಸರ್..’ ಎಂದು ಟೈಮ್ ಅಲಾಟ್ ಮಾಡಿದೆ. ಅವರು ಕೇಳಿದ ರೀತಿ ವಿಶೇಷವಾಗಿತ್ತು. ಅದು ನನಗೆ ಇಷ್ಟವಾಯಿತು. ಅವರಿಗೂ ನಾನು ವೀರೇಂದ್ರ ಪಾಟೀಲರ ಥರ ಅಲ್ಲ ಅನ್ನಿಸಿ ಹತ್ತಿರವಾದರು. ಹೀಗೆ ನಾವಿಬ್ಬರೂ ಒಂದಾಗುವ ಸ್ಥಿತಿ ನಿರ್ಮಾಣವಾಯಿತು. 1969ರಲ್ಲಿ ಕಾಂಗ್ರೆಸ್- ಇಂಡಿಕೇಟ್ ಹಾಗೂ ಸಿಂಡಿಕೇಟ್ ಕಾಂಗ್ರೆಸ್ ಎಂದು ಇಬ್ಭಾಗವಾಯಿತು.
ಅರಸು ಸಿದ್ಧತೆ
1972ರ ವಿಧಾನಸಭಾ ಚುನಾವಣೆಯಲ್ಲಿ ಅರಸು ಗೆದ್ದು ಮುಖ್ಯಮಂತ್ರಿಯಾದರು. ನಾನು ರಾಜಕೀಯದಿಂದ ದೂರ ಉಳಿದು, ಕರಿಕೋಟು ಧರಿಸಿ, ವಕೀಲಿಕೆ ಮಾಡಲು ಹೈಕೋರ್ಟ್ನತ್ತ ಮುಖ ಮಾಡಿದೆ. ಆಗಲಿಲ್ಲ, ಶಿವಮೊಗ್ಗಕ್ಕೆ ಹೋಗಿ ಅಲ್ಲಿ ಪ್ರಾಕ್ಟೀಸ್ ಕಂಟಿನ್ಯೂ ಮಾಡಿದೆ. ಆಗೊಂದು ದಿನ ಅರಸು ನನ್ನನ್ನು ಕರೆಸಿದರು. ಪ್ಯಾಲೆಸ್ ಗ್ರೌಂಡ್ನಲ್ಲಿ ವಾಕಿಂಗ್ ಮಾಡ್ತಾ ಭೂ ಸುಧಾರಣೆ ಕಾಯ್ದೆ ಬಗೆಗಿನ ಅವರ ಸಿದ್ಧತೆಗಳನ್ನು ವಿವರಿಸಿದರು. ನನಗೆ ನಮ್ಮ ಸಾಗರ ಶಿವಮೊಗ್ಗ ಕಡೆಯ ಗೇಣಿದಾರರ ಹೋರಾಟದ ಕತೆ ನೆನಪಾಯಿತು. ಈಗ ಗೆದ್ದಿರುವ, ಸೋಷಿಯಲಿಸ್ಟ್ ಪಾರ್ಟಿಯ ಕಾಗೋಡು ತಿಮ್ಮಪ್ಪ, ಬಂಗಾರಪ್ಪ, ಕೋಣಂದೂರು ಲಿಂಗಪ್ಪನವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ, ಸೋಷಿಯಲಿಸ್ಟ್ ಪಾರ್ಟಿಯ ಅಸ್ತಿತ್ವವೂ ಉಳಿಯುತ್ತೆ, ನಿಮ್ಮ ಭೂ ಸುಧಾರಣೆ ಕಾಯ್ದೆಗೆ ನ್ಯಾಯವೂ ದೊರಕುತ್ತೆ, ರಾಜಕೀಯವಾಗಿ ನಿಮಗೂ ಬಲ ಬರುತ್ತೆ ಎಂದು ಬಹಳ ಸ್ಟ್ರಾಂಗ್ ಆಗಿ ಹೇಳಿದೆ.
ನಾನು ಅವರಲ್ಲಿ ಕಂಡ ವಿಶೇಷವಾದ ಗುಣವೇ ಅದು. ಯಾರಾದರೂ ಏನಾದರೂ ಹೇಳಿದರೆ, ಸಹನೆಯಿಂದ ಕೇಳುತ್ತಿದ್ದರು. ಕೇಳಿದ್ದರ ಸಾಧಕ-ಬಾಧಕಗಳ ತುಲನೆ ಮಾಡುತ್ತಿದ್ದರು. ತಮ್ಮ ತಲೆಯೊಳಗಿರುವ ಸಿದ್ಧತೆಗಳೊಂದಿಗೆ ಸಮೀಕರಿಸುತ್ತಿದ್ದರು. ಆನಂತರ ಅನುಷ್ಠಾನಕ್ಕಿಳಿಸುತ್ತಿದ್ದರು.
ಅಂತಃಕರುಣಿ ಅರಸು
ನಾನು ಈ ರಾಜಕಾರಣವೇ ಬೇಡ ಎಂದು ಶಿವಮೊಗ್ಗದಲ್ಲಿ ವಕೀಲಿಕೆ ಮಾಡಿಕೊಂಡಿದ್ದೆ. ಆಗ ಒಂದು ದಿನ, ನನ್ನ ಗೆಳೆಯ ಪಾರ್ಥಸಾರಥಿ, ಭದ್ರಾವತಿಯ ಪೇಪರ್ ಮಿಲ್ನಲ್ಲಿ ಅಧಿಕಾರಿಯಾಗಿದ್ದರು, ಹುಡುಕಿಕೊಂಡು ಬಂದವರೆ, ‘ಅವನು ಎಲ್ಲಿದ್ರು ಸರಿ, ಹುಡುಕಿ ಹಿಡಿದುಕೊಂಡು ಬಾ ಅಂತ ಅರಸು ಹೇಳಿಕಳುಹಿಸಿದ್ದಾರಪ್ಪ’ ಅಂದರು. ‘ನಾನ್ ಯಾಕ್ ಬೇಕಪ್ಪ ಅವರಿಗೆ, ಈಗ….’ ಎಂದು ರಾಗ ಎಳೆದೆ. ‘ಅದೆಲ್ಲ ಗೊತ್ತಿಲ್ಲ, ನೀನು ಈ ತಕ್ಷಣ ಬಸ್ ಹತ್ತಿ ಬೆಂಗಳೂರಿಗೆ ಹೋಗಿ ಅರಸು ಅವರನ್ನು ಕಾಣಬೇಕು’ ಎಂದು ಆರ್ಡರ್ ಮಾಡಿದರು.
ಬೆಂಗಳೂರಿಗೆ ಬರುವಷ್ಟರಲ್ಲಿ ಸಂಜೆಯಾಗಿತ್ತು, ಅಶೋಕ ಹೋಟೆಲ್ ಪಕ್ಕದ ಮುಖ್ಯಮಂತ್ರಿಗಳ ನಿವಾಸ, ಆಗ ಎರಡೂ ಮನೆ ಒಂದೇ ಆಗಿತ್ತು. ಮನೆ ಮುಂದೆ ಜನವೋ ಜನ. ಖಾಲಿಯಾಗಲಿ ಎಂದು ರಸ್ತೆಯಲ್ಲಿಯೇ ನಿಂತೆ. ಕೊನೆಗೆ ಜನ ಖಾಲಿಯಾದ್ರು. ಆಗ ಹೋಗಿ ಪೊಲೀಸರಿಗೆ, ‘ನನ್ನ ಹೆಸರು ಕೆ.ಎಚ್. ಶ್ರೀನಿವಾಸ್ ಅಂತ, ಸಿಎಂ ಸಾಹೇಬರು ಬರಕೇಳಿದ್ರು, ಅವರಿಗೆ ವಿಷಯ ಮುಟ್ಟಿಸಬಹುದಾ’ ಎಂದು ವಿನಂತಿಸಿಕೊಂಡೆ. ಆತ ಹೋಗಿ ಹೇಳಿದ.
ಇತ್ತ ನಾನು, ಅವರು ಮುಖ್ಯಮಂತ್ರಿಗಳು, ಬಿಡುವಿರಲ್ಲ, ಈತ ಹೋಗಿ ಹೇಳಿದರೆ ಅದೇ ನನ್ನ ಪುಣ್ಯ. ವಿಷಯ ತಿಳಿದ ಅರಸು ಹೆಚ್ಚೆಂದರೆ ನಾಳೆ ಬರಲಿಕ್ಕೇಳಿ ಎನ್ನಬಹುದು. ಅಥವಾ ಒಳಕ್ಕೆ ಕರೀರಿ ಎಂಬ ಸಂದೇಶ ಬರಬಹುದು ಎಂದು ಏನೇನೋ ಯೋಚನೆಗಳನ್ನು ತಲೆಗೆ ಹಾಕಿಕೊಂಡು ಕಾಯುತ್ತಾ ನಿಂತೆ. ನೋಡಿದರೆ ಅವರೇ, ಅರಸರೇ ನಡಕೊಂಡು ನಾನಿದ್ದಲ್ಲಿಗೇ ಬಂದರು. ‘ಏನಯ್ಯಾ, ಯಾಕಯ್ಯ ಇಲ್ಲಿ ನಿಂತಿದ್ದೀಯಾ’ ಎಂದು ಒಳಕ್ಕೆ ಕರೆದುಕೊಂಡು ಹೋದರು. ಆ ಮಾನವೀಯತೆ, ಆ ಹೃದಯ ವೈಶಾಲ್ಯತೆ ಇದೆಯಲ್ಲ ಅದೇ ಅರಸು. ಅದು ಅವರಲ್ಲಿ ಮಾತ್ರ.

ಸಮಾನ ಮನಸ್ಥಿತಿ ಒಂದು ಮಾಡಿತು
ಅರಸು ಸರಕಾರ ಬಂದು ಒಂದು ವರ್ಷವಾಗಿದ್ದರೂ, ಆಗಲೇ ಅವರ ವಿರುದ್ಧ ಸಣ್ಣ ಮಟ್ಟದಲ್ಲಿ ಭಿನ್ನಮತ ಶುರುವಾಗಿತ್ತು. ಕೆ.ಎಚ್. ಪಾಟೀಲರ ಸೆಕ್ರೆಟರಿಯಾಗಿದ್ದ ರೆಡ್ಡಿ ಅನ್ನುವ ವ್ಯಕ್ತಿ, ‘ಅರಸು ಸರಕಾರ ಇನ್ನೆರಡೇ ದಿನ, ಒಂದೇ ವಾರ, ಮುಗೀತು ಕತೆ’ ಅಂತೆಲ್ಲ ಟಾಂ ಟಾಂ ಹೊಡಕೊಂಡು ತಿರುಗುತ್ತಿದ್ದ. ಇದು ಅರಸು ಅವರಿಗೆ ಕೊಂಚ ಕಸಿವಿಸಿ ತರಿಸಿತ್ತು. ಜೊತೆಗೆ ಅಧಿಕಾರಿಗಳಲ್ಲಿ ಹೆಚ್ಚಿನವರು ಮೇಲ್ಜಾತಿಯವರೇ ಆದ್ದರಿಂದ ಸಹಕರಿಸದೆ ಸತಾಯಿಸುತ್ತಿದ್ದರು.
ಅವರು ಹೇಳಿದ ಸಮಯಕ್ಕೆ ಸರಿಯಾಗಿ, ಬೆಳಗ್ಗೆ 5.30ಕ್ಕೆ ಹೋದೆ. ಅರಸು, ‘ನೋಡಯ್ಯ, ಕೆಲವು ದಿನಗಳಿಂದ ನಾನು ಯೋಚಿಸ್ತಿದೀನಿ, ಸಕಲ ಜ್ಞಾನವಿರುವ ಒಬ್ಬ ವ್ಯಕ್ತಿ ಬೇಕು, ಪೊಲಿಟಿಕಲ್ ಫೈಲ್ ಸ್ಕ್ರೂಟಿನೈಸ್, ಪುಟಪ್, ಕರೆಸ್ಪಾಂಡೆನ್ಸ್ಗೆ ಅನುಕೂಲವಾಗಲಿಕ್ಕೆ… ಒಟ್ಟಾರೆ ನನ್ನ ಬರ್ಡನ್ ಕಡಿಮೆ ಮಾಡಲಿಕ್ಕೆ ಪಾಲಿಟಿಕ್ಸ್ನಲ್ಲಿ ಜ್ಞಾನವಿರುವ ನಿನ್ನಂಥೋನು ಬೇಕು ನನಗೆ. ಈ ಬ್ಯೂರಕ್ರಾಟ್ಸ್ಗೆ ಅದೆಲ್ಲ ಏನೂ ತಿಳಿಯಲ್ಲ ಕಣಯ್ಯ. ನಮ್ ಲಿನ್ ಕೂಡ ಹೇಳಿದಾರೆ, ಅದಕ್ಕೆ ನಿನ್ನ ಕರೆಸಿದೆ. ಏನ್ ಮಾಡಬೇಕು, ಅದೆಂತ ಪೋಸ್ಟ್, ಅದ್ನ ನೀನೇ ಡಿಸೈಡ್ ಮಾಡು. ಲಿನ್ ಜೊತೆ ಮಾತಾಡಿ ಬೇಗ ಫೈನಲೈಸ್ ಮಾಡು’ ಎಂದರು. ಏಕೆಂದರೆ ನನ್ನ ಶಾಸನ ಸಭೆಯ ಭಾಷಣ, ಕಾರ್ಯದರ್ಶಿಯಾಗಿ ನಿರ್ವಹಿಸಿದ ಕೆಲಸವನ್ನೆಲ್ಲ ನೋಡಿದ್ದರಲ್ಲ, ಆಯ್ತು ಅಂದು, ಲಿನ್ ಜೊತೆ ಕೂತು ಚರ್ಚಿಸಿದೆ. ಮುಖ್ಯಮಂತ್ರಿಗಳ ‘ರಾಜಕೀಯ ಕಾರ್ಯದರ್ಶಿ’ ಹುದ್ದೆ ಕ್ರಿಯೇಟ್ ಮಾಡಿದೆ. ಅದು ಆ ಕಾಲಕ್ಕೆ ಇಡೀ ಇಂಡಿಯಾದಲ್ಲಿ ಯಾವ ರಾಜ್ಯದಲ್ಲೂ ಇರಲಿಲ್ಲ. ಅದೇ ಮೊದಲು.
ಅಂದಿನಿಂದಲೇ ನಾನು ಮುಖ್ಯಮಂತ್ರಿ ದೇವರಾಜ ಅರಸು ಅವರ ರಾಜಕೀಯ ಕಾರ್ಯದರ್ಶಿಯಾದೆ. ದಿಲ್ಲಿಯ ಹೈಕಮಾಂಡ್ ಜೊತೆ ಕೋ-ಆರ್ಡಿನೇಟ್ ಮಾಡೋದು, ಪ್ರತಿ ವಾರದ ಕೊನೆಯಲ್ಲಿ ಅರಸು ಕಾರ್ಯಕ್ರಮಗಳನ್ನು ದಿಲ್ಲಿ ಜನಕ್ಕೆ ತಿಳಿಸೋದು, ದಿಲ್ಲಿಯಿಂದ ಬರುವ ಸಮಿತಿಗಳಿಗೆ ಸಂಪೂರ್ಣ ಮಾಹಿತಿ ನೀಡೋದು, ಆ ಮೂಲಕ ಅರಸು ಅವರನ್ನು ಅವರ ಸರಕಾರವನ್ನು ಮೇಲೆತ್ತುವ ಕೆಲಸ ಮಾಡತೊಡಗಿದೆ. ಆ ಮುಖಾಂತರ ನನಗೆ ದಿಲ್ಲಿಯ ದೊಡ್ಡ ದೊಡ್ಡ ನಾಯಕರ ಜೊತೆಗಿನ ಸಂಪರ್ಕ ಸಲೀಸಾಯಿತು. ಅರಸು ಸರಕಾರದ ಕಾರ್ಯವೈಖರಿಯನ್ನು ವಿವರಿಸಿದ ನಂತರ, ಇಂದಿರಾ ಗಾಂಧಿ ಕೂಡ ಅರಸು ಹಠಾವೋಗೆ ಸೊಪ್ಪು ಹಾಕದೆ ಇದ್ದದ್ದು ಅರಸರಲ್ಲಿ ಆತ್ಮವಿಶ್ವಾಸ ಮೂಡಿಸಿತು.
ನನ್ನ-ಅವರ ವೇವ್ಲೆಂಥ್ ಒಂದೇ ಆಗಿತ್ತು. ಚಿಂತನ-ಮಂಥನ ಹೊಂದಾಣಿಕೆಯಾಗಿತ್ತು. ಇಬ್ಬರದೂ ಸಮಾನ ಆಸಕ್ತಿ, ಕಾಳಜಿ, ಕಳಕಳಿ. ಅದೇ ನಮ್ಮಿಬ್ಬರನ್ನು ಒಂದಾಗಿಸಿತ್ತು. ಅಲ್ಲಿಂದಲೇ ಅವರೊಂದಿಗೆ ಆತ್ಮೀಯ ಒಡನಾಟ ಶುರುವಾಗಿದ್ದು.
ಅರಸರ ಶೈಲಿಯೇ ಬೇರೆ
ಅರಸು ರಾಜಕಾರಣದಲ್ಲಷ್ಟೇ ಅಲ್ಲ, ಇತರ ವಿಷಯಗಳನ್ನು ಅರಿತ ಬುದ್ಧಿವಂತರು. ಅಪಾರ ಅನುಭವ, ಶಿಸ್ತುಬದ್ಧ ಅಧ್ಯಯನ, ತಿಳಿವಳಿಕೆಯ ಜೊತೆಗೆ ಅಪರಿಮಿತ ಸಾಮಾನ್ಯಜ್ಞಾನವೂ ಇತ್ತು. ಆಡಳಿತದಲ್ಲಿ ಅವರದೇ ಆದ ವಿಶಿಷ್ಟ ಶೈಲಿಯೊಂದನ್ನು ರೂಢಿಸಿಕೊಂಡಿದ್ದರು. ಡಿಷಿಷನ್ ಮೇಕಿಂಗು ಎರಾಟಿಕ್ಕಾಗಲಿ ಅಥವಾ ಪರ್ಸನಲೈಸ್ ಆಗಲಿ ಇರ್ತಿರಲಿಲ್ಲ. ಸಂದರ್ಭಗಳನ್ನು ನೋಡಿ ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ನಾನು ಅವರ ಪೊಲಿಟಿಕಲ್ ಸೆಕ್ರೆಟರಿಯಾದ ಮೇಲೆ ಪ್ರತಿದಿನ, ನನಗಾಗಿ ಸಮಯವನ್ನೇ ಕೊಡದೆ ಕೆಲಸದಲ್ಲಿ ಮುಳುಗಿಹೋಗಿರುತ್ತಿದ್ದೆ. ಅರಸು ಕೂಡ ರಾತ್ರಿ ಹಗಲೆನ್ನದೆ ಇಡೀ ರಾಜ್ಯವನ್ನು ಸುತ್ತುತ್ತಿದ್ದರು.
ಅವರ ಶೈಲಿ ಅಂದನಲ್ಲ, ಅದಕ್ಕೊಂದು ಉದಾಹರಣೆ ಇದೆ ಕೇಳಿ. ಅವರ ತಲೆಗೆ ಸಂಜೆಯೊತ್ತಿಗೆ ಯಾವುದೋ ಒಂದು ವಿಷಯ ಬಂದಿರ್ತಿತ್ತು. ‘ಶ್ರೀನಿವಾಸ್, ಈಗ ಹೋಗಿ ರಾತ್ರಿ ಹತ್ತಕ್ಕೆ ಮನೆಗೆ ಬಾ’ ಎನ್ನುತ್ತಿದ್ದರು. ಅಂದರೆ ಒಂದು ಹೊಸ ಕಾಯ್ದೆಯೋ, ಯೋಜನೆಯೋ, ಕಾರ್ಯಕ್ರಮವೋ ಜಾರಿಗೆ ತರುವ ಮುಂಚೆ, ಅವರೇ ಯೋಚಿಸುತ್ತಿದ್ದರು. ಮತ್ತು ನನಗೆ ‘ಈ ವಿಷಯಕ್ಕೆ ವಿರುದ್ಧವಾಗಿ ಯೋಚಿಸಿಕೊಂಡು ಬಾ’ ಎಂದು ಹೇಳುತ್ತಿದ್ದರು. ಅಂದರೆ ತನ್ನ ತೀರ್ಮಾನವೇ ಅಂತಿಮ ಅನ್ನುವುದಲ್ಲ. ನಾನು ಅದಕ್ಕೆ ತದ್ವಿರುದ್ಧವಾಗಿ ವಿಷಯ ಸಂಗ್ರಹಿಸಿಕೊಂಡು ಸಿದ್ಧನಾಗಿ ಹೋಗುತ್ತಿದ್ದೆ. ಅದರ ಸಾಧಕ-ಬಾಧಕಗಳನ್ನು ಬಿಡಿಸಿ ಅವರ ಮುಂದಿಡುತ್ತಿದ್ದೆ.
ಇದು, ಮುಂದೆ ತಮ್ಮದೇ ಪಕ್ಷದ ಸಹೋದ್ಯೋಗಿಗಳಿಂದ, ದಿಲ್ಲಿಯ ಹೈಕಮಾಂಡಿನಿಂದ, ಮಾಧ್ಯಮಗಳಿಂದ, ವಿರೋಧ ಪಕ್ಷದ ನಾಯಕರಿಂದ ಎದುರಾಗಬಹುದಾದ ಟೀಕೆ, ವಿರೋಧ, ವಿವಾದಗಳನ್ನು ಸಮರ್ಪಕವಾಗಿ ನಿಭಾಯಿಸಲು, ನಿವಾರಿಸಲು ಅರಸು ಕೈಗೊಳ್ಳುತ್ತಿದ್ದ ಮುನ್ನೆಚ್ಚರಿಕೆಯ ಕ್ರಮವಾಗಿತ್ತು. ಇದು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಯಕನೂ ನಡೆದುಕೊಳ್ಳಬೇಕಾದ ರೀತಿ ಕೂಡ. ಅರಸು ಅವರಿಗೆ ರೈತರ ಕಷ್ಟವೂ ಗೊತ್ತಿತ್ತು; ನಗರದ ಮಧ್ಯಮವರ್ಗದ ಜನರ ಜಂಜಾಟವೂ ತಿಳಿದಿತ್ತು; ಸಂವಿಧಾನಾತ್ಮಕ ಕ್ರಮಗಳ ಅರಿವೂ ಇತ್ತು. ಹೀಗಾಗಿಯೇ ಯಾವ ಹೊಸ ಕಾಯ್ದೆಯನ್ನು ಕಾರ್ಯರೂಪಕ್ಕೆ ತರಬೇಕಾದರೂ, ಹತ್ತು ಹಲವು ದೃಷ್ಟಿಕೋನಗಳಿಂದ ಅವಲೋಕಿಸಿ, ಅನುಷ್ಠಾನಗೊಳಿಸುತ್ತಿದ್ದರು. ಈ ಕ್ರಮವಿದೆಯಲ್ಲ, ಇದನ್ನು ನಿರಂತರವಾಗಿ ಜಾರಿಯಲ್ಲಿಟ್ಟಿದ್ದರು.
ಈ ಥರದ ಸಿದ್ಧತೆ, ಬದ್ಧತೆ ಮತ್ತು ಪ್ರಬುದ್ಧತೆಯನ್ನು ನಾನು ಬೇರೆ ಯಾವ ಮುಖ್ಯಮಂತ್ರಿಯಲ್ಲೂ ಕಾಣಲಿಲ್ಲ.
ವರುಣ ಮರಣದ ಪಾಠ
ದೇವರಾಜ ಅರಸು ಅವರ ಮಹತ್ವದ ಯೋಜನೆಗಳಲ್ಲೊಂದಾದ ವರುಣಾ ನಾಲಾ ಯೋಜನೆಯಿಂದ ಮಂಡ್ಯ ಮರುಭೂಮಿಯಾಗುತ್ತದೆ, ನೀರಿಲ್ಲದ ಬೆಂಗಾಡಾಗುತ್ತದೆ ಎಂದು ನಮ್ಮ ಪಕ್ಷದವರೇ ಆದ ಎಸ್.ಎಂ. ಕೃಷ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಮಂಡ್ಯದಲ್ಲಿ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರಕಾರಕ್ಕೆ ಮುಜುಗರವನ್ನುಂಟುಮಾಡಿದರು.
ಇದನ್ನು ಕಂಡು ನಾನು, ಅರಸು ಅವರಲ್ಲಿಗೆ ಹೋಗಿ ವರುಣ ಯೋಜನೆಯನ್ನು ಕೈಬಿಡಿ ಎಂದೆ. ಅದಕ್ಕವರು ಊಟ ಮಾಡಿಕೊಂಡು ರಾತ್ರಿಗೆ 10ಕ್ಕೆ ಮನೆಗೆ ಬಾ ಎಂದರು. ನಾನು ಹೋಗುವಷ್ಟರಲ್ಲಿ ಅಲ್ಲೊಂದು ಕ್ಲಾಸ್ ರೂಮ್ ರೆಡಿಯಾಗಿತ್ತು. ಒಂದು ಬ್ಲಾಕ್ ಬೋರ್ಡಿತ್ತು. ಆ ಬೋರ್ಡಿನ ಮೇಲೆ ವರುಣಾ ನಾಲೆಯ ಚಿತ್ರವಿತ್ತು. ಅದು ಎಲ್ಲಿಂದ ಶುರುವಾಗಿ ಎಲ್ಲಿಗೆ ಮುಗಿಯುತ್ತದೆ ಎಂಬುದೆಲ್ಲವನ್ನು ಬಿಡಿಸಿದ್ದರು. ನೀವು ನಂಬಲ್ಲ, ಒಬ್ಬ ಸಿವಿಲ್ ಎಂಜಿನಿಯರ್ನಂತೆ ಮ್ಯಾಪ್ ತಯಾರಿಸಿದ್ದರು.
‘ನೋಡು, ಇದು ಮೈಸೂರು, ಚಾಮರಾಜನಗರ ಜಿಲ್ಲೆಯ ಜನರ ದಾಹ ತಣಿಸಲು ರೂಪಿಸಿರುವ ಯೋಜನೆ. ಇದರಿಂದ ಮಂಡ್ಯದ ರೈತರಿಗೆ ನಯಾಪೈಸೆಯ ನಷ್ಟವೂ ಇಲ್ಲ. ನಾನು ರೈತರ ವಿರೋಧಿಯಲ್ಲ, ನಾನೂ ಕೃಷಿಕನಾಗಿದ್ದವನು, ಕೃಷಿ ಕಷ್ಟಗಳನ್ನು ಕಂಡುಂಡವನು. ನಾನೇ ಅವರ ಬಾಯಿಗೆ ಮಣ್ಣಾಕಲು ಮುಂದಾಗುತ್ತೇನೆಯೇ. ನಿನಗೆ ಬುದ್ಧಿ ಇದ್ದರೆ ಇದರಲ್ಲಿ ತಪ್ಪೇನಿದೆ ಹೇಳು, ತಿದ್ದಿಕೊಳ್ಳುತ್ತೇನೆ’ ಎಂದರು. ಚಿಕ್ಕ ಮಕ್ಕಳಿಗೆ ಪಾಠ ಹೇಳುವಂತೆ ವಿವರಿಸಿದ್ದರು. ನನಗೆ ಎಸ್.ಎಂ.ಕೃಷ್ಣರ ರಾಜಕೀಯ ನಡೆ ಅರ್ಥವಾಗಿತ್ತು. ಅರ್ಥವಾಗದ ಮಂಡ್ಯದ ರೈತರು ಬೀದಿಗಿಳಿದು ಪ್ರತಿಭಟಿಸುತ್ತಿದ್ದರು.

ಅರಸು ಮತ್ತು ಸನ್ಯಾಸಿ
ಕೊನೆ ಕೊನೆಗೆ ಅರಸು ಮಾತು ಕೇಳದಂತಾದರು. ಮೊಂಡುತನ ಹೆಚ್ಚಾಯಿತು. ಹಲವಾರು ರಾಜಕೀಯ ತಪ್ಪು ನಡೆಗಳನ್ನಿಟ್ಟರು. ಇಂದಿರಾ ಗಾಂಧಿಯವರಿಂದ ದೂರವಾಗಿ, ಹೊಸ ಪಕ್ಷ ಕಟ್ಟಿದರು, ಚುನಾವಣೆಗೆ ಸ್ಪರ್ಧಿಸಿ ಸೋತು ಸಣ್ಣವರಾದರು. ಇದರಿಂದೆಲ್ಲ ಪಾಠ ಕಲಿಯಬೇಕಾಗಿದ್ದ ಅರಸು, ಇನ್ನಷ್ಟು ಒರಟಾಗಿ ವರ್ತಿಸತೊಡಗಿದರು.
ಒಂದು ದಿನ ನಾನು, ‘ನೀವು ಮೊದಲು ಹೀಗಿರಲಿಲ್ಲ, ನಿಮ್ಮ ಆಲೋಚನೆಗಳಿಗೆ ವಿರುದ್ಧವಾಗಿ ಯೋಚಿಸಿಕೊಂಡು ಬಾ ಎನ್ನುತ್ತಿದ್ದಿರಿ, ನಾನು ಹೇಳಿದ್ದನ್ನು ಗೌರವಿಸುತ್ತಿದ್ದಿರಿ, ಈಗ ನಿಮ್ಮ ನಡೆ ಸರಿಯಿಲ್ಲ ಎಂದರೆ ಒಪ್ಪಿಕೊಳ್ಳಲು ಸಿದ್ಧರಿಲ್ಲ, ಇದು ನಾನು ನೋಡಿದ ಅರಸು ಅಲ್ಲವೇ ಅಲ್ಲ’ ಎಂದೆ. ಇದು ಕೂಡ ರಾತ್ರಿ ವೇಳೆ ನಡೆದ ಮಾತುಕತೆ. ಆಗಲೇ ಬೆಳಗಿನ ಜಾವ ಮೂರೂವರೆಯಾಗಿತ್ತು. ಆಗ ಅರಸು, ‘ಒಂದು ಕತೆ ಹೇಳ್ತೀನಿ ಕೇಳು’ ಎಂದರು.
ಒಂದು ಹಳ್ಳಿಯ ಹೊರಗಡೆ ಒಬ್ಬ ಸನ್ಯಾಸಿ ಧ್ಯಾನಕ್ಕೆ ಕುಳಿತಿದ್ದ. ಹಳ್ಳಿಯ ಒಳಗಡೆ ಒಬ್ಬ ಹುಡುಗಿ ತನ್ನ ಬಾಯ್ ಫ್ರೆಂಡ್ ಜೊತೆ ಕೂಡಿ ಗರ್ಭಿಣಿಯಾಗಿದ್ದಳು. ರಕ್ಷಣೆಯ ಮಾರ್ಗ ತೋಚದ ಹುಡುಗಿ ಈ ಬಸಿರಿಗೆ ಈ ಸನ್ಯಾಸಿಯೇ ಕಾರಣ ಎಂದುಬಿಟ್ಟಳು. ಊರಿನ ಜನರೆಲ್ಲ ಸೇರಿ ಸನ್ಯಾಸಿ ಮುಂದೆ ನಿಂತು, ಏನಿದು ಅಂದರು. ಆತ ಅಷ್ಟೇ ಕೂಲಾಗಿ ‘ಈಸ್ ಇಟ್ ಸೋ’ ಅಂದ. ಹಳ್ಳಿಯ ಜನಕ್ಕೆ ಉರಿದು ಹೋಯಿತು. ಇದಕ್ಕೆ ಶಿಕ್ಷೆ ಏನು ಗೊತ್ತ, ಈ ಹುಡುಗಿಯನ್ನು ಇಲ್ಲೇ ಬಿಟ್ಟು ಹೋಗ್ತೀವಿ, ಈಕೆಯ ಜವಾಬ್ದಾರಿ ನಿನ್ನದೆ ಎಂದರು. ಆಗಲೂ ಸನ್ಯಾಸಿ ‘ಈಸ್ ಇಟ್ ಸೋ’ ಅಂದ. ಆಶ್ರಮದಲ್ಲಿ ಹುಡುಗಿ ಮತ್ತು ಸನ್ಯಾಸಿ ಅವರವರ ಪಾಡಿಗೆ ಅವರಿದ್ದರು. ಕಾಲ ಉರುಳಿತು. ಊರೊಳಗೆ ಗುಸುಗುಸು ಶುರುವಾಗಿ ಅಸಲಿ ವಿಷಯ ಹೊರಬಿತ್ತು. ಮತ್ತೆ ಜನರೆಲ್ಲ ಸನ್ಯಾಸಿಯ ಬಳಿ ಬಂದರು. ಈ ಹುಡುಗಿ ಗರ್ಭಿಣಿಯಾಗಿದ್ದು ಈ ಹುಡುಗನಿಂದ, ಕರೆದುಕೊಂಡು ಹೋಗ್ತೀವಿ ಅಂದರು. ಆಗಲೂ ಆ ಸನ್ಯಾಸಿ ಅಷ್ಟೇ ಕೂಲಾಗಿ ‘ಈಸ್ ಇಟ್ ಸೋ’ ಅಂದ.
ನೋಡು ಶ್ರೀನಿವಾಸ್ ನಾನು ಈ ಸನ್ಯಾಸಿ ಥರ, ಹೆಲ್ಪ್ಲೆಸ್ ಅಂದರು. ಹೌದು, ಅವರ ಮಾತಿನಲ್ಲಿ ಸತ್ಯವಿತ್ತು, ಹೆಲ್ಪ್ಲೆಸ್ ಆಗಿದ್ದರು.
(ಕೃಪೆ: ನಮ್ಮ ಅರಸು, ಲೇ: ಬಸವರಾಜು ಮೇಗಲಕೇರಿ, ಪಲ್ಲವ ಪ್ರಕಾಶನ, ಸಂಪರ್ಕ: 94803 53507)

ಲೇಖಕ, ಪತ್ರಕರ್ತ