ಈ ದಿನ ಸಂಪಾದಕೀಯ | ಗೌರಿ ಲಂಕೇಶ್: ಕೋಮುವಾದಿ ಕತ್ತಲಿಗೆ ಸವಾಲೆಸೆದ ಬೆಳ್ಳಂಬೆಳಕಿನ ದೀವಟಿಗೆ

Date:

Advertisements

ಸಾಮಾಜಿಕ ಕಾಳಜಿಗಳ ಕುರಿತ ಪ್ರತಿಬದ್ಧತೆಗೆ, ವೃತ್ತಿನಿಷ್ಠೆಗೆ, ಸಾಮಾಜಿಕ ಋಣಸಂದಾಯಕ್ಕೆ ಜ್ವಲಂತ ನಿದರ್ಶನ ಗೌರಿ. ದಿಕ್ಕು ತಪ್ಪಿ ಗೊಂದಲಕ್ಕೆ ಬಿದ್ದಿರುವ, ಕೇವಲ ಸಂಬಳ, ಸುರಕ್ಷತೆ, ಉದ್ಯೋಗ ಭದ್ರತೆಯೇ ಪರಮವೆಂದು ಭಾವಿಸುವ ಇಂದಿನ ಯುವ ಪತ್ರಕರ್ತರಿಗೆ ಗೌರಿಯ ಬದುಕು ಬರೆಹಗಳು ಬೆಳ್ಳಂಬೆಳಕಿನ ದೀವಟಿಗೆ. ಈ ದೀವಟಿಗೆಯನ್ನು ಹಿಡಿದು ಮುಂದೆ ನಡೆಯಬೇಕಿದೆ.


ಸೌಹಾರ್ದ ಪರಂಪರೆಯನ್ನು ಉಳಿಸಿಕೊಳ್ಳಲು ಪ್ರಾಣವನ್ನೇ ಪಣವಾಗಿಟ್ಟ ಗೌರಿ ಲಂಕೇಶ್, ಕೋಮುವಾದಿಗಳ ಗುಂಡೇಟುಗಳಿಗೆ ಬಲಿಯಾಗಿ ನಾಳೆಗೆ (ಸೆ.5) ಏಳು ವರ್ಷಗಳು.

ನ್ಯಾಯದ ‘ಕುಣಿಕೆ’ ಹಂತಕರನ್ನು ಈಗಲೂ ತಾಕದಾಗಿದೆ. ಆರೋಪಪಟ್ಟಿ ಸಲ್ಲಿಸಿ ಆರು ವರ್ಷಗಳಾದರೂ ವಿಚಾರಣೆ ತೆವಳುತ್ತಿದೆ. ದಕ್ಷತೆ ಪ್ರಾಮಾಣಿಕತೆ ಪ್ರತಿಬದ್ಧತೆಯಿಂದ ತನಿಖೆ ನಡೆಸಿದ ವಿಶೇಷ ತಂಡ 9000 ಪುಟಗಳ ಆರೋಪಪಟ್ಟಿ ಸಲ್ಲಿಸಿದೆ. ನಾಲ್ಕುನೂರಕ್ಕೂ ಹೆಚ್ಚು ಸಾಕ್ಷಿಗಳು ಮತ್ತು ಸಾವಿರಾರು ಪುರಾವೆಗಳಿಗೆ ವಿಳಂಬದ ಧೂಳು ಕವಿಯುತ್ತಿದೆ. ವಿಶೇಷ ನ್ಯಾಯಾಧೀಶರ ನೇಮಕ ಮಾಡಿ ನಿತ್ಯ ವಿಚಾರಣೆ ನಡೆಯುವಂತೆ ಮಾಡಿದರೆ ಮಾತ್ರವೇ ಗೌರಿಯ ಹಂತಕರು ಸದ್ಯಭವಿಷ್ಯದಲ್ಲಾದರೂ ಕಾನೂನಿನ ಕುಣಿಕೆಗೆ ಸಿಗಬಲ್ಲರು. ‘ನಿಧಾನ ನ್ಯಾಯದಾನ ಎಂಬುದು ನಿರಾಕರಿಸಿದ ನ್ಯಾಯದಾನ’ (Justice delayed is Justice denied) ಎಂಬ ಇಂಗ್ಲಿಷ್ ನಾಣ್ನುಡಿಯೊಂದಿದೆ. ಈ ಗಾದೆಯನ್ನು ಸುಳ್ಳು ಮಾಡುವ ಪ್ರಾಮಾಣಿಕ ವ್ಯವಸ್ಥೆ ನಮ್ಮ ದೇಶದಲ್ಲಿ ದೂರ ದೂರಕ್ಕೂ ಕಾಣುತ್ತಿಲ್ಲ.

Advertisements

ಸನಾತನವಾದದ ದಾಳಗಳಾಗಿ ಬಳಕೆಯಾದ ಹದಿನೆಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ವಿಚಾರಣೆ ವಿಳಂಬವನ್ನು ಮುಂದೆ ಮಾಡಿ ನಾಲ್ವರು ಆರೋಪಿಗಳು ತಿಂಗಳುಗಳ ಹಿಂದೆ ಜಾಮೀನಿನ ಮೇಲೆ ಹೊರಬಿದ್ದಿದ್ದಾರೆ.

ಇಷ್ಟಕ್ಕೂ ಕಾನೂನಿನ ಕೈವಶ ಆಗಿರುವುದು ಗೌರಿ ಎದೆಯನ್ನು ಛೇದಿಸಿದ ಬಾಣಗಳು ಮಾತ್ರವೇ. ಬಿಲ್ಲನ್ನು ಸೆಳೆದು ಹದೆಯೇರಿಸಿ ಗುರಿ ಇರಿಸಿದ ನೂರಾರು ವರ್ಷಗಳ ಅಮಾನುಷ ವಿಚಾರಧಾರೆ ಈಗಲೂ ಆಪಾದಮಸ್ತಕ ಅನಾಹತವಾಗಿ ಉಳಿದಿದೆ. ಹುಸಿ ದೇಶಭಕ್ತಿ ಮತ್ತು ಕಪಟ ಧರ್ಮರಕ್ಷಣೆಯ ಮುಸುಕು ಧರಿಸಿ ಸಮಾಜದ ಕಣ್ಣಿಗೆ ಮಣ್ಣೆರಚಿ ಮೆರೆದಿದೆ. ಹಿಂದೆಂದಿಗಿಂತ ಹೆಚ್ಚು ಆಳ ಅಗಲಕ್ಕೆ ಬೇರೂರಿದೆ. ಕಾನೂನುಪಾಲನೆಯ ಅಧಿಕಾರವನ್ನು ಕೈವಶ ಮಾಡಿಕೊಂಡಿದೆ. ಬ್ರಾಹ್ಮಣ್ಯವನ್ನು ತುತ್ತ ತುದಿಯಲ್ಲಿ ಮರುಸ್ಥಾಪಿಸುವ ವರ್ಣವ್ಯವಸ್ಥೆಯನ್ನು ಹಿತ್ತಿಲಬಾಗಿಲಿಂದ ಎಳೆದು ತರುತ್ತಿದೆ. ಬಹುಜನರನ್ನು ಪುನಃ ಗುಲಾಮಗಿರಿಗೆ ನೂಕುವ ಸನ್ನಾಹ ನಡೆಸಿದೆ. ಜನಸಮೂಹಗಳನ್ನು ಮಾನಸಿಕ ದಾಸ್ಯದ ಅದೃಶ್ಯ ಸಂಕೋಲೆಗಳಲ್ಲಿ ಬಂಧಿಸಿದೆ. ಈ ವಂಚನೆಯ ಮುಖವಾಡವನ್ನು ಹರಿದೊಗೆಯಲು ಯತ್ನಿಸಿದ ಹೋರಾಟಗಾರರಿಗೆ ದೇಶದ್ರೋಹಿಗಳು- ಧರ್ಮವಿರೋಧಿಗಳು ಎಂಬ ಹಣೆಪಟ್ಟಿ ಹಚ್ಚಿದೆ. ಬೆನ್ನು ಹತ್ತಿ ಬೇಟೆಯಾಡಿದೆ.

ನಿಗರ್ವಿಯೂ ಸ್ನೇಹಪರರೂ ಹಾಗೂ ಸರಳ ಸ್ವಭಾವದವರಾಗಿದ್ದರು ಗೌರಿ. ಸಂವಿಧಾನದ ಆಶಯಗಳನ್ನು ನಿರಂತರ ಎತ್ತಿ ಹಿಡಿದವರು. ಮಹಿಳೆಯರೂ ಸೇರಿದಂತೆ ದಮನಿತರು ಮತ್ತು ಎಲ್ಲ ಬಗೆಯ ಅಲ್ಪಸಂಖ್ಯಾತರ ನೋವುಗಳಿಗೆ ಮಿಡಿದವರಾಗಿದ್ದರು. ಇಂಗ್ಲಿಷ್ ಪತ್ರಕರ್ತೆಯಾಗಿ ಪತ್ರಿಕಾ ವೃತ್ತಿಗೆ ಕಾಲಿರಿಸಿದ್ದು ಎಂಬತ್ತರ ದಶಕದಲ್ಲಿ. ಆ ವೇಳೆಗಾಗಲೇ ಅವರು ದೆಹಲಿಯ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಷನ್ ಸಂಸ್ಥೆಯಲ್ಲಿ ಓದಿ ಪದವಿ ಪಡೆದಿದ್ದರು. ತಂದೆ ಲಂಕೇಶರ ಸಾಮಾಜಿಕ ರಾಜಕೀಯ ಚಿಂತನೆಯ ದಟ್ಟ ಪ್ರಭಾವ ಅವರ ಮೇಲಿತ್ತು. ದೆಹಲಿಯ ಜೆ.ಎನ್.ಯು.ವಿನ ಸಮಸಮಾಜದ ಆಶಯದ ವಾತಾವರಣ ಅದನ್ನು ಗಟ್ಟಿಗೊಳಿಸಿತ್ತು.

ಆರಂಭದ ಗೌರಿ ತಮ್ಮ ತಂದೆಯವರು ನಡೆಸುತ್ತಿದ್ದ ಲಂಕೇಶ್ ಪತ್ರಿಕೆಯ ಅಪಾರ ಯಶಸ್ಸಿನ ನೆರಳಿನಿಂದ ಪ್ರಜ್ಞಾಪೂರ್ವಕವಾಗಿ ದೂರ ಉಳಿಯಬಯಸಿದ್ದರು. ಇಂಗ್ಲಿಷ್ ಪತ್ರಿಕೋದ್ಯಮ ಅವರ ಆಯ್ಕೆಯಾಗಿತ್ತು. Mid Day, Sunday ಆಗ ರಭಸದ ತನಿಖಾ ಪತ್ರಿಕೋದ್ಯಮ ನಡೆಸಿದ ಪತ್ರಿಕೆಗಳು. ಆನಂತರ Times of India, ಇಂಗ್ಲಿಷ್ ದೈನಿಕ, ETV, News Timeಗೆ ವರದಿ ಮಾಡಿದರು ಗೌರಿ. ಇಂಡಿಯಾ ಟುಡೇ ಸಮೂಹದ Headlines Todayಯಲ್ಲೂ ಮಾಡಿದ ವರದಿಗಾರಿಕೆ ಅವರ ಕಸಬುದಾರಿಕೆಗೆ ಸಾಣೆ ಹಿಡಿದಿತ್ತು. ಹೊಳಪು ಹರಿತ ಎರಡೂ ದಕ್ಕಿಸಿಕೊಟ್ಟಿತ್ತು.

ದೆಹಲಿಯಲ್ಲಿ ಹಲವು ವರ್ಷ ಕೆಲಸ ಮಾಡಿದ ಅವರಿಗೆ ದೇಶದ ರಾಜಧಾನಿಯ ರಾಜಕಾರಣದ ಒಳಸುಳಿಗಳ ಮೇಲೆ ಹಿಡಿತ ಸಿಕ್ಕಿತ್ತು. ಅನುಕೂಲಸ್ಥ ತಂದೆಯಿದ್ದಾರೆ ಎಂಬ ಭಾವದಿಂದ ಗೌರಿ ಯಾವೊತ್ತೂ ಕೆಲಸ ಕದಿಯಲಿಲ್ಲ. ಕಠಿಣ ಪರಿಶ್ರಮಕ್ಕೆ ಅಳುಕಲಿಲ್ಲ. ಅದಾಗಲೇ ಲಂಕೇಶರು ಅನಾರೋಗ್ಯಕ್ಕೆ ಒಳಗಾಗಿದ್ದರು. ತಂದೆ ಮಗಳು ಒಬ್ಬರನ್ನೊಬ್ಬರು ಬಹಳ ಹಚ್ಚಿಕೊಂಡಿದ್ದವರು. ತಂದೆಯ ಅನಾರೋಗ್ಯ ನೆನೆಸಿಕೊಂಡು ಗೌರಿ ಆಗಾಗ ಹನಿಗಣ್ಣಾಗುತ್ತಿದ್ದರು. ಬೆಂಗಳೂರಿಗೆ ಬಂದು ಕೆಲ ದಿನ ಇದ್ದು ದೆಹಲಿಗೆ ವಾಪಸಾಗುತ್ತಿದ್ದರು. ಆ ಕೆಟ್ಟ ಸುದ್ದಿ ಬಂದೇ ಬಿಟ್ಟಿತು. ಲಂಕೇಶರ ಆರೋಗ್ಯ ಬಿಗಡಾಯಿಸಿತ್ತು. ಒಮ್ಮೆ ಹೀಗೆ ಅಳುತ್ತಲೇ ಬೆಂಗಳೂರಿಗೆ ತೆರಳಿದ ಗೌರಿ ಮತ್ತೆ ದೆಹಲಿಗೆ ಮರಳಲಿಲ್ಲ.

ತಂದೆ ತೊರೆದು ಹೋದ ಹೊಸ ರೂಹಿನ ಪತ್ರಿಕೋದ್ಯಮದ ‘ಬೃಹತ್ ಪಾದರಕ್ಷೆ’ಗಳಲ್ಲಿ ತಮ್ಮ ಪುಟ್ಟ ಪಾದಗಳನ್ನು ಅಳುಕದೆ ಇರಿಸಿದ ದಿಟ್ಟ ಹೆಣ್ಣುಮಗಳು ಗೌರಿ. ಇಂಗ್ಲಿಷಿನಲ್ಲೇ ಪತ್ರಿಕೋದ್ಯೋಗ ನಡೆಸಿದ್ದ ಗೌರಿಗೆ ಕನ್ನಡ ಒಲಿಯುವುದು ಸುಲಭವಿರಲಿಲ್ಲ. ಆದರೂ ಕಠಿಣ ಪರಿಶ್ರಮದಿಂದ ಪರಿಣಾಮಕಾರಿಯಾಗಿ ಬರೆಯುವಷ್ಟು ಕನ್ನಡ ಕಲಿತರು. ಅಲ್ಲಲ್ಲಿ ನ್ಯೂನತೆಗಳಿದ್ದಾವು. ಆದರೆ ಆಕೆಯ ಧಗಧಗಿಸುವ ಸಾಮಾಜಿಕ ಕಾಳಜಿಯ ಮುಂದೆ ಇಂತಹ ನ್ಯೂನತೆಗಳು ತೃಣಸಮಾನವೆಂದೇ ಹೇಳಬೇಕು. ಲಂಕೇಶರು ನಡೆಸಿದ್ದು ಕೇವಲ ಪತ್ರಿಕೋದ್ಯಮ ಮಾತ್ರ ಆಗಿರಲಿಲ್ಲ. ಸಾಮಾಜಿಕ ಎಚ್ಚರದ ಹೊಸ ಪೀಳಿಗೆಯನ್ನೇ ರೂಪಿಸಿದರು. ತಂದೆಯ ಪ್ರಖರ ಪ್ರತಿಭೆ, ಭಾಷೆಯೊಂದಿಗಿನ ಮಾಂತ್ರಿಕ ಸ್ಪರ್ಶ, ಅಪಾರ ಓದು, ಆಳದ ಸಾಮಾಜಿಕ ರಾಜಕೀಯ ಒಳನೋಟಗಳು ಶುರುವಿನ ದಿನಗಳಲ್ಲಿ ಮಗಳಿಗಿರಲಿಲ್ಲ ನಿಜ. ಆದರೆ ಕಾಲ ಉರುಳಿದಂತೆ ತಂದೆ ಹಾಕಿಕೊಂಡಿದ್ದ ಗೆರೆಯನ್ನು ದಾಟಿ ಮುಂದೆ ಹೋಗಿದ್ದಳು ಮಗಳು. ಪತ್ರಿಕೆಯನ್ನು ತುಳಿಸಿಕೊಂಡ ಜನರ ನೋವಿನ ದನಿಯಾಗಿಸಲು, ಕೋಮುವಾದಿಗಳ ವಿರುದ್ಧದ ಹರಿತ ಹತಾರು ಆಗಿಸಲು ಹಗಲಿರುಳು ಶ್ರಮಿಸಿದರು. ಅಪರೂಪದ ಹೋರಾಟಗಾರ್ತಿ ಪತ್ರಕರ್ತೆ ಆದರು. ಪತ್ರಿಕೋದ್ಯೋಗದ ವ್ಯಾಖ್ಯೆಯನ್ನು ವಿಸ್ತರಿಸಿದರು.

ತಂದೆ ಆರಂಭಿಸಿದ ಪತ್ರಿಕೆ ತಮ್ಮನ ಪಾಲಾದಾಗಲೂ ಧೃತಿಗೆಡದೆ ಮತ್ತೊಂದನ್ನು ಶುರು ಮಾಡಿದರು. ಕಾಲಾನುಕ್ರಮದಲ್ಲಿ ಬರೆಯಲು ಮಾತ್ರವೇ ಅಲ್ಲ, ಕನ್ನಡದಲ್ಲಿ ಆಲೋಚಿಸಲೂ ಕಲಿತರು. ”ಕಂಡದ್ದು ಕಂಡ ಹಾಗೆ” ಶೀರ್ಷಿಕೆಯಡಿ ಅವರು ಬರೆದ ಸಂಪಾದಕೀಯ ಸರಳ ಸಂವಹನಕ್ಕೆ ಮಾದರಿಯಾಗಿ ರೂಪುಗೊಂಡಿತು ಹೊಸ ಪತ್ರಿಕೆ ಪತ್ರಿಕೆಯಷ್ಟೇ ಆಗಿ ಉಳಿಯಲಿಲ್ಲ. ಅದೊಂದು ಚಳವಳಿಯಾಗಿ ಬೆಳೆಯಿತು. ಗೌರಿಯವರನ್ನೂ ಬೆಳೆಸಿತು. ಅವರ ಅಂತರಂಗವನ್ನು ಅರಳಿಸಿತು.

ತುಂಟತನ, ಜೀವಕಾರುಣ್ಯ, ಜೀವನಪ್ರೀತಿ, ಕಕ್ಕುಲಾತಿ ಅವರನ್ನು ಸುತ್ತಮುತ್ತಲ ಸಮಾಜದೊಂದಿಗೆ ಮತ್ತಷ್ಟು ಗಟ್ಟಿಯಾಗಿ ಬೆಸೆಯಿತು. ಯುವಪೀಳಿಗೆಯೊಂದಿಗೆ ಸಂವಾದಕ್ಕೆ ಅವರಷ್ಟು ತೆರೆದುಕೊಂಡ ಅವರ ಓರಗೆಯ ಮತ್ತೊಬ್ಬ ಪತ್ರಕರ್ತರಿಲ್ಲ. ಅಮ್ಮನ- ಅಕ್ಕನ ವಾತ್ಸಲ್ಯ ಅವರದು. ಲಂಕೇಶರು ನಂಬಿದ್ದ ಲೋಹಿಯಾವಾದಿ-ಸಮಾಜವಾದ ಮತ್ತು ಗಾಂಧೀವಾದದ ಆಚೆಗೂ ಸರಿದರು ಗೌರಿ. ಎಡಪಂಥೀಯ ವಿಚಾರಧಾರೆಯನ್ನೂ ಪರಿಶೋಧಿಸಿದರು. ದಲಿತರು ಮತ್ತು ಎಡಪಂಥೀಯರನ್ನು ತಾವು ನಡೆಸಿದ ಪತ್ರಿಕೆಯಲ್ಲಿ ತಂದೆಗಿಂತ ಹೆಚ್ಚು ಹತ್ತಿರವಿಟ್ಟುಕೊಂಡರು. ಜನಾಂದೋಲನಗಳ ಜೊತೆ ಸಕ್ರಿಯವಾಗಿ ಬೆರೆತು ಗುರುತಿಸಿಕೊಂಡರು. ತಮ್ಮನ್ನು ‘ಆ್ಯಕ್ಟಿವಿಸ್ಟ್ ಜರ್ನಲಿಸ್ಟ್’ ಎಂದು ಹೆಮ್ಮೆಯಿಂದ ಕರೆದುಕೊಂಡರು.

ಪ್ರಚಂಡ ಕೋಮುವಾದಿ ಫ್ಯಾಸಿಸ್ಟ್ ರಾಜಕೀಯ ಎದುರಾಳಿಯ ಎದುರು ದಲಿತರ ನೀಲಿ ಮತ್ತು ಎಡಪಂಥೀಯರ ಕೆಂಪು ರಂಗುಗಳು ಒಂದಾಗಬೇಕೆಂಬುದು ಅವರ ಅಚಲ ಆಶಯವಾಗಿತ್ತು. ನೀಲಿ ಮತ್ತು ಕೆಂಪು ಎರಡರ ಗೌರವವನ್ನೂ ಸಂಪಾದಿಸಿಕೊಂಡ ಪ್ರೀತಿ ವಾತ್ಸಲ್ಯದ ‘ಅಮ್ಮ’ನಾಗಿ ಹೊರಹೊಮ್ಮಿದ್ದರು. ಈ ಎರಡೂ ರಂಗುಗಳ ನಡುವೆ ನಡೆದ ವೈಚಾರಿಕ ಕದನಗಳು ಆಕೆಯ ಮನಸ್ಸನ್ನು ಘಾಸಿಗೊಳಿಸಿತ್ತು. ಅಲ್ಪಸಂಖ್ಯಾತರು, ಲೈಂಗಿಕ ಅಲ್ಪಸಂಖ್ಯಾತರ ಕುರಿತು ತಂದೆಯದೇ ಬದ್ಧತೆ, ಪ್ರೀತಿ ಅವರಿಗಿತ್ತು. ಕನ್ಹಯ್ಯಕುಮಾರ್, ಉಮರ್ ಖಾಲಿದ್ ಹಾಗೂ ಜಿಗ್ನೇಶ್ ಮೇವಾನಿ, ಶೆಹ್ಲಾ ರಷೀದ್ ಅವರನ್ನು ತಮ್ಮ ದತ್ತುಮಕ್ಕಳೆಂದು ಎಂದು ಬಹಿರಂಗವಾಗಿ ಕರೆದುಕೊಂಡಿದ್ದರು. ಹಂತಕರ ಗುಂಡು ಆಕೆಯನ್ನು ಬಲಿ ತೆಗೆದುಕೊಳ್ಳುವ ಕೆಲ ತಿಂಗಳುಗಳ ಹಿಂದೆ ದೆಹಲಿಗೆ ಹೋಗಿದ್ದ ಆಕೆ ಕನ್ಹಯ್ಯನಿಗೆ ಹೊಸ ಉಡುಪುಗಳ ಉಡುಗೊರೆ ಒಯ್ದಿದ್ದರು.

ಪತ್ರಿಕೆ ನಡೆಸಲು ಆಕೆ ತನ್ನ ತಂಡದೊಂದಿಗೆ ಪಡುತ್ತಿದ್ದ ಪಡಿಪಾಟಲನ್ನು ಹೊರಪ್ರಪಂಚ ಆರಿತಿರಲಿಲ್ಲ. ಚುನಾವಣೆಗಳ ಸಂದರ್ಭದಲ್ಲಿ ಕರ್ನಾಟಕದ ಚುನಾವಣಾ ರಾಜಕಾರಣದ ಸ್ಥಿತಿಗತಿಗಳ ವ್ಯಾಖ್ಯಾನಕಾರ್ತಿಯಾಗಿ ದೆಹಲಿಯಲ್ಲಿ ಖ್ಯಾತ ಟೀವಿ ಚಾನೆಲ್ಲುಗಳ ಪ್ಯಾನೆಲ್ ಡಿಸ್ಕಷನ್ ಗಳಲ್ಲಿ ವಾರಗಟ್ಟಲೆ ಕುಳಿತುಕೊಳ್ಳುತ್ತಿದ್ದರು. ಅದರಿಂದ ಬಂದ ಲಕ್ಷ ರುಪಾಯಿಗೂ ಹೆಚ್ಚು ಹಣವನ್ನು ಪತ್ರಿಕೆ ನಡೆಸಲು ಬಳಸುತ್ತಿದ್ದರು. ಈ ಕಷ್ಟವನ್ನು ಹೇಳಿಕೊಳ್ಳದೆ ನಗು ನಗುತ್ತ ಹರಟುತ್ತಿದ್ದ ದೊಡ್ಡ ಹೃದಯದ ತಾಯಿ ಗೌರಿ.

ಸಾಮಾಜಿಕ-ರಾಜಕೀಯ-ಧಾರ್ಮಿಕ-ವೈಚಾರಿಕ ಅಸಹಿಷ್ಣುತೆ ಅತ್ಯುಗ್ರ ರೀತಿಯಲ್ಲಿ ಪ್ರಕಟವಾದಾಗ ಪತ್ರಿಕೆಯ ಕಚೇರಿಯಲ್ಲಿ ಕುಳಿತುಕೊಳ್ಳದೆ ಬಯಲಿಗಿಳಿದು ಪ್ರವಾಸ ನಡೆಸಿ ಅದನ್ನು ಮುಖಾಮುಖಿಯಾದ ಅಪರೂಪದ ಪತ್ರಕರ್ತೆ ಆಕೆ.

ಸಾಮಾಜಿಕ ಕಾಳಜಿಗಳ ಕುರಿತ ಪ್ರತಿಬದ್ಧತೆಗೆ, ವೃತ್ತಿನಿಷ್ಠೆಗೆ, ಸಾಮಾಜಿಕ ಋಣಸಂದಾಯಕ್ಕೆ ಜ್ವಲಂತ ನಿದರ್ಶನ ಗೌರಿ. ದಿಕ್ಕು ತಪ್ಪಿ ಗೊಂದಲಕ್ಕೆ ಬಿದ್ದಿರುವ, ಕೇವಲ ಸಂಬಳ, ಸುರಕ್ಷತೆ, ಉದ್ಯೋಗ ಭದ್ರತೆಯೇ ಪರಮವೆಂದು ಭಾವಿಸುವ ಇಂದಿನ ಯುವಪತ್ರಕರ್ತರಿಗೆ ಗೌರಿಯ ಬದುಕು ಬರೆಹಗಳು ಬೆಳ್ಳಂಬೆಳಕಿನ ದೀವಟಿಗೆ. ಈ ದೀವಟಿಗೆಯನ್ನು ಹಿಡಿದು ಮುಂದೆ ನಡೆಯಬೇಕಿದೆ. ಈ ಸವಾಲನ್ನು ಸ್ವೀಕರಿಸುವವರ ಸಮುದಾಯ ಬೆಳೆದು ಹಬ್ಬಬೇಕಿದೆ. ಬಹುಜನರನ್ನು ಪುನಃ ದಾಸ್ಯಕ್ಕೆ ನೂಕುತ್ತಿರುವ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X